ಹುಟ್ಟುಹಬ್ಬದ ನೆಪದಲ್ಲಿ ಅದೇನೋ ಹೊಸದು ಮಾಡಲು ಹೊರಟ ಸುಚೇಂದ್ರ ಪ್ರಸಾದ್‌!

Published : Apr 28, 2025, 12:37 PM ISTUpdated : Apr 28, 2025, 12:44 PM IST
ಹುಟ್ಟುಹಬ್ಬದ ನೆಪದಲ್ಲಿ ಅದೇನೋ ಹೊಸದು ಮಾಡಲು ಹೊರಟ ಸುಚೇಂದ್ರ ಪ್ರಸಾದ್‌!

ಸಾರಾಂಶ

ಸುಚೇಂದ್ರ ಪ್ರಸಾದ್ ನಿರ್ದೇಶನದ "ಪದ್ಮಗಂಧಿ" ಚಿತ್ರದ ಟ್ರೈಲರ್ ಬಿಡುಗಡೆ ಹಾಗೂ ಅವರ ಹುಟ್ಟುಹಬ್ಬದ ಪ್ರಯುಕ್ತ ನಾಲ್ಕು ದಿನಗಳ ಚಿತ್ರ-ರಂಗ ಕಲಾ ಉತ್ಸವ ಮೇ 1 ರಿಂದ 4 ರವರೆಗೆ ಬೆಂಗಳೂರಿನ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ನಡೆಯಲಿದೆ. ಚಿತ್ರರಂಗ, ಕಿರುತೆರೆ, ರಂಗಭೂಮಿ, ಸಾಹಿತ್ಯ, ಸಂಸ್ಕೃತ ಕ್ಷೇತ್ರಗಳ ಗಣ್ಯರು ಭಾಗವಹಿಸಿ ಚರ್ಚೆ ನಡೆಸಲಿದ್ದಾರೆ. ಕನ್ನಡ, ಸಂಸ್ಕೃತ, ಹಿಂದಿ ಭಾಷೆಗಳಲ್ಲಿ ನಿರ್ಮಾಣಗೊಂಡಿರುವ ಈ ಮಕ್ಕಳ ಚಿತ್ರದ ಬಿಡುಗಡೆ ದಿನಾಂಕವನ್ನು ಮೇ ನಂತರ ಘೋಷಿಸಲಾಗುವುದು.

ಕನ್ನಡ ಚಿತ್ರರಂಗದಲ್ಲಿ ನಟರಾಗಿ, ನಿರ್ದೇಶಕರಾಗಿ ಗುರುತಿಸಿಕೊಂಡಿರುವವರು ಸುಚೇಂದ್ರ ಪ್ರಸಾದ. ಇದೀಗ ಪದ್ಮಗಂಧಿ ಎಂಬ ಕನ್ನಡ, ಸಂಸ್ಕೃತ, ಹಿಂದಿ ಭಾಷೆಯ ಸಿನಿಮಾವನ್ನು ನಿರ್ದೇಶನ ಮಾಡಿರುವ ಅವರ ಪಾಲಿಗೆ ಮೇ 01ರಂದು ಹುಟ್ಟುಹಬ್ಬದ ಸಂಭ್ರಮ. ಆ ನೆಪದಲ್ಲಿಯೇ ಇದೀಗ ನಾಲಕ್ಕು ದಿನಗಳ ಕಾಲ ಚಿತ್ರ-ರಂಗ ಕಲಾ ಉತ್ಸವ ಸಮಾಗಮ ಕಾರ್ಯಕ್ರಮ ನಡೆಯಲಿದೆ. ಮೇ 01 ರಿಂದ 4ರವರೆಗೆ ನಡೆಯಲಿರುವ ಈ ಕಾರ್ಯಕ್ರಮ ಬೆಂಗಳೂರಿನ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ನಡೆಯಲಿದೆ. ಈ ಮೂಲಕ ಕನ್ನಡ ಚಿತ್ರರಂಗ, ಕಿರುತೆರೆ, ರಂಗಭೂಮಿ ಮತ್ತು ಸಾಹಿತ್ಯ ವಲಯದ ದಿಗ್ಗಜರು, ಹಿರಿ-ಕಿರಿಯರ ಸಮಾಗಮದೊಂದಿಗೆ ಅನೇಕ ದಿಕ್ಕುಗಳಲ್ಲಿ ಮೌಲಿಕವಾದ ಚರ್ಚೆಗಳು ನಡೆಯಲಿವೆ.

