ಅಪ್ಪು ಸರ್ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ: ಭಾವುಕರಾದ ಶೈನ್ ಶೆಟ್ಟಿ

By Suvarna NewsFirst Published Nov 10, 2021, 7:26 PM IST
Highlights

ಬದುಕು ಒಂದು ಸಿನಿಮಾ ಅನ್ನುವುದು ಎಷ್ಟು ನಿಜ! ಆ ಸಿನಿಮಾದ ಚಿತ್ರಕಥೆಯಲ್ಲಿ 3 ಭಾಗ, ಹಾಗೆಯೆ ಪುನೀತ್ ರಾಜಕುಮಾರ್ ಸರ್ ನನ್ನ ಜೀವನದಲ್ಲಿ ಕೂಡ 3 ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಬಿಗ್ ಬಾಸ್‌ ಖ್ಯಾತಿಯ ನಟ ಶೈನ್ ಶೆಟ್ಟಿ ಹೇಳಿದ್ದಾರೆ.

ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರು ನಿಧನರಾಗಿ ಇಂದಿಗೆ 13 ದಿನಗಳು ಕಳೆದಿದ್ದು, ದೊಡ್ಡ ಅಭಿಮಾನಿ ಬಳಗವನ್ನು ತೊರೆದು ಹೋಗಿದ್ದಾರೆ. ಚಿತ್ರರಂಗದ ತಾರೆಯರು ಕೂಡ ಪುನೀತ್‌ರನ್ನು ನೆನೆದು ಭಾವುಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ 'ಬಿಗ್ ಬಾಸ್‌' (Bigg Boss) ಖ್ಯಾತಿಯ ನಟ ಶೈನ್ ಶೆಟ್ಟಿ (Shine Shetty) ಅವರು ತನ್ನ ಜೀವನದಲ್ಲಿ ಅಪ್ಪು ಪ್ರಮುಖ ಪಾತ್ರ ವಹಿಸಿರುವುದನ್ನು ನೆನೆಯುತ್ತಾ ಭಾವುಕರಾಗಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅಪ್ಪು ಅವರು ತಮಗೆ ಹೇಗೆ ಪರಿಚಯವಾದರು, ಆ ಬಳಿಕ ಅವರು ನನಗೆ ಯಾವ ರೀತಿ ಬೆಂಬಲ ನೀಡಿದರು ಎಂಬ ಮಾಹಿತಿ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಭಾವನಾತ್ಮಕ ಪತ್ರವನ್ನು ಶೇರ್ ಮಾಡಿಕೊಂಡಿದ್ದಾರೆ.

'ಬದುಕು ಒಂದು ಸಿನಿಮಾ ಅನ್ನುವುದು ಎಷ್ಟು ನಿಜ! ಆ ಸಿನಿಮಾದ ಚಿತ್ರಕಥೆಯಲ್ಲಿ 3 ಭಾಗ, ಹಾಗೆಯೆ ಪುನೀತ್ ರಾಜಕುಮಾರ್ ಸರ್ ನನ್ನ ಜೀವನದಲ್ಲಿ ಕೂಡ 3 ಪ್ರಮುಖ ಪಾತ್ರ ವಹಿಸಿದ್ದಾರೆ! ಮೊದ ಮೊದಲು ನನ್ನ ಈ ಕಲಾ ಪ್ರವಾಸ ಶುರುವಾದಾಗ, ಪುನೀತ್ ಸರ್‌ರವರನ್ನು ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಆಗಿ ಎದುರು ನೋಡುತಿದ್ದೆ, ಬೆಳ್ಳಿ ಪರದೆಯ ಮೇಲೆ ಅವರು ಮೂಡಿಸಿದ ಜಾದೂಗೆ ಬೆರಗಾಗಿದ್ದೆ. ಅವರ ಜೊತೆ ನಟಿಸಲು ಹಾಗೂ ಹಲವಾರು ಬಾರಿ ರಂಗಮಂಚಿಕೆ ಹಂಚಿಕೊಳ್ಳಲು ಅವಕಾಶ ದೊರೆತಾಗ ಒಂದು ಪುಟ್ಟ ಗೆಳೆತನ ಚಿಗುರೊಡೆಯಿತು. ನನ್ನ ಆಸೆ , ಪ್ರತಿಭೆಗಳನ್ನು ಹೊಗಳಿದಲ್ಲದ್ದೆ, ಅವರ ಅತ್ಯಮೂಲ್ಯವಾದ ಮಾರ್ಗದರ್ಶನ ನೀಡಿ ನನ್ನ ಗುರಿಯನ್ನು ತಲುಪಲು ಪ್ರೇರಿಸಿದರು. 

