
ರಾಕಿಂಗ್ ಸ್ಟಾರ್ ಯಶ್ (Yash) ಇಂದು ಕನ್ನಡ ಮಾತ್ರವಲ್ಲದೇ ವಿಶ್ವ ಮಟ್ಟದಲ್ಲಿಯೂ ಬೆಳೆದು ನಿಂತಿದ್ದಾರೆ. ಕೆಜಿಎಫ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಸಿನಿಮಾ ಮಾರುಕಟ್ಟೆಯನ್ನು ರಾಷ್ಟ್ರವ್ಯಾಪಿ ವಿಸ್ತರಿಸಿದ ಯಶ್, ನ್ಯಾಷನಲ್ ಸ್ಟಾರ್ ಆಗಿ ಹೊಮ್ಮಿದ್ದಾರೆ. ಈ ಮೂಲಕ ಸ್ಯಾಂಡಲ್ವುಡ್ನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೆಳೆದು ನಿಂತಿರುವ ನಟ ಯಶ್, ದೇಶ ಮಾತ್ರವಲ್ಲದೇ ವಿದೇಶದಲ್ಲಿಯೂ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಏರುವುದು ಸುಲಭದ ಮಾತಲ್ಲ. ಅದರಲ್ಲಿಯೂ ಯಾವುದೇ ಗಾಡ್ ಫಾದರ್ ಇಲ್ಲದೇ ಇಂಥದ್ದೊಂದು ಯಶಸ್ಸು ಗಳಿಸುವುದು ಹಲವರಿಗೆ ಕನಸಿನ ಮಾತೇ. ನುರಿತ ಕೌಶಲ, ಅದ್ಭುತ ಅಭಿನಯದ ಪ್ರತಿಭೆ ಏನೇ ಇದ್ದರೂ ಎಷ್ಟೋ ಮಂದಿಗೆ ಚಿತ್ರರಂಗಕ್ಕೆ ಎಂಟ್ರಿ ಸಿಗುವುದೇ ಕಷ್ಟ. ಒಂದೇ ಗಾಡ್ ಫಾದರ್ ಇರಬೇಕು ಇಲ್ಲವೇ ಸ್ಟಾರ್ ಕಿಡ್ ಆಗಿರಬೇಕು ಎನ್ನುವ ಸ್ಥಿತಿ ಇದೆ. ಆದರೆ ನಟ ಯಶ್ ಅವರು ಕಷ್ಟದಿಂದ ಹಂತಹಂತವಾಗಿ ಮೇಲೆ ಬಂದವರು.
ಯಶ್ ಅವರು ಈ ಮಟ್ಟದಲ್ಲಿ ಬೆಳೆದು ನಿಂತಿರುವ ಹಿಂದೆ ಇರುವ ಅವರ ಸ್ಟೋರಿ ಇಲ್ಲಿದೆ. ಒಂದು ಕಾಲದಲ್ಲಿ ಯಶ್ ಚಹಾ ಮಾರುತ್ತಿದ್ದರು ಎನ್ನುವುದು ಗೊತ್ತೆ? ರಂಗಭೂಮಿ ತಂಡದಲ್ಲಿ ಇರುವವರಿಗೆ ಚಹಾ ನೀಡುತ್ತಿದ್ದರು ಯಶ್. ಆಗ ಅವರ ಸಂಪಾದನೆ ಕೇವಲ 50 ರೂಪಾಯಿ. ಬಸ್ ಚಾಲಕನ ಮಗನಾಗಿರುವ ಯಶ್ ಅವರ ಬದುಕಿನ ಪಯಣಕ್ಕೆ ಕೈಹಿಡಿದಿದ್ದು ಚಹಾ ಮಾರಾಟ. ಆದರೆ ಅದಕ್ಕೂ ಮುನ್ನ ಯಶ್ ಜೀವನದ ಕಥೆಯೇ ರೋಚಕವಾಗಿದೆ. ಕೇವಲ 16 ವರ್ಷದವರಾಗಿದ್ದಾಗ, ಯಶ್ ಮನೆ ಬಿಟ್ಟು ಸಿನಿಮಾ ಕನಸನ್ನು ನನಸಾಗಿಸಲು ಹೊರಕ್ಕೆ ಬಂದವರು. ಕನ್ನಡ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ನೇಮಕಮಾಡಿಕೊಳ್ಳಲಾಗಿತ್ತು. ಆದ್ದರಿಂದ ಮನೆಯನ್ನು ಬಿಟ್ಟು ಬಂದೇ ಬಿಟ್ಟರು. ಆದರೆ ಬೆಂಗಳೂರಿಗೆ ಬಂದ ಎರಡು ದಿನಗಳ ನಂತರ, ಅವರಿಗೆ ಗೊತ್ತಾದದ್ದು ಆ ಯೋಜನೆಯನ್ನು ರದ್ದಾಗಿದೆ ಎನ್ನುವುದು!
