ವಿಭಿನ್ನ ಶೀರ್ಷಿಕೆಯ 'ಮೈಸೂರು' ಚಿತ್ರದ ಟ್ರೇಲರ್‌ ಬಿಡುಗಡೆ

By Suvarna NewsFirst Published Nov 4, 2021, 9:03 PM IST
Highlights

ಮೈಸೂರಿನ ಸುತ್ತ ನಡೆದ ನೈಜ ಘಟನೆಯೇ ಚಿತ್ರದ ಕತೆ. ಅನಿವಾಸಿ ಕನ್ನಡಿಗನ ಕತೆಯೂ ಹೌದು. ಹೊರರಾಜ್ಯದಿಂದ ನಾಯಕ ಕಾರಣಾಂತರದಿಂದ ಮೈಸೂರಿಗೆ ಬರುತ್ತಾನೆ. ಅಲ್ಲಿ ಅವನಿಗೆ ನಾಯಕಿಯ ಮೇಲೆ ಪ್ರೇಮ ಆರಂಭವಾಗುತ್ತದೆ.

ಸಾಂಸ್ಕೃತಿಕ ನಗರಿ 'ಮೈಸೂರು' (Musuru) ಹೆಸರಿನಲ್ಲಿ ಸಿನಿಮಾ ಬಂದಿದ್ದು, ಅದರ ಟ್ರೇಲರ್‌ (Trailer) ಬಿಡುಗಡೆ ಇತ್ತೀಚೆಗೆ ನಡೆಯಿತು. ವಾಸುದೇವ ರೆಡ್ಡಿ (Vasudev Reddy) ನಿರ್ಮಿಸಿ, ನಿರ್ದೇಶನ ಮಾಡಿರುವ ಈ 'ಮೈಸೂರು' ಚಿತ್ರದ ಟ್ರೇಲರ್‌ ಜತೆಗೆ ಮೂರು ಹಾಡುಗಳ ಪ್ರದರ್ಶನ ಇತ್ತೀಚೆಗೆ ನಡೆಯಿತು. ಈ ಚಿತ್ರಕ್ಕೆ ಲೈಫ್ ಎಂಡ್ಸ್ ವಿತ್ ಲವ್ ಎಂಬ ಅಡಿಬರಹವಿದೆ.  ಪ್ರಮುಖರಾದ ಬಾ.ಮ.ಹರೀಶ್‌, ನಿರ್ದೇಶಕ ಬಿ ಆರ್‌ ಕೇಶವ, ವಿತರಕ ವಸುಪ್ರದ ಸುಧೀರ್‌, ರವಿಶಂಕರ್‌, ಓಂಕಾರ್‌ ಪಟೇಲ್, ಸುಕಾಂತ್‌ ಆಚಾರ್ಯ, ರಂಗನಾಥ್‌ ಮುಂತಾದ ಆಗಮಿಸಿ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದರು.

'ನಾನು ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದವನು. ಮೈಸೂರು ನನ್ನ ಮೊದಲ ನಿರ್ದೇಶನದ ಸಿನಿಮಾ. ಮೈಸೂರಿನ ಸುತ್ತ ನಡೆದ ನೈಜ ಘಟನೆಯೇ ಚಿತ್ರದ ಕತೆ. ಅನಿವಾಸಿ ಕನ್ನಡಿಗನ ಕತೆಯೂ ಹೌದು. ಹೊರರಾಜ್ಯದಿಂದ ನಾಯಕ ಕಾರಣಾಂತರದಿಂದ ಮೈಸೂರಿಗೆ ಬರುತ್ತಾನೆ. ಅಲ್ಲಿ ಅವನಿಗೆ ನಾಯಕಿಯ ಮೇಲೆ ಪ್ರೇಮ ಆರಂಭವಾಗುತ್ತದೆ. ನಂತರ ಕೆಲವು ದಿನಗಳಲ್ಲಿ ನಾಯಕನಿಗೆ ನಕ್ಸಲ್ ನಂಟಿರುವುದು ತಿಳಿಯುತ್ತದೆ. ನ್ಯಾಯಾಲಯ ಆತನಿಗೆ ಗಲ್ಲು ಶಿಕ್ಷೆ ವಿಧಿಸುತ್ತದೆ. ಆತನ ಸಾವಿನ ಮುಂಚೆ ನಿನ್ನ ಕೊನೆಯಾಸೆ ಏನು ಎಂದು ಕೇಳಿದಾಗ, ನನ್ನ ದೇಹವನ್ನು ಆಸ್ಪತ್ರೆಗೆ ದಾನ ಮಾಡಿ, ನನ್ನ ಉಪಯುಕ್ತ ಅಂಗಗಳು ಬೇರೆಯವರ ಬಾಳಿಗೆ ಆಸರೆಯಾಗಲಿ ಎನ್ನುತ್ತಾನೆ. ಇಂತಹ ಒಳ್ಳೆಯ ಗುಣಗಳಿರುವ ನಾಯಕ, ಹೇಗೆ ಕೆಟ್ಟವನಾಗಲು ಸಾಧ್ಯ ಎಂದು, ಈತನ ಕೇಸ್ ಮತ್ತೆ ಓಪನ್ ಆಗುತ್ತದೆ. ಪುನಃ ವಾದ ವಿವಾದ ನಡೆಯುತ್ತದೆ. ಕೊನೆಗೆ ಜಯ ಯಾರಿಗೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು' ಎನ್ನುತ್ತಾರೆ ನಿರ್ದೇಶಕ ವಾಸುದೇವ ರೆಡ್ಡಿ. 

