ಯಾರೇ ಕೂಗಾಡಲೀ, ಊರೇ ಹೋರಾಡಲು, ಡಾ. ರಾಜ್ ಇರುತ್ತಿದ್ದುದೇ ಹೀಗೆ..!

By Suvarna NewsFirst Published Apr 24, 2021, 3:47 PM IST
Highlights

ಕನ್ನಡಿಗರ ಆಸ್ತಿ, ಕನ್ನಡಿಗರ ಹೆಮ್ಮೆ. ವರನಟ ಡಾ.ರಾಜ್‌ಕುಮಾರ್ ಅವರ ಹುಟ್ಟುಹಬ್ಬವಿಂದು. ಕನ್ನಡದ ಚಿತ್ರರಂಗದ ಅಮೂಲ್ಯ ರತ್ನ ಸದಾ ಕನ್ನಡಿಗರ ಹೃದಯದಲ್ಲಿ ಅಜರಾಮರ. ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಸ್ಮರಣೆಯಲ್ಲಿ ಕನ್ನಡಿಗರು. ರಾಜಣ್ಣನ ಬಗ್ಗೆ ನಿಮಗೆ ತಿಳಿಯದ 5 ವಿಚಾರಗಳು..

- ಎಸ್‌ ಜಗನ್ನಾಥರಾವ್‌ ಬಹುಳೆ

1.ಕಾಲ ಬದಲಾಗಿದೆ, ಕಾಲ ಕೆಟ್ಟು ಹೋಗಿದೆ ಎಂಬುದನ್ನು ರಾಜ್‌ ಒಪ್ಪುತ್ತಿರಲಿಲ್ಲ. ಇನ್ನೊಬ್ಬರು ಬದಲಾಗಿದ್ದಾರೆ, ಕೆಟ್ಟು ಹೋಗಿದ್ದಾರೆ ಎಂದು ಆಕ್ಷೇಪಿಸುವ ಬದಲು ನಾವು ಬದಲಾಗಿದ್ದೇವೆಯೇ, ನಾವೇನಾದರೂ ಕೆಟ್ಟಿದ್ದೇವೆಯೆ ಎಂದು ಆತ್ಮಶೋಧನೆ ನಾವೇ ಮಾಡಿಕೊಳ್ಳಬಾರದೇಕೆ ಎಂಬುದು ರಾಜ್‌ರ ಪ್ರಶ್ನೆಯಾಗಿತ್ತು.

ರಾಜ್‌ ಇದ್ದಲ್ಲಿ ಸಹಾನುಭೂತಿ, ಪ್ರೀತಿ, ಶ್ರದ್ಧೆ ಇರುತ್ತಿತ್ತು; ಇಂದು ರಾಜ್‌ಕುಮಾರ್ ಹುಟ್ಟುಹಬ್ಬ ಸಂಭ್ರಮ! 

2. ಯಾರೋ ಪ್ರಖ್ಯಾತ ಜ್ಯೋತಿಷಿಗಳು ರಾಜ್‌ರಿಗೆ ಹರಳಿನ ಉಂಗುರ ಧರಿಸಲು ಹೇಳಿದ್ದರು. ರಾಜ್‌ ಅದನ್ನು ಹಾಕಿಕೊಂಡಾಗಲೆಲ್ಲ ಅದು ಎಲ್ಲೋ ಬಿದ್ದು ಅದನ್ನು ಹುಡುಕುವುದೇ ಮನೆಯವರಿಗೆ ಒಂದು ಕೆಲಸವಾಗಿ ಕೊನೆಗೆ ಅದನ್ನು ಕೋಣೆಯಲ್ಲಿ ಎತ್ತಿಡಬೇಕಾಯಿತು. ಇದು ರಾಜ್‌ ಬದುಕಿದ ರೀತಿ.

