Latest Videos

ಮಗು ಅಳುತ್ತಿದ್ದರೂ ಅಪ್ಪ ಡೋಂಟ್​ಕೇರ್​! ಮಕ್ಕಳಿಗೆ ಬದುಕೋ ಪಾಠ ಹೇಳಿ ಕೊಡೋದು ಅಂದ್ರೆ ಇದೇ ಅಲ್ವಾ?

By Suchethana DFirst Published Jun 30, 2024, 1:55 PM IST
Highlights

ಮಗುವನ್ನು ಬಿಟ್ಟು ಅಪ್ಪ ಹೋಗಿದ್ದಾನೆ. ದಾರಗಳನ್ನು ದಾಟಿ ಬರಲಾಗದ ಸ್ಥಿತಿ ಈ ಕಂದಮ್ಮನದ್ದು. ಅಲ್ಲಿ ಈ ಅಪ್ಪನ ಕಲ್ಲು ಹೃದಯಕ್ಕೆ ಕಾರಣವೇನು? ವಿಡಿಯೋ ನೋಡಿ ನೀವು ಏನೆನ್ನುತ್ತೀರಿ?
 

ಕೆಲ ದಿನಗಳ ಹಿಂದೆ ಸೋಷಿಯಲ್​ ಮೀಡಿಯಾದಲ್ಲಿ ಕರಡಿ ಮತ್ತು ಅದರ ಮರಿಯ ವಿಡಿಯೋ ಒಂದು ಸಕತ್​ ಸದ್ದು ಮಾಡಿತ್ತು. ಅದರಲ್ಲಿ ಮರಿಯೊಂದು ಮೇಲೆ ಹತ್ತಲು ನೋಡುತ್ತದೆ, ಸಾಧ್ಯವೇ ಆಗುವುದಿಲ್ಲ. ಅತ್ತ ಅದರ ಅಮ್ಮ  ಮರಿ ಕಷ್ಟಪಡುವುದನ್ನು ನೋಡುತ್ತಲೇ ಇರುತ್ತದೆ. ಅದು ಇಚ್ಛಿಸಿದ್ದರೆ ತನ್ನ ಮಗುವನ್ನು ಸುಲಭದಲ್ಲಿ ಮೇಲೆ ಏರಿಸಬಹುದಿತ್ತು. ಹಾಗೆ ಅದು ಮಾಡುವುದಿಲ್ಲ. ಮರಿ ಅರ್ಧಕ್ಕೆ ಏರಿ ಮತ್ತೆ ಒದ್ದಾಡುತ್ತಿದ್ದಾಗ ಹತ್ತಿರ ಬರುವ ಅಮ್ಮ  ಅದನ್ನು ಮತ್ತೆ ಕೆಳಗೆ ಇಳಿಸುತ್ತದೆ. ಆಗ ನೋಡಿದಾಕ್ಷಣ ಛೇ ಈ ಅಮ್ಮನಿಗೆ ಸ್ವಲ್ಪವೂ ಪ್ರೀತಿ ಇಲ್ವಾ ಛೇ ಎಂದು ಮರಿಯ ಬಗ್ಗೆ ಕನಿಕರ ಮೂಡುವುದು ಸಹಜ. ಆದರೆ ಕೊನೆಗೆ ಮರಿ ಶ್ರಮಪಟ್ಟು ಏರುತ್ತದೆ. ಆಗ ಅಮ್ಮ ಅದನ್ನು ಹಿಡಿದು ಅಪ್ಪಿ ಮುದ್ದಾಡುತ್ತದೆ.  ಎಲ್ಲಾ ಪ್ರಾಣಿ-ಪಕ್ಷಿಗಳೂ ಇದೇ ರೀತಿ ಮಾಡುತ್ತವೆ. ತನ್ನ ಮಕ್ಕಳಿಗೆ ಹಾರುವುದನ್ನು, ಓಡುವುದನ್ನು, ಮರ ಹತ್ತುವುದನ್ನು ಕಲಿಸುವ ಸಲುವಾಗ ಆ ಕ್ಷಣದಲ್ಲಿ ಅಮ್ಮನೋ, ಅಪ್ಪನೋ ಕಟುಕ ಆಗಲೇಬೇಕಾಗುತ್ತದೆ. ಬೇಟೆಯಾಡುವುದನ್ನು ಕಲಿಸುವ ಪರಿಯೂ ಇಷ್ಟೇ ವಿಶೇಷವಾಗಿರುತ್ತದೆ. ಇದರಿಂದಲೇ ಆ ಮಗು ತನ್ನ ಶ್ರಮದಿಂದ ಕಲಿಯುತ್ತದೆ. ಇದನ್ನೇ ಸಹಜ ಶಿಕ್ಷಣ ಎನ್ನುವುದು. 

