Kalyan Birthday: 'ಸಾವಿರ'ದ ಪ್ರೇಮ ಗೀತೆಗಳ ಜನಕನ ಹುಟ್ಟಿದ ಹಬ್ಬವಿಂದು..

By Suvarna NewsFirst Published Jan 1, 2022, 1:50 PM IST
Highlights

 ನಮ್ಮ ಪ್ರೇಮಕ್ಕೆ ಮಾತು ನೀಡಿದ ಕವಿ ಕೆ.ಕಲ್ಯಾಣ್ ಜನ್ಮದಿನ ಇಂದು. 3000ಕ್ಕೂ ಅಧಿಕ ಪ್ರೇಮಗೀತೆಗಳನ್ನು ನೀಡಿದ ಕಲ್ಯಾಣ್ ಅವರ ಕೊಡುಗೆಗಳನ್ನು ಕನ್ನಡಿಗರು ಇಂದು ಸ್ಮರಿಸಲೇಬೇಕು.

'ನೆನಪುಗಳ ಮಾತು ಮಧುರ, ಕನಸುಗಳ ಮಾತು ಮಧುರ' ಎಂದು ಯಾರೋ ಹಾಡುತ್ತಿದ್ದಾರೆ. 'ಸಾವಿರ ಹೃದಯವ ಹುಡುಕಿದರೂ ಅಳತೆ ಬೇರೆ, ಸೆಳೆತ ಬೇರೆ' ಎಂಬುದು ಹುಡುಗಿಯ ಪುಳಕವಾದರೆ, 'ಸಾವಿರ ಪ್ರೇಮಿಯ ಹುಡುಕಿದರೂ ತವಕ ಬೇರೆ ಪುಳಕ ಬೇರೆ ಪ್ರೇಮವೊಂದೇ' ಎಂಬುದು ಹುಡುಗನ ತವಕ. ಇಬ್ಬರೂ ದೂರದೂರವಿರುವಾಗ 'ಮನಸೇ ಓ ಮನಸೇ ಎಂಥಾ ಮನಸೇ' ಎಂದು ಹುಡುಗಿ ವಿರಹ ಯಾತನೆಗಳು ಬೆರೆತ ಮಧುರ ಭಾವದಲ್ಲಿ ಹಾಡುತ್ತಾಳೆ. 'ಮನಸು ಕೊಟ್ಟು ಮನಸನ್ನೇ ಮರೆತುಬಿಟ್ಟೆಯಾ, ಮನಸು ಕೊಟ್ಟು ಮನಸಿನೊಳಗೇ ಕುಳಿತುಬಿಟ್ಟೆಯಾ' ಎಂಬುದು ಪ್ರೇಮದಲ್ಲಿ ಬಿದ್ದ ಆ ಕಾಲದ ಎಲ್ಲ ಹುಡುಗಿ- ಹುಡುಗಿಯರ ತವಕವೂ ಆಗಿಬಿಟ್ಟಿತು.  

'ಹೇಳೆ ಕೋಗಿಲೆ ಇಂಪಾಗಲಾ, ಹೇಳೆ ಇಬ್ಬನಿ ತಂಪಾಗಲಾ' ಎಂದು ಹಾಡುವ ಹುಡುಗಿ ಹುಡುಗನ ಕಣ್ಣಿಗೆ ಬೀಳುವ ಕ್ಷಣ ಲಕ್ಷಾಂತರ ಹುಡುಗರ ಯವ್ವನದಲ್ಲಿ ಎದೆ ಝಲ್ಲೆನಿಸುವ ಕ್ಷಣವೂ ಹೌದು. 'ಓಂಕಾರದಿ ಕಂಡೆ ಪ್ರೇಮನಾದವ, ಈ ತಾಣದಿ ತಂದೆ ನೀ ಶುಭೋದಯ' ಎಂಧು ಯಾವುದೇ ಹುಡುಗಿ, ಹುಡುಗನನ್ನು ಉದ್ದೇಶಿಸಿ ಹಾಡಬಹುದು.