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಹಾಗೂ ತೇಜಸ್ವಿನಿ ಅನಂತಕುಮಾರ್ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಿರಿಯ ನಟ ದೊಡ್ಡಣ್ಣ, ಡಾ. ದೀಪಕ್ ಪರಮಶಿವನ್, ಹಿಂದುಸ್ತಾನಿ ಸಂಗೀತಗಾರ ಪ್ರಸನ್ನ ವೈದ್ಯ, ನಟ-ಸಾಹಿತಿ ಲಕ್ಷ್ಮಣ್ ಶಿವಶಂಕರ್, ಮಾನಸಾ ಜೋಶಿ, ಲಹರಿ ವೇಲು, ಸಂಗೀತಾ ಕಟ್ಟಿ, ಡಾ. ಗೌರಿ ಸುಬ್ರಹ್ಮಣ್ಯ, ಹಿರಿಯ ರಂಗಕರ್ಮಿ ಬಸವಲಿಂಗಯ್ಯ, ಸಂಗೀತ ನಿರ್ದೇಶಕ ವಿ.ಮನೋಹರ್, ದಾಕ್ಷಾಯಿಣಿ ಭಟ್ ಮುಂತಾದವರು ಈ ಸಮಾಗಮದಲ್ಲಿ ಭಾಗಿಯಾಗಲಿದ್ದಾರೆ. ಅವರೆಲ್ಲರೂ ಒಂದೊಂದು ಗಹನವಾದ ವಿಚಾರದ ಬಗ್ಗೆ ಚಿಂತನ ಮಂಥನ ನಡೆಸಲಿದ್ದಾರೆ.

ಸುಚೇಂದ್ರ ಪ್ರಸಾದ್ 'ಪದ್ಮಗಂಧಿ' ಇಲ್ಲಿಯವರೆಗೆ ಬಂತು; ಯಾರಿಲ್ಲಿ ಕಮಲದ ಹೂ ..!?

ವಿಶೇಷವೆಂದರೆ, ಇದೀಗ ಬಿಡುಗಡೆಗೆ ಸಜ್ಜಾಗಿರುವ ಸುಚೇಂದ್ರ ಪ್ರಸಾದ್ ನಿರ್ದೇಶನದ ಪದ್ಮಗಂಧಿ ಚಿತ್ರದ ಟ್ರೈಲರ್ ಕೂಡಾ ಇದೇ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಸಂಸ್ಕೃತ ಭಾಷೆ ಇಂದು ಯಾವ ಹಂತದಲ್ಲಿದೆ ಎಂಬ ವಿಚಾರದ ಸುತ್ತ ಗಂಭೀರವಾದ ಚರ್ಚೆಗಳು ನಡೆಯಲಿವೆ. ಅನೇಕ ಸಂಸ್ಕೃತ ವಿದ್ವಾಂಸರು ಅದರಲ್ಲಿ ಭಾಗಿಯಾಗಲಿದ್ದಾರೆ. ಮಲ್ಲೇಪುರಂ ವೆಂಕಟೇಶ್, ಪ್ರೊ.ಎಸ್.ಆರ್ ಲೀಲಾ, ಡಾ.ಗಣಪತಿ ಹೆಗಡೆ, ಅರ್ಜುನ್ ಭಾರದ್ವಾಜ್, ವಿಜಯ ಸಿಂಹ, ರೋಹಿತ್ ಚಕ್ರತೀರ್ಥ ಮುಂತಾದವರೂ ಪಾಲ್ಗೊಳ್ಳಲಿದ್ದಾರೆ. ಇನ್ನುಳಿದಂತೆ ಸಿನಿಮಾ ಮತ್ತು ಸಾಹಿತ್ಯ ಲೋಕದ ದಿಗ್ಗಜರ ಸಮಾಗಮವೂ ಸಂಭವಿಸಲಿದೆ. ಪಿಇಎಸ್, ಬಿಎನ್‌ಎಂ ಐಟಿ, ಎಪಿಎಸ್, ಬಿಎಂಎಸ್, ವಿಜಯ ಕಾಲೇಜುಗಳ ವಿದ್ಯಾರ್ಥಿಗಳೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.,

