
ಒಂದು ಕಾಲದಲ್ಲಿ ಸ್ಯಾಂಡಲ್ವುಡ್ ಆಳಿದ ಬ್ಯೂಟಿ ಕ್ವೀನ್ ಸುಧಾರಾಣಿ. ಆದರೆ ನಡುವೆ ಬ್ರೇಕ್ ಪಡೆದು ಮತ್ತೆ ಕಮ್ಬ್ಯಾಕ್ ಮಾಡಿ ಈಗಲೂ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು-ಶುಭಮಸ್ತುವಿನಲ್ಲಿ ಎಲ್ಲರ ಬಾಯಲ್ಲೂ ತುಳಸಿಯಮ್ಮಾನೇ ಆಗಿದ್ದಾರೆ. 54 ವರ್ಷದ ನಟಿ, ಸೀರಿಯಲ್ನಲ್ಲಿ ಮದುವೆಯಾದ ಮಕ್ಕಳ ಅಮ್ಮ. ಇನ್ನೇನು ಅಜ್ಜಿಯಾಗುವ ಕಾಲ. ಆದರೆ ರಿಯಲ್ ಆಗಿ ಅವರನ್ನು ನೋಡಿದರೆ ಅವರಿನ್ನೂ ಸಿಂಪಲ್ ಬ್ಯೂಟಿ. ವಯಸ್ಸು ಎನ್ನುವುದು ಒಂದು ಸಂಖ್ಯೆಯಷ್ಟೇ ಎನ್ನುವುದು ಸುಧಾರಾಣಿ ಅವರಿಗೆ ನೋಡಿದರೆ ತಿಳಿಯುತ್ತದೆ. ತಮ್ಮ ಅದ್ಭುತ ನಟನೆಯಿಂದ ಮನಸೂರೆಗೊಳ್ಳುತ್ತಿದ್ದಾರೆ ನಟಿ ಸುಧಾರಾಣಿ. ನಟಿ ಸುಧಾರಾಣಿ ಅವರಿಗೆ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಸಾಕಷ್ಟು ಬೇಡಿಕೆ ಇದೆ. ಈ ಮೊದಲು ಹೀರೋಯಿನ್ ಆಗಿ ಮಿಂಚುತ್ತಿದ್ದ ಅವರು ಈಗ ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ‘ಯುವ’ ಸಿನಿಮಾದಲ್ಲಿ ಕಥಾ ನಾಯಕನ ತಾಯಿ ಪಾತ್ರ ಮಾಡಿದ್ದರು. ಅದೇ ರೀತಿ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆದರೆ ಸುಧಾರಾಣಿಯವರ ಬದುಕು ಕೂಡ ಸಾಕಷ್ಟು ಏರಿಳಿತಗಳಿಂದ ಕೂಡಿದೆ. ಮೊದಲ ಮದುವೆಯಿಂದ ಚಿತ್ರಹಿಂಸೆ ಅನುಭವಿಸಿರೋ ನಟಿ, ಅದರ ನೆನಪಿನಿಂದ ಇನ್ನೂ ಹೊರಬಂದಿಲ್ಲ. ಹೊರಬರಲಿಕ್ಕೆ ಸಾಧ್ಯವಾದರೂ ಹೇಗೆ ಅಲ್ವಾ?
