ಬೆಂಗಳೂರಿನ ಪ್ರಮುಖ ಜಂಕ್ಷನ್‌ಗಳಿಗೆ ಪುನೀತ್ ರಾಜ್‌ಕುಮಾರ್ ಹೆಸರಿಡಲು ಮನವಿ ಪತ್ರ!

By Suvarna NewsFirst Published Nov 8, 2021, 4:19 PM IST
Highlights

ಮಾರತ್ತಹಳ್ಳಿ ಜಂಕ್ಷನ್ ಮೂಲಕ ಕೃಷ್ಣರಾಜಪುರದ ತೂಗು ಸೇತುವೆವರೆಗೆ ಹಾದು ಹೋಗುವ ಹೊರ ವರ್ತುಲ ರಸ್ತೆಗೆ 'ಪುನೀತ್ ರಾಜ್ ಕುಮಾರ್ ರಸ್ತೆ' ನಾಮಕರಣ ಮಾಡುವುದು ಸೂಕ್ತ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

ಬೆಂಗಳೂರು (ನ.08): ನಗರದ ರಸ್ತೆಯೊಂದಕ್ಕೆ 'ಪುನೀತ್ ರಾಜ್ ಕುಮಾರ್ ರಸ್ತೆ' (Puneeth Rajkumar Road) ಹೆಸರು ನಾಮಕರಣ ಮಾಡಬೇಕೆಂದು ಬಿಬಿಎಂಪಿ (BBMP) ಮಾನ್ಯ ಆಡಳಿತಾಧಿಕಾರಿಗಳಿಗೆ ಹಾಗೂ ಮಾನ್ಯ ಮುಖ್ಯ ಆಯುಕ್ತರಿಗೆ ಬೆಂಗಳೂರು ದಕ್ಷಿಣ ವಿಭಾಗದ ಬಿಜೆಪಿ ಅಧ್ಯಕ್ಷರು ಮತ್ತು ಮಾಜಿ ಆಡಳಿತ ಪಕ್ಷದ ನಾಯಕರಾದ ಎನ್.ಆರ್.ರಮೇಶ್ (N.R.Ramesh) ಮನವಿ ಪತ್ರಗಳನ್ನು ಸಲ್ಲಿಸಿದ್ದಾರೆ.

ಬೆಂಗಳೂರು ಮಹಾನಗರದ 'ಕಾರ್ಡ್‌' ರಸ್ತೆಗೆ ಪುನೀತ್ ರಾಜ್‌ಕುಮಾರ್ ಅವರ ಹೆಸರಿಡುವ ಬಗ್ಗೆ ಈಗಾಗಲೇ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ 'ಕಾರ್ಡ್' ರಸ್ತೆಗೆ ಹಲವು ವರ್ಷಗಳ ಹಿಂದೆಯೇ ಜ್ಞಾನಪೀಠ ಪ್ರಶಸ್ತಿ ವಿಜೇತ ವರಕವಿ 'ದ.ರಾ.ಬೇಂದ್ರೆ ರಸ್ತೆ' (Da.Ra.Bendre Road) ಎಂದು ನಾಮಕರಣ ಮಾಡುವ ಬಗ್ಗೆ ಪಾಲಿಕೆಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯವನ್ನು ಕೈಗೊಳ್ಳಲಾಗಿರುತ್ತದೆಯಾದ್ದರಿಂದ, ಆ ರಸ್ತೆಗೆ ಬೇರೊಂದು ಹೆಸರನ್ನು ನಾಮಕರಣ ಮಾಡುವುದು ಸಮಂಜಸವಾಗಿರುವುದಿಲ್ಲ. 

ಹಾಗಾಗಿ 'ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ನಿಂದ ಬನ್ನೇರುಘಟ್ಟ ರಸ್ತೆಯ ಮೆಗಾಸಿಟಿ ಮಾಲ್ ಜಂಕ್ಷನ್‌ವರೆಗಿನ ವರ್ತುಲ ರಸ್ತೆ'ಗೆ ಅಥವಾ 'ಬನಶಂಕರಿ ಬಸ್ ನಿಲ್ದಾಣದಿಂದ ಪ್ರಾರಂಭವಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ ಹಾಗೂ ಮಾರತ್ತಹಳ್ಳಿ ಜಂಕ್ಷನ್ ಮೂಲಕ ಕೃಷ್ಣರಾಜಪುರದ ತೂಗು ಸೇತುವೆ'ವರೆಗೆ ಹಾದು ಹೋಗುವ ಹೊರ ವರ್ತುಲ ರಸ್ತೆಗೆ 'ಪುನೀತ್ ರಾಜ್ ಕುಮಾರ್ ರಸ್ತೆ' ಎಂದು ನಾಮಕರಣ ಮಾಡುವುದು ಸೂಕ್ತ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

ಒಬ್ರಾ ಇಬ್ರಾ? ನಟ Puneeth Rajkumar ಗಳಿಸಿದ ಸ್ನೇಹಿತರು, ಫ್ಯಾನ್ಸ್ ಅಪಾರ!

