
ಮುಂಬೈ: ಕಾಲ ಏಕೆ ಇಷ್ಟು ಕೆಟ್ಟಿದೆ. ತಾನು ತನ್ನವರು ಎಂಬ ಮಮಕಾರವೇ ಇಲ್ಲದ ಜನರೇ ಎಲ್ಲೆಡೆ ಏಕೆ ಕಾಣ ಸಿಗುತ್ತಿದ್ದಾರೆ. ಇದು ಕಲಿಯುಗದ ಮಹಿಮೆಯೇ? ಹೀಗೆ ಪ್ರಶ್ನಿಸಲು ಕಾರಣವಿದೆ. ದಿನಗಳ ಹಿಂದಷ್ಟೇ ಹೆತ್ತ ತಾಯಿಯನ್ನು(Mother) ಮಗನೋರ್ವ ನಡುದಾರಿಯಲ್ಲಿ ಕೈ ಬಿಟ್ಟು ಹೋದ ಘಟನೆ ಮಂಡ್ಯದಲ್ಲಿ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಮುಂಬೈನಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ಕ್ಯಾನ್ಸರ್ ಪೀಡಿತ ಅಜ್ಜಿಯನ್ನು ಮೊಮ್ಮಗನೋರ್ವ ಅವರು ಜೀವಂತವಿರುವಾಗಲೇ ಕಸದ ರಾಶಿಯಲ್ಲಿ ಎಸೆದು ಬಂದಿದ್ದಾನೆ. ಕೇಳುಗರ ಕಣ್ಣಾಲಿಗಳನ್ನು ತೇವಗೊಳಿಸುವಂತಹ ಈ ಘಟನೆ ನಡೆದಿರುವುದು ವಾಣಿಜ್ಯ ನಗರಿ ಮುಂಬೈನಲ್ಲಿ.
ಕ್ಯಾನ್ಸರ್ಗೆ ಚಿಕಿತ್ಸೆ(Treatment for cancer) ನೀಡುವುದು ಇಂದಿನ ದಿನಗಳಲ್ಲಿ ಬಹಳ ದುಬಾರಿ. ಇದು ಸಾಮಾನ್ಯರಿಗೆ ಎಲ್ಲರಿಗೂ ಕೈಗೆಟುಕದ ವಸ್ತುವಾಗಿದೆ. ಆದರೆ ತಮ್ಮ ಕುಟುಂಬದಲ್ಲೇ ಯಾರೋ ಒಬ್ಬರಿಗೆ ಕ್ಯಾನ್ಸರ್ ಇರುವುದು ಗೊತ್ತಾದರೆ ಬಹುತೇಕರು ಕುಟುಂಬಗಳು(Indian Family) ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ಅವರನ್ನು ನೋಡಿಕೊಂಡು ಅವರಿಗೆ ತಮ್ಮ ಕೈಲಾದ ಚಿಕಿತ್ಸೆ ನೀಡುವ ಪ್ರಯತ್ನ ಮಾಡುತ್ತಾರೆ. ಚಿಕಿತ್ಸೆ ನೀಡಲಾಗದಿದ್ದರೂ ಕನಿಷ್ಟ ಅವರು ಇರುವಷ್ಟು ಕಾಲ ಅವರನ್ನು ಚೆನ್ನಾಗಿ ನೋಡಿಕೊಳ್ಳೋಣ ಎಂಬ ಆಶಯದೊಂದಿಗೆ ಕುಟುಂಬದವರು ಅವರ ಪ್ರೀತಿಪಾತ್ರರು ಇರುತ್ತಾರೆ. ಆದರೆ ಇಲ್ಲಿ ಕಂಡು ಬಂದ ದೃಶ್ಯ ಮಾತ್ರ ಎಂಥವರನ್ನು ಮನವನ್ನು ಒಂದು ಕ್ಷಣ ದಂಗಾಗಿಸುವಂತೆ ಮಾಡುತ್ತದೆ.
