Shiva Rajkumar: ಪ್ಯಾನ್ ಇಂಡಿಯಾ ಸಿನಿಮಾ ಒಪ್ಪಿಕೊಂಡ ಕರುನಾಡ ಚಕ್ರವರ್ತಿ

By Suvarna NewsFirst Published Jan 26, 2022, 11:05 AM IST
Highlights

ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್‌ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆಯೇ ಮತ್ತೊಂದು ಬಹುಭಾಷಾ ಸಿನಿಮಾ ಒಪ್ಪಿಕೊಂಡಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಪ್ಯಾನ್ ಇಂಡಿಯಾ ಸ್ಟಾರ್ ಆಗಲು ಶಿವಣ್ಣ ಸಜ್ಜಾಗುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್‌ (Shivarajkumar) ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆಯೇ ಮತ್ತೊಂದು ಬಹುಭಾಷಾ ಸಿನಿಮಾ ಒಪ್ಪಿಕೊಂಡಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಪ್ಯಾನ್ ಇಂಡಿಯಾ ಸ್ಟಾರ್ ಆಗಲು ಶಿವಣ್ಣ ಸಜ್ಜಾಗುತ್ತಿದ್ದು, ಸೆಂಚ್ಯೂರಿ ಸ್ಟಾರ್‌ಗಾಗಿ ಬಹುಕೋಟಿ ವೆಚ್ಚದಲ್ಲಿ ಕ್ರೈಂ ಥ್ರಿಲ್ಲರ್ (Crime Thriller) ಸಿನಿಮಾ ಸಿದ್ಧವಾಗುತ್ತಿದೆ. 1970ರ ಕಾಲಘಟ್ಟದ ರೆಟ್ರೋ ಸ್ಟೋರಿಯ ಸಿನಿಮಾ ಇದಾಗಿದ್ದು, 'ಓಂ' (OM) ಸಿನಿಮಾದ ಸತ್ಯನ ರೀತಿ ಮತ್ತೊಂದು ವಿಭಿನ್ನ ಅವತಾರದಲ್ಲಿ ಕಮಾಲ್ ಮಾಡಲು ಶಿವಣ್ಣ ಸಿದ್ಧರಾಗಿದ್ದಾರೆ. ಈ ಚಿತ್ರವನ್ನು 'ಬುದ್ಧಿವಂತ 2' ನಿರ್ದೇಶಕ ಜಯರಾಂ ಅಲಿಯಾಸ್ ಆರ್‌ಜೈ (RJai) ನಿರ್ದೇಶನ ಮಾಡುತ್ತಿದ್ದಾರೆ. 

'ಇದೊಂದು ಹೊಸ ರೀತಿಯ ಕತೆ. ಶಿವಣ್ಣ ಜತೆಗೆ ಈ ಹಿಂದೆ ನಾನು ಕೆಲಸ ಮಾಡಿದ್ದೇನೆ. ಆದರೆ, ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದೇನೆ. 1970ರ ಕಾಲಘಟ್ಟದಲ್ಲಿ ನಡೆಯುವ ರೆಟ್ರೊ ಶೈಲಿಯ ಕತೆಯಾಗಿರುವುದರಿಂದ ಗೆಟಪ್‌ಗಳು ವಿಶೇಷವಾಗಿರುತ್ತವೆ. ಕನ್ನಡದ ಜತೆಗೆ ಬೇರೆ ಬೇರೆ ಭಾಷೆಗಳಲ್ಲೂ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಮುಂದಿನ ತಿಂಗಳು ಮೋಷನ್ ಪೋಸ್ಟರ್ ಜತೆಗೆ ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ಮಾಡುವ ಪ್ಲಾನ್ ಮಾಡಿಕೊಂಡಿದ್ದೇವೆ' ಎನ್ನುತ್ತಾರೆ ನಿರ್ದೇಶಕ ಆರ್ ಜೈ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ಮಾಡಲು ಶಿವಣ್ಣನ ಜೊತೆ ಚಿತ್ರತಂಡ ಮಾತುಕತೆ ನಡೆಸಿ ಒಪ್ಪಿಗೆ ಪಡೆದುಕೊಂಡಿದೆ. ರೆಟ್ರೋ ಸ್ಟೈಲ್ ನ ಮಾಸ್ ಸಿನಿಮಾದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ. 

