
ರಾಮಾಯಣ ಸಿನಿಮಾದ ರಾಮನ ಪಾತ್ರದ ವಿಡಿಯೋ ಲೀಕ್?
ಸದ್ಯಕ್ಕೆ ಸಿನಿಮಾರಂಗದಲ್ಲಿ ಸದ್ಯ ಅತಿ ಹೆಚ್ಚು ಸದ್ದು ಮಾಡುತ್ತಿರುವ ಸುದ್ದಿ ಎಂದರೆ ಅದು ನಿತೇಶ್ ತಿವಾರಿ ನಿರ್ದೇಶನ, ಯಶ್-ರಣಬೀರ್ ಕಪೂರ್- ಸಾಯಿ ಪಲ್ಲವಿ ತಾರಾಗಣದ 'ರಾಮಾಯಣ' (Ramayana) ಸಿನಿಮಾ. ಈ ಚಿತ್ರದ ಬಗೆಗಿನ ಪ್ರತಿಯೊಂದು ಸಣ್ಣ ಅಪ್ಡೇಟ್ ಕೂಡ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸುತ್ತಿದೆ. ಈಗ ಈ ಬಹುನಿರೀಕ್ಷಿತ ಸಿನಿಮಾದ ಸಣ್ಣದೊಂದು ವಿಡಿಯೋ ತುಣುಕು ಸೋಷಿಯಲ್ ಮೀಡಿಯಾಗಳಲ್ಲಿ ಲೀಕ್ ಆಗಿದ್ದು, ರಣಬೀರ್ ಕಪೂರ್ (Ranbir Kapoor) ಅವರ ಶ್ರೀರಾಮನ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ವೈರಲ್ ಆದ ಆ ವಿಡಿಯೋದಲ್ಲಿ ಏನಿದೆ?
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಮಸುಕಾದ ವಿಡಿಯೋದಲ್ಲಿ ರಣಬೀರ್ ಕಪೂರ್ ಅವರು ಭಗವಾನ್ ಶ್ರೀರಾಮನ ಭವ್ಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಬಿಲ್ಲು-ಬಾಣ ಹಿಡಿದಿರುವ ರಣಬೀರ್, ಒಂದು ವಿಚಿತ್ರವಾದ ಮಾಯಾ ಪ್ರಾಣಿಯ ಮೇಲೆ ಗುರಿ ಇಟ್ಟು ಬಾಣ ಹೂಡುತ್ತಿರುವುದನ್ನು ಈ ವಿಡಿಯೋ ಕ್ಲಿಪ್ನಲ್ಲಿ ನೋಡಬಹುದು. ಅವರು ಬಾಣ ಬಿಟ್ಟ ಕೂಡಲೇ ಅಲ್ಲಿ ಭೀಕರ ಸ್ಫೋಟ ಸಂಭವಿಸುವ ದೃಶ್ಯ ಪ್ರೇಕ್ಷಕರ ಎದೆಬಡಿತ ಹೆಚ್ಚಿಸುವಂತಿದೆ. ಈ ವಿಡಿಯೋ ಕ್ಲಿಪ್ ಕಂಡ ಅಭಿಮಾನಿಗಳು, 'ರಾಮಾಯಣ ಚಿತ್ರವು ತಾಂತ್ರಿಕವಾಗಿ ತುಂಬಾ ಶ್ರೀಮಂತವಾಗಿದೆ' ಎನ್ನುತ್ತಿದ್ದಾರೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ. ಇದು ಚಿತ್ರತಂಡ ಆಯ್ದ ಜನರಿಗಾಗಿ ಹಮ್ಮಿಕೊಂಡಿದ್ದ ವಿಶೇಷ ಪ್ರದರ್ಶನದ ವೇಳೆ ಸೋರಿಕೆಯಾದ ದೃಶ್ಯ ಎಂದು ಕೆಲವರು ವಾದಿಸಿದರೆ, ಇನ್ನು ಕೆಲವರು ಇದನ್ನು 'ಕೃತಕ ಬುದ್ಧಿಮತ್ತೆ' (Artificial Intelligence) ಬಳಸಿ ಸೃಷ್ಟಿಸಲಾದ ವಿಡಿಯೋ ಎಂದು ಹೇಳುತ್ತಿದ್ದಾರೆ. ವಿಡಿಯೋದ ಗುಣಮಟ್ಟ ತುಂಬಾ ಕಡಿಮೆ ಇದ್ದು, ಸ್ಪಷ್ಟವಾಗಿಲ್ಲದ ಕಾರಣ, ಇದು ಅಸಲಿ ಸಿನಿಮಾದ್ದೇ ಎಂದು ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಕೆಲವು ಫ್ಯಾನ್ ಪೇಜ್ಗಳು 'ಇದು ಅಭಿಮಾನಿಗಳು ಎಐ ಮೂಲಕ ಸೃಷ್ಟಿಸಿದ ವಿಡಿಯೋ ಇರಬಹುದು' ಎಂದು ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿವೆ.