ಕ್ಯಾನ್ಸರ್ ಪೀಡಿತ ಅಜ್ಜಿಯನ್ನು ಕಸದ ರಾಶಿಯಲ್ಲಿ ಎಸೆದು ಹೋದ ಮೊಮ್ಮಗ
ತಾನು ಕ್ಯಾನ್ಸರ್ ಪೀಡಿತೆಯಾಗಿದ್ದು(Cancer victim), ತನ್ನ ಮೊಮ್ಮಗ ತನ್ನನ್ನು ಕಸದ ರಾಶಿಯಲ್ಲಿ ಎಸೆದು ಹೋಗಿದ್ದಾನೆ ಎಂದು 60 ವರ್ಷದ ಯಶೋಧಾ ಎಂಬುವವರು ಅಳಲು ತೋಡಿಕೊಂಡಿದ್ದಾರೆ. ಮುಂಬೈನ ಕಸದ ರಾಶಿಯಲ್ಲಿ ಬಿದ್ದಿದ್ದ ಅವರು ತಮ್ಮ ಮೊಮ್ಮಗ ತಮ್ಮನ್ನು ಇಲ್ಲಿ ಎಸೆದು ಹೋಗಿದ್ದಾನೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕಸದ ರಾಶಿಯಲ್ಲಿ ವೃದ್ಧೆಯನ್ನು ನೋಡಿದ ಪೊಲೀಸರು
ಶನಿವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು(Mumbai Police) ತನಿಖೆ ಆರಂಭಿಸಿದ್ದು, ಈ ವೃದ್ಧ ಮಹಿಳೆಯ ಸಂಬಂಧಿಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೆ ಕಾಲೋನಿಯ ಕಸದ ರಾಶಿಯಲ್ಲಿ ತುಂಬಾ ದಯನೀಯ ಸ್ಥಿತಿಯಲ್ಲಿದ್ದ 60 ವರ್ಷದ ಯಶೋದಾ ಗಾಯಕ್ವಾಡ್ ಎಂಬುವವರನ್ನು ಪೊಲೀಸರು ಗಮನಿಸಿದ್ದಾರೆ.
ವೃದ್ಧೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ ಆಸ್ಪತ್ರೆ
ತನಿಖೆಯ ವೇಳೆ ಈ ಮಹಿಳೆ ತನ್ನನ್ನು ತನ್ನ ಮೊಮ್ಮಗ ಇಲ್ಲಿ ತಂದು ಎಸೆದು ಹೋಗಿದ್ದಾನೆ ಎಂದು ಹೇಳಿದ್ದಾರೆ. ಈ ಮಹಿಳೆ ಬೆಳಿಗ್ಗೆ ಪತ್ತೆಯಾಗಿದ್ದರೂ, ಸಂಜೆ 5:30 ರ ಹೊತ್ತಿಗಷ್ಟೇ ಪೊಲೀಸರು ಆಕೆಯನ್ನು ಆಸ್ಪತ್ರೆಗೆ (Mumbai Hospitals)ದಾಖಲಿಸಲು ಸಾಧ್ಯವಾಗಿದೆ. ಅನೇಕ ಆಸ್ಪತ್ರೆಗಳು ಆಕೆಯ ಆರೋಗ್ಯ ಸ್ಥಿತಿಯನ್ನು ನೋಡಿ ದಾಖಲಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕಡೆಗೂ ಸಂಜೆಯ ವೇಳೆಗೆ ಆಕೆಯನ್ನು ಕೂಪರ್ ಆಸ್ಪತ್ರೆಗೆ ದಾಖಲಿಸಲಾಯಿತು.
ಚರ್ಮದ ಕ್ಯಾನ್ಸರ್ ನಿಂದ ಬಳಲುತ್ತಿರುವ ವೃದ್ಧೆ:
ಹೀಗೆ ಕಸದ ರಾಶಿಯಲ್ಲಿ ಸಿಕ್ಕ ವೃದ್ಧ ಮಹಿಳೆ ಚರ್ಮದ ಕ್ಯಾನ್ಸರ್ನಿಂದ (Skin Cancer) ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಅವರು ಈಗ ತನ್ನ ಕುಟುಂಬ ಸದಸ್ಯರ ಎರಡು ವಿಳಾಸಗಳನ್ನು ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಒಂದು ವಿಳಾಸ ಮುಂಬೈನ ಮಲಾಡ್ನಲ್ಲಿದೆ ಮತ್ತು ಇನ್ನೊಂದು ಕಾಂಡಿವಲಿಯಲ್ಲಿ ಇದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಮತ್ತು ಕುಟುಂಬದ ಕುರಿತು ಹೆಚ್ಚಿನ ವಿವರಗಳನ್ನು ಹುಡುಕುತ್ತಿದ್ದಾರೆ. ಆಕೆಯ ಸಂಬಂಧಿಕರನ್ನು ಪತ್ತೆಹಚ್ಚಲು ಆಕೆಯ ಚಿತ್ರವನ್ನು ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಹಂಚಿಕೊಳ್ಳಲಾಗಿದೆ.
ಅಜ್ಜಅಜ್ಜಿ ಎಂದರೆ ಮೊಮ್ಮಕ್ಕಳಿಗೆ ಅಪ್ಪ ಅಮ್ಮನಿಗಿಂತಲೂ ಹೆಚ್ಚು ಪ್ರೀತಿ ಇರುತ್ತದೆ. ಆದರೆ ಇಲ್ಲಿ ಮೊಮ್ಮಗ ಈ ರೀತಿಯ ಅಮಾನವೀಯ ಕೆಲಸವನ್ನು ಏಕೆ ಮಾಡಿದ್ದಾನೆ ಎಂಬುದಕ್ಕೆ ಕಾರಣ ಸ್ಪಷ್ಟವಾಗಿಲ್ಲ,. ಪೊಲೀಸರ ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.