
ಅನೈತಿಕ ಸಂಬಂಧದ ಘಮರು ದಿನೆ ದಿನೇ ಹೆಚ್ಚಾಗುತ್ತಿದೆ. ಅದರಲ್ಲಿಯೂ ಎಲ್ಲೆಡೆ ನಡೆಯುವ ಬಹುತೇಕ ಅಪರಾಧ ಕೃತ್ಯಗಳಿಗೆ ಇಂಥದ್ದೊಂದು ಅಕ್ರಮ ಸಂಬಂಧವೇ ಕಾರಣವೆನ್ನುವುದೂ ಸತ್ಯ. ಬಹುತೇಕ ಅಪರಾಧ ಪ್ರಕರಣಗಳ ಹಿನ್ನೆಲೆಯನ್ನು ಕೆದಕಿದರೆ ಅನೈತಿಕ ಸಂಬಂಧವೋ, ಅಕ್ರಮ ಸಂಬಂಧದ ಘಾಟು ಹೊಡೆಯುತ್ತದೆ.
ಈಗಾಗಲೇ ಹಲವು ವರ್ಷಗಳ ದಾಂಪತ್ಯ ಜೀವನದ ನಂತರ ಪತಿಗೆ ಹಂಡತಿಯ ಹಳೇ ಪ್ರೇಮದ ಬಗ್ಗೆ ಗೊತ್ತಾದರೆ, ಆಕೆಯೊಟ್ಟಿಗೇ ಮದ್ವೆ ಮಾಡಿಸಿ, ಹೃದಯ ವೈಶಾಲ್ಯತೆ ಮೆರೆಯುವ ಪ್ರಕರಣಗಳೂ ಹೆಚ್ಚಾಗುತ್ತಲೇ ಇವೆ. ಹೆಂಡತಿ ಖುಷಿಯಾಗಿರಲಿ ಅಂತ ಗಂಡ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳುತ್ತಾರೋ ಅಥವಾ ಕಾಟ ತಪ್ಪುತ್ತೆ ಅಂತ ಹೆಂಡತಿಯನ್ನು ಸಾಗ ಹಾಕಿಸಲು ಯತ್ನಿಸುತ್ತಾರೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗೋದು ಕಷ್ಟ. ಒಟ್ಟಿನಲ್ಲಿ ಈ ರೀತಿಯ ಘಟನೆಗಳು ಆಗಾಗ್ಗೆ ವರದಿಯಾಗುತ್ತಿರುತ್ತವೆ.
ಹೆಂಡತಿ ಹಳೇ ಪ್ರೀತಿಗೆ ಸಾಮಾಜಿಕ ಮುದ್ರೆ ಒತ್ತಿದ ಗಂಡನ ಮತ್ತೊಂದು ಸುದ್ದಿ ವೈರಲ್ ಆಗುತ್ತಿದೆ. ಆಗಿದ್ದಿಷ್ಟು. ಆಶಿಶ್ ತಿವಾರಿ ತನ್ನ ಪತ್ನಿ ಪಿಂಕಿಯನ್ನು ಆಕೆಯ ಪ್ರಿಯತಮ ಅಮಿತ್ ಶರ್ಮಾ ಜೊತೆ ನೋಡಬಾರದ ಸ್ಥಿತಿಯಲ್ಲಿ ನೋಡಿದ್ದ. ತಕ್ಷಣವೇ ತಿವಾರಿ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಅಮಿತ್ ಶರ್ಮಾನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲಿಯೇ ಪೊಲೀಸ್ ಠಾಣೆ ಮುಂದೆಯೇ ಗ್ರಾಮದ ಮುಖ್ಯಸ್ಥರೆಲ್ಲರೂ ಸೇರಿ ಪಂಚಾಯತಿಯನ್ನೂ ನಡೆಸಿದ್ದಾರೆ.
ಪಿಂಕಿಯ ಅನೈತಿಕ ಸಂಬಂಧವನ್ನು ಊರಿಗೇ ಊರೇ ಒಮ್ಮತದಿಂದ ವಿರೋಧಿಸಿದೆ. ಅಷ್ಟೇ ಅಲ್ಲ ಖುದ್ದು ಅಮಿತ್ ಶರ್ಮಾ ತಂದೆಯೂ ಈ ಸಂಬಂಧದ ವಿರುದ್ಧವೇ ಮಾತನಾಡಿದ್ದಾನೆ. ಎಲ್ಲ ಗೊಂದಲಕ್ಕೆ ತೆರೆ ಎಳೆಯುವಂತೆ ಪಿಂಕಿ ನೆರೆದ ಜನರ ಸಮ್ಮುಖದಲ್ಲಿಯೇ ನಂಗೆ ಇನ್ನು ಮುಂದೆ ಪತಿ ಆಶಿಶ್ ತಿವಾರಿ ಜೊತೆ ಬಾಳ್ವೆ ನಡೆಸಲು ಆಗುವುದಿಲ್ಲವೆಂದು ಹೇಳಿದ್ದಲ್ಲದೇ, ಪ್ರಿಯಕರ ಅಮಿತ್ ಶರ್ಮಾನೊಟ್ಟಿಗೆ ಉಳಿದ ಜೀವನವನ್ನು ಕಳೆಯುವುದಾಗಿ ಹೇಳಿ ಕೊಂಡಿದ್ದಾಳೆ. ಊರಿನ ಜನರ ಅವಳ ಮನಸ್ಸು ಬದಲಿಸಲು ಮಾಡಿದ ಪ್ರಯತ್ನ ವಿಫಲವಾಗಿದೆ. ಪಿಂಕಿ ತನ್ನ ನಿರ್ಧಾರದಲ್ಲಿ ದೃಢವಾಗಿದ್ದಳು.
