ಕನ್ನಡದ ಪ್ರಖ್ಯಾತ ವಿಮರ್ಶಕ ಪ್ರೊ.ಜಿ.ಎಚ್‌.ನಾಯಕ ನಿಧನ

By Kannadaprabha NewsFirst Published May 27, 2023, 10:08 AM IST
Highlights

ಕೇಂದ್ರ ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿ ಪುರಸ್ಕೃತ ಪ್ರೊ.ಜಿ.ಎಚ್‌.ನಾಯಕ ಇನ್ನಿಲ್ಲ.

ತಮ್ಮ ನಿಷ್ಠುರ ಮಾತು, ವಿಮರ್ಶೆಯಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧರಾಗಿದ್ದ ಹಿರಿಯ ಸಾಹಿತಿ ಪ್ರೊ.ಜಿ.ಎಚ್‌.ನಾಯಕ (88) ಬಹುಕಾಲದ ಅಸೌಖ್ಯದಿಂದಾಗಿ ಶುಕ್ರವಾರ ನಿಧನರಾದರು.

ಕೇಂದ್ರ ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿ ಪುರಸ್ಕೃತರಾಗಿದ್ದ ನಾಯಕರಿಗೆ ಪತ್ನಿ, ಸಾಮಾಜಿಕ ಹೋರಾಟಗಾರ್ತಿ ಮೀರಾನಾಯಕ, ಪುತ್ರಿ ಕೀರ್ತಿ ಇದ್ದಾರೆ. ಮೈಸೂರಿನ ಸರಸ್ವತಿಪುರದಲ್ಲಿ ನೆಲೆಸಿದ್ದ ಅವರ ಅಂತ್ಯಕ್ರಿಯೆ ಮೈಸೂರಿನಲ್ಲಿಯೇ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Latest Videos

ಉತ್ತರ ಕನ್ನಡದ ಅಂಕೋಲ ತಾಲೂಕಿನ ಸೂರ್ವೆಯಲ್ಲಿ 1935ರ ಸೆಪ್ಟೆಂಬರ್‌ 18ರಂದು ಜನಿಸಿದ್ದ ಅವರು ವಿದ್ಯಾರ್ಥಿ ದಿಸೆಯಿಂದಲೂ ಮೈಸೂರಿನಲ್ಲೇ ನೆಲೆಸಿದ್ದರು. ಆ ಮೂಲಕ ಮೈಸೂರಿಗರೇ ಆಗಿ ಹೋಗಿದ್ದರು. ಕನ್ನಡ ಸಾಹಿತ್ಯ ಲೋಕದಲ್ಲಿ ಜಿ.ಎಚ್‌.ನಾಯಕ ಎಂದು ಚಿರಪರಿಚಿತರಾಗಿದ್ದ ಅವರ ಪೂರ್ಣ ಹೆಸರು ಗೋವಿಂದರಾಯ ಹಮ್ಮಣ್ಣ ನಾಯಕ. ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬಹುಕಾಲ ಪ್ರಾಧ್ಯಾಪಕರಾಗಿದ್ದ ಅವರು ವಿಮರ್ಶೆ ಜತೆಗೆ ಸಂಪಾದನೆ, ಕನ್ನಡ ಸಣ್ಣಕಥೆಗಳು, ಹೊಸಗನ್ನಡ ಕವಿತೆಗಳನ್ನೂ ರಚಿಸಿದ್ದರು. ಬಾಳು ಎನ್ನುವುದು ಅವರ ಆತ್ಮಕಥನ.

4 ದಿನದಲ್ಲಿ 6 ಸೆಲೆಬ್ರಿಟಿಗಳ ವಿದಾಯ: ಇಬ್ಬರು ಅಪಘಾತಕ್ಕೆ ಬಲಿಯಾದರೆ, ಒಬ್ಬರ ಸಾವು ನಿಗೂಢ!

+++

ಸಮಕಾಲೀನ (1973), ಅನಿವಾರ್ಯ (1980), ನಿರಪೇಕ್ಷೆ (1984), ನಿಜದನಿ (1988), ವಿನಯ ವಿಮರ್ಶೆ (1991), ಸಕಾಲಿಕ (1995), ಗುಣ ಗೌರವ (2002), ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (2002), ಕೃತಿ ಸಾಕ್ಷಿ (2006), ಸ್ಥಿತಿ ಪ್ರಜ್ಞೆ (2007), ಮತ್ತೆ ಮತ್ತೆ ಪಂಪ (2008), ಸಾಹಿತ್ಯ ಸಮೀಕ್ಷೆ (2009), ಉತ್ತರಾರ್ಧ (2011) ಅವರ ಪ್ರಮುಖ ಕೃತಿಗಳು.

ಅವರ ಉತ್ತರಾರ್ಧ ಕೃತಿಗೆ 2014ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಿರಪೇಕ್ಷ ವಿಮರ್ಶಾ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಿಜದನಿ ವಿಮರ್ಶಾ ಕೃತಿಗೆ ವಿ.ಎಂ.ಇನಾಂದಾರ ಸ್ಮಾರಕ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದವು. ಅಡಿಗರ ಗೌರವ ಗ್ರಂಥ ಸಂವೇದನೆ , ಶ್ರೀ ರಾಮಾಯಣ ದರ್ಶನಂ ಕುವೆಂಪು ಸ್ವಹಸ್ತಾಕ್ಷರ ಪ್ರತಿ, ಶತಮಾನದ ಕನ್ನಡ ಸಾಹಿತ್ಯ (ಸಂಪುಟ - 1,2)ಕ್ಕೆ ಸಂಪಾದಕರೂ ಆಗಿದ್ದರು.

ಕಿರುತೆರೆ ಸ್ಟಾರ್ ನಟ ನಿತೇಶ್ ಪಾಂಡೆ ಇನ್ನಿಲ್ಲ

ಪ್ರಸಿದ್ಧ ಸಾಹಿತಿ ಜಿ.ಎಚ್.ನಾಯಕ್ ಅವರ ಅಗಲಿಕೆ ನನಗೆ ಆಘಾತವನ್ನುಂಟು‌ ಮಾಡಿದೆ. ನನ್ನ ಆತ್ಮೀಯರು ಮತ್ತು ಹಿತಚಿಂತಕರಾಗಿದ್ದ ಜಿ.ಎಚ್.ನಾಯಕ್ ಬರವಣಿಗೆಯ ಜೊತೆಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳುವಳಿಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ಹೊಸ ತಲೆಮಾರನ್ನು ಪ್ರಭಾವಿಸಿದವರು. ಅವರ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಾಪ ಸೂಚಿಸಿದ್ದಾರೆ. 

 

click me!