
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ. ಎಲ್ಲರನ್ನು ಅಗಲಿ 25 ವರ್ಷ ಕಳೆದರೂ ಇಂದಿಗೂ ದಾದಾ ವಿಷ್ಣು ಅವರ ಕ್ರೇಜ್ ಮಾತ್ರ ಕಡಿಮೆಯಾಗಲ್ಲ. ಇಂದಿನ ಯುವ ಪೀಳಿಗೆಯೂ ಸಹ ವಿಷ್ಣುವರ್ಧನ್ ಅವರ ಸಿನಿಮಾಗಳನ್ನು ಇಷ್ಟಪಡುತ್ತಾರೆ. ಹಾಗೆಯ ಸುಧಾರಾಣಿ ಸಹ ಚಂದನವನದ ಚೆಂದದ ನಟಿ. ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ನಟಿ ಸುಧಾರಾಣಿ ಚಿತ್ರರಂಗದಲ್ಲಿ ತಮ್ಮದೇ ಹೆಜ್ಜೆ ಗುರುತು ಮೂಡಿಸಿದ ಪ್ರತಿಭಾನ್ವಿತ ನಟಿ. 1980-90ರ ಕಾಲಘಟ್ಟದಲ್ಲಿ ಅತ್ಯಂತ ಬ್ಯುಸಿ ಕಲಾವಿದರಲ್ಲಿ ಸುಧಾರಾಣಿ ಸಹ ಒಬ್ಬರಾಗಿದ್ದಾರೆ. ಡಾ.ರಾಜ್ಕುಮಾರ್, ಶಿವರಾಜ್ ಕುಮಾರ್, ವಿಷ್ಣುವರ್ಧನ್, ರಮೇಶ್ ಅರವಿಂದ್, ಅಂಬರೀಶ್, ಸುದೀಪ್, ಪುನೀತ್ ರಾಜ್ಕುಮಾರ್ ಸೇರಿದಂತೆ ಸ್ಟಾರ್ ನಟರೊಂದಿಗೆ ಕೆಲಸ ಮಾಡಿದ್ದಾರೆ.
ವಿಷ್ಣುವರ್ಧನ್ ಜೊತೆ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ನಟಿಸುವ ಅವಕಾಶದಿಂದ ಸುಧಾರಾಣಿ ಕಾರಣಾಂತರಗಳಿಂದ ಹಿಂದೆ ಸರಿದಿದ್ದರು. ಈ ಚಿತ್ರದ ಹಾಡುಗಳು ಇಂದಿಗೂ ಜೀವಂತವಾಗಿವೆ. ರಿಯಾಲಿಟಿ ಶೋ, ಹಬ್ಬ ಇರಲಿ ಈ ಚಿತ್ರದ ಹಾಡನ್ನು ಹಾಡಲಾಗುತ್ತದೆ. ಇಂದಿಗೂ ಈ ಚಿತ್ರ ನೋಡಿದ್ರೆ ಹೃದಯ ತುಂಬಿ ಬಂದು ಕಣ್ಣಾಲಿಗಳು ತೇವವಾಗುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಸುಧಾರಾಣಿಯವರ ಸಂದರ್ಶನದ ವಿಡಿಯೋ ಕ್ಲಿಪ್ ವೈರಲ್ ಆಗಿದ್ದು, ವಿಷ್ಣುವರ್ಧನ್ ಜೊತೆಗಿನ ಸಿನಿಮಾದಿಂದ ಹಿಂದೆ ಬಂದಿದ್ದು ಯಾಕೆ ಎಂಬುದರ ಬಗ್ಗೆ ಹೇಳಿದ್ದಾರೆ.
ವೈಯಕ್ತಿಕ ಕಾರಣಗಳಿಂದ 'ಹಾಲುಂಡ ತವರು' ಸಿನಿಮಾದಿಂದ ಸುಧಾರಾಣಿ ಹೊರಗೆ ಬಂದಿದ್ದರು. 1994ರಲ್ಲಿ ಬಿಡುಗಡೆಯಾಗಿದ್ದ ಹಾಲುಂಡ ತವರು ಸಿನಿಮಾ ಡಾ.ರಾಜೇಂದ್ರ ಬಾಬು ನಿರ್ದೇಶನದಲ್ಲಿ ಮೂಡಿ ಬಂದಿತ್ತು. ಈ ಸಿನಿಮಾ ವಿಶೇಷವಾಗಿ ಮಹಿಳಾ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಬರುವಂತೆ ಮಾಡಿತ್ತು. ಹಾಗೆ ಸಿನಿಮಾ ನೋಡಿ ಬಂದ ಮಹಿಳಾ ವೀಕ್ಷಕರು ಕಣ್ಣೀರು ಹಾಕುತ್ತಲೇ ಮನೆಯತ್ತ ಹೆಜ್ಜೆ ಹಾಕಿದ್ದರು. ಕಾದಂಬರಿ ಆಧಾರಿತ ಈ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರಿಗೆ ನಾಯಕಿಯಾಗಿ ಸೀತಾರಾ ನಟಿಸಿದ್ದರು. ಮಹಿಳಾ ಪ್ರಧಾನ ಕಥೆಯನ್ನು ಹೊಂದಿದ್ದ ಹಾಲುಂಡ ತವರು ಚಿತ್ರ 1994ರ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿತ್ತು. ಹಂಸಲೇಖ ಅವರ ಸಂಗೀತ ಸಿನಿಮಾದ ತೂಕವನ್ನು ಹೆಚ್ಚಿಸಿತ್ತು.
