
ಬೆಂಗಳೂರು, (ಅ.30): ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್(Puneeth Rajkumar) ಅವರ ಅಂತ್ಯಕ್ರಿಯೆ ನಾಳೆ (ಅ.31) ಕಂಠೀರವ ಸ್ಟುಡಿಯೋನಲ್ಲಿ (Kanteerava Studio) ನಡೆಯಲಿದೆ.
ನಾಳೆ(ಭಾನುವಾರ) ಬೆಳಗ್ಗೆ 11.30ರೊಳಗೆ ನಟ ಪುನೀತ್ ಅಂತ್ಯಕ್ರಿಯೆ ನೆರವರೇರಲಿದೆ. ಅಪ್ಪ-ಅಮ್ಮನ ಪಕ್ಕದಲ್ಲೇ ಪುನೀತ್ ಅಂತ್ಯಸಂಸ್ಕಾರ ನಡೆಯಲಿದ್ದು, ಕುಟುಂಬಸ್ಥರು ಮತ್ತು ಅವರ ಆಪ್ತ ವಲಯಕ್ಕೆ ಮಾತ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ.
ಅಮೆರಿಕಾದಿಂದ ಬಂದು ಅಪ್ಪನ ತಲೆ ಸವರಿ ಅಂತಿಮ ದರ್ಶನ ಪಡೆದ ಪುತ್ರಿ ಧೃತಿ
ಪುನೀತ್ ರಾಜಕುಮಾರ್ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಪುನೀತ್ ರಾಜ್ಕುಮಾರ್ ಅವರಿಗೆ ಇಬ್ಬರೂ ಹೆಣ್ಣು ಮಕ್ಕಳು. ಹಿಂದೂ ಧರ್ಮದ ಪ್ರಕಾರ ಹೆಣ್ಣುಮಕ್ಕಳು ಅಂತಿಮ ಸಂಸ್ಕಾರ ಮಾಡುವಂತಿಲ್ಲ. ಹೀಗಾಗಿ, ರಾಘವೇಂದ್ರ ರಾಜ್ಕುಮಾರ್ ಅವರ ಪುತ್ರ ವಿನಯ್ ರಾಜ್ಕುಮಾರ್ ಅವರು ಚಿಕ್ಕಪ್ಪನ ಕೊನೆಯ ಕಾರ್ಯಗಳನ್ನು ನೆರವೇರಿಸಲಿದ್ದಾರೆ.
ಭಾನುವಾರ ಬೇಗ ಅಂತ್ಯಸಂಸ್ಕಾರ ನಡೆಯುವುದರಿಂದ ಬೆಳಗ್ಗೆ 6 ಗಂಟೆಗೆ ಕಂಠೀರವ ಸ್ಟೇಡಿಯಂನಿಂದ ಅಂತಿಮಯಾತ್ರೆ ಆರಂಭವಾಗಲಿದೆ ಎಂದು ತಿಳಿದು ಬಂದಿದೆ. ಹಿರಿಯ ಪುತ್ರಿ ಧೃತಿ ಅಮೆರಿಕಾದಲ್ಲಿದ್ದರು. ಈ ಹಿನ್ನಲೆಯಲ್ಲಿ ಅವರ ಬಂದ ಬಳಿಕ ಅಂತ್ಯಕ್ರಿಯೆ ಮಾಡಲು ತೀರ್ಮಾನಿಸಲಾಗಿತ್ತು. ಇದೀಗ ಧೃತಿ ಅಮೆರಿಕಾದಿಂದ ಬಂದಿದ್ದು, ಅಪ್ಪನ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.