ಇನ್ನು ಪಾಲಿಕೆಯ ಕೌನ್ಸಿಲ್ (BBMP Council) ಕಛೇರಿಯ ದಾಖಲೆಗಳನ್ನು ಪರೀಶೀಲಿಸಲಾಗಿದ್ದು, ಮೇಲೆ ತಿಳಿಸಿರುವ ಎರಡು ರಸ್ತೆಗಳಿಗೆ ಯಾವುದೇ ಸಾಧಕರ ಹೆಸರುಗಳನ್ನು ನಾಮಕರಣ ಮಾಡದೇ ಇರುವುದರಿಂದ ಹಾಗೂ ಕರ್ನಾಟಕದ ಯಾವುದೇ  ರಂಗದ ಸಾಧಕರ  ಪೈಕಿ ಬೇರಾವುದೇ ವ್ಯಕ್ತಿಯು ಮಾಡಿರದಷ್ಟು ಸಾಮಾಜಿಕ ಸೇವೆಗಳನ್ನು ಮಾಡಿರುವಂತಹ ಮತ್ತು ಕನ್ನಡ ಚಿತ್ರರಂಗದ ಮಂಚೂಣಿಯಲ್ಲಿರುವಂತಹ ಅಪ್ಪು ಅವರ ನೆನಪಿಗಾಗಿ  'ಪುನೀತ್ ರಾಜ್ ಕುಮಾರ್ ರಸ್ತೆ' ಎಂದು ನಾಮಕರಣ ಮಾಡಿದರೆ  ಅವರ ಸಮಾಜಮುಖಿ ಕಾರ್ಯಗಳಿಗೆ ಬಿಬಿಎಂಪಿ ಸೂಕ್ತವಾದ ಗೌರವ ನೀಡಿದಂತಾಗುತ್ತದೆ ಎಂದು ಎನ್.ಆರ್.ರಮೇಶ್ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಈ ಮನವಿ ಪತ್ರವನ್ನು ಸ್ವೀಕರಿಸಿದ ಮುಖ್ಯ ಆಯುಕ್ತರು ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿ,  ಮುಂದಿನ ಕ್ರಮಕ್ಕಾಗಿ ಕೌನ್ಸಿಲ್ ಕಾರ್ಯದರ್ಶಿಗಳಿಗೆ ಪತ್ರವನ್ನು ರವಾನಿಸಿದ್ದಾರೆ. 

ಇನ್ನು, ಡಾ ರಾಜ್‌ಕುಮಾರ್‌ ಕುಟುಂಬದಿಂದ (Dr Rajkumar Family) ನಟ ಪುನೀತ್‌ ರಾಜ್‌ಕುಮಾರ್‌ ಅವರ 11ನೇ ದಿನದ ತಿಥಿ ಕಾರ್ಯ ಇಂದು ನಡೆದಿದೆ. ಬೆಳಗ್ಗೆ ಪುನೀತ್‌ ಅವರ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ನಡೆದಿದೆ. ನಂತರ ಇಡೀ ಕುಟುಂಬ ಕಂಠೀರವ ಸ್ಟುಡಿಯೋದಲ್ಲಿರುವ (Kanteerava Studios) ಪುನೀತ್‌ ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ತಿಥಿ ಕಾರ್ಯ ಮಾಡಿದ್ದಾರೆ. ನಂತರ ಕುಟುಂಬದವರಿಂದ ಅಪ್ಪು ಮನೆಯಲ್ಲಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆದಿದೆ. ರಾಜ್‌ ಕುಟುಂಬದವರಿಂದ ನಡೆಯಲಿರುವ ಈ ಕಾರ್ಯದಲ್ಲಿ ಕುಟುಂಬದವರು ಹಾಗೂ ಆಪ್ತರು ಮಾತ್ರ ಭಾಗಿಯಾಗಿದ್ದರು. 

ಕರ್ನಾಟಕದ ಥಿಯೇಟರ್‌ಗಳಲ್ಲಿ ಪುನೀತ್‌ಗೆ ಫುಷಾಂಜಲಿ, ಗೀತಾಂಜಲಿ, ಶ್ರದ್ಧಾಂಜಲಿ!

ಅಪ್ಪು ಸಮಾಧಿಗೆ ಪ್ರತಿ ದಿನ 20 ಸಾವಿರಕ್ಕೂ ಅಧಿಕ ಅಭಿಮಾನಿಗಳು ಬಂದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಅಪ್ಪುಗೆ ನಮಿಸುತ್ತಿದ್ದಾರೆ. ಹಾಗೂ ನಿನ್ನೆಯಷ್ಟೇ ಪುನೀತ್‌ ರಾಜ್‌ಕುಮಾರ್‌ಗೆ ಕರ್ನಾಟಕ ಚಿತ್ರ ಪ್ರದರ್ಶಕರ ಸಂಘ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಸಂಜೆ 6 ಗಂಟೆಗೆ ರಾಜ್ಯದ ಎಲ್ಲಾ ಚಿತ್ರಮಂದಿರಗಳ ಮುಂದೆ ದೀಪ ಬೆಳಗಿಸುವ ಮೂಲಕ ಅಗಲಿದ ಪುನೀತ್‌ಗೆ ಗೌರವ ನಮನ ಅರ್ಪಿಸಿದ್ದಾರೆ. ರಾಜ್ಯದ ಎಲ್ಲ ಚಿತ್ರಮಂದಿರಗಳು, ಪ್ರೇಕ್ಷಕರು, ಅಭಿಮಾನಿಗಳಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆದಿದೆ.

"

click me!