
ಬೆಂಗಳೂರು (ಫೆ.28): ಕನ್ನಡ ಚಿತ್ರರಂಗಕ್ಕೆ ಕರ್ನಾಟಕದಲ್ಲಿಯೇ ಮಾರುಕಟ್ಟೆ ಸಿಗುತ್ತಿಲ್ಲ ಎಂಬ ನೋವು ಕೆಲವು ವರ್ಷಗಳಿಂದ ಕೇಳಿಬರುತ್ತಿದೆ. ಇದರ ನಡುವೆಯೇ ಇದೀಗ ಕನ್ನಡ ಸಿನಿಮಾವೊಂದು ಪರಭಾಷೆಯ ಚಿತ್ರಗಳ ಹಾವಳಿಗೆ ರಿಲೀಸ್ ಮಾಡಲಾಗದೇ ದಿನಾಂಕ ಮುಂದೂಡಿಕೆ ಮಾಡಿದ ಘಟನೆ ನಡೆದಿದೆ.
ಕನ್ನಡ ಚಿತ್ರರಂಗದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಕೀಳಾಗಿ ಮಾತನಾಡುವವರ ನಡುವೆ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆ ಪರಭಾಷೆಯ ಸಿನಿಮಾಗಳ ಮೇಲೆ ಗೂಬೆ ಕೂರಿಸುವ ಕನ್ನಡ ಸಿನಿಮಾ ನಿರ್ದೇಶಕರು, ನಿರ್ಮಾಪಕರಿಗೆ ಅಭಿಮಾನಿಗಳು ಹೊಸ ಕಥಾಹಂದರವಿರುವ, ಒಳ್ಳೆಯ ಕಥೆಗಳ ಸಿನಿಮಾ ಮಾಡುವಂತೆ ಕಿವಿ ಹಿಂಡುತ್ತಿದ್ದಾರೆ. ಇದರ ನಡುವೆ ಹೊಸಬರು ಸೇರಿಕೊಂಡು ಮಾಡಿರುವ ತರ್ಕ ಸಿನಿಮಾಗೆ ಇದೀಗ ಚಿತ್ರಮಂದಿರಗಳೇ ಸಿಗುತ್ತಿಲ್ಲ. ಚಿತ್ರಮಂದಿಗಳನ್ನು ಕೊಡುವಂತೆ ಮಾಲೀಕರ ಬಳಿ ಕೇಳಿಕೊಂಡು ನಿನ್ನೆ ರಾತ್ರಿ 9.30ರವರೆಗೆ ಕಾದು ಕುಳಿತ ಚಿತ್ರತಂಡಕ್ಕೆ ಒಂದೂ ಥಿಯೇಟರ್ ಸಿಗದೇ ರೀಲ್ ಅನ್ನು ಪುನಃ ಡಬ್ಬಿಯಲ್ಲಿ ಮಡಚಿ ಇಟ್ಟುಕೊಂಡಿದ್ದಾರೆ.
ಈಗಾಗಲೇ ತರ್ಕ ಸಿನಿಮಾದ ಟ್ರೇಲರ್ ಯೂಟೂಬ್ನಲ್ಲಿ ಸದ್ದು ಮಾಡಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರವನ್ನು ನಿರ್ದೇಶಕರು, ನಿರ್ಮಾಪಕರನ್ನು ಒಳಗೊಂಡಂತೆ ಇಡೀ ಚಿತ್ರತಂಡವೇ ಫೆ.28ರಂದು ರಿಲೀಸ್ ಮಾಡುವುದಾಗಿ ತಿಳಿಸಿತ್ತು. ಆದರೆ, ಚಿತ್ರತಂಡದಿಂದ ಕಳೆದೊಂದು ತಿಂಗಳಿಂದ ಚಿತ್ರಮಂದಿರಗಳನ್ನು, ಮಲ್ಟಿಪ್ಲೆಕ್ಸ್ಗಳನ್ನು ಹುಡುಕಿಕೊಂಡು ಹೋಗಿ ಅಡ್ವಾನ್ಸ್ ಮಾತನಾಡಿಕೊಂಡು ಬಂದಿದ್ದರು. ಆದರೆ, ಈ ವೇಳೆ ಛಾವಾ ಮತ್ತು ಡ್ರ್ಯಾಗನ್ ಪರಭಾಷೆ ಸಿನಿಮಾಗಳು ದಾಂಗುಡಿ ಇಟ್ಟಿದ್ದರಿಂದ ಕನ್ನಡದ ತರ್ಕ ಸಿನಿಮಾಗೆ ಚಿತ್ರಮಂದಿರಗಳೇ ಸಿಗಲಿಲ್ಲ.