ನೆನಪಿನಲ್ಲಿ ನೀವೀಗ ಎಂದಿಗಿಂತ ಸನಿಹ ಎಂದ ನಟಿ ರಾಧಿಕಾ ಪಂಡಿತ್

ಈ ಸಿನಿಮಾ ರಂಗದಲ್ಲಿ ಉಳಿಯೋದಕ್ಕೆ/ಬೆಳೆಯೋದಕ್ಕೆ ಅಪ್ಪು ಸರ್‌ರವರ ಪ್ರೋತ್ಸಾಹ ಒಂದು ಕಾರಣ ಎಂದು ಹೇಳಿದರೆ ತಪ್ಪಾಗಲಾರದು. ಆ ಸ್ನೇಹ ಭ್ರಾತೃತ್ವದ ರೂಪ ಪಡೆಯಲು ಬಹಳ ಸಮಯ ಬೇಕಾಗಿರಲಿಲ್ಲ . ಪುನೀತ್ ಸರ್‌ರವರನ್ನು ಅಷ್ಟು ಕೊಂಡಾಡಲು ಅವರ ಸುತ್ತ ಮುತ್ತ ಇದ್ದ ಜನರನ್ನು ವೃತ್ತಿಯಲ್ಲಷ್ಟೇ ಅಲ್ಲ ವೈಯಕ್ತಿಕ ವಿಚಾರದಲ್ಲಿಯೂ ಹುರಿದುಂಬಿಸುತ್ತಿದ್ದರೆಂಬುದೇ ಸಾಕ್ಷಿ! ಗಲ್ಲಿ ಕಿಚನ್ ಶುರುವಾದಾಗ , ತಮ್ಮ ಬೆಂಬಲದ ಜೊತೆಗೆ ಉತ್ತಮ ಉದ್ಯಮಿಯಾಗುವ ಹಲವಾರು ಆಲೋಚನೆಗಳನ್ನೂ ವ್ಯಕ್ತಪಡಿಸಿದರು. ಬೆಳಿತಾ ಬೆಳಿತಾ ಆ ಮಿನುಗು ತಾರೆ, ಕಷ್ಟ ಪಡ್ತಾ ಆ ಸಲಹೆಗಾರ, ಕಾಲ ಕ್ರಮೇಣ ಪ್ರೀತಿಯ ಸಹೋದರನಾಗಿ ಬದಲಾಗಿ ನನ್ನ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿದ್ದಾರೆ ! ನೀವು ಕಲಿಸಿದ ಪಾಠ, ಮೌಲ್ಯಗಳನ್ನು ಎಂದಿಗೂ ಜೀವಂತವಾಗಿ ಇರಿಸಿಕೊಳುತ್ತಾ, ಹೋಗ್ಬನ್ನಿ ಪುನೀತ್ ಸರ್'. ಎಂದು ಶೈನ್ ಶೆಟ್ಟಿ ಭಾವುಕರಾಗಿ ಬರೆದುಕೊಂಡಿದ್ದಾರೆ.

