ಪ್ರೀತಿಸಿ ವರಿಸಿದ ಗಂಡನನ್ನೇ ಕೊಂದ ಅಪವಾದ, ಕಳೆದದ್ದು ಜೈಲಲ್ಲಿ: ಕೇಳಿ ಈಕೆಯ ಕಥೆ!

By Suvarna NewsFirst Published May 5, 2021, 12:44 PM IST
Highlights

ಅವಳು ಗಂಡನ ಕೊಲೆ ಮಾಡಲಿಲ್ಲ. ಆದರೆ ಜೈಲುಪಾಲಾದಳು. ಮಕ್ಕಳು ಆಕೆಯನ್ನೇ ದೂರ ಮಾಡಿದರು. ಆಕೆ ಈಗೇನ್ ಮಾಡ್ತಿದಾಳೆ?

ಗಂಡನನ್ನೂ ಕಳೆದುಕೊಂಡು, ತಾನು ಮಾಡದ ತಪ್ಪಿಗಾಗಿ ಜೈಲುವಾಸವನ್ನೂ ಅನುಭವಿಸಿದ ಈ ಮಹಿಳೆ ಈಗ ನೊಂದ ಮಹಿಳೆಯರ ಕಣ್ಣೀರು ಒರೆಸು ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಈ ದಿಟ್ಟ ಸ್ತ್ರೀಯ ಕತೆ ಕೇಳಿ.

ನಾನು ಮತ್ತು ಕುನಾಲ್ ಪ್ರೀತಿಸಿ ಮದುವೆಯಾದೆವು. ಆದರೆ ಇದಕ್ಕೆ ನಮ್ಮಿಬ್ಬರ ಮನೆಯಲ್ಲೂ ವಿರೋಧವಿತ್ತು. ನನ್ನದು ಕೆಳ ಮಧ್ಯಮ ವರ್ಗದ ಕುಟುಂಬ. ಅವರದು ಶ್ರೀಮಂತರ ಮನೆ. ನನ್ನ ಅತ್ತೆಗೆ ನಾವು ಮದುವೆ ಆಗುವುದು ಸ್ವಲ್ಪವೂ ಇಷ್ಟವಿರಲಿಲ್ಲ. ನಿಮ್ಮ ಮದುವೆ ಉಳಿಯೋಲ್ಲ ಅಂತ ಸದಾ ಹೇಳುತ್ತಾ ಇರುತ್ತಿದ್ದರು. ನಮ್ಮಿಬ್ಬರ ನಡುವೆ ಸದಾ ಜಗಳ ನಡೆಯುತ್ತಾ ಇತ್ತು. ನಮಗೆ ಇಬ್ಬರು ಮಕ್ಕಳೂ ಆದವು. ಆದರೂ ಅತ್ತೆ-ಸೊಸೆ ಕಲಹ ಮುಗಿಯಲಿಲ್ಲ. ಆದರೆ ನಾನು ಮತ್ತು ಕುನಾಲ್ ತುಂಬಾ ಪ್ರೀತಿಸುತ್ತಿದ್ದೆವು.

“Kunal and I got married against our family’s wishes; his family was affluent and I came from a middle class background....

Posted by Humans of Bombay on Saturday, May 1, 2021

೧೯೯೯ರಲ್ಲಿ ಬದುಕು ಇನ್ನೊಂದು ತಿರುವು ತೆಗೆದುಕೊಂಡಿತು. ಕುನಾಲ್ ತನ್ನ ಪಾರ್ಟ್‌ನರ್ ರಾಯ್ ಎಂಬವರ ಜೊತೆಗೆ ಸೇರಿ ನಾಲ್ಕೂವರೆ ಲಕ್ಷ ರೂಪಾಯಿ ಹಣ ಹಾಕಿ ಒಂದು ಲಿಕ್ಕರ್ ಶಾಪ್ ಆರಂಭಿಸಿದರು. ಆದರೆ ನಿಧಾನವಾಗಿ ಇವರ ನಡುವೆ ಭಿನ್ನಾಭಿಪ್ರಾಯ ತಲೆದೋರಿತು. ಜಗಳ ಶುರುವಾಯಿತು.



ಒಂದು ದಿನ ಕುನಾಲ್ ನಾಪತ್ತೆಯಾದರು. ಆ ವಾರ ನಾನು ಮನೆಯಲ್ಲಿ ಇರಲಿಲ್ಲ. ತಂದೆ ಅಸ್ವಸ್ಥರಾಗಿದ್ದರು ಅಂತ ಅವರನ್ನು ನೋಡಿಕೊಳ್ಳಲು ತವರುಮನೆಗೆ ಬಂದಿದ್ದೆ. ಅತ್ತೆ ಫೋನ್ ಮಾಡಿ, ಎರಡು ದಿನದಿಂದ ಕುನಾಲ್ ಮನೆಗೆ ಬಂದಿಲ್ಲ ಎಂದು ತಿಳಿಸಿದರು. ಗಾಬರಿಯಾಗಿ ನಾನು ಮನೆಗೆ ಧಾವಿಸಿ ಬಂದೆ. ಕುನಾಲ್‌ ಅವರ ಪಾರ್ಟ್‌ನರ್ ರಾಯ್ ಅವರನ್ನು ಸಂಪರ್ಕಿಸಿದೆ. ಆದರೆ ಫಲ ಸಿಗಲಿಲ್ಲ. ಒಂದು ವಾರ ನಂತರ ರಾಯ್ ನಮ್ಮ ಮನೆಗೆ ಬಂದು, ''ಕುನಾಲ್ ಹತ್ಯೆಯಾಗಿದ್ದಾರೆ'' ಎಂದು ತಿಳಿಸಿದರು.