ಸಿನಿಮಾಕ್ಕೆ ಚೈತ್ರಾ ಕುಂದಾಪುರ ಎಂಟ್ರಿ? ಶಿವಣ್ಣ ಜೊತೆ ಫಿಲ್ಮ್ ಹೆಸರೂ ಘೋಷಣೆ! ಇಲ್ಲಿದೆ ನೋಡಿ ಡಿಟೇಲ್ಸ್
“ನಾನು ಮನೆಯಿಂದ ಓಡಿ ಬಂದೆ. ಬೆಂಗಳೂರನ್ನು ತಲುಪಿದ ಕ್ಷಣದಲ್ಲೇ ನನಗೆ ಭಯ ಶುರುವಾಯಿತು. ಅಂತಹ ದೊಡ್ಡ, ಬೆದರಿಸುವ ನಗರ ಇದು. ಆದರೆ ನಾನು ಯಾವಾಗಲೂ ಆತ್ಮವಿಶ್ವಾಸದ ವ್ಯಕ್ತಿಯಾಗಿದ್ದೆ. ನಾನು ಕಷ್ಟಪಡಲು ಹೆದರುತ್ತಿರಲಿಲ್ಲ. ನಾನು ಬೆಂಗಳೂರಿಗೆ ಬಂದಾಗ ನನ್ನ ಜೇಬಿನಲ್ಲಿ 300 ರೂಪಾಯಿಗಳು ಮಾತ್ರ. ನಾನು ಹಿಂತಿರುಗಿ ಹೋದರೆ ಅಪ್ಪ-ಅಮ್ಮ ನನ್ನನ್ನು ಮತ್ತೆ ಬಿಡುವುದಿಲ್ಲ ಎನ್ನುವುದು ತಿಳಿದಿತ್ತು. ಹೇಗಾದರೂ ಅವಕಾಶ ದಕ್ಕಿಸಿಕೊಳ್ಳಬೇಕು ಎನ್ನುವ ಪಣ ತೊಟ್ಟಿದ್ದೆ' ಎನ್ನುತ್ತಾರೆ ಯಶ್. ಕೇವಲ 300 ರೂಪಾಯಿ ಜೊತೆ ಯಶ್ ಬೆನಕ ನಾಟಕ ತಂಡವನ್ನು ಸೇರಿದರು, ಜೀವನ ನಿರ್ವಹಣೆಗೆ ಅಷ್ಟಿಷ್ಟು ಕೆಲಸ ಮಾಡುತ್ತಿದ್ದರು. ಚಹಾ ನೀಡಲು ಶುರು ಮಾಡಿದರು. ದಿನಕ್ಕೆ 50 ರೂಪಾಯಿಗಳಷ್ಟು ಸಂಪಾದಿಸುತ್ತಿದ್ದರು. ರಂಗಭೂಮಿ ಕಲಾವಿದರನ್ನು ನೋಡುತ್ತಲೇ ಕಲೆಯನ್ನು ಕರಗತ ಮಾಡಿಕೊಂಡು ಬಿಟ್ಟರು.
ಸ್ವಂತ ದುಡಿಮೆಯಿಂದನೇ ನಟನಾ ತರಗತಿಯನ್ನು ಸೇರಿದರು. ಅಂತಿಮವಾಗಿ, ಅವರು ನಂದಾ ಗೋಕುಲ ಎಂಬ ಟಿವಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಅಲ್ಲಿ ಅವರಿಗೆ ರಾಧಿಕಾ ಪಂಡಿತ್ರನ್ನು (ಪತ್ನಿ) ಭೇಟಿಯಾಗುವ ಅವಕಾಶ ಸಿಕ್ಕಿತ್ತು. 2007 ರಲ್ಲಿ, ಯಶ್ ರಾಕಿ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮೊದಲು, ಜಂಬದ ಹುಡುಗಿ ಚಿತ್ರದಲ್ಲಿ ಪೋಷಕ ಪಾತ್ರದೊಂದಿಗೆ ಚಲನಚಿತ್ರಗಳನ್ನು ಪ್ರವೇಶಿಸಿದರು. ಯಶ್ ಅಂತಿಮವಾಗಿ ಮೊದಲಸಾಲ ಎಂಬ ಪ್ರಣಯ ಹಾಸ್ಯದೊಂದಿಗೆ ಪ್ರಮುಖ ತಾರೆಯಾಗಿ ಯಶಸ್ಸನ್ನು ಕಂಡುಕೊಂಡರು. ಮರು ವರ್ಷ, ಅವರು ಕಿರಾತಕ ಚಿತ್ರದ ಯಶಸ್ಸಿನೊಂದಿಗೆ ತಮ್ಮನ್ನು ತಾವು ಲಾಭದಾಯಕ ತಾರೆಯಾಗಿ ಸ್ಥಾಪಿಸಿಕೊಂಡರು. ಮುಂದಿನ ಕೆಲವು ವರ್ಷಗಳಲ್ಲಿ, ಅವರು ಮೊಗ್ಗಿನ ಮನಸು, ಡ್ರಾಮಾ, ಗೂಗ್ಲಿ, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಮತ್ತು ಮಾಸ್ಟರ್ಪೀಸ್ನಂತಹ ಹಿಟ್ಗಳನ್ನು ನೀಡಿದರು.
