
ಅಣ್ಣಾವ್ರ 'ಕವಿರತ್ನ ಕಾಳಿದಾಸ' ಸಿನಿಮಾ ಯಾರಿಗೆ ಗೊತ್ತಿಲ್ಲ.. ಸಿನಿಮಾ ಬಂದು ಅಷ್ಟು ವರ್ಷಗಳಾದರೂ ಇವತ್ತಿಗೂ ಜನ ಆ ಸಿನಿಮಾವನ್ನು ಅಣ್ಣಾವ್ರನ್ನು ಹಾಡಿ ಹೊಗಳ್ತಾರೆ. ಇದರಲ್ಲಿ ಅಣ್ಣಾವ್ರ ಪಾತ್ರ ಎಷ್ಟು ಫೇಮಸ್ ಆಗಿತ್ತೋ ದೇವಿ ಪಾತ್ರವೂ ಅಷ್ಟೇ ಜನರ ಮನಸ್ಸಲ್ಲಿ ಉಳಿದುಬಿಟ್ಟಿತ್ತು. ಸಾಕ್ಷಾತ್ ಆ ದೇವಿಯೇ ಬಂದು ಕಣ್ಣೆದುರು ಕೂತಿದ್ದಾಳೇನೋ ಅನ್ನೋ ರೇಂಜಿಗೆ ಕಲಾವಿದೆಯೊಬ್ಬರು ಈ ಪಾತ್ರವನ್ನು ಆವಾಹಿಸಿಕೊಂಡಿದ್ದರು. ಆ ಪಾತ್ರ ಇಂದಿಗೂ ಜನರ ಮನಸ್ಸಲ್ಲಿ ಹಾಗೇ ಉಳಿದಿದೆ. ಆ ಕಲಾವಿದೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಸಿನಿಮಾದ ದೇವಿ ಪಾತ್ರ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಅಪರೂಪದ ವೀಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅಂದ ಹಾಗೆ ಈ ಕಲಾವಿದೆ ಕನ್ನಡಿಗರಲ್ಲ. ಬದಲಿಗೆ ಪಕ್ಕದ ತೆಲುಗು ಭಾಷಿಗರು. ಇವರು ಅಣ್ಣಾವ್ರ ಸಿನಿಮಾದಲ್ಲಿ ನಟಿಸಿದ ಬಳಿಕವೂ ಕೆಲವು ಸಿನಿಮಾಗಳಲ್ಲಿ ಅಭಿನಯ ಮಾಡಿದರು. ತೆಲುಗು ಸಿನಿಮಾ ಇಂಡಸ್ಟ್ರಿಗೆ ಇವರು ಪರಿಚಿತ ಮುಖ. ಆದರೆ ಕನ್ನಡಿಗರಿಗೆ ಇವರು ಪಾತ್ರ ಮಾಡಿರೋ ದೇವಿ ಇವತ್ತಿಗೂ ಅಚ್ಚಳಿಯದೇ ಮನಸ್ಸಲ್ಲಿದ್ದರೂ ಈ ಪಾತ್ರ ಮಾಡಿದರೋ ಕಲಾವಿದೆಯ ಬಗ್ಗೆ ತಿಳಿದಂತಿಲ್ಲ. ಕಾರಣ ಇವರು ಈ ಸಿನಿಮಾ ಬಳಿಕ ಕನ್ನಡದಲ್ಲಿ ಅಷ್ಟಾಗಿ ಗುರುತಿಸಿಕೊಂಡಿಲ್ಲ.
ಡಾ ರಾಜ್ ಕುಮಾರ್ ನಟನೆಯ 'ಕವಿರತ್ನ ಕಾಳಿದಾಸ' ಸಿನಿಮಾ ಜಗತ್ಪ್ರಸಿದ್ಧ ಸಂಸ್ಕೃತ ಕವಿ ಕಾಳಿದಾಸರ ಜೀವನವನ್ನು ಆಧರಿಸಿದ್ದು. 1983 ರಲ್ಲಿ ತೆರೆಕಂಡು ಈ ಸಿನಿಮಾವನ್ನು ರೇಣುಕಾ ಶರ್ಮಾ ಬರೆದು ನಿರ್ದೇಶಿಸಿದ್ದರು. ವಿಎಸ್ ಗೋವಿಂದ ನಿರ್ಮಿಸಿದ್ದರು. ಈ ಚಿತ್ರದಲ್ಲಿ ರಾಜಕುಮಾರ್ ಅವರು ಕಾಳಿದಾಸನ ಪಾತ್ರದಲ್ಲಿ ನಟಿಸಿ ಮನಗೆದ್ದರೆ, ಜಯಪ್ರದಾ ಅವರು ವಿದ್ಯಾಧರೆ ಮತ್ತು ಶ್ರೀನಿವಾಸ ಮೂರ್ತಿ ರಾಜ ಭೋಜ ಪಾತ್ರದಲ್ಲಿ ನಟಿಸಿದ್ದರು.
ಕಾಲಿವುಡ್ನ ಆದರ್ಶ ದಂಪತಿಗಳೆಂದರೆ ಸೂರ್ಯ-ಜ್ಯೋತಿಕಾ: ಇವರಿಬ್ಬರಲ್ಲಿ ಅತಿ ಹೆಚ್ಚು ಆಸ್ತಿ ಇರುವುದು ಯಾರಿಗೆ?
