Upendra: 'ಕಬ್ಜ' ಚಿತ್ರದ ಟೀಸರ್ ಲಾಂಚ್ ಮುಂದೂಡಿದ ನಿರ್ದೇಶಕ ಆರ್.ಚಂದ್ರು

By Suvarna NewsFirst Published Nov 13, 2021, 9:06 PM IST
Highlights

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ಅಗಲಿಕೆಯ ಕಾರಣದಿಂದ ಕಬ್ಜ ಟೀಸರ್ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ನಿರ್ದೇಶಕ ಆರ್.ಚಂದ್ರು ತಿಳಿಸಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗೂ ಆರ್​.ಚಂದ್ರು (R.Chandru) ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ (Pan India) ಸಿನಿಮಾ 'ಕಬ್ಜ' (Kabza) ಚಿತ್ರದ ಟೀಸರ್ ಅನ್ನು ದೀಪಾವಳಿ ಹಬ್ಬಕ್ಕೆ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಆರ್. ಚಂದ್ರು ತಿಳಿಸಿದ್ದರು. ಆದರೆ ಟೀಸರ್ (Teaser) ಬಿಡುಗಡೆ ಮುಂದಕ್ಕೆ ಹೋಗಿದೆ. ಹೌದು! ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅಗಲಿಕೆಯ ಕಾರಣದಿಂದ ಟೀಸರ್ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ನಿರ್ದೇಶಕ ಆರ್.ಚಂದ್ರು ತಿಳಿಸಿದ್ದಾರೆ.

'ಅಪ್ಪು ಹಠಾತ್ ನಿಧನ ನಮ್ಮ ಕಬ್ಜ ಚಿತ್ರತಂಡಕ್ಕೆ ಬಹಳ ನೋವು ತಂದಿದೆ. ಇಂತಹ ಸಂದರ್ಭದಲ್ಲಿ ಟೀಸರ್ ಬಿಡುಗಡೆ ಮಾಡಿ ಸಂಭ್ರಮಿಸುವುದು ಸರಿಯಲ್ಲ ಎಂಬ ಉದ್ದೇಶದಿಂದ ಚಿತ್ರದ ಟೀಸರ್ ಬಿಡುಗಡೆ ಮಾಡಿಲ್ಲ.‌ ಹಾಗಾಗಿ ಮುಂದಿನ‌ ದಿನಗಳಲ್ಲಿ ಟೀಸರ್ ಬಿಡುಗಡೆ ಮಾಡುತ್ತೇವೆ' ಎಂದು ಇನ್‌ಸ್ಟಾಗ್ರಾಮ್‌ (Instagram) ಮೂಲಕ ಅಭಿಮಾನಿಗಳಿಗೆ ಆರ್.ಚಂದ್ರು ತಿಳಿಸಿದ್ದಾರೆ. ಒಟ್ಟಿನಲ್ಲಿ ಪುನೀತ್ ನಿಧನ ಇಡೀ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಕೋಟ್ಯಂತರ ಅಭಿಮಾನಿಗಳನ್ನು ಅವರು ಅಗಲಿದ್ದರೂ, ಇವರ ನಿಧನಕ್ಕೆ ಅಭಿಮಾನಿಗಳೂ ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿ ನೋವನ್ನು ಇಂದಿಗೂ ಹೊರಹಾಕುತ್ತಿದ್ದಾರೆ. 

ಉಪ್ಪಿ-ಕಿಚ್ಚನ 'ಕಬ್ಜ'ದಲ್ಲಿ ಬಿಗ್ ಸ್ಟಾರ್ಸ್ ಸಮಾಗಮ.!

'ಕಬ್ಜ' ಚಿತ್ರದ ಪ್ರೋಮೋ ಮತ್ತು ಮೋಷನ್ ಪೋಸ್ಟರ್‌ಗಳು ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. 'ಭಾರ್ಗವ್‌ ಭಕ್ಷಿ' ಎಂಬ ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್ (Kiccha Sudeep) ಕಾಣಿಸಿಕೊಳ್ಳಲಿದ್ದಾರೆ. ಆ ಮೂಲಕ 'ಮುಕುಂದ ಮುರಾರಿ' (Mukunda Murari) ಚಿತ್ರದ ನಂತರ ಮತ್ತೊಮ್ಮೆ ಉಪೇಂದ್ರ ಹಾಗೂ ಸುದೀಪ್‌ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರತಂಡಕ್ಕೆ ಇತ್ತೀಚೆಗಷ್ಟೇ ಬಾಲಿವುಡ್‌ನ ಖ್ಯಾತ ನಟ ನವಾಬ್‌ ಶಾ (Nawab Shah) ಪ್ರವೇಶಿಸಿದ್ದರು. ತಮಿಳಿನ 'ಐ' (I) ಚಿತ್ರದ ಖ್ಯಾತಿಯ ಕಾಮರಾಜನ್‌ (Kamarajan), ಟಾಲಿವುಡ್‌ ವಿಲನ್ ಜಗಪತಿ ಬಾಬು (Jagapati Babu), ರಾಹುಲ್‌ ದೇವ್‌, ಸುನಿಲ್‌ ಪುರಾಣಿಕ್‌, ಲಕ್ಷ್ಮೀಶ ಲಕ್ಷ್ಮಣ್‌ (ಲಕ್ಕಿ ಲಕ್ಷ್ಮಣ್‌),  ಪ್ರಮೋದ್‌ ಶೆಟ್ಟಿ, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಅದ್ಧೂರಿಯಾಗಿ ನಡೀತಿದೆ ಕಬ್ಜ ಶೂಟಿಂಗ್, ಉಪ್ಪಿ ಸೂಪರ್ ಲುಕ್

ಇನ್ನುಎಂ.ಟಿ.ಬಿ ನಾಗರಾಜ್ (M.T.B.Nagaraj) ಅರ್ಪಿಸುವ ಈ ಚಿತ್ರವು ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ. 'ಕಬ್ಜ' ಚಿತ್ರಕ್ಕೆ 'ಕೆಜಿಎಫ್' ಖ್ಯಾತಿಯ ರವಿ ಬಸ್ರೂರು (Ravi  Basrur) ಸಂಗೀತ ಸಂಯೋಜನೆಯಿದ್ದು, ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ. ಎ.ಜೆ.ಶೆಟ್ಟಿ ಕ್ಯಾಮೆರಾ ಕೈಚಳಕ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್, ವಿಜಯ್, ಪೀಟರ್ ಹೆನ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಹಾಗೂ ಚಿತ್ರದ  ಐದನೇ ಹಂತದ ಚಿತ್ರೀಕರಣವು ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ನಿರ್ಮಿಸಲಾಗಿರುವ ಅದ್ಧೂರಿ ಸೆಟ್‌ನಲ್ಲಿ ನಡೆದಿತ್ತು.
 

 
 
 
 
 
 
 
 
 
 
 
 
 
 
 

A post shared by R.Chandru (@rchandrumovies)

click me!