ಇದನ್ನೂ ಓದಿ: 19 ವರ್ಷದ ಹಿಂದೆ ರಿಲೀಸ್ ಆಗಿದ್ದ ಈ ಸಿನಿಮಾ ಅನುಭವಿಸಿದ್ದು 1200 ಕೋಟಿ ನಷ್ಟ; ದಿವಾಳಿಯಾಗಿ ಬೀದಿಗೆ ಬಂದ ನಿರ್ಮಾಪಕ
ಪಂಡರಿಬಾಯಿ, ಶ್ರೀನಿವಾಸ ಮೂರ್ತಿ, ಕೃಷ್ಣೆ ಗೌಡ, ಪರಿಮಳಾ ಜೋಷಾಯ್, ಗಾಯಿತ್ರಿ ಪ್ರಭಾಕರ್, ಸಂಕೇತ್ ಕಾಶಿ, ದೊಡ್ಡಣ್ಣ ಸೇರಿದಂತೆ ಹಿರಿಯ ಕಲಾವಿದರನ್ನು ಹಾಲುಂಡ ತವರು ಒಳಗೊಂಡಿತ್ತು. ಚಿತ್ರಮಂದಿರಗಳಲ್ಲಿ 25 ವಾರ ಪ್ರದರ್ಶನವಾಗುವ ಮೂಲಕ ಕರುನಾಡಿನ ಪ್ರತಿಯೊಂದು ಮನೆಯನ್ನು ಸಿನಿಮಾ ತಲುಪಿತ್ತು. ಸೀತಾರಾ ಅಭಿನಯಕ್ಕೆ ಮೆಚ್ಚಿಕೊಂಡಿದ್ದ ಕನ್ನಡಿಗರು ಮನೆ ಮಗಳು ಅಂದ್ರೆ ಹೀಗಿರಬೇಕೆಂದು ಹೇಳುತ್ತಿದ್ದರು.
ಸಿನಿಮಾದಿಂದ ಹೊರ ಬಂದಿದ್ಯಾಕೆ ಸುಧಾರಾಣಿ?
ಇಂತಹ ಸೂಪರ್ ಹಿಟ್ ಸಿನಿಮಾದಿಂದ ಹೊರ ಬಂದಿದ್ಯಾಕೆ ಎಂಬುದನ್ನು ಸ್ವತಃ ಸುಧಾರಾಣಿ ಅವರೇ ಹೇಳಿಕೊಂಡಿದ್ದಾರೆ. ಸಿನಿಮಾಗಾಗಿ ಎಲ್ಲವೂ ಸಿದ್ಧವಾಗಿತ್ತು. ವಿಷ್ಣುವರ್ಧನ್ ಸರ್ ಮತ್ತು ನನ್ನ ಶೆಡ್ಯೂಲ್ ಸಹ ಫಿಕ್ಸ್ ಆಗಿತ್ತು. ಚಿತ್ರೀಕರಣ ಆರಂಭಕ್ಕೂ ಮುನ್ನ ನನಗೆ ಅಪೆಂಡಿಕ್ಸ್ ಆಗಿ, ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯ್ತು. ಚಿತ್ರೀಕರಣಕ್ಕಾಗಿ ನಿರ್ದೇಶಕರಾದ ಡಾ.ರಾಜೇಂದ್ರ ಬಾಬು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರಿಂದ ಸೀತಾರಾ ಅವರನ್ನು ಆಯ್ಕೆ ಮಾಡಿಕೊಂಡರು. ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಸಿನಿಮಾದಿಂದ ಹೊರಬರಬೇಕಾಯ್ತು ಎಂಬ ವಿಷಯವನ್ನು ಸುಧಾರಾಣಿ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಜಗತ್ತಿನ ಅತಿದೊಡ್ಡ ಫ್ಲಾಪ್ ಸಿನಿಮಾ, ಮುಸ್ಲಿಂ ಹೀರೋ ಎಂಬ ಕಾರಣಕ್ಕೆ ಥಿಯೇಟರ್ಗೆ ಬರಲಿಲ್ಲ ಜನರು...!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.