ಒಂದು ಹೊಸಾ ಸಿನಿಮಾ ತೆರೆಗೆ ಬರುತ್ತಿದೆ ಎಂಬ ಸುಳಿವು ಸಿಕ್ಕಾ ತಕ್ಷಣವೇ ಅದರಲ್ಲಿ ಅಡಕವಾಗಿರಬಹುದಾದ ಕಥೆಯ ಬಗ್ಗೆ ಕುತೂಹಲವೊಂದು ಮೂಡಲು ಆರಂಭಿಸುತ್ತದೆ. ಸಾಮಾನ್ಯವಾಗಿ, ಇಂಥಾ ಕಲ್ಪನೆಗಳೆಲ್ಲವೂ ಮಾಮೂಲು ಶೈಲಿಯ ಬಿಂದುವಿನಲ್ಲಿಯೇ ಗಿರಕಿ ಹೊಡೆಯುತ್ತವೆ. ಆದರೆ, ನಮ್ಮೆಲ್ಲರ ಪಾಲಿಗೆ ಚಿರಪರಿಚಿತವಾಗಿರುವ, ದೈವೀಕ ಗಂಧ ಮೆತ್ತಿಕೊಂಡಿರುವ ಕಮಲದ ಹೂವಿನ ಬಗ್ಗೆಯೇ ಒಂದು ಸಿನಿಮಾ ರೂಪುಗೊಳ್ಳುತ್ತದೆ ಎಂದರೆ ಸಹಜವಾಗಿಯೇ ಅಚ್ಚರಿ ಮೂಡಿಕೊಳ್ಳುತ್ತೆ. ಅಂಥಾದ್ದೊಂದು ಕುತೂಹಲ ತಾನೇತಾನಾಗಿ ಸೃಷ್ಟಿಯಾಗಿರುವುದ  'ಪದ್ಮಗಂಧಿ' ಎಂಬ ಸಿನಿಮಾದ ಬಗ್ಗೆ! 

ತಮಿಳು ಚಿತ್ರರಂಗದ 'ನಂ. 1' ಕುಬೇರ ಯಾರು? ರಜನಿಕಾಂತ್ ಅಲ್ಲ..!

ಕನ್ನಡ, ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿ ರೂಪುಗೊಳ್ಳುತ್ತಿರುವ ಈ ಚಿತ್ರವನ್ನು ಸುಚೇಂದ್ರ ಪ್ರಸಾದ್ ನಿರ್ದೇಶನ ಮಾಡುತ್ತಿದ್ದಾರೆ. ಮಾಜಿ ಎಂಎಲ್‌ಸಿ, ಪ್ರಸಿದ್ಧ ಅಂಕಣಕಾರ್ತಿ, ಸಂಸ್ಕೃತದ ಭೂಮಿಕೆಯಲ್ಲಿ ನಾನಾ ದಿಕ್ಕಿನ ಅಧ್ಯಯನ, ಪಾಂಡಿತ್ಯದ ಮೂಲಕ ಹೆಸರಾಗಿರುವ ಎಸ್.ಆರ್ ಲೀಲಾ ಈ ಚಿತ್ರಕ್ಕೆ ಕಥೆ ಸಿದ್ಧಪಡಿಸಿ ನಿರ್ಮಾಪಕಿಯಾಗಿಯೂ ಜೊತೆಯಾಗಿದ್ದಾರೆ. 