"ತುಂತುರು ಅಲ್ಲಿ ನೀರ ಹಾಡು, ಕಂಪನ ಇಲ್ಲಿ ಪ್ರೀತಿ ಹಾಡು, ಹಗಲಿರಲಿ ಇರುಳಿರಲಿ, ನೀನಿರದೇ ಹೇಗಿರಲಿ, ನನ್ನ ತುಂಬು ಹೃದಯ ನೀ ತುಂಬಿದೆ' ಎಂದು ಹಾಡುವ ಸಂಗಾತಿಯೇ ಪ್ರೇಮಿಗೆ ಶ್ರೀರಕ್ಷೆ. ಇಂಥ ಪ್ರೇಮಿಯಿದ್ದರೆ ಬಾಳು ಬಂಗಾರವಾಗದೆ ಇದ್ದೀತೆ? 'ಕಣ್ಣಿನ ನೋಟಗಳು ಕೋಲ್ಮಿಂಚಿನ ಬಾಣಗಳು, ಕಣ್ಣಿನ ಮಾತುಗಳು ಬಿಡಿಸ್ಹೇಳದ ಒಗಟುಗಳು, ಇಂಥೋಳ ಕಣ್ಣಿನಲಿ ನಾನು ಸೇರಿಕೊಳ್ಳಲೇ' ಎಂಬ ಹಾಡು ಪ್ರೇಮಿಯ ಕಣ್ಣೋಟಕ್ಕೆ ಸೋತು ಕಂಗಾಲಾದ ಹುಡುಗನ ಹಾಡು. 

Casteist Scene In 83: ಜಾತಿ ಅಧರಿತ ಕೋಟಾ ಅವಹೇಳನ: ‘83’ ಹೊಸ ವಿವಾದ

ಇಂಥ ಅಪೂರ್ವ ಹಾಡುಗಳ ಮೂಲಕ ನಮಗೆ ನಮ್ಮ ಯೌವನವನ್ನು ಕಟ್ಟಿ ಕೊಟ್ಟವರು ಕೆ.ಕಲ್ಯಾಣ್ (K Kalyan). ಒಂದು ತಲೆಮಾರಿನ ಯವ್ವನವನ್ನು ಬೆಚ್ಚಗೆ ಕಾಪಾಡಿದವರು, ನಮ್ಮ ಪ್ರೇಮಿಗೆ ನಾವು ಆಡಬೇಕಾದ ಮಾತುಗಳಿಗೆ ಹಾಡನ ರೂಪ ಕೊಟ್ಟ, ಅದಕ್ಕೆ ಸಂಗೀತದ ರೂಪ ಕೊಟ್ಟ, ಅದನ್ನು ನಮ್ಮ ನಾಲಿಗೆಯ ತುದಿಯಲ್ಲಿ ಕುಣಿಯುವಂತೆ ಮಾಡಿದ ಪ್ರೇಮಕವಿ ಅವರು.   
ಕನ್ನಡದಲ್ಲಿ ಇಬ್ಬರು ಪ್ರೇಮಕವಿಗಳು. ಒಬ್ಬರು ಕೆಎಸ್ ನರಸಿಂಹಸ್ವಾಮಿ. ಕನ್ನಡ ಚಿತ್ರರಂಗಕ್ಕೆ ಮತ್ತು ಜನಸಾಮಾನ್ಯರಿಗೆ ಕೆ.ಕಲ್ಯಾಣ್. 1995- 96ರ ಸುಮಾರಿಗೆ ಬಂದ ಮೂರು ಫಿಲಂಗಳು ಕನ್ನಡದ ಚಿತ್ರರಸಿಕರು- ಸಂಗೀತರಸಿಕರನ್ನು ಮೆಚ್ಚಿಸಿದವು. ಅವು ನಮ್ಮೂರ ಮಂದಾರ ಹೂವೇ, ಅಮೃತವರ್ಷಿಣಿ ಮತ್ತು ಚಂದ್ರಮುಖಿ ಪ್ರಾಣಸಖಿ. ಈ ಮೂರೂ ಫಿಲಂಗಳ ಗೀತರಚನಕಾರ ಮತ್ತು ಸಂಗೀತ ನಿರ್ದೇಶಕ ಕೆ.ಕಲ್ಯಾಣ್ ಆಗಿದ್ದರು. ಆ ಮೂರು ಚಿತ್ರಗಳ ಯಶಸ್ಸಿನಲ್ಲಿ ಅದರ ಹಾಡುಗಳ ಪಾತ್ರವೂ ಪ್ರಮುಖವಾಗಿತ್ತು. ಪ್ರೇಮದ ಕ್ಷಣಗಳ ಮ್ಯಾಜಿಕ್ ಅವರ ಸಾಹಿತ್ಯದಲ್ಲಿ, ಸಂಗೀತದಲ್ಲಿ ಸಾಕ್ಷಾತ್ಕಾರವಾಗುತ್ತಿತ್ತು.