ಆದರೆ ಮನುಷ್ಯರಲ್ಲಿ ಹಾಗಲ್ಲವಲ್ಲ! ಬಹುತೇಕ ಎಲ್ಲರಿಗೂ ತಮ್ಮ ಮಕ್ಕಳು ಎಷ್ಟು ದೊಡ್ಡವರಾದರೂ ಮಕ್ಕಳೇ. ಸ್ಪೂನ್​ಫೀಡ್​ ಮಾಡುವುದು ಎಂದರೆ ಇನ್ನಿಲ್ಲದ ಖುಷಿ. ನಡೆದರೆ ಮಕ್ಕಳು ಎಲ್ಲಿ ಸವೆದು ಹೋಗುವರೋ ಎನ್ನುವ ಭಯ ಕಾಡುತ್ತಲೇ ಇರುತ್ತದೆ. ಅದಕ್ಕಾಗಿಯೇ ಮಕ್ಕಳ ಮೇಲೆ ಇನ್ನಿಲ್ಲದ ಕಾಳಜಿ ತೋರುತ್ತಾರೆ. ಆ ಕ್ಷಣದಲ್ಲಿ ಅದು ಅಪ್ಪ-ಅಮ್ಮನ ಪ್ರೀತಿ ಎನಿಸಿದರೂ ಎಷ್ಟೋ ಮಕ್ಕಳಿಗೆ ಕೊನೆಗೂ ಸ್ವಂತ ಬುದ್ಧಿ ಎನ್ನುವುದು ಬರುವುದೇ ಇಲ್ಲ ಎನ್ನುವುದು ತಜ್ಞರ ಅಭಿಮತ. ಅದಕ್ಕಾಗಿಯೇ ಮಕ್ಕಳು ಚಿಕ್ಕವರಿರುವಾಗ ಅವರಿಗೆ ಸಾಧ್ಯವಾದ್ದಷ್ಟನ್ನು ಸ್ವತಂತ್ರವಾಗಿ ಕಲಿಯಲು ಬಿಡಿ, ಎಲ್ಲದಕ್ಕೂ ಮುಂದೆ ಹೋಗಿ ಸಹಾಯ ಮಾಡುವುದು ಎಲ್ಲಾ ಸಂದರ್ಭಗಳಲ್ಲಿಯೂ ಸರಿಯಲ್ಲ. ಮಕ್ಕಳು ಚುರುಕಾಗಿ, ಬುದ್ಧಿವಂತರಾಗಿ ಇರಬೇಕು ಎಂದರೆ ಅವರ ಎಳೆಯ ವಯಸ್ಸಿನಲ್ಲಿ ಅವರಿಗೆ ಸಹಾಯ ಮಾಡಲು ಹೋಗಬೇಡಿ ಎನ್ನುತ್ತಾರೆ ಬಲ್ಲವರು. ಮಕ್ಕಳ ಕೈಯಲ್ಲಿ ಆಗುತ್ತದೆ ಎನ್ನುವುದನ್ನು ತೋರಿಸುವುದು ಅಪ್ಪ-ಅಮ್ಮನ ಕರ್ತವ್ಯ. ಆ ಕ್ಷಣದಲ್ಲಿ ಮಕ್ಕಳು ಕಷ್ಟಪಡುವುದನ್ನು ನೋಡಿ ಕಷ್ಟವಾಗಬಹುದು. ಆದರೆ ಮುಂದೆ ಅದೇ ಅವರಿಗೆ ಬೆಳಕಾಗುತ್ತದೆ ಎನ್ನುತ್ತಾರೆ. 

ಕೋಕಿಲಜ್ಜಿ-ಘಾಟಿ ತಾತನ ಮೂಲಕವೇ ಮಗಳನ್ನು ಹೀಗೆ ಪರಿಚಯಿಸಿದ ಇಂದುಶ್ರೀ; ಸೋ ಕ್ಯೂಟ್​ ಅಂದ ಫ್ಯಾನ್ಸ್​

ಆ ವೈರಲ್​ ವಿಡಿಯೋದಲ್ಲಿರುವ ಕರಡಿ ಮತ್ತು ಮರಿಯನ್ನು ನೆನಪಿಸುವ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಇದರಲ್ಲಿ ತನ್ನ ಪುಟಾಣಿ ಕಂದನನ್ನು ಕರೆದುಕೊಂಡು ಅಪ್ಪ ಹೋಗುತ್ತಿದ್ದಾನೆ. ಆ ಸೇತುವೆ ನಡುವೆ ಮೂರು ಲೈನ್​ ದಾರ ಕಟ್ಟಲಾಗಿದೆ. ಅಪ್ಪ ಮಗುವಿನ ಎದುರೇ ಅದನ್ನು ಸುಲಭದಲ್ಲಿ ಎತ್ತಿಕೊಂಡು ಹೋಗುತ್ತಾನೆ. ಮಗು ಇಲ್ಲಿ ಒಂಟಿಯಾಗುತ್ತದೆ. ಅಪ್ಪ ದೂರ ಹೋಗುತ್ತಾನೆ. ಮಗು ಅಳುತ್ತದೆ. ಅದಕ್ಕೆ ಆ ದಾರವನ್ನು ದಾಟಲು ಬರುವುದಿಲ್ಲ. ಹಲವು ಬಾರಿ ಪ್ರಯತ್ನ ಮಾಡಿ ಸೋಲುತ್ತದೆ. ನಡುವೆ ಸಿಲುಕಿಕೊಳ್ಳುತ್ತದೆ. ಆಗ ಅಪ್ಪ ಹತ್ತಿರ ಬರುತ್ತಾನೆ. ಈಗ ಅಪ್ಪ ತನ್ನನ್ನು ಕರೆದುಕೊಂಡು ಹೋಗುತ್ತಾನೆ ಎನ್ನುವ ಖುಷಿ ಆ ಪುಟಾಣಿಗೆ. ಆದರೆ ಅಪ್ಪ ಹಾಗೆ ಮಾಡುವುದಿಲ್ಲ. ಮಗುವನ್ನು ಪುನಃ ದಾರಗಳ ಹಿಂದೆ ಹಾಕುತ್ತಾನೆ. ತಾನು ದೂರ ಹೊರಟು ಹೋಗುತ್ತಾನೆ.