ನಮ್ಮಲ್ಲಿ ದೈವೀಕ ಅನುಭೂತಿ ಸ್ಫುರಿಸುವ ಕಮಲ ಪುಷ್ಪದ ಬಗ್ಗೆ ಆಳವಾಗಿ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾ ಸಾಗಿದ್ದ ಲೀಲಾ ಅವರ ಪಾಲಿಗೆ, ಅದರ ಅಗಾಧತೆ ಮೊಗೆದರೂ ಮುಗಿಯದ ಅಕ್ಷಯ ಪಾತ್ರೆಯಂತೆ ಭಾಸವಾಗಲಾರಂಭಿಸಿತ್ತು. ಕಡೆಗೂ ಕಮಲ ಪುಷ್ಪದ ಬಗ್ಗೆ ನಿರಂತರವಾಗಿ ಆರೇಳು ವರ್ಷ ಅಧ್ಯಯನ ನಡೆಸಿದ್ದ ಅವರು ಕಡೆಗೂ ಅಪರೂಪದ ಕಥೆಯೊಂದನ್ನು ಸಿದ್ಧಪಡಿಸಿ, ನಂತರ ಸುಚೇಂದ್ರ ಪ್ರಸಾದ್ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದರು.

ಸಸ್ಯ ಶಾಸ್ತ್ರದ ಪ್ರಕಾರ, ಏಷ್ಯಾ ಖಂಡದ ದೇಸೀ ಹೂವಾದ ಕಮಲ, ಪುರಾಣ ಕಾಲದಿಂದಲೂ ಶ್ರೇಷ್ಠ ಪುಷ್ಪವಾಗಿ ಘನತೆ ಪಡೆದುಕೊಂಡಿದೆ. ಪ್ರಾಚೀನ ಕಾಲದಿಂದ ಆರಂಭವಾಗಿ ಅರ್ವಾಚೀನ ಕಾಲದವರೆಗೂ ಅದೇ ಪ್ರಭೆಯನ್ನು ಉಳಿಸಿಕೊಂಡಿರುವ ಕಮಲ ವಿಶಾಲವಾದ ಹರವುಳ್ಳ ಅಪರೂಪದ ಪುಷ್ಪ. ಕೆದಕುತ್ತಾ ಹೋದರೆ ಈಜಿಪ್ಟ್ ನಾಗರೀಕತೆಯವರೆಗೂ ಕೂಡಾ ಇದರ ಪ್ರಭಾವಳಿ ಹಬ್ಬಿಕೊಂಡಿರುವ ಅಚ್ಚರಿಯೊಂದು ಎದುರಾಗುತ್ತದ. 

ವನಿತಾ ವಾಸು ಭಾರೀ ರಹಸ್ಯಗಳು ರಿವೀಲ್; ಎಲ್ಲಿ ಹೇಳಿದ್ದು.. ಏನಂದ್ರು..?!

ಸಾವಿರಾರು ವರ್ಷದ ಹಿಂದಿನ ಬೀಜವನ್ನು ಇಂದು ಬಿತ್ತಿದರೂ ಸಲೀಸಾಗಿ ಚಿಗುರೊಡೆದು, ಗಿಡವಾಗಿ, ಹೂವಾಗಿ ನಗುವ ಶಕ್ತಿ ಈ ಜಗತ್ತಿನಲ್ಲಿ ಯಾವುದಾದರೂ ಪುಷ್ಪಕ್ಕಿದೆ ಎಂದರೆ ಅದು ಕಮಲಕ್ಕೆ ಮಾತ್ರ. ಸಮರ ಕಲೆಗಳಲ್ಲಿಯೂ ಈ ಹೂವಿನ ಐತಿಹ್ಯವಿದೆ. ಮಹಾಭಾರತದಲ್ಲಿ ಘಟಿಸುವ ಯುದ್ಧದಲ್ಲಿ ನಾನಾ ವ್ಯೂಹಗಳು ರಚನೆಯಾದದ್ದು ಗೊತ್ತೇ ಇದೆ. ಚಕ್ರವ್ಯೂಹ, ಗರುಡ ವ್ಯೂಹದಂಥವುಗಳು ನಮ್ಮೆಲ್ಲರಿಗೆ ಪರಿಚಿತ. ವಿಶೇಷವೆಂದರೆ, ಅದರಲ್ಲಿ ಪದ್ಮವ್ಯೂಹವೂ ಸೇರಿಕೊಂಡಿದೆ.

