
ಈತ ಹಳ್ಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಎಲ್ಲರೂ ಗೌರವ ಕೊಡುತ್ತಿದ್ದರು. ಅದರಲ್ಲಿಯೂ ಈತ ಸ್ಪುರದ್ರೂಪಿಯಾಗಿದ್ದು, ಆಸ್ತಿ-ಪಾಸ್ತಿಯೂ ಚೆನ್ನಾಗಿತ್ತು. ಹೀಗಾಗಿ, ಇಬ್ಬರು ಹೆಂಡತಿಯರನ್ನು ಮಾಡಿಕೊಂಡು 18 ಮಕ್ಕಳಿಗೆ ತಂದೆಯಾಗಿದ್ದನು. ಒಂದೂವರೆ ಡಜನ್ ಮಕ್ಕಳಿಗೆ ಅಪ್ಪನಾಗಿದ್ದಷ್ಟೇ ಅಲ್ಲದೆ, ಈತ ಗ್ರಾಮದ ಮುಖಂಡನೂ ಆಗಿದ್ದನು. ಆದರೆ, ಇದೀಗ ಇಬ್ಬರು ಹೆಂಡತಿಯರು ಸಾಕಾಗಿಲ್ಲವೆಂದು ಮೂರನೆಯವಳಾಗಿ ಪ್ರೇಯಸಿಯನ್ನೂ ಇಟ್ಟುಕೊಂಡಿದ್ದಾನೆ. ಇದೀಗ ಪ್ರೇಯಸಿಯಿಂದಲೇ ಕೊಲೆಯಾಗಿ, ಕಸದ ರಾಶಿಯಲ್ಲಿ ಮೂಟೆಯಲ್ಲಿ ಹೆಣವಾಗಿ ಪತ್ತೆಯಾಗಿದ್ದಾನೆ.
ಪ್ರತಾಪ್ಗಢ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಪ್ರತಾಪ್ಗಢ ಜಿಲ್ಲೆಯಲ್ಲಿ ಅತ್ಯಂತ ಆಘಾತಕಾರಿ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಬ್ಬರು ಪತ್ನಿಯರು ಹಾಗೂ 18 ಮಕ್ಕಳನ್ನು ಹೊಂದಿದ್ದ ಗ್ರಾಮ ಪಂಚಾಯಿತಿಯ ಮಾಜಿ ಮುಖಂಡನನ್ನು ಆತನ ಪ್ರೇಯಸಿಯೇ ತನ್ನ ಸಹಚರರೊಂದಿಗೆ ಸೇರಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಬ್ಲ್ಯಾಕ್ಮೇಲಿಂಗ್ ಮತ್ತು ಕಿರುಕುಳವೇ ಈ ಭೀಕರ ಕೊಲೆಗೆ ಮುಖ್ಯ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಕೊಲೆಯಾದ ವ್ಯಕ್ತಿಯನ್ನು ಮುಸ್ತಕಾ ಗುಲ್ಶನ್ ಅಲಿಯಾಸ್ ಮುನ್ನಾ (50) ಎಂದು ಗುರುತಿಸಲಾಗಿದೆ. ಈತ ಸ್ಥಳೀಯವಾಗಿ ಮಾಜಿ ಗ್ರಾಮ ಪ್ರಧಾನನಾಗಿ ಗುರುತಿಸಿಕೊಂಡಿದ್ದನು. ವಿಶೇಷವೆಂದರೆ ಮುನ್ನಾ ಸಂಸಾರ ಬಹಳ ದೊಡ್ಡದಾಗಿತ್ತು. ಇಬ್ಬರು ಪತ್ನಿಯರಾದ ಕಿಸ್ಮತುಲ್ ನಿಶಾ ಮತ್ತು ಅಂಬಿಯಾ ಬಾನೊ ಅವರೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಪ್ರತಿಯೊಬ್ಬ ಪತ್ನಿಯಿಂದ ತಲಾ ಒಂಬತ್ತರಂತೆ ಒಟ್ಟು 18 ಮಕ್ಕಳನ್ನು ಈತ ಹೊಂದಿದ್ದನು. ಹತ್ತು ವರ್ಷಗಳ ಅಂತರದಲ್ಲಿ ಇಬ್ಬರನ್ನೂ ಮದುವೆಯಾಗಿದ್ದ ಈತನಿಗೆ ಆರು ಜನ ಗಂಡು ಮಕ್ಕಳೂ ಸೇರಿ ದೊಡ್ಡ ಕುಟುಂಬವಿತ್ತು.