ಆ ಕ್ಷಣದಲ್ಲಿ ಎಂಥವರಿಗಾದರೂ ಕರುಳು ಚುರುಕ್​ ಎನ್ನುವುದು ಸಹಜ. ಕೆಲವರಿಗೆ ಅರೆ ಅಪ್ಪ ಇಷ್ಟು ಕ್ರೂರಿ ಎನ್ನಿಸಲೂಬಹುದು. ದೂರ ಹೋದ ಅಪ್ಪನಿಗಾಗಿ ಮಗು ಜೋರಾಗಿ ಅಳುತ್ತೆ, ಕಿರುಚಾಡುತ್ತೆ, ಅಪ್ಪ ಎಂದು ಕೂಗುತ್ತೆ. ಆದರೂ ಅಪ್ಪನ ಮನಸ್ಸು ಇಲ್ಲಿ ಕಲ್ಲಾಗಿರುತ್ತದೆ. ಕೊನೆಗೆ ಅಪ್ಪನ ಹತ್ತಿರ ಹೋಗಲು ಮಗು ಇನ್ನಿಲ್ಲದ ಸಾಹಸ ಪಟ್ಟು ಕೊನೆಗೂ ದಾರಗಳನ್ನು ದಾಟುತ್ತದೆ. ಅಪ್ಪನಲ್ಲಿಗೆ ಓಡೋಡಿ ಹೋದಾಗ ತಾನು ಗೆದ್ದು ಬೀಗಿದೆನೆಂಬ ಮಗುವಿನ ಸಂತಸ ಶಬ್ದಗಳಲ್ಲಿ ಹೇಳಲು ಅಸಾಧ್ಯ.  ಆಗ ಅಪ್ಪನೂ ಮಗುವನ್ನು ಎತ್ತಿ ಮುದ್ದಾಡುತ್ತಾನೆ. ಬಹುಶಃ ಇದು ಸಣ್ಣ ವಿಡಿಯೋ ಎನ್ನಿಸಬಹುದು. ಆದರೆ ಇದರಲ್ಲಿ ಬದುಕಿನ ಅದೆಷ್ಟೋ ಸಾರಗಳು ಅಡಗಿವೆ. ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವ ಬದುಕಿನ ಪಾಠವೇ ಇಲ್ಲಿದೆ. ಅಪ್ಪ ಒಂದು ಕ್ಷಣಕ್ಕೆ ಕಲ್ಲು ಮನಸ್ಸು ಮಾಡಿದರೆ, ಮಗು ಅಳುತ್ತಿದ್ದರೂ ಅದರತ್ತ ನೋಡದೇ ಮುಂದೆ ಹೋದರೆ ಅದೇ ಕಲ್ಲು ಮನಸ್ಸೇ ಮುಂದೆ ಮಗುವಿನ ಹಾದಿ ಹೇಗೆ ಹೂವಾಗಿಸುತ್ತದೆ ಎನ್ನುವುದಕ್ಕೆ ಇದು ಚಿಕ್ಕ ಉದಾಹರಣೆಯಾಗಿದೆ. ಈ ಅಪ್ಪನ ಕಲ್ಲು ಮನಸ್ಸಿಗೆ ನಿವೇನು ಹೇಳುತ್ತೀರಿ? 

ನಿವೇದಿತಾ ಡಿವೋರ್ಸ್​ ಬೆನ್ನಲ್ಲೇ ಗಂಡನ ಹೊಗಳಿ ಅಮ್ಮನ ರೀಲ್ಸ್: ಚಂದನ್​ ಶೆಟ್ಟಿಗೆ ಟಾಂಗ್​ ಕೊಟ್ರಾ ಮಾಜಿ ಅತ್ತೆ?

 

 
 
 
 
 
 
 
 
 
 
 
 
 
 
 

A post shared by lingting (@lingting.china)

click me!