ಹೌದು. ಸುಧಾರಾಣಿ ಮತ್ತು ಗೋವರ್ಧನ್ ವಿವಾಹ 2000 ನೇ ಇಸವಿಯಲ್ಲಿ ನಡೆಯಿತು. 2001ರಲ್ಲಿ ಜನಿಸಿದ ಪುತ್ರಿ ನಿಧಿ ಜನಿಸಿದ್ದು, ಕಳೆದ ವರ್ಷವಷ್ಟೇ ಅವರ ಭರತನಾಟ್ಯ ರಂಗಪ್ರವೇಶ ಆಗಿದೆ. ಸುಧಾರಾಣಿಯವರು ತಮ್ಮ ಮುದ್ದಿನ ಮಗಳನ್ನು ಪ್ರೀತಿಯಿಂದ ಸುಬ್ಬಿ ಕುಟ್ಟಿ ಎನ್ನುತ್ತಾರೆ. ಸಂಗೀತ, ನೃತ್ಯದಲ್ಲಿ ಪ್ರವೀಣೆಯಾಗಿದ್ದಾರೆ. ಆದರೆ ಇದಕ್ಕೂ ಮುನ್ನ ಅಂದ್ರೆ ಗೋವರ್ಧನ್ ಅವರಿಗೂ ಮುನ್ನ ಸುಧಾರಾಣಿಯವರ ಮದುವೆ 1999ರಲ್ಲಿ ಡಾ. ಸಂಜಯ್ ಜೊತೆ ಆಗಿತ್ತು. ಸಿನಿಮಾದಲ್ಲಿ ಪೀಕ್ನಲ್ಲಿ ಇರುವಾಗಲೇ ಅವರ ಮದುವೆಯಾಗಿತ್ತು. ಆ ಬಳಿಕ ಚಿತ್ರಕ್ಕೆ ಬ್ರೇಕ್ ಪಡೆದು ಅಮೆರಿಕಕ್ಕೆ ತೆರಳಿದರು. ಆದರೆ ಅಲ್ಲಿ ಪತಿಯಿಂದ ಸಾಕಷ್ಟು ಚಿತ್ರಹಿಂಸೆ ಅನುಭವಿಸಿದ ನಟಿ, ಕೊನೆಗೆ ಕಿರುಕುಳಕ್ಕೆ ಬೇಸತ್ತು ಡಿವೋರ್ಸ್ ಕೊಟ್ಟರು. ಆ ವ್ಯಕ್ತಿ ಮಾನಸಿಕ ಸಮಸ್ಯೆಗಳು ಇದ್ದವು. ಟ್ರೀಟ್ಮೆಂಟ್ ನೀಡಬೇಕು ಎಂದಾಗ ಯಾರೂ ರೆಡಿ ಇರಲಿಲ್ಲ. ಸರಿಹೋಗಬಹುದು ಎಂದು ಕಾದೆ. ಆದರೆ, ಸರಿಹೋಗಲ್ಲ ಎಂದಾಗ ನಾನು ಬಂದೆ ಎಂದು ಈ ಹಿಂದೆ ಹೇಳಿದ್ದರು ಸುಧಾರಾಣಿ.
ತುಳಸಿಯಮ್ಮನೋ, ಸುಧಾ ಬ್ಯೂಟಿಯೊ? ಟ್ರಾಫಿಕ್ ಜಾಂನಲ್ಲಿ ಸಿಲುಕಿದಾಗ ಹೀಗಿರ್ತಾರಂತೆ ನಟಿ!
ಡಿವೋರ್ಸ್ಗೆ ತೆಗೆದುಕೊಂಡ ನಿರ್ಧಾರ, ಅದರ ನಂತರ ಬದಲಾದ ಬದುಕಿನ ಕುರಿತು ಇದೀಗ ನಟಿ ರ್ಯಾಪಿಡ್ ರಶ್ಮಿ ಷೋನಲ್ಲಿ ಮಾತನಾಡಿದ್ದಾರೆ. 20 ವರ್ಷ ವಯಸ್ಸಿನವರೆಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದೆ. ಅದು ನನ್ನ ಪೀಕ್ ಅವಧಿ ಕೂಡ ಆಗಿತ್ತು. ಆದರೆ ನನ್ನಮ್ಮನಿಗೆ ಮತ್ತೆ ನಟನೆ ಇಷ್ಟವಿರಲಿಲ್ಲ. 20 ವರ್ಷಕ್ಕೆ ಎಲ್ಲಾ ಸ್ಟಾಪ್ ಮಾಡಬೇಕು ಎಂದಿದ್ರು. ಅವರ ಮಾತನ್ನು ನಾನು ಕೇಳ್ತಿದ್ದೆ. ಅದರಂತೆ ಮದುವೆ ಮಾಡಿದರು. ಆದರೆ ಬದುಕು ಎಲ್ಲವೂ ಅಂದುಕೊಂಡಂತೆ ಇರುವುದಿಲ್ಲವಲ್ಲ ಎನ್ನುತ್ತಲೇ ಅಂದು ಅನುಭವಿಸಿದ ನೋವುಗಳ ಕುರಿತು ಮಾತನಾಡಿದ್ದಾರೆ. ಆಗ ಜೀವನದಲ್ಲಿ ಏನೂ ಓಕೆ ಆಗಿರಲಿಲ್ಲ. ಡಿವೋರ್ಸ್ನಂಥ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿಹೋಗಿತ್ತು ಎಂದಿದ್ದಾರೆ.