ವಜ್ರೇಶ್ವರಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಪಾರ್ವತಮ್ಮ ರಾಜ್ಕುಮಾರ್ ವಿತರಿಸಿರುವ ಈ ಸಿನಿಮಾ ಆಗ ಸುಮಾರು 25 ವಾರ ಅಂದರೆ ಸುಮಾರು ಆರು ತಿಂಗಳುಗಳ ಕಾಲ ನಿರಂತರವಾಗಿ ಪ್ರದರ್ಶನ ಕಂಡು ಆ ಕಾಲಘಟ್ಟದ ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಸಾರ್ವಕಾಲಿಕ ಟಾಪ್ ಹಣ ಗಳಿಕೆಯ ಚಿತ್ರಗಳಲ್ಲಿ ಒಂದಾಗಿ ಹೆಸರು ಮಾಡಿತು. ಒಂದು ರೀತಿ ನೋಡಿದರೆ ಈ ಸಿನಿಮಾ ಮೂಲಕ ಕಾಳಿದಾಸನ ಬದುಕು, ಆತನ ಬರಹಗಳ ಪರಿಚಯ ಸಾಮಾನ್ಯರಿಗೂ ಆಗುವಂತೆ ಮಾಡಿದ್ದು ಈ ಸಿನಿಮಾ ಅಂತ ಹೇಳಬಹುದು.
ಈ ಸಿನಿಮಾದಲ್ಲಿ ಕಾಳಿದಾಸನಿಗೆ ಹೊಸ ಬದುಕು ನೀಡುವ ದೇವಿ ಪಾತ್ರದಲ್ಲಿ ನಟಿಸಿದ ಕಲಾವಿದೆಯ ಹೆಸರು ನಳಿನಿ. ಈಕೆ ಇತ್ತೀಚೆಗೆ ತನಗೆ ಖ್ಯಾತಿ ತಂದುಕೊಟ್ಟ ಈ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾ ಮಾಡುವಾಗ ಇವರಿಗೆ ಹದಿನಾರೋ ಹದಿನೇಳೋ ವಯಸ್ಸು. ಇನ್ನೂ ಶಾಲಾ ದಿನಗಳಲ್ಲಿದ್ದರಂತೆ. ಆಗ ಇವರನ್ನು ಕರೆತಂದು ಕಾಳಿ ದೇವಿಯ ವೇಷಹಾಕಿ ನಿಲ್ಲಿಸಿದಾಗ ಸ್ವತಃ ಪಾರ್ವತಮ್ಮ ಅವರೇ ದಂಗಾಗಿಬಿಟ್ಟರಂತೆ.
ಶ್ರೀದೇವಿ, ಜಯಸುಧಾಗಿಂತ ಈ ನಟಿ ಮಾತ್ರ ಎನ್ಟಿಆರ್ಗೆ ಹೆಚ್ಚು ಇಷ್ಟ: ರಾಜಕೀಯಕ್ಕೂ ಆಹ್ವಾನ ಕೊಟ್ಟಿದ್ರು!
'ಸಾಕ್ಷಾತ್ ಕಾಳಿ ಮಾತೆಯೇ ಕಣ್ಣೆದುರು ನಿಂತ ಹಾಗಿದೆ' ಎಂದು ಉದ್ಗರಿಸಿದರಂತೆ. 'ಆಗ ಚಿಕ್ಕ ವಯಸ್ಸು, ಏನೂ ಗೊತ್ತಿಲ್ಲದ ಮನಸ್ಸು. ಹೀಗಾಗಿ ಡಾ ರಾಜ್ ಅವರಂಥಾ ಮಹಾನ್ ಕಲಾವಿದನ ಮುಂದೆ ನಿಸ್ಸಂಕೋಚವಾಗಿ ನಟಿಸುವುದು ಸಾಧ್ಯವಾಯಿತು' ಎಂದಿದ್ದಾರೆ ನಳಿನಿ. ಈಕೆಗೆ ಈ ಸಿನಿಮಾದಲ್ಲಿ 'ಆನಂದಿ' ಎಂಬ ಹೆಸರು ನೀಡಲಾಗಿತ್ತು. ಈ ಸಿನಿಮಾದಲ್ಲಿ ಈಕೆ ಮಂದಹಾಸ ಬೀರುತ್ತಾ ದೇವಿ ಪಾತ್ರದಲ್ಲಿ ನಿಂತಿದ್ದರೆ, ಕಾಳಿದಾಸನಾಗಿ ಡಾ ರಾಜ್ ಕಣ್ಣೀರು ಸುರಿಸುತ್ತಾ ಭಾವಾವೇಷದಿಂದ ನಟಿಸುವುದನ್ನು ನೋಡಿದರೆ ಎಂಥವರ ಕಣ್ಣಲ್ಲೂ ನೀರೂ ಬರದೇ ಇರುವುದಿಲ್ಲ. ಅಣ್ಣಾವ್ರು ದೇವಿ ಪಾತ್ರದಲ್ಲಿದ್ದ ಈಕೆಯ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ. ಅದನ್ನೂ ಕನ್ನಡಿಗರು ಸ್ಮರಿಸುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.