ತಮ್ಮ ಹದಿನಾರನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಬಂದವರು ಕಲ್ಯಾಣ್. ಅಲ್ಲಿಂದೀಚೆಗೆ ಸುಮಾರು ಇಪ್ಪತ್ತಾರು ವರ್ಷಗಳಿಂದ ಹಾಡು ಬರೆದಿದ್ದಾರೆ, ಸಂಗೀತ ನೀಡಿದ್ದಾರೆ. ಹೊಸ ಸಂಗೀತ ನಿರ್ದೇಶಕರ ನಡುವೆ ತಮ್ಮ ಬೇಡಿಕೆಯನ್ನೂ ಉಳಿಸಿಕೊಂಡಿದ್ದಾರೆ. ಅವರು ಬರೆದಿರುವ ಹಾಡುಗಳ ಸಂಖ್ಯೆ 3 ಸಾವಿರ ದಾಟಿದೆ. 

ದಕ್ಷಿಣ ಭಾರತ ಮಾತ್ರವಲ್ಲದೆ ಬಾಲಿವುಡ್‌ನ (Bollywood) ಹಲವು ಸಂಗೀತ ಸಂಯೋಜಕರ ಜತೆ ಕೆಲಸ ಮಾಡಿದ ಅನುಭವ. ಅಲ್ಲಿ ಇನ್ನಷ್ಟು ಮಾಗಿದ ಸಾಹಿತ್ಯ ರಚನೆ ನೀಡುವುದರಲ್ಲಿ ಪಳಗಿದರು. ವೈವಿದ್ಯಮಯ ಹಾಡುಗಳ ರಚನೆಗೂ ಹೆಸರಾದರು. ನೂರರಷ್ಟು ಬೇರೆ ಬೇರೆ ಸಂಗೀತ ಸಂಯೋಜಕರಿಗೆ ಹಾಡುಗಳನ್ನು ಬರೆದಿದ್ದಾರೆ. ಎ.ಆರ್.ರೆಹಮಾನ್, ಹಂಸಲೇಖಾ, ರಾಜನ್ ನಾಗೇಂದ್ರ, ವಿಜಯ ಭಾಸ್ಕರ್, ಅನು ಮಲ್ಲಿಕ್, ಉಪೇಂದ್ರರಿಂದ ಹಿಡಿದು, ಇಂದು ಹೆಸರು ಮಾಡಿರುವ ಸಂಗೀತ ನಿರ್ದೇಶಕರಾದ ದಿನೇಶ್ ಲೋಕನಾಥ್, ಅರ್ಜುನ್ ಜನ್ಯ, ಹರಿಕೃಷ್ಣ, ಕೀರವಾಣಿ, ಗುರುಕಿರಣ್, ರಾಜ್‌ಕುಮಾರ್, ವಿದ್ಯಾಸಾಗರ್ ಹೀಗೆ ಎಲ್ಲರ ರಾಗಕ್ಕೆ ಕಾವ್ಯವನ್ನು ಜೋಡಿಸಿದವರು ಕಲ್ಯಾಣ್. ಇನ್ನೊಂದು ವಿಶೇಷವೆಂದರೆ, ಕೆ. ಕಲ್ಯಾಣ್ ಬರೆದ ಗೀತೆಗಳನ್ನು 80ರ ದಶಕದಿಂದ ಇವತ್ತಿನವರೆಗೆ ಲೆಜೆಂಡರಿ ಗಾಯಕರೆನಿಸಿಕೊಂಡವರೆಲ್ಲಾ ಹಾಡಿದ್ದಾರೆ.

ಕೇಳುಗರನ್ನು ಮೈಮರೆಸುವ ಚಲನಚಿತ್ರಗಳಿಗೆ ಬರೆದಿರುವ ಹಾಡುಗಳು, ಆಲ್ಬಂಗಾಗಿ ರಚಿಸಿದವು, ಭಕ್ತಿಗೀತೆಗಳು ಹೀಗೆ ಎಲ್ಲಾ ಪ್ರಕಾರಗಳಲ್ಲೂ ಮಧುರವಾದ, ಅರ್ಥಪೂರ್ಣ ಹಾಡುಗಳನ್ನು ಬರೆದು ಜನಮೆಚ್ಚುಗೆಯನ್ನು ಗಳಿಸಿದರು ಕಲ್ಯಾಣ್. ತಮಿಳು ಮತ್ತು ತೆಲುಗು ಭಾಷೆಯಲ್ಲೂ ಚಿತ್ರಗಳಿಗೆ ಹಾಡುಗಳನ್ನು ಬರೆದು ತಮ್ಮ ಲೇಖನಿಯ ಝಲಕ್ ತೋರಿದ್ದಾರೆ.

