Anoop Sagar Cinema Journey: ಸ್ಯಾಂಡಲ್‌ವುಡ್‌ನಲ್ಲಿ ಬೆಳೆಯುತ್ತಿರುವ ನಿರ್ದೇಶಕ ಅನೂಪ್ ಸಾಗರ್

By Suvarna NewsFirst Published Jan 26, 2022, 1:49 PM IST
Highlights

ಗಟ್ಟಿಮೇಳದ ನಟಿಯ ಅಣ್ಣನಿಗೂ ಸಿನಿಮಾ ಟಚ್ ಇದೆ ಎನ್ನುವುದು ನಿಮಗೆ ಗೊತ್ತಾ ? ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿ ಮೂಲಕ ಮನೆ ಮಾತಾಗಿರುವ ಆದ್ಯ ಪಾತ್ರದಾರಿ ಅನ್ವಿತ ಸಾಗರ್ ಅವರ ಸಹೋದರ ಡ್ಯಾನ್ಸರ್ ಮಾತ್ರವಲ್ಲ ನಿರ್ದೇಶಕನೂ ಹೌದು

ಸುಕನ್ಯಾ ಎನ್.ಆರ್, ಪತ್ರಿಕೋದ್ಯಮ ವಿದ್ಯಾರ್ಥಿನಿ
ಆಳ್ವಾಸ್ ಕಾಲೇಜು ಮೂಡುಬಿದಿರೆ

ಯಥೋ ಹಸ್ತ ತಥೋ ದೃಷ್ಟಿ, ಯಥೋ ದೃಷ್ಟಿ ತಥೋ
ಮನಃ ಯಥೋ ಮನಃ ತಥೋ ಭಾವ, ಯಥೋ ಭಾವ ತಥೋ ರಸ
ಭರತನ ನಾಟ್ಯಶಾಸ್ತ್ರದ ವಾಕ್ಯವನ್ನೊಳಗೊಂಡ ಈ ಶ್ಲೋಕವು ಅರ್ಥಪೂರ್ಣ ವಿವರಣೆಯನ್ನೊಳಗೊಂಡಿದೆ.

ಈ ಶ್ಲೋಕವು ಹೇಳುವ ಸಾರಾಂಶ ಹಸ್ತ ಎಲ್ಲಿದೆಯೋ ಅಲ್ಲಿ ನಮ್ಮ ದೃಷ್ಠಿ ಇರಬೇಕು, ಅಲ್ಲಿಯೇ ಮನಸ್ಸಿರಬೇಕು. ಮನಸ್ಸು ಭಾವವನ್ನು ತನ್ನೊಳಗೆ ಇಟ್ಟುಕೊಂಡಿರುತ್ತದೆ. ಭಾವ ಇದ್ದಲ್ಲಿ ರಸವು ಇರಬೇಕೆಂಬ ಮಾತಿನಂತೆ ರಸ ಭಾವ ಅಭಿನಯಗಳು ಏಕರೂಪವನ್ನು ಹೊಂದಿಕೊಂಡಿರಬೇಕೆಂಬ ಸಂದೇಶ ಸಾರುವ ಶ್ಲೋಕದ ದಾರಿಯಲ್ಲಿ ಇಂದಿಗೂ ಸಾಗುತ್ತ  ತನ್ನ ಕನಸ್ಸಿನ ಹಕ್ಕಿಗೆ ರೆಕ್ಕೆ ಕಟ್ಟಿ ಹಾರ ಬಯಸಿದ ವ್ಯಕ್ತಿಯೇ ಅನೂಪ್ ಸಾಗರ್

ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ, ಸಾಗರದವರು(Sagara). ಹೇಮಚಂದ್ರ ಕೆ.ಎಂ ಮತ್ತು ಭಾರತಿ ದಂಪತಿಯ ಪುತ್ರ. ತಮ್ಮ ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲಿ ಮುಗಿಸಿ, ಗ್ಲೋಬ್ ಅವಿಯೇಷನ್ ಕಾಲೇಜ್ ಮಂಗಳೂರಿನಲ್ಲಿ ಡಿಪ್ಲೊಮಾ ಶಿಕ್ಷಣ ಮುಗಿಸಿದರು. ಕೋಸ್ಟಲ್ ವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ (Sandalwood) ಮಿಂಚುತ್ತಿರುವ ಅನುಪ್ ಚಿತ್ರರಂಗದಲ್ಲಿ ಬಣ್ಣ ಹಚ್ಚುವ  ಮೊದನಿಂದಲೂ ಒಳ್ಳೆಯ ನೃತ್ಯಗಾರರಾಗಿದ್ದರು. ಚಿಕ್ಕದಿನಿಂದಲು ನೃತ್ಯದ(Dancing) ಮೇಲೆ ಒಲವನ್ನು ಬೆಳಸಿಕೊಂಡು  ನೃತ್ಯ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕನಸ್ಸು ಕಂಡಂತಹ ವ್ಯಕ್ತಿ ಅನುಪ್.

ರೀಲ್ ‌ಪ್ರೆಗ್ನೆಂನ್ಸಿ ಫೋಟೋ ಶೇರ್ ಮಾಡಿಕೊಂಡ 'ಗಟ್ಟಿಮೇಳ' ಅನ್ವಿತಾ; ನೆಟ್ಟಿಗರು ಶಾಕ್!

ಶಿಕ್ಷಣದ ನಂತರ ವೃತ್ತಿಗಾಗಿ ಬಾಂಬೆಗೆ(Bombay) ಹೋದರು. ಎರಡು ವರ್ಷ ಅಲ್ಲಿಯೇ ಕೆಲಸ ಮಾಡುತ್ತ ತನ್ನ ಆಸಕ್ತಿ ಕ್ಷೇತ್ರದ ಕಡೆಗಿನ ಒಲವನ್ನು ಬಿಡದೇ ಸಮಯ ಸಿಕ್ಕಾಗಲೆಲ್ಲ ಡಾನ್ಸ್ ಮಾಡುವುದನ್ನು ಮರೆಯಲಿಲ್ಲ. ಆನಂತರ ದುಬೈನಲ್ಲಿ ಸಲ್ಪ ಸಮಯ ಕೆಲಸಕ್ಕೆ ಸೇರಿಕೊಂಡ ಸಂದರ್ಭದಲ್ಲಿ ಓಷಿಯನ್ ಕಿಡ್ಸ್ ಎಂಬ ಮಂಗಳೂರಿನ ನೃತ್ಯ ತಂಡದವರೊಂದಿಗೆ ಹಿನ್ನಲೆ ನೃತ್ಯಗಾರರಾಗಿ ಸೇರಿಕೊಂಡರು.
ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುವುದು ಎಂಬ ಮಾತಿನಂತೆ ಅವಕಾಶಗಳು ಅನೂಪ್ ಅವರನ್ನು ಕೈ ಬೀಸಿ ಕರೆಯುವಂತೆ ಮಾಡಿದರು.

ಸಿನಿಮಾ ನೃತ್ಯ ಸಂಯೋಜಕರು ನಟನಾಗಿದ್ದು ಹೀಗೆ

'ನಾನು ಕಲಿತ ಕಲೆ ನನ್ನನು ಎಂದಿಗೂ ಕೈ ಬಿಡುವುದಿಲ್ಲ' ಎಂದು ಬಲವಾಗಿ ನಂಬಿ,ಸಿಕ್ಕಂತಹ ಎಲ್ಲ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಅನೇಕ ಬಾಲಿವುಡ್ ನಟ-ನಟಿರಾದ ಅಕ್ಷಯ್ ಕುಮಾರ್, ಸೈಫ್ಅಲಿ ಖಾನ್,ಜಾನ್ ಅಬ್ರಹಾಂ, ರಣಬೀರ್ ಕಪೂರ್, ದೀಪಿಕಾ ಪಡುಕೋಣೆ ಅನೇಕ ಹೆಸರಾಂತ ಕಲಾವಿದರ ಜೊತೆ ಹಿನ್ನಲೆ ನೃತ್ಯಗಾರರಾಗಿ ಡಾನ್ಸ್ ಮಾಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.
ಮಲಯಾಳಂ,ತಮಿಳು,ಹಿಂದಿ ಕನ್ನಡ ಇಂಡಸ್ಟ್ರಿ ಗಳಲ್ಲಿ ಹಿನ್ನಲೆ ನೃತ್ಯಗಾರನಾಗಿ ಗುರುತಿಸಿಕೊಂಡು, ಕಲಾವಿದನಾಗಿ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ಅವಕಾಶದ ದಾರಿಯಲ್ಲಿ ಪಯಣ