ಪ್ರಾಧ್ಯಾಪಕಿಯಾಗಿ, ಲೇಖಕಿಯಾಗಿ, ಸಂಶೋಧಕಿಯಾಗಿ ಸದಾ ಹೊಸ ಅರಿವು ಸೃಷ್ಟಿಯತ್ತ ತುಡಿಯುವ ಮನಃಸ್ಥಿತಿ ಹೊಂದಿರುವ ಎಸ್.ಆರ್ ಲೀಲಾ ಸಿನಿಮಾ ರಂಗಕ್ಕೇನು ಅಪರಿಚಿತರಲ್ಲ. ಅಂಥಾ ಅಗಾಧ ತಿಳಿವಳಿಕೆ, ಭಿನ್ನ ಗ್ರಹಿಕೆಗಳ ಭೂಮಿಕೆಯಲ್ಲಿಯೇ ಅವರು ಪದ್ಮಗಂಧಿಯ ಕಥನವನನು ಕಟ್ಟಿಕೊಟ್ಟಿದ್ದಾರೆ. ಸುಚೇಂದ್ರ ಪ್ರಸಾದ್ ಸಮರ್ಥ ಸಾರಥ್ಯದಲ್ಲಿ, ಪ್ರತಿಭಾನ್ವಿತರ ತಂಡದ ಮೂಲಕ ಪದ್ಮಗಂಧಿ ಅಂತಿಮ ಘಟ್ಟ ತಲುಪಿಕೊಂಡಿದೆ. 

ಉಳಿದ ಒಂದಷ್ಟು ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಪದ್ಮಗಂಧಿಯ ಬಗ್ಗೆ ಮತ್ತೊಂದಷ್ಟು ಕೌತುಕದ ವಿಚಾರಗಳನ್ನು ಚಿತ್ರತಂಡ ಪ್ರೇಕ್ಷಕರ ಮುಂದೆ ತೆರೆದಿಡಲಿದೆ. ಇದೇ ಮೇ ತಿಂಗಳ ನಂತರ ಕನ್ನಡ, ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗಿರುವ ಪದ್ಮಗಂಧಿ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.

ಅಂದಹಾಗೆ, ಈ ಸಿನಿಮಾ ಮಕ್ಕಳ ಚಿತ್ರದ ಆವರಣದಲ್ಲಿ ಅಣಿಗೊಳ್ಳುತ್ತಿದೆ. ಗುರುಕುಲದ ಹಿನ್ನೆಲೆಯಿಂದ ಗರಿಬಿಚ್ಚಿಕೊಳ್ಳುವ  ಪದ್ಮಗಂಧಿ ಎಸ್.ಆರ್ ಲೀಲಾ ಅವರ ಕನಸಿನ ಕೂಸು. ಪರಿಕಲ್ಪನೆ, ನಿರ್ಮಾಣ ಡಾ. ಎಸ್.ಆರ್ ಲೀಲಾ, ಚಿತ್ರಕಥೆ-ಸಂಭಾಷಣೆ-ನಿರ್ದೇಶನ ಕ. ಸುಚೇಂದ್ರ ಪ್ರಸಾದ, ಡಾ. ದೀಪಕ್ ಪರಮಶಿವನ್ ಸಂಗೀತ, ಎನ್. ನಾಗೇಶ್ ನಾರಾಯಣಪ್ಪ ಸಂಕಲನ, ಮನು ಯಾಪ್ಲಾರ್ ಮತ್ತು ನಾಗರಾಜ್ ಅದ್ವಾನಿ ಛಾಯಾಗ್ರಹಣವಿರುವ ಈ ಚಿತ್ರ ಮಹಾಪದ್ಮ, ಮೃತ್ಯುಂಜಯ ಶಾಸ್ತ್ರಿ , ಪಂಡಿತ ಪ್ರಸನ್ನ ವೈದ್ಯ,  ಡಾ. ದೀಪಕ್ ಪರಮಶಿವನ್, ಹೇಮಂತ ಕುಮಾರ ಜಿ, ಪರಿಪೂರ್ಣ, ಮುಂತಾದವರ ತಾರಾಗಣದೊಂದಿಗೆ ಕಳೆಗಟ್ಟಿಕೊಂಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