Basavashri Award: ಪುನೀತ್ ಕುಟುಂಬಕ್ಕೆ ಮುರಘ ಶ್ರೀ ಆಹ್ವಾನ

ಇನ್ನು, ಈ ಪೋಸ್ಟ್‌ಗೆ ನೆಟ್ಟಿಗರು, 'ಎಂದೆಂದಿಗೂ ನಮ್ಮ ಹೃದಯದಲ್ಲಿ ಜೀವಂತವಾಗಿ ಇರುತ್ತಾರೆ! ಎಂದಿಗೂ ಮರೆಯಲಾಗದ ಮಾಣಿಕ್ಯ ನಮ್ಮ ಅಪ್ಪು! ಅವರ ನುಡಿ ಮುತ್ತುಗಳು, ಪ್ರೋತ್ಸಾಹ, ಪ್ರೀತಿ ನಿಮಗೆ ಸಿಕ್ಕಿದೆ. ನೀವು ಒಳ್ಳೆ ಹಾದಿಯಲ್ಲಿ ಹೋಗಿ ಸಾಧಿಸಿ ಚಂದ್ರನಂತೆ ಮಿನುಗಬೇಕು ನಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಸದಾ ಇರುತ್ತದೆ'. 'ಪ್ರತಿಯೊಬ್ಬ ಕನ್ನಡಿಗರ ಎದೆಯಲ್ಲಿ ನೀವೆಂದು ಜೀವಂತ. ನೀವೆಂದು ಅಜರಾಮರ ಅಪ್ಪು ಸರ್. ನೀವಿಲ್ಲ ಅಂತ ಅನ್ಸೋದೆ ಇಲ್ಲಾ. ಪ್ರತಿಯೊಬ್ಬರ ಮನೆಯಲ್ಲೂ ದೀಪದ ಬೆಳಕಿನಂತೆ ಎಂದಿಗೂ ಉರಿಯುತ್ತಿರುತ್ತೀರಿ. ಹೋಗ್ಬನ್ನಿ ಅಪ್ಪು ಸರ್ ಲವ್ ಯೂ'. 'ಖಂಡಿತ... ಬಹಳ ಸರಳ ಸಜ್ಜನಿಕೆಯ, ಮೃದು ಸ್ವಭಾವದ ,ಅತ್ಯಂತ ಅಪರೂಪದ ಅಪೂರ್ವ ವ್ಯಕ್ತಿ. ಸರಳತೆಯ ಪ್ರತಿರೂಪ. ಸದಾ ಮುಗುಳ್ನಗೆಯ ಮಾನವೀಯ ಮೌಲ್ಯಗಳ ಹರಿಕಾರ. ನಿಮ್ಮ ಆ ಮುಗ್ಧ ನಗುವನ್ನು ನಾವು ನಿಜವಾಗಿಯೂ ಮಿಸ್ ಮಾಡಿಕೊಳ್ಳುತ್ತೇವೆ. ನಿಷ್ಕಲ್ಮಶ ಹೃದಯವಂತನನ್ನು ಕಳೆದುಕೊಂದಿದ್ದೀವಿ. ಸದ್ವ್ಯಕ್ತಿಗಳು ಯಾವಾಗಲೂ ಅಮರರಾಗಿರುತ್ತಾರೆ ಆ ಪಟ್ಟಿಯಲ್ಲಿ ನಮ್ಮ ಪ್ರೀತಿಯ ಅಪ್ಪು'. ಹಾಗೂ 'ದೇವತಾ ಮನುಷ್ಯ. ದೇವರು ಅವರಿಗೆ ಮೋಸ ಮಾಡಿದ. ಅವ್ರು ಇಲ್ಲ ಅಂತ ನಂಬಲಿಕ್ಕೆ ಸಾಧ್ಯ ಇಲ್ಲ. ಮತ್ತೆ ಕರುನಾಡಲ್ಲಿ ಹುಟ್ಟಿ ಬನ್ನಿ ಅಪ್ಪು ಸರ್' ಎಂದು ಭಾರವಾದ ಮನಸ್ಸಿನಿಂದಲೇ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
 

click me!