ನಿರ್ಮಾಪಕರ ಮಾಸ್ಟರ್ ಪ್ಲ್ಯಾನ್:
ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಸಿನಿಮಾ ಬಿಡುಗಡೆಗೂ ಮುನ್ನವೇ ಒಂದು ವಿಭಿನ್ನ ಪ್ರಚಾರದ ತಂತ್ರವನ್ನು ಅನುಸರಿಸುತ್ತಿದ್ದಾರೆ. ಅವರು ಆಯ್ದ ಅಭಿಮಾನಿಗಳು ಮತ್ತು ಕಂಟೆಂಟ್ ಕ್ರಿಯೇಟರ್ಗಳಿಗಾಗಿ ಚಿತ್ರದ ಕೆಲವು ವಿಶೇಷ ದೃಶ್ಯಗಳನ್ನು ತೋರಿಸುತ್ತಿದ್ದಾರೆ ಎನ್ನಲಾಗಿದೆ. ಈ ಸ್ಕ್ರೀನಿಂಗ್ನಲ್ಲಿ ಭಾಗವಹಿಸಿದ ಒಬ್ಬ ಕಂಟೆಂಟ್ ಕ್ರಿಯೇಟರ್ ಪ್ರಕಾರ, "ಶ್ರೀರಾಮನ ಲುಕ್ ಸಂಪೂರ್ಣವಾಗಿ 3D ಮಾದರಿಯಲ್ಲಿದೆ. ಇದು ಕೇವಲ ಸಿನಿಮಾವಲ್ಲ, ಒಂದು ಗ್ರಾಂಡ್ ಮಹಾನ್ ಅನುಭವ. ರಾಮನ ಜೊತೆಗೆ ಸೀತೆ ಮತ್ತು ಲಕ್ಷ್ಮಣನ ಲುಕ್ ಕೂಡ ಅತ್ಯಂತ ಆಕರ್ಷಕವಾಗಿದೆ" ಎಂದು ಹಂಚಿಕೊಂಡಿದ್ದಾರೆ.
'ರಾಮಾಯಣ' ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದರೆ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ನಮ್ಮ ಕನ್ನಡನ ನಟ, 'ರಾಕಿಂಗ್ ಸ್ಟಾರ್' ಯಶ್' ಈ ಚಿತ್ರದಲ್ಲಿ ರಾವಣನ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಜೊತೆಗೆ, ನಟ ಯಶ್ ಅವರು ಈ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಇದು ಕನ್ನಡ ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಇನ್ನಷ್ಟು ನಿರೀಕ್ಷೆ ಮೂಡಲು ಕಾರಣವಾಗಿದೆ. ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ.
ಅಂದಹಾಗೆ, 'ರಾಮಾಯಣ' ಚಿತ್ರವು ಈ ವರ್ಷದ (2026) ದೀಪಾವಳಿ ಹಬ್ಬದಂದು ತೆರೆಗೆ ಬರಲಿದೆ. ಮಹಾಕಾವ್ಯ ಆಧಾರಿತ ಈ ಸಿನಿಮಾ, ಈಗಿನಿಂದಲೇ ಇಡೀ ಭಾರತೀಯ ಚಿತ್ರರಂಗ ಹಾಗೂ ಜಾಗತಿಕವಾಗಿ ಗಮನ ಸೆಳೆಯುತ್ತಿದೆ. ಚಿತ್ರತಂಡವು ಅಧಿಕೃತವಾಗಿ ಹೆಚ್ಚಿನ ಮಾಹಿತಿಯನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದು, ಪ್ರತಿ ಹಂತದಲ್ಲೂ ವಿಭಿನ್ನತೆ ಹಾಗೂ ವಿಶೇಷತೆ ಕಾಯ್ದುಕೊಳ್ಳಲಿದೆ. ಈ ಮಧ್ಯೆ, ಇಂತಹ ಸಣ್ಣಪುಟ್ಟ ಲೀಕ್ ಮತ್ತು ಊಹಾಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ, ಸೌಂಡ್ ಮಾಡುತ್ತಲೇ ಇರುತ್ತವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.