ರಾಷ್ಟ್ರಪ್ರಶಸ್ತಿ ವಿಜೇತ ಅಕ್ಷಿ ಚಿತ್ರ ಶೀಘ್ರ ತೆರೆಗೆ!

By Kannadaprabha NewsFirst Published Mar 29, 2021, 10:11 AM IST
Highlights

ಮನೋಜ್‌ ಕುಮಾರ್‌ ನಿರ್ದೇಶನದ ಅಕ್ಷಿ ಚಿತ್ರ ರಾಷ್ಟ್ರ ಪ್ರಶಸ್ತಿ ತನ್ನದಾಗಿಸಿಕೊಂಡ ಖುಷಿಯಲ್ಲಿದೆ. ಇದೇ ಜೋಶ್‌ನಲ್ಲಿ ಸಿನಿಮಾ ರಿಲೀಸ್‌ಗೂ ಮುಂದಾಗುತ್ತಿದೆ. ಶೀಘ್ರದಲ್ಲೇ ಈ ಚಿತ್ರವನ್ನು ಥಿಯೇಟರ್‌ಗೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

ರಾಷ್ಟ್ರಪ್ರಶಸ್ತಿ ಪಡೆದ ಸಂಭ್ರಮಕ್ಕಾಗಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಮನೋಜ್‌ ಕುಮಾರ್‌ ಈ ಚಿತ್ರದ ಕಥೆ ಹುಟ್ಟಲು ಕಾರಣ ಡಾ. ರಾಜ್‌ಕುಮಾರ್‌ ಎಂದು ಹೇಳಿ ಅಚ್ಚರಿ ಮೂಡಿಸಿದರು. ‘ಹಾಸನ ಜಿಲ್ಲೆ ಬೇಲೂರು ನನ್ನ ಊರು. ಡಾ.ರಾಜ್‌ ನಿಧನರಾದ ಹೊತ್ತಲ್ಲಿ ನಾನು ಊರಲ್ಲಿದ್ದೆ. ಊರಿನ ಜನರೆಲ್ಲ ಅಣ್ಣಾವ್ರು ಕಣ್ಣು ದಾನ ಮಾಡಿದ್ದರ ಬಗ್ಗೆ ಕುತೂಹಲದಿಂದ ಮಾತನಾಡುತ್ತಿದ್ದರು. ನೇತ್ರದಾನ ಅನ್ನೋದು ಹೇಗೆ ಇನ್ನೊಬ್ಬರ ಬದುಕಿಗೆ ಬೆಳಕಾಗುತ್ತದೆ ಅನ್ನೋ ಸಬ್ಜೆಕ್ಟೇ ಬಹಳ ಇಂಟೆರೆಸ್ಟಿಂಗ್‌ ಅನಿಸಿತು. ಅದನ್ನಿಟ್ಟುಕೊಂಡು ಕಥೆ ಬರೆದೆ’ ಎನ್ನುತ್ತಾ ಸಿನಿಮಾ ಕಥೆ ಹಿಂದಿನ ಕಥೆ ಬಿಚ್ಚಿಟ್ಟರು.

ರಾಷ್ಟ್ರೀಯ ಸಿನಿಮಾ ಪುರಸ್ಕಾರದಲ್ಲಿ ಮೆರೆದ 'ನಾರಾಯಣ', ಕಂಗನಾ ಅತ್ಯುತ್ತಮ ನಟಿ 

ನಟಿ ಇಳಾ ವಿಟ್ಲ ಮಾತನಾಡಿ, ‘ನನಗೆ ನೆಗೆಟಿವ್‌ ರೋಲ್‌ ಮಾಡಿ ಮಾಡಿ ಸಾಕಾಗಿತ್ತು. ಆತ್ಮತೃಪ್ತಿಯ ಕೆಲಸಕ್ಕಾಗಿ ಕಾಯುತ್ತಿದ್ದೆ. ಈ ಪಾತ್ರ ಆ ತೃಪ್ತಿ ತಂದುಕೊಟ್ಟಿತು. ಕಲಾವಿದರನ್ನು ಒಂದೇ ಪಾತ್ರಕ್ಕೆ ಫಿಕ್ಸ್‌ ಮಾಡಬೇಡಿ. ಅವರ ಪ್ರತಿಭೆ ಹೊರಬರಲು ಅವಕಾಶ ಕೊಡಿ’ ಎಂದು ವಿನಂತಿಸಿದರು.

"

ಮುಖ್ಯಪಾತ್ರದಲ್ಲಿ ನಟಿಸಿರುವ ಗೋವಿಂದೇ ಗೌಡ, ಇಂಥದ್ದೊಂದು ಪಾತ್ರವನ್ನು ತಾನು ಚೆನ್ನಾಗಿ ನಿರ್ವಹಿಸುವಂತೆ ಮಾಡಿದ ನಿರ್ದೇಶಕರನ್ನು ಪ್ರಶಂಸಿಸಿದರು. ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಲವ್ಲೀ ಸ್ಟಾರ್‌ ಪ್ರೇಮ್‌ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿ, ತಂಡದ ಮೇಲಿರುವ ಜವಾಬ್ದಾರಿಯನ್ನು ನೆನಪಿಸಿದರು.

16 ‘ಕಿರಿಯ ಸಂಪಾದಕ’ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ 

ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್‌ ಮಾತನಾಡಿ, ‘ಉತ್ತಮ ಚಿತ್ರ ನಿರ್ಮಾಣ ಮಾಡುವ ಕನಸು ಕಾಣುತ್ತಿದ್ದೆ. ಮನೋಜ್‌ ಅವರು ಕಥೆ ಹೇಳಿದಾಗ ನನ್ನ ಮೊದಲ ಸಾಹಸಕ್ಕೆ ಇದೇ ಕಥೆ ಸೂಕ್ತ ಅನಿಸಿತು’ ಎಂದರು.

ಮತ್ತಿಬ್ಬರು ನಿರ್ಮಾಪಕರಾದ ರವಿ, ರಮೇಶ್‌, ಬಾಲ ನಟರಾದ ಸೌಮ್ಯಾ ಪ್ರಭು, ಮಿಥುನ್‌ ಮತ್ತಿತರರು ಹಾಜರಿದ್ದರು.

click me!