Shiva Rajkumar: ಸಂಕ್ರಾಂತಿ ಹಬ್ಬಕ್ಕೆ 'ಬೈರಾಗಿ' ಚಿತ್ರದ ಪೋಸ್ಟರ್ ರಿಲೀಸ್

ಭೂಗತ ಲೋಕದ ಕಥೆಯಲ್ಲಿ ಶಿವರಾಜ್​​ಕುಮಾರ್ ನಟಿಸುತ್ತಿರುವ ವಿಚಾರ ಕೇಳಿ ಅವರ ಲಕ್ಷಾಂತರ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ನಿಜವಾಗಿ ನಡೆದ ರಕ್ತಸಿಕ್ತ ಕಥೆಯನ್ನಾಧರಿಸಿ ಹೊಸ ಸಿನಿಮಾದ ಸ್ಟೋರಿ ಸಿದ್ಧಗೊಂಡಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಬಿಡುಗಡೆಯಾದ ಚಂದನ್ ಶೆಟ್ಟಿ ಹಾಗೂ ರಚಿತಾ ರಾಮ್ ಕಾಂಬಿನೇಶನ್​ 'ಲಕ ಲಕ ಲ್ಯಾಂಬೋರ್ಗಿನಿ' ಹಾಡು ನಿರ್ಮಾಣ ಮಾಡಿದ್ದ ಆರ್.ಕೇಶವ್ (R.Keshav) ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.  ಬಿಂದ್ಯಾ‌‌ ಮೂವೀಸ್ ಬ್ಯಾನರ್ ಅಡಿಯಲ್ಲಿ ಹೆಸರಿಡದ ಈ ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. 



ಸದ್ಯ ಶಿವಣ್ಣ, ಎ.ಹರ್ಷ (A.Harsha) ನಿರ್ದೇಶನದಲ್ಲಿ 'ವೇದ' (Veda) ಚಿತ್ರದಲ್ಲಿ ನಟಿಸುತ್ತಿದ್ದು, ಗೀತಾ ಶಿವರಾಜ್‌ಕುಮಾರ್‌ (Geetha Shivarjkumar) ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಶೂಟಿಂಗ್‌ ನಡೆಯತ್ತಿದೆ. ಈಗಷ್ಟೆ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ 'ವೇದ', ಎರಡನೇ ಹಂತದ ಶೂಟಿಂಗ್‌ಗೆ ತಯಾರಿ ಮಾಡಿಕೊಳ್ಳುತ್ತಿದೆ. ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ಸೆಟ್‌ನಲ್ಲಿ ನಡೆಯುತ್ತಿದೆ. ಮತ್ತೊಮ್ಮೆ ಶಿವಣ್ಣ ಅವರಿಗೆ ಸಿನಿಮಾ ಮಾಡುತ್ತಿರುವುದು ಖುಷಿ ವಿಚಾರ. ಈ ಚಿತ್ರದಲ್ಲೂ ಹೊಸ ರೀತಿಯ ಕತೆಯೊಂದಿಗೆ ನಿಮ್ಮ ಮುಂದೆ ಬರಲಿದ್ದೇವೆ. 'ವೇದ' ಎನ್ನುವ ಹೆಸರು ಈಗಾಗಲೇ ಟ್ರೆಂಡ್‌ ಆಗಿದೆ ಎಂದು ಎ.ಹರ್ಷ ತಿಳಿಸಿದ್ದಾರೆ.

Shiva Rajkumar: ಕವೀಶ್‌ ಶೆಟ್ಟಿ ನಟನೆಯ ಜಿಲ್ಕಾ ಚಿತ್ರವನ್ನು ಮೆಚ್ಚಿದ ಶಿವಣ್ಣ

ಇನ್ನು ಶಿವಣ್ಣ ಅಭಿನಯದ 123ನೇ ಸಿನಿಮಾ 'ಬೈರಾಗಿ' (Bairagi) ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯವಾಗಿದ್ದು, ವಿಜಯ್ ಮಿಲ್ಟನ್ (Vijay Milton) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 'ಟಗರು' ನಂತರ ಶಿವಣ್ಣ ಮತ್ತು ನಟ ರಾಕ್ಷಸ ಡಾಲಿ ಧನಂಜಯ್ (Dhananjay) ಮತ್ತೆ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿರುವ ಕಾರಣ 'ಬೈರಾಗಿ' ಸಿನಿಮಾದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಅಭಿಮಾನಿಗಳಿಗೆ ಇದೆ. ಆ್ಯಕ್ಷನ್‌ ಡ್ರಾಮಾ ಜಾನರ್‌ನ ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಮತ್ತು ಧನಂಜಯ್ ಅವರ ಲುಕ್‌ಗಳು ವಿಭಿನ್ನವಾಗಿವೆ. ವಿಶೇಷವಾಗಿ ಪುನೀತ್ ಅಗಲಿಕೆ ನೋವಿನಿಂದ ಹೊರ ಬಂದಿರುವ ಶಿವಣ್ಣ ಮತ್ತೆ ಹಿಂದಿನ ಲಯಕ್ಕೆ ಬಂದಿದ್ದು, ಬ್ಯಾಕ್ ಟು ಬ್ಯಾಕ್ ಚಿತ್ರಗಳಿಗೆ ಕಮಿಟ್ ಆಗುವ ಮೂಲಕ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

"

click me!