ನೃತ್ಯದೊಂದಿಗೆ ಕಲಾವಿದನಾಗಬೇಕೆಂಬ ಆಸೆಯೊಂದಿಗೆ ಸಾಗುತ್ತಿದ್ದ ಅನುಪ್ ಅವಕಾಶಕ್ಕಾಗಿ ಕಾಯುತ್ತಿದ್ದರು.ಅತಿಯಾದ ಕೆಲಸದ ಒತ್ತಡದ ನಡುವೆಯು ಆಸಕ್ತಿ ಇರುವ ಕ್ಷೇತ್ರದ ಕಡೆ ಮುಂದುವರೆಯಬೇಕೆಂಬ  ಹಂಬಲ ಅವರದಾಗಿತ್ತು. ಹೀಗಿರುವಾಗ 
'ನಿರೆಲ್' ಎಂಬ ತುಳು ಚಿತ್ರದ ನಾಯಕ ನಟನ ಪಾತ್ರಕ್ಕೆ ಆಡಿಷನ್ ನೀಡುತ್ತಾರೆ. ಈ ಮೂಲಕ ಪ್ರಥಮ ಬಾರಿಗೆ ಪರದೆಯ ಮೇಲೆ ಅಭಿನಯಿಸಲು ಇವರಿಗೆ ಅವಕಾಶ ಸಿಗುತ್ತದೆ.

ಮನದ ಮಾತು

ಸೋತರೆ ಮುಂದೇನು ಅನ್ನುವ ಪ್ರಶ್ನೆ ಮೂಡುತ್ತ ಇದ್ದದ್ದರಿಂದ ಪ್ರಾರಂಭದಲ್ಲಿ ಆಡಿಷನ್ ಗಳಲ್ಲಿ ಭಾಗವಹಿಸಲು ಭಯ ಪಡುತ್ತಿದ್ದೆ
ಒಂದು ದಿನ ಧೈರ್ಯ ಮಾಡಿ ಆಡಿಷನ್ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಆ ದಿನ ಭಯದ ಕರಿ ನೆರಳು ನನ್ನಿಂದ ದೂರವಾಯಿತು.
ಅಂದಿನಿಂದ ಮತ್ತೆ ಹಿಂದಿರುಗಿ ನೋಡಲಿಲ್ಲ ಎಂದರು.