ನಾನು ಕುಸಿದುಹೋದೆ. ಆಗಷ್ಟೇ ನಮ್ಮ ಇಬ್ಬರು ಗಂಡುಮಕ್ಕಳಿಗೆ ೫ ಮತ್ತು ೩ ವರ್ಷ. ನನ್ನ ಗಂಡನ ಶವ ಗುರುತಿಸಲು ನನ್ನನ್ನು ಕರೆಯಲಾಯಿತು. ಆದರೆ ಶವ ಕೊಳೆತುಹೋಗಿತ್ತು. ಸರಿಯಾಗಿ ಗುರುತಿಸಲಾಗಲಿಲ್ಲ. ಇದಾದ ನಂತರ ಘಟನೆಗಳು ನನ್ನ ಹಿಡಿತ ತಪ್ಪಿ ಹೋದವು. ಪೊಲೀಸರು ನಾನು ಗಂಡನ ಕೊಲೆಯ ಅಪರಾಧಿ ಎಂಬ ಕತೆ ಹೆಣೆದರು. ನಾನು ಮತ್ತು ರಾಯ್ ಸೇರಿ ಕುನಾಲ್‌ನನ್ನು ಮುಗಿಸಿದ್ದೇವೆಂದೂ, ನಮ್ಮಿಬ್ಬರ ನಡುವೆ ಅನೈತಿಕ ಸಂಬಂಧ ಇದೆಯೆಂದೂ ಕತೆ ಕಟ್ಟಿದರು. ಸರಿಯಾದ ತನಿಖೆ, ವಿಚಾರಣೆಯೇ ನಡೆಯಲಿಲ್ಲ. ನನ್ನನ್ನು ಜೈಲಿಗೆ ತಳ್ಳಲಾಯಿತು.

ನಾನು ಜಾಮೀನು ಪಡೆಯಲು ಯತ್ನಿಸಿದೆ. ಆದರೆ ನನ್ನ ಅತ್ತೆಯೇ ಅದಕ್ಕೆ ಅಡ್ಡಗಾಲು ಹಾಕಿದರು. ಸತ್ಯವನ್ನೇ ಹೇಳುವಂತೆ ಅತ್ತೆಯನ್ನು ಅಂಗಲಾಚಿದೆ. ಆದರೆ ಆಕೆ ಬಾಯಿ ಮುಚ್ಚಿ ಸುಮ್ಮನಿದ್ದರು. ನನಗೆ ಸರಿಯಾದ ಕಾನೂನು ನೆರವು ಸಿಗಲಿಲ್ಲ. ವಿಚಾರನೆ ನಡೆಯುತ್ತಲೇ ಇತ್ತು.



ಹೀಗೇ ನಾನು ಒಂದಲ್ಲ ಎರಡಲ್ಲ, ಹದಿಮೂರು ವರ್ಷಗಳನ್ನು ಜೈಲಿನಲ್ಲಿ ಕಳೆದೆ! ಸಣ್ಣದೊಂದು ಕೋಣೆಯಲ್ಲಿ ನಾವು 45 ಮಹಿಳಾ ಕೈದಿಗಳನ್ನು ಕೂಡಿಹಾಕಿದ್ದರು. ಸರಿಯಾದ ಆಹಾರ ಇರಲಿಲ್ಲ. ಜೈಲರ್‌ಗಳು ನಮ್ಮಿಂದ ಕಠಿಣ ಕೆಲಸ ಮಾಡಿಸಿಕೊಳ್ಳುತ್ತಿದ್ದರು, ಸುಮ್ಮಸುಮ್ಮನೇ ಹಿಡಿದು ಚಚ್ಚುತ್ತಿದ್ದರು.2005ರಲ್ಲಿ ನನ್ನ ತಂದೆ ತೀರಿಕೊಂಡರು. ಅವರ ಶವಸಂಸ್ಕಾರಕ್ಕೆ ಹೋಗಲೂ ನನಗೆ ಅವಕಾಶ ಕೊಡಲಿಲ್ಲ. ನನಗೆ ನಮ್ಮ ಮಕ್ಕಳನ್ನು ನೋಡಬೇಕೆಂದು ಆಸೆ ಆಗುತ್ತಿತ್ತು. ಆದರೆ ಅಷ್ಟೂ ವರ್ಷಗಳಲ್ಲಿ ಒಮ್ಮೆಯೂ ನನ್ನ ಮಕ್ಕಳ ಮುಖ ನೋಡಲು ನನ್ನ ಅತ್ತೆ- ಮಾವ ಆಸ್ಪದವೇ ಕೊಡಲಿಲ್ಲ..