ಸೆಲೆಬ್ರಿಟಿನೇ ಆಗಲೀ, ಯಾವ ಕ್ಷೇತ್ರದಲ್ಲಿ ಇರುವ ಮಹಿಳೆಯೇ ಆಗಲಿ... ಆಗಿನ ಸಮಯದಲ್ಲಿ ಡಿವೋರ್ಸ್ ವಿಷಯ ಎಂದರೆ ಅದು ಸುಲಭದಲ್ಲಿ ಜೀರ್ಣಿಸಿಕೊಳ್ಳಲಾಗದ್ದು. ಸಮಾಜ ಏನನ್ನತ್ತೆ, ಯಾರು ಏನು ಹೇಳ್ತಾರೆ ಎನ್ನುವ ಬಗ್ಗೆ ತುಂಬಾ ಚಿಂತೆ ಇತ್ತು. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಸಹಿಸಿಕೊಂಡೆ. ಆದರೆ ಅದೊಂದು ಟೈಂನಲ್ಲಿ ಇನ್ನು ನನ್ನಿಂದ ಸಾಧ್ಯವೇ ಇಲ್ಲ ಎಂದು ತಿಳಿಯಿತು. ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ ಆಗೋಯ್ತು. ಆದರೆ ಆಗುವುದೆಲ್ಲಾ ಒಳ್ಳೆಯದ್ದಕ್ಕೆ ಎನ್ನುವಂತೆ, ಈ ಬದುಕು ನನಗೆ ತುಂಬಾ ಕಲಿಸಿಬಿಟ್ಟಿತು. ನಾನು ಯಾರು, ನನ್ನ ಸಾಮರ್ಥ್ಯ ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು ಎಂದಿದ್ದಾರೆ ನಟಿ.
ನಾನು ಬದಲಾಗಬೇಕಾಯ್ತು. ಈ ನನ್ನ ಅನುಭವಗಳೆಲ್ಲಾ ನನ್ನನ್ನು 10 ಪಟ್ಟು ಹೆಚ್ಚು ಸ್ಟ್ರಾಂಗ್ ಮಾಡಿದವು. ಮದುವೆಯಾಗಿ ಕರಿಯರ್ ತ್ಯಾಗ ಮಾಡಿದ್ದೆ. ಆದರೆ ಈ ಪ್ರೊಫೆಷನ್ ಬಿಟ್ಟು ಬೇರೆಯದ್ದು ನನಗೆ ಗೊತ್ತಿರಲಿಲ್ಲ. ಇದೇ ಕಾರಣಕ್ಕೆ ಮತ್ತೆ ಬಣ್ಣ ಹಚ್ಚಿದೆ. ಒಳ್ಳೆಯ ಆಫರ್ಗಳು ಸಿಕ್ಕವು. ಕಿರುತೆರೆಯಲ್ಲಿಯೂ ಅಭಿನಯಿಸುವ ಅವಕಾಶ ಸಿಕ್ಕಿತು. ಬ್ಯಾಕ್ಗ್ರೌಂಡ್ ಧ್ವನಿ ನೀಡಿದೆ. ಹೀಗೆ ಕೊನೆಗೆ ಎಲ್ಲವೂ ಒಳ್ಳೆಯದಾಯಿತು. ಆದರೆ ಆ ಎರಡನೆಯ ಇನ್ನಿಂಗ್ಸ್ ಪ್ರಾರಂಭಿಸಿದಾಗ ಮತ್ತೊಮ್ಮೆ ಎಲ್ಲವನ್ನೂ ಮೊದಲಿನಿಂದ ಶುರು ಮಾಡುವ ಹಾಗಾಯಿತು. ಆದರೆ ಅದು ನಾನು ಯಾರು ಎನ್ನುವುದನ್ನು ಕಲಿತುಕೊಳ್ಳಲು ನೆರವಾಯಿತು ಎಂದಿದ್ದಾರೆ.
ಸುಧಾರಾಣಿಯ ಮನಮೋಹಕ ನೃತ್ಯಕ್ಕೆ ಮನಸೋತ ಫ್ಯಾನ್ಸ್: ಸೊಸೆಯ ಕಾಲಿಗೇ ಬಿದ್ದ ಕ್ಷಣಕ್ಕೆ ನೆಟ್ಟಿಗರು ಭಾವುಕ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.