ಬಣ್ಣದ ಲೋಕದ ಪಯಣ

ಅರ್ಜುನ ವೆಡ್ಸ್ ಅಮೃತ ಎಂಬ ತುಳು ಸಿನಿಮಾದಲ್ಲಿ ನಟಿಸಿ ಬೆಸ್ಟ್ ಆಕ್ಟರ್ ಅವಾರ್ಡ್ ಅನ್ನು ತನ್ನದಾಗಿಸಿಕೊಂಡು, ಪ್ರಶಾಂತ್ ಆಳ್ವ ನಿರ್ದೇಶನದ ಅನೇಕ ಪ್ರತಿಭಾನ್ವಿತ ಕಲಾವಿದರೊಂದಿಗೆ ' ಅಪರಾಧಿ ನಾನಲ್ಲ' ಎಂಬ ಕನ್ನಡ ಸಿನಿಮಾದಲ್ಲಿ ಅಭಿನಯಿಸಿ,' ಜೂಲಿಯಾಟ್ ' ಸಿನಿಮಾದಲ್ಲಿ ಖಳನಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇತ್ತೀಚೆಗಷ್ಟೇ ನಡೆದ ' ಪುರುಷೋತ್ತಮ ಪ್ರಸಂಗ ' ಎಂಬ ಕನ್ನಡ ಸಿನಿಮಾದಲ್ಲಿ ಕೆಲಸ ಮಾಡಿದ್ದು, ಚೇತನ್ ಮುಂಡಾಡಿ ನಿರ್ದೇಶನದಲ್ಲಿ ಮೂಡಿ ಬರಲಿರುವ 'ವರ್ಣ ಪಟ್ಟಲ ' ಚಿತ್ರದಲ್ಲಿ ನಾಯಕ ನಟನಾಗಿ ವೀಕ್ಷಕರ ಮುಂದೆ ಬರಲಿದ್ದಾರೆ. ಈ ಚಿತ್ರದ ಟ್ರೈಲರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದು, ಸಿನಿಮಾ ಶೀಘ್ರದಲ್ಲೇ ತೆರೆ ಕಾಣಲಿದೆ ಎಂದರು.

'ಗಟ್ಟಿಮೇಳ' ಧಾರಾವಾಹಿಯ ಆದ್ಯಾ ನಿಜಕ್ಕೂ ಸಿನಿಮಾ ನಟಿನಾ?

ಕಿರುತೆರೆ ನಟಿಯ ಅಣ್ಣನೆಂಬ ಹೆಮ್ಮೆ

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿ ಮೂಲಕ ಮನೆ ಮಾತಾಗಿರುವ ಆದ್ಯ ಪಾತ್ರದಾರಿ ಅನ್ವಿತ ಸಾಗರ್ ಅವರ ಸಹೋದರಿ. "ವೀಕ್ಷಕರು ಅವಳಿಗೆ ತೋರಿಸುವ ಪ್ರೀತಿಯನ್ನು ನನಗೂ ಕೂಡ ತೋರಿಸುತ್ತಾರೆ. ಅನ್ವಿತ ನನ್ನಗಿಂತಲು ಅದ್ಭುತ ಕಲಾವಿದೆ ಎಂದು ಹೇಳಲು ಸಂತೋಷ ವ್ಯಕ್ತಪಡಿಸುತ್ತೇನೆ. ಸದಾ ಅವಳ ಚಟುವಟಿಕೆಗೆ  ಪ್ರೋತ್ಸಾಹಿಸುತ್ತೇನೆ" ಎನ್ನುತ್ತಾರೆ  ಅನುಪ್ ಸಾಗರ್.

10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಇನ್ನೂ ಈ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಬೇಕು ಅನ್ನುವ ಆಸೆ ಇವರಿಗಿದೆ.
ನೃತ್ಯ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಇವರು ಮಂಗಳೂರಿನಲ್ಲಿ ಕುಡ್ಲ ಕೆಫೆಯ ಮಾಲೀಕರು ಕೂಡ ಆಗಿದ್ದಾರೆ. ಸಿನಿಮಾ ನೃತ್ಯ ಸಂಯೋಜಕರಾಗಿ ಹಾಗೂ ನಟನಾಗಿ ಕನ್ನಡ ಸಿನಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬುದು ಅವರ ಕನಸಾಗಿದ್ದು ಆ ಕನಸನ್ನು ನನಸು ಮಾಡಿಕೊಳ್ಳುವ ಸಲುವಾಗಿ ಎಡೆಬಿಡದೆ ಪ್ರಯತ್ನಿಸುತ್ತಿದ್ದಾರೆ. ಇವರ ಪ್ರಯತ್ನ ಸಫಲವಾದಲ್ಲಿ ಕನ್ನಡ ಸಿನಿಮಾ ರಂಗಕ್ಕೆ ಒಬ್ಬ ಉತ್ತಮ ಕಲಾವಿದ ದೊರೆಯುವುದರಲ್ಲಿ ಸಂಶಯವಿಲ್ಲ.

click me!