ಕೊನೆಗೂ, 2013ರಲ್ಲಿ ನನಗೆ ಜಾಮೀನು ಸಿಕ್ಕಿತು. ನಂತರ ನನ್ನ ಮೇಲಿದ್ದ ಎಲ್ಲ ಕೇಸುಗಳು ಖುಲಾಸೆಯಾದವು. ನಾನು ದೋಷಮುಕ್ತಳಾದೆ. ರಿಲೀಸ್ ಆದ ಬಳಿಕ ನಾನು ಮಾಡಬೇಕೆಂದಿದ್ದ ತುಂಬಾ ಆಸೆಯಿಂದ ಮೊದಲ ಕೆಲಸ ಎಂದರೆ ನನ್ನ ಮಕ್ಕಳನ್ನು ಆಲಂಗಿಸಿಕೊಳ್ಳುವುದು. ಆದರೆ ಅದಕ್ಕೂ ಅತ್ತೆ ಬಿಡಲಿಲ್ಲ. ಎದೆ ಒಡೆದಂತಾಯಿತು. ಆದರೆ ನಾನು ಸೋಲಲಿಲ್ಲ. ಒಂದು ಎನ್‌ಜಿಒ ಸೇರಿಕೊಂಡೆ. ಅಲ್ಲಿ ಸಣ್ಣ ಮಕ್ಕಳಿಗೆ ಕಲಿಸತೊಡಗಿದೆ. ಅವರಲ್ಲೇ ನನ್ನ ಮಕ್ಕಳನ್ನು ಕಂಡೆ. ನನ್ನ ತಾಯಿಯ ಜೊತೆಗೆ ಜೀವಿಸತೊಡಗಿದೆ

ಮೂರಡಿಯ ಕುಳ್ಳಿಗೆ ಸಿಕ್ಕಿದ್ದು ಎಂಥ ವರ?

ಕೊನೆಗೆ ಯಾವತ್ತೋ ಒಂದು ದಿನ, ಹಲವಾರು ಪ್ರಯತ್ನಗಳ ಬಳಿಕ ನನ್ನ ಮಕ್ಕಳು ನನ್ನನ್ನು ಭೇಟಿಯಾದರು. ಅವರು ನನ್ನನ್ನು ಕೇಳಿದ ಒಂದೇ ಪ್ರಶ್ನೆ- ಅಪ್ಪನನ್ನು ಯಾಕೆ ಕೊಂದೆ? ನಾನು ನಿಜ ಏನೆಂಬುದನ್ನು ತಿಳಿಸುವ ಯತ್ನ ಮಾಡಿದೆ. ಆದರೆ ಅವರು ಕೇಳಿಸಿಕೊಳ್ಳಲಿಲ್ಲ. ಅಂದಿನ ಬಳಿಕ ನಾವು ಮಾತನಾಡಿಲ್ಲ.

ಇದಾದ ನಂತರ ನಾನು ಮಾನವ ಹಕ್ಕುಗಳ ಸಂಘಟನೆಯ ಜೊತೆಗೆ ಸೇರಿಕೊಂಡಿದ್ದೇನೆ. ನನ್ನ ಹಾಗೆಯೇ ನೊಂದು ಬೆಂದ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇನೆ. ಅವರಿಗೆ ನ್ಯಾಯ ಸಿಕ್ಕಿದಾಗ, ನನಗೇ ದೊರೆತಷ್ಟು ಸಂಭ್ರಮ ಆಗುತ್ತದೆ. ನನ್ನ ಹಾಗೇ ಜೈಲಿನಲ್ಲಿದ್ದ ಎಷ್ಟೋ ಅಮಾಯಕರನ್ನು ಮುಕ್ತಗೊಳಿಸಲಾಗಿದೆ. ಈಗ ನಾನು ಆ ಸಂಘಟನೆಯ ಅಸಿಸ್ಟೆಂಟ್‌ ಡೈರೆಕ್ಟರ್ ಆಗಿದ್ದೇನೆ.

ಆದರೂ, ಕುನಾಲ್‌ ಇದ್ದಿದ್ದರೆ ಎಂದು ನೆನಪಾದರೆ ದುಃಖ  ಉಕ್ಕಿ ಬರುತ್ತದೆ. ಆದರೆ ದೇವರು ನನ್ನನ್ನು ಈ ಕೆಲಸ ಮಾಡುವುದಕ್ಕಾಗಿಯೇ ಹೀಗೆಲ್ಲ ಮಾಡಿರಬೇಕು ಎಂದು ಅಂದುಕೊಂಡು ಮನಸ್ಸು ನಿರಾಳ ಮಾಡಿಕೊಳ್ಳುತ್ತೇನೆ.

ಕೃಪೆ: ಹ್ಯೂಮನ್ಸ್ ಆಫ್ ಬಾಂಬೇ, ಫೇಸ್‌ಬುಕ್



 

 

click me!