ಡಿಸೆಂಬರ್ 10ಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾನೆ 'ಅವತಾರ ಪುರುಷ'

ಕನ್ನಡದ ಜತೆಗೆ ಒರಿಸ್ಸಾ, ಬೆಂಗಾಳಿ ಭಾಷೆಯಲ್ಲೂ ಈ ಸಿನಿಮಾ ಬರುತ್ತಿದೆ. ಈ ಚಿತ್ರ ಕನ್ನಡದಲ್ಲಿ ಬರುವಾಗ ಶೇ. 25 ಭಾಗದಷ್ಟು ಒಡಿಶಾ ಭಾಷೆ ಇರುತ್ತದೆ. ಒಡಿಶಾ ಭಾಷೆಯ ವರ್ಷನ್‌ ಬರುವಾಗ ಶೇ. 25 ಭಾಗದಷ್ಟು ಕನ್ನಡದ ಸಂಭಾಷಣೆ ಇರುತ್ತದೆ. ಒರಿಸ್ಸಾ ಮೂಲದ ಸಂವಿತ್‌ ಆಚಾರ್ಯ (Samvith Acharya) ಚಿತ್ರದ ನಾಯಕ. ಪೂಜಾ (Pooja) ಚಿತ್ರದ ನಾಯಕಿ. 'ಅನಿವಾಸಿ ಕನ್ನಡಿಗರ ಕತೆಯಾಗಿದ್ದರಿಂದ ನನ್ನ ಈ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಒಡಿಶಾ ಭಾಷೆಯಲ್ಲಿ ನಾನು ಈಗಾಗಲೇ ಹಲವಾರು ಚಿತ್ರಗಳಲ್ಲಿ ನಟಿಸಿದ್ದೇನೆ. ಕನ್ನಡದಲ್ಲಿ ಇದು ಮೊದಲ ಸಿನಿಮಾ' ಎಂದರು ಸಂವಿತ್‌ . ಜಗದೀಶ್‌, ಕೆ ಆರ್‌ ಅಪ್ಪಾಜಿ ಈ ಚಿತ್ರದ ಸಹ ನಿರ್ಮಾಪಕರು.

ಸಿನಿರಸಿಕರಿಂದ 'ಪ್ರೇಮಂ ಪೂಜ್ಯಂ' ದೃಶ್ಯ ಕಾವ್ಯ ಟ್ರೇಲರ್‌ಗೆ ಮೆಚ್ಚುಗೆ

'ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ. ನಾನು 'ರನ್ನ' ಚಿತ್ರ ಸೇರಿದಂತೆ ಕೆಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿದ್ದೇನೆ. ನೃತ್ಯ ಹಾಗೂ ನಾಟಕದಲ್ಲಿ ಆಸಕ್ತಿಯಿರುವ ನಾನು ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾಯಕಿಯಾಗಿ ಇದು ನನ್ನ ಮೊದಲ ಚಿತ್ರ. ನಾನು ಮೈಸೂರಿನವಳು. ಇದೇ ಊರಿನಲ್ಲೇ ಹೆಚ್ಚು ಚಿತ್ರೀಕರಣ ನಡೆದಿದ್ದು, ನನಗೆ ಮನೆಯ ವಾತವರಣವಿತ್ತು' ಎಂದು ಚಿತ್ರದ ನಾಯಕಿ ಪೂಜಾ ಹೇಳಿದ್ದಾರೆ. ಇನ್ನು ಚಿತ್ರದಲ್ಲಿ ಸತ್ಯಜಿತ್, ಕುರಿ ಪ್ರತಾಪ್, ಭಾಸ್ಕರ್ ಶೆಟ್ಟಿ, ಅಶೋಕ್ ಹೆಗ್ಡೆ, ಜೈಶ್ರೀ, ರವಿಕುಮಾರ್ ಸೇರಿದಂತೆ ಮುಂತಾದವರ ತಾರಾಬಳಗವಿದೆ. ರಘು ಶಾಸ್ತ್ರಿ, ರವಿಶಂಕರ್ ನಾಗ್, ಅನಿತಕೃಷ್ಣ ಬರೆದಿರುವ ಹಾಡುಗಳಿಗೆ ರಮಣಿ ಸುಂದರೇಶನ್, ಅನಿತಕೃಷ್ಣ, ವಿಜಯ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ಸಿದ್ದು ಭಗತ್ ಸಂಕಲನ ಹಾಗೂ ಸ್ಟಾರ್ ನಾಗಿ, ಮೈಸೂರು ರಾಜು, ಸುಧಾಕರ್ ವಸಂತ್ ಅವರ ನೃತ್ಯ ನಿರ್ದೇಶನ,  ಕೃಷ್ಣ ಮಳವಳ್ಳಿ ಸಂಭಾಷಣೆ ಮತ್ತು ಭಾಸ್ಕರ್ ವಿ ರೆಡ್ಡಿ ಕ್ಯಾಮರಾ ಕೈಚಳಕ ಈ ಚಿತ್ರಕ್ಕಿದೆ.
 

click me!