ಕಾಲು ಮುರಿದುಕೊಂಡ ರಶ್ಮಿಕಾ! ಕುಂಟುತ್ತಾ ನಡೆವ ನಟಿಗೆ ವಿಜಯ್ ದೇವರಕೊಂಡನೇ ಆಸರೆ- ವಿಡಿಯೋ ವೈರಲ್
2018 ರಲ್ಲಿ, ಯಶ್ ಕೆಜಿಎಫ್ ಅಧ್ಯಾಯ 1 ರಲ್ಲಿ ನಟಿಸಿದರು, ಇದು ಎಲ್ಲಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದು 250 ಕೋಟಿ ರೂಪಾಯಿ ಗಳಿಸಿತು. ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಕನ್ನಡ ಚಿತ್ರವಾಗಿತ್ತು. ಕೆಜಿಎಫ್: ಅಧ್ಯಾಯ 2, 1250 ಕೋಟಿ ರೂಪಾಯಿ ಗಳಿಸುವ ಮೂಲಕ ದಾಖಲೆ ಮಾಡಿತು. ಈ ಚಿತ್ರವು ಇದುವರೆಗೆ ಅತಿ ಹೆಚ್ಚು ಗಳಿಕೆಯ ಭಾರತೀಯ ಚಿತ್ರಗಳಲ್ಲಿ ಒಂದಾಗಿದೆ ಮತ್ತು 1000 ರೂಪಾಯಿ ಕೋಟಿಗೂ ಹೆಚ್ಚು ಗಳಿಸಿದ ಏಕೈಕ ಕನ್ನಡ ಚಿತ್ರವಾಗಿದೆ. ಕೆಜಿಎಫ್ ಅವರಿಗೆ ನೀಡಿದ ರಾಷ್ಟ್ರೀಯ ತಾರಾಪಟ್ಟವು ಯಶ್ ಕನ್ನಡ ಚಿತ್ರರಂಗವನ್ನು ಮೀರಿ ಬೆಳೆಯಲು ಸಹಾಯ ಮಾಡಿತು. ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ರಾವಣನ ಪಾತ್ರಕ್ಕೆ ಅವರು ಸಹಿ ಹಾಕಿದರು. ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ನಟಿಸಿರುವ ಈ ಚಿತ್ರವು ನಿರ್ಮಾಣದಲ್ಲಿರುವ ಅತ್ಯಂತ ದುಬಾರಿ ಭಾರತೀಯ ಚಿತ್ರ ಎಂದು ಹೇಳಲಾಗುತ್ತದೆ. ಯಶ್ ಈ ಚಿತ್ರದ ಸಹ-ನಿರ್ಮಾಪಕರೂ ಆಗಿದ್ದಾರೆ ಮತ್ತು ವರದಿಗಳ ಪ್ರಕಾರ, ಚಿತ್ರದಲ್ಲಿ ಅವರ ಭಾಗವಹಿಸುವಿಕೆಗಾಗಿ 200 ಕೋಟಿ ರೂಪಾಯಿ ಶುಲ್ಕ ವಿಧಿಸಿದ್ದಾರೆ. ಒಂದು ಕಾಲದಲ್ಲಿ ದಿನಕ್ಕೆ 50 ರೂಪಾಯಿ ಸಂಪಾದನೆ ಮಾಡುತ್ತಿದ್ದ ಯಶ್ ಇಂದು ಚಿತ್ರವೊಂದಕ್ಕೆ 200 ಕೋಟಿ ರೂಪಾಯಿ ಪಡೆಯುವವರೆಗೆ ಬೆಳೆದು ನಿಂತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.