ಇಷ್ಟು ದೊಡ್ಡ ಕುಟುಂಬವಿದ್ದರೂ ಮುನ್ನಾ ಅವರಿಗೆ ಸುಮನ್ ಎಂಬ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿತ್ತು. ಕಳೆದ ಕೆಲವು ಸಮಯದಿಂದ ಸುಮನ್ ಮತ್ತು ಮುನ್ನಾ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಪೊಲೀಸರ ಪ್ರಕಾರ, ಮುನ್ನಾ ಪದೇ ಪದೇ ಸುಮನ್ ಅವರಿಗೆ ಕಿರುಕುಳ ನೀಡುತ್ತಿದ್ದನು ಮತ್ತು ತನ್ನನ್ನು ಭೇಟಿಯಾಗುವಂತೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದನು. ಇದರಿಂದ ರೋಸಿಹೋಗಿದ್ದ ಸುಮನ್, ಮುನ್ನಾ ಅನಿಷ್ಟವನ್ನು ತೊಡೆದುಹಾಕಲು ನಿರ್ಧರಿಸಿದ್ದಳು.
ಮಾರ್ಚ್ 18 ರಂದು ಸುಮನ್ ತನ್ನ ತವರು ಮನೆಗೆ ಬಂದಿದ್ದಾಗ, ಮುನ್ನಾ ಅಲ್ಲಿಗೂ ಅವಳನ್ನು ಭೇಟಿಯಾಗಲು ಹೋಗಿದ್ದನು. ಈ ವೇಳೆ ಇಬ್ಬರ ನಡುವೆ ಜೋರಾಗಿ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಸುಮನ್ ತನ್ನ ಸಹಚರರೊಂದಿಗೆ ಸೇರಿ ಮುನ್ನಾ ತಲೆಗೆ ಕಬ್ಬಿಣದ ಸಲಾಕೆಯಿಂದ ಬಲವಾಗಿ ಹೊಡೆದಿದ್ದಾಳೆ. ತೀವ್ರ ರಕ್ತಸ್ರಾವದಿಂದ ಮುನ್ನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಾಕ್ಷ್ಯ ನಾಶಪಡಿಸಲು ಆರೋಪಿಗಳು ಶವವನ್ನು ಗೋಣಿ ಚೀಲದಲ್ಲಿ ತುಂಬಿ ಹತ್ತಿರದ ಕಾಲುವೆಯ ಬಳಿ ಎಸೆದಿದ್ದರು.
ಮುನ್ನಾ ಮನೆಗೆ ಮರಳದಿದ್ದಾಗ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದರು. ಮುನ್ನಾ ಅವರ ಕಾಲ್ ರೆಕಾರ್ಡ್ಗಳನ್ನು ಪರಿಶೀಲಿಸಿದಾಗ ಕೊನೆಯದಾಗಿ ಸುಮನ್ ಜೊತೆ ಮಾತನಾಡಿದ್ದು ಪತ್ತೆಯಾಗಿತ್ತು. ಮಾರ್ಚ್ 21 ರಂದು ಸುಮನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವಳು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಅವಳು ನೀಡಿದ ಮಾಹಿತಿಯ ಮೇರೆಗೆ ಕಾಲುವೆ ಸಮೀಪ ಗೋಣಿ ಚೀಲದಲ್ಲಿದ್ದ ಕೊಳೆತ ಶವವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸದ್ಯ ಪ್ರಮುಖ ಆರೋಪಿ ಸುಮನ್ ಪೊಲೀಸರ ವಶದಲ್ಲಿದ್ದು, ಕೊಲೆಯಲ್ಲಿ ಭಾಗಿಯಾಗಿದ್ದ ಇತರ ಸಹಚರರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 18 ಮಕ್ಕಳನ್ನು ಅನಾಥರನ್ನಾಗಿ ಮಾಡಿದ ಈ ಅನೈತಿಕ ಸಂಬಂಧದ ಕಥೆ ಈಗ ಇಡೀ ಉತ್ತರ ಪ್ರದೇಶದಲ್ಲಿ ಚರ್ಚೆಗೆ ಕಾರಣವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.