3. ರಾಜ್‌ ಅವರಿಗೆ ವಾಕಿಂಗ್‌ಮೇಟ್‌ ಮತ್ತು ಟಾಕಿಂಗ್‌ಮೇಟ್‌ ಎರಡೂ ಆಗಿ ಆತ್ಮೀಯರಾಗಿದ್ದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಒಮ್ಮೆ ರಾಜ್‌ ಜತೆಗಿನ ಮಾತುಕತೆಯಲ್ಲಿ ಯಾರಿಗೂ ತಾವು ಕಾಲು ಮುಟ್ಟಿನಮಸ್ಕರಿಸದ ಪರಿಯನ್ನು ಹೇಳಿಕೊಂಡಾಗ ಪ್ರೀತಿ ಇರಬೇಕಾದದ್ದು ಇಲ್ಲಿ ಎಂದು ರಾಜ್‌ ಎದೆ ಮುಟ್ಟಿತೋರಿಸಿ ಬರಗೂರರನ್ನು ಅಪ್ಪಿದ್ದರು. ಬರಗೂರರು ಘಟನೆ ನೆನೆದು ಕಲಾವಿದ ರಾಜ್‌ಗಿಂತಲೂ ಹೆಚ್ಚಾಗಿ ಹೃದಯವಂತ ವ್ಯಕ್ತಿಯಾಗಿ ರಾಜ್‌ ನನಗೆ ಹೆಚ್ಚು ಇಷ್ಟಎನ್ನುತ್ತಾರೆ.

4.ಅವರ ಬಳಿ ಇದ್ದದ್ದು ಒಂದು ನಿಕ್ಕರ್‌ ಮತ್ತು ಅರ್ಧ ತೋಳಿನ ಷರ್ಟ್‌ ಮಾತ್ರ. ಷರ್ಟ್‌ನ ಎರಡೂ ತೋಳುಗಳು ಕಿತ್ತು ಹೋಗಿ ಅದು ಅರ್ಧವಾಗಿತ್ತು. ಬೆನ್ನಿನಲ್ಲಿಯೂ ಹರಿದಿತ್ತು. ಆದರೆ ಬಾಲಕ ಮುತ್ತುರಾಜ ಇದನ್ನೆಲ್ಲ ಮುಚ್ಚಿಕೊಳ್ಳಲು ಉರಿಬಿಸಿಲಿನಲ್ಲಿಯೂ ಷರ್ಟಿನ ಮೇಲೊಂದು ಹಳೆಯ ಕೋಟು ಹಾಕಿಕೊಂಡು ರಾಜಠೀವಿಯಿಂದ ಓಡಾಡುತ್ತಿದ್ದ.

'ನಿನ್ನ ಕಂಗಳ ಬಿಸಿಯ ಹನಿಗಳು'.. ಅಪ್ಪನಿಗಾಗಿ ಅಪ್ಪು ಹಾಡಿದ್ರು ಸುಂದರ ಹಾಡು 

5.ಶಬರಿಮಲೆ ಯಾತ್ರೆ ಸಂದರ್ಭಗಳಲ್ಲಿ ರಾಜ್‌ 40 ದಿನಗಳ ನೇಮವನ್ನು ಪಾಲಿಸುತ್ತಿದ್ದರು. ಒಮ್ಮೆ ಹೀಗೆ ಮಾಲೆ ಧಾರಿಗಳಾಗಿದ್ದಾಗ ಒಂದು ದೊಡ್ಡ ಪ್ರತಿಷ್ಟಿತ ಸಮಾರಂಭಕ್ಕೆ ಮುಖ್ಯಅತಿಥಿಯಾಗಿ ಹೋಗಬೇಕಾಯಿತು. ಆತ್ಮೀಯರ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದ ಬರಿಗಾಲಿಗೆ ಚಪ್ಪಲಿ ಧರಿಸಬೇಕಾಯಿತು. ಸಭಾಂಗಣ ಪ್ರವೇಶಿಸುವಾಗ ರಾಜ್‌ಗೆ ಭಯ. ಎಲ್ಲರೂ ತಮ್ಮ ಕಾಲುಗಳನ್ನೇ ನೋಡುತ್ತಿರುವರೇನೋ ಎಂಬ ಅಳುಕು. ಸಹಜವಾಗಿಯೇ ವೇದಿಕೆಯ ಪಾವಿತ್ರ್ಯವನ್ನು ಕಾಪಾಡಲು ಚಪ್ಪಲಿ ಕಳಚಿದರು. ಸಮಾರಂಭ ಮುಗಿಸಿ ಹೊರಗೆ ಬರುವಾಗ ಕಾಲಲ್ಲಿ ಚಪ್ಪಲಿಗಳು ಇರಲಿಲ್ಲ. ಎಲ್ಲೋ ಕಳೆದು ಹೋಗಿದ್ದವು. ರಾಜ್‌ ಮನಸಿಗೆ ನಿರಾಳವಾಯಿತು. ವ್ರತಭಂಗವಾದ್ದರಿಂದ ಹೀಗಾಗಿರಬೇಕು ಎಂದುಕೊಂಡರು.

click me!