ಇದನ್ನೂ ಓದಿ: ಸ್ಟಾರ್ ನಟರು ವರ್ಷಕ್ಕೊಂದೇ ಸಿನಿಮಾ ಮಾಡ್ತಾರೆ ಅನ್ನೋ ಮಾತನ್ನು ಸುಳ್ಳು ಮಾಡ್ತೇನೆ: ನಟ ಗಣೇಶ್
ಸಣ್ಣ ಪರದೆಗಳನ್ನಾದರೂ ಅಥವಾ ದಿನದಲ್ಲಿ ಒಂದು ಶೋ ಪ್ರದರ್ಶನಕ್ಕಾದರೂ ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ. ಆದರೆ, ಬೆಳಗ್ಗೆ 9.30ರ ಪ್ರದರ್ಶನವನ್ನು ತರ್ಕ ಸಿನಿಮಾಗೆ ಬಿಟ್ಟುಕೊಡುವುದಾಗಿ ಚಿತ್ರಮಂದಿರಗಳು ಹೇಳಿವೆ. ಆದರೆ, ಹೊಸಬರ ಸಿನಿಮಾವನ್ನು ಬೆಳ್ಳಂಬೆಳಗ್ಗೆ ಮೊದಲ ಶೋ ನೋಡುವವರು ಎಷ್ಟು ಜನ ಸಿಗುತ್ತಾರೆ? ಹೀಗಾಗಿ, ತಾವು ಮಾಡಿದ ತರ್ಕ ಸಿನಿಮಾವನ್ನು ಮಾ.7ರಂದು (ಒಂದುವಾರ ತಡವಾಗಿ) ರಿಲೀಸ್ ಮಾಡುವುದಾಗಿ ಚಿತ್ರತಂಡದ ಸದಸ್ಯರು ಘೋಷಣೆ ಮಾಡಿದ್ದಾರೆ.
ಇನ್ನು ತರ್ಕ ಸಿನಿಮಾ ಮಾಡುವುದಕ್ಕೆ ಹೊಸಬರ ಬಳಿ ಹಣವಿಲ್ಲದ ಕಾರಣ ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸಿ ಸಿನಿಮಾ ಮಾಡಲಾಗಿದೆ. ಈ ಸಿನಿಮಾಗೆ ಮೊದಲು ದುಡ್ಡು ಹಾಕಿದ್ದು ಅಮ್ಮ ಮತ್ತು ಅಜ್ಜಿ. ಬಳಿಕ ಅನೇಕರು ಹಣ ಹಾಕಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್ ತುಂಬಾ ಚೆನ್ನಾಗಿದೆ. ಯಾರು ಊಹಿಸದ ಟ್ವಿಸ್ಟ್ ಇದೆ ಎಂದು ನಿರ್ದೇಶಕ ಪುನೀತ್ ಮಾನವ ತಿಳಿಸಿದ್ದರು. ಆದರೆ, ಇದೀಗ ಈ ಸಿನಿಮಾ ರಿಲೀಸ್ ಮಾಡುವುದಕ್ಕೆ ಚಿತ್ರಮಂದಿರಗಳೇ ಸಿಗದಿರುವುದು ಚಿತ್ರತಂಡಕ್ಕೆ ಭಾರೀ ನಿರಾಸೆ ಆಗಿದೆ.
ಇದನ್ನೂ ಓದಿ: ಹುಚ್ಚ ವೆಂಕಟ್ಗೆ ಅಣ್ಣಾವ್ರ ಟಿಪ್ಸ್.. ಮತ್ತೆ ಬಂದ ವೆಂಕ; ವಿಡಿಯೋ ನೋಡಿದ್ರೆ ತಲೆ ಸುತ್ತಿ ಬೀಳಲ್ಲ ಬಿಡಿ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.