ಮೆರವಣಿಗೆ ಮಾರ್ಗ
ಕಂಠೀರವ ಕ್ರೀಡಾಂಗಣದಿಂದ ಆರ್ಆರ್ಎಂಆರ್ ರಸ್ತೆ, ಹಡ್ಸನ್ ಸರ್ಕಲ್, ಪೊಲೀಸ್ ಕಾರ್ನರ್, ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಪೋಸ್ಟ್ ಆಫೀಸ್ ರಸ್ತೆ, ಕೆ.ಆರ್.ಸರ್ಕಲ್ ಎಡ ತಿರುವು, ಶೇಷಾದ್ರಿ ರಸ್ತೆ, ಮಹಾರಾಣಿ ಮೇಲ್ಸೇತುವೆ, ಸಿಐಡಿ ಜಂಕ್ಷನ್, ಚಾಲುಕ್ಯ ವೃತ್ತ, ಹಳೇ ಹೈಗ್ರೌಂಡ್ಸ್ ಜಂಕ್ಷನ್, ಟಿ.ಚೌಡಯ್ಯ ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್, ಬಿಡಿಎ ಅಪ್ ಱಂಪ್, ಪಿ.ಜಿ.ಹಳ್ಳಿ ಕ್ರಾಸ್, ಕಾವೇರಿ ಜಂಕ್ಷನ್, ಬಾಷ್ಯಂ ಸರ್ಕಲ್, ಸ್ಯಾಂಕಿ ರಸ್ತೆ, ಮಲ್ಲೇಶ್ವರಂ 18ನೇ ಕ್ರಾಸ್, ಮಾರಮ್ಮ ವೃತ್ತ, ಬಿಹೆಚ್ಇಎಲ್ ಸರ್ವೀಸ್ ರಸ್ತೆ, ಬಿಹೆಚ್ಇಎಲ್ ವೃತ್ತ, ಯಶವಂತಪುರ ವೃತ್ತ, ಮೆಟ್ರೋ ಷಾಪ್, ಮಾರಪ್ಪನ ಪಾಳ್ಯ, ಗೋವರ್ಧನ್ ಥಿಯೇಟರ್ ಜಂಕ್ಷನ್, ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆ, ಎಂಇಐ ಬಸ್ ನಿಲ್ದಾಣ, ಗೊರಗುಂಟೆಪಾಳ್ಯ ಜಂಕ್ಷನ್, ಸಿಎಂಟಿಐ ಜಂಕ್ಷನ್, ಲಾರಿ ಅಸೋಸಿಯೇಷನ್ ಕಚೇರಿ, ಎಫ್ಟಿಐ ವೃತ್ತ ಮಾರ್ಗದಲ್ಲಿ ಕಂಠೀರವ ಸ್ಟುಡಿಯೋಗೆ ಸ್ಥಳಾಂತರ ಮಾಡಲಾಗುತ್ತದೆ.
ವಾಹನಗಳಿಗೆ ಮಾರ್ಗ ಬದಲಾವಣೆ
ಪುನೀತ್ ರಾಜಕುಮಾರ್ ಅವರ ಅಂತ್ಯ ಸಂಸ್ಕಾರ ಕಾರ್ಯಕ್ಕೆ ಸಂಬಂಧಿಸಿದಂತೆ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದ್ದು, ಅದು ಈ ಕೆಳಗಿನಂತಿದೆ.
* ಮೈಸೂರು ರಸ್ತೆಯಿಂದ ತುಮಕೂರು ರಸ್ತೆ ಕಡೆಗೆ ಹೋಗುವ ವಾಹನಗಳನ್ನು ನೈಸ್ ರಸ್ತೆ, ನಾಯಂಡಹಳ್ಳಿ, ನಾಗರಬಾವಿ ಮತ್ತು ಸುಮನಹಳ್ಳಿ ಜಂಕ್ಷನ್ಗೆ ಬದಲಾಯಿಸಿದ್ದಾರೆ.
* ತುಮಕೂರು ರಸ್ತೆಯಿಂದ ಬೆಂಗಳೂರು ನಗರಕ್ಕೆ ಮೇಲುಸೇತುವೆ ಮೇಲೆ ಹೋಗುವ ವಾಹನಗಳು ಮತ್ತು ತುಮಕೂರು ರಸ್ತೆಯಿಂದ ಮೈಸೂರು ರಸ್ತೆ ಕಡೆಗೆ ಸಿಎಂಟಿಐ ಜಂಕ್ಷನ್.
* ಜಾಲಹಳ್ಳಿ ಕ್ರಾಸ್ ಕಡೆಯಿಂದ ರಾಜಕುಮಾರ್ ಸಮಾಧಿ ಕಡೆಗೆ ಹೋಗುವ ವಾಹನಗಳು ಟಿವಿಎಸ್ ಕ್ರಾಸ್ ಮತ್ತು ಸೋನಾಲ್ ಗಾರ್ಮೆಂಟ್ಸ್ ಬಳಿ.
* ಮಹಾಲಕ್ಷ್ಮಿ ಬಡಾವಣೆ ಕಡೆಯಿಂದ ರಾಜಕುಮಾರ್ ಸಮಾಧಿ ಕಡೆಗೆ ಹೋಗುವ ವಾಹನಗಳು ಕೃಷ್ಣಾನಂದ ನಗರ ಜಂಕ್ಷನ್ ಬಳಿ ಮಾರ್ಗ ಬದಲಾವಣೆ ಮಾಡಲಾಗಿರುತ್ತದೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಸ್ಯಾಂಡಲ್ವುಡ್ ಯುವರತ್ನ ಶುಕ್ರವಾರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ವಿಕ್ರಂ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪುನೀತ್ ರಾಜ್ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ವಿಧಿವಶರಾಗಿದ್ಧಾರೆ. ಪುನೀತ್ ರಾಜ್ಕುಮಾರ್ ಅವರ ಹಠಾತ್ ನಿಧನ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ರಾತ್ರಿಯಿಡೀ ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆದಿದ್ದಾರೆ. ಲಕ್ಷಾಂತರ ಅಭಿಮಾನಿಗಳು(Fans) ಕಣ್ಣೀರು ಹಾಕುತ್ತಿದ್ದಾರೆ. ನಟ-ನಟಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.