ಅಷ್ಟೇ, ಪಿಂಕಿ ಪತಿ ಆಶಿಶ್ ಸಹ ನೆರೆದ ಜನರೆದುರು ನಂಗೂ ಮಡದಿಯ ಕಾಟ ತಡೆದು ಕೊಳ್ಳುವುದು ಕಷ್ಟ. ದಿನಾಲೂ ಆಗುವ ಜಗಳದಿಂದ ಬೇಸತ್ತಿದ್ದೇನೆ. ಪಂಚಾಯತಿ ಅನುಮತಿ ನೀಡಿದರೆ, ಮಡದಿಯನ್ನು ಅಮಿತ್ ಶರ್ಮಾ ಜೊತೆ ಮದುವೆ ಮಾಡಿಸಲು ಒಮ್ಮತವಿದೆ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲ ಅಲ್ಲಿಯೇ ನೆರೆದ ಜನರ ಸಮ್ಮುಖದಲ್ಲಿ ಪಿಂಕಿ ಸುಮಾರು ಹತ್ತು ವರ್ಷಗಳ ತನ್ನ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿ, ಅಲ್ಲಿಯೇ ಶರ್ಮಾನನ್ನು ವರಿಸಿದ್ದಾಳೆ ಸಹ. ಅಲ್ಲದೇ ಪಿಂಕಿ ಹಾಗೂ ಆಶಿಶ್ ಡಿವೋರ್ಸ್ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಅವಳದ್ದೇನೂ ಲೈಫ್ ಸೆಟಲ್ ಆಯಿತು. ಅವಳ ಇಚ್ಛೆಯಂತೆ. ಗಂಡನೂ ಒಪ್ಪಿದ್ದರಿಂದ ಸುಸೂತ್ರವಾಗಿ ತನ್ನ ದೀರ್ಘಕಾಲದ ಪ್ರಿಯಕರನೊಂದಿಗೆ ಮತ್ತೊಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಳು. ಆದರೆ, ಮಕ್ಕಳ ಕಥೆ? ತನ್ನಿಬ್ಬರು ಗಂಡು ಮಕ್ಕಳಿಗೆ ಜೊತೆಗೆ ಬರಲು ಹೇಳಿದ್ದಾಳೆ ಪಿಂಕಿ. ಆದರೆ, ಮಕ್ಕಳು ಒಲ್ಲೆ ಎಂದು ಹೇಳಿ, ತಂದೆಯೊಟ್ಟಿಗೆ ಇರುವುದಾಗಿ ಹೇಳಿ ಕೊಂಡಿದ್ದಾರೆ.
ಗ್ರಾಮಸ್ಥರ ಸಮ್ಮುಖದಲ್ಲಿ ಪಿಂಕಿಯ ಎರಡನೇ ಮದ್ವೆ ಊರಿನ ದೇವಸ್ಥಾನದಲ್ಲಿ ನೆರವೇರಿದೆ. ಅಮ್ಮನ ಜೊತೆ ಹೋಗಲು ಒಪ್ಪದ ಮಕ್ಕಳ ಸ್ಥಿತಿ ಮಾತ್ರ ಪಾಪ ಎನಿಸುವಂತಿತ್ತು. ಇಂಥ ಪ್ರಕರಣಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಕಮೆಂಟ್ ಮಾಡಿ. ಭಾರತದಲ್ಲಿ ಮದ್ವೆ ಎನ್ನೋದು ತನ್ನ ಮೌಲ್ಯ ಕಳೆದುಕೊಳ್ಳುತ್ತಿದ್ಯಾ? ಮನಸ್ಸಿಲ್ಲದ ಮನಸ್ಸಿನಿಂದ ಆಗುವ ಮದ್ವೆಗಳಿಂದಲೇ ದಿನೆ ದಿನೇ ಡಿವೋರ್ಸ್ ಪ್ರಕರಣಗಳು ಹೆಚ್ಚುತ್ತಿದ್ಯಾ ಎಂಬುದನ್ನು ಇಂಥ ಪ್ರಕರಣಗಳು ಯೋಚಿಸುವಂತೆ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.