Samantha In Differenr Roles: ಕ್ಯೂಟ್ ಗರ್ಲ್ ಪಾತ್ರ ಮಾಡಿ ಸಾಕಾಯ್ತು ಎಂದ ಸಮಂತಾ

ಗೀತೆ ರಚನೆಯ ಜತೆಜತೆಗೇ ರಾಗ ಸಂಯೋಜನೆಯಲ್ಲೂ ಮುಂದಿದ್ದಾರೆ ಕಲ್ಯಾಣ್. ಚಂದ್ರಮುಖಿ ಪ್ರಾಣಸಖಿ ಚಿತ್ರಕ್ಕಾಗಿ ಅತ್ಯುತ್ತಮ ಸಂಗೀತ ಸಂಯೋಜಕ ರಾಜ್ಯ ಪ್ರಶಸ್ತಿ ಮತ್ತು ಫಿಲ್ಮ್ ಫೇರ್ ಅವಾರ್ಡ್ ಅನ್ನು ಪಡೆದವರು. 'ಗಂಗಾ ಕಾವೇರಿ' ಮತ್ತು 'ಪ್ರೀತಿ ಪ್ರೇಮ ಪ್ರಣಯ' ಚಿತ್ರದ ಹಾಡುಗಳಿಗೆ ಅತ್ಯುತ್ತಮ ಗೀತರಚನಕಾರ ರಾಜ್ಯ ಪ್ರಶಸ್ತಿಯನ್ನೂ ತಮ್ಮ ಮಡಿಲಿಗೆ ಹಾಕಿಕೊಂಡರು. ಇನ್ನು ಫಿಲ್ಮ್ ಫೇರ್ ಪ್ರಶಸ್ತಿಗಳಿಗೆ ಲೆಕ್ಕವೇ ಇಲ್ಲ, ತನನಂ ತನನಂ, ಕಂಸಾಳೆ ಕಂಸಾಳೆಗೆ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಅವಾರ್ಡ್. ಅಬ್ದುಲ್ ಕಲಾಂ ಸಂಸ್ಥೆ ಕೆ. ಕಲ್ಯಾಣ್‌ರನ್ನು ಪ್ರೇಮ ಕವಿ ಎಂಬ ಬಿರುದನ್ನು ನೀಡಿ ಗೌರವಿಸಿದೆ. ಕಲ್ಯಾಣ್ ಬರೆದ ಹಾಡುಗಳ ಮಧುರವಾದ ಪ್ರೇಮ ನಿವೇದನೆಗೆ ಮನಸೋಲದ ಪ್ರೇಮಿಗಳೇ ಇಲ್ಲ ಎನ್ನಬಹುದು.



ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದ್ವಾನ್ ಚೆನ್ನಕೃಷ್ಣಪ್ಪರಿಂದ ಮತ್ತು ತಾಯಿಯಿಂದ ಕಲಿತ ಕಲ್ಯಾಣ್ ಚಿತ್ರರಂಗದಲ್ಲಿ ಹಂಸಲೇಖಾ ಗುರುಗಳು ಎಂದು ಸ್ಮರಿಸುತ್ತಾರೆ. ಮನೆಯಲ್ಲೇ ಸಂಗೀತ ಲೋಕದ ಆಧುನಿಕ ತಂತ್ರಜ್ಞಾನದ ಸ್ಟುಡಿಯೋ ಸೆಟ್‌ಅಪ್ ಇಟ್ಟುಕೊಂಡು ಗಾನ ಕೃಷಿಯಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಸಂಗೀತ ದಿಗ್ಗಜ ಡಾ. ಬಾಲಮುರಳಿಯವರು ಇಟ್ಟ ಹೆಸರು ‘ನಾದ ಮಂಟಪ’.

ಕಲ್ಯಾಣ್ ಅವರ ಈ ಹುಟ್ಟುಹಬ್ಬದ ದಿನ ಅವರ ಬದುಕಿನ ಎಲ್ಲ ಚಿಂತನೆಗಳೂ ಕಲ್ಯಾಣವಾಗಲಿ ಎಂದು ಹಾರೈಸೋಣ.

click me!