
ಸಾಮಾನ್ಯನೊಬ್ಬ ಮುಖ್ಯಮಂತ್ರಿಯಾದರೆ ಆಡಳಿತ ವ್ಯವಸ್ಥೆ ಹೇಗಿರುತ್ತದೆ ಮತ್ತು ಆತ ಎದುರಿಸುವ ಸವಾಲುಗಳೇನು ಎಂಬ ಕಥಾಹಂದರ ಹೊಂದಿರುವ ‘ಕಾಮನ್ ಮ್ಯಾನ್’ ಚಿತ್ರ ಸೆ.25ರಂದು ತೆರೆಕಾಣಲು ಸಜ್ಜಾಗಿದೆ. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ನಿರ್ದೇಶನದ 106ನೇ ಚಿತ್ರ ಇದಾಗಿದ್ದು, ಇತ್ತೀಚೆಗೆ ಚಿತ್ರದ ನಾಲ್ಕು ಹಾಡುಗಳನ್ನು ಉಮಾಶ್ರೀ, ವಿನೋದ್ ಪ್ರಭಾಕರ್, ರಮೇಶ್ ಭಟ್ ಹಾಗೂ ಪ್ರಿಯಾಂಕಾ ಉಪೇಂದ್ರ ಬಿಡುಗಡೆ ಮಾಡಿದರು.
ಸಾಮಾಜಿಕ ಕಾರ್ಯಕರ್ತ ಎನ್. ನರಸಿಂಹಮೂರ್ತಿ ಕಥೆ ಬರೆದು ಈ ಚಿತ್ರ ನಿರ್ಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕರು, ಪ್ರತಿ ಮನುಷ್ಯನಲ್ಲೂ ಒಂದಲ್ಲ ಒಂದು ಆಸೆ ಇರುತ್ತದೆ. ಹಾಗೆಯೇ ಒಬ್ಬ ಸಾಧಾರಣ ವ್ಯಕ್ತಿ ಸಿಎಂ ಆದಾಗ ಏನೆಲ್ಲ ಸುಧಾರಣೆ ಮಾಡಬಹುದು ಎಂಬುದನ್ನು ಈ ಚಿತ್ರದ ಮೂಲಕ ತೋರಿಸಲು ಪ್ರಯತ್ನಿಸಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಮಾಶ್ರೀ, ‘ನಿರ್ದೇಶಕ ಸಾಯಿಪ್ರಕಾಶ್ ನನ್ನ ಪಾಲಿಗೆ ಗುರುಗಳಿದ್ದಂತೆ. ಹಿಂದೆ ಎನ್.ಎಸ್. ರಾವ್ ನಿಧನರಾದಾಗ ನನ್ನ ನಟನಾ ಬದುಕು ಮುಗಿಯಿತು ಎಂದೇ ಹಲವರು ಭಾವಿಸಿದ್ದರು. ಅಂಥ ಕಷ್ಟದ ಕಾಲದಲ್ಲಿ ನನಗೆ ಅವಕಾಶ ನೀಡಿ ಬೆಂಬಲಿಸಿದವರು ಸಾಯಿಪ್ರಕಾಶ್’ ಎಂದರು.
ರಮೇಶ್ ಭಟ್, ‘ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ಮಟ್ಟಹಾಕುವ ಸಂದೇಶ ಈ ಚಿತ್ರದಲ್ಲಿದೆ’ ಎಂದರು. ವಿನೋದ್ ಪ್ರಭಾಕರ್, ‘ನನ್ನ ತಂದೆಯ ಜತೆ ಗುರುತಿಸಿಕೊಂಡಿದ್ದ ಹಿರಿಯ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ನೋಡಿ ಸಂತಸವಾಯಿತು’ ಎಂದರು. ಪ್ರಿಯಾಂಕಾ ಉಪೇಂದ್ರ ಹಾಡುಗಳ ಗುಣಮಟ್ಟವನ್ನು ಶ್ಲಾಘಿಸಿದರು.
‘ಕೆರೆ ಬೇಟೆ’ ಚಿತ್ರದ ಮೂಲಕ ಜನಮನ ಗೆದ್ದಿದ್ದ ಗೌರಿಶಂಕರ್ ಎಸ್.ಆರ್.ಜಿ ನಾಯಕನಾಗಿ ನಟಿಸಿದ್ದು, ಸೋನಾ ಲದ್ವಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಶೋಕ್, ಗಣೇಶ್ ರಾವ್ ಕೇಸರಕರ್, ಪ್ರಕಾಶ್ ತುಮಿನಾಡು ತಾರಾಗಣದಲ್ಲಿದ್ದಾರೆ. ಇನ್ನು ಸಾಮಾನ್ಯ ಮನುಷ್ಯನ ರಾಜಕೀಯ ಪಯಣದ ಕಥೆ ಹೊಂದಿರುವ ಈ ಸಿನಿಮಾ ಇದೇ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.