ನಿಮ್ಮ ಮೇಲೆ ಸವಾರಿ ಮಾಡೋರನ್ನ ಸಹಿಸಿಕೊಳ್ಳಬೇಡಿ, ವಿಶ್ವಾಸ ಕುಂದದಿರಲಿ

By Contributor AsianetFirst Published Aug 18, 2022, 4:52 PM IST
Highlights

ಎಷ್ಟೋ ಬಾರಿ ಜನರು ನಿಮ್ಮ ಸಹಾಯ ಪಡೆದು, ನಿಮ್ಮನ್ನು ತುಳಿದು ಮುಂದೆ ಹೋಗಿರ್ತಾರೆ. ನಿಮ್ಮ ಸ್ವಭಾವ ಅರಿತು ನಿಮ್ಮ ಜೀವನದ ಜೊತೆ ಆಟವಾಡ್ತಾರೆ. ನೀವು ಲೆಕ್ಕಕ್ಕುಂಟು ಆಟಕ್ಕಿಲ್ಲ ಅಂತಾದ್ರೆ ಬದಲಾವಣೆ ಅನಿವಾರ್ಯ. 
 

 ನಮ್ಮ ಸ್ವಭಾವವೇ ಅನೇಕ ಬಾರಿ ನಮಗೆ ಮುಳುವಾಗಿರುತ್ತದೆ. ಅತಿಯಾದ ವಿನಯ, ಅತಿಯಾದ ಆರೈಕೆ, ಅತಿಯಾದ ಸಹನೆ, ಅತಿಯಾದ ಪ್ರೀತಿ ಇವೆಲ್ಲವೂ ನಮ್ಮ ಬಾಳನ್ನು ಹಾಳು ಮಾಡುವ ಜೊತೆಗೆ ಬರೀ ನೋವನ್ನು ನಮಗೆ ನೀಡ್ತಿರುತ್ತದೆ. ನಮ್ಮ ಆಪ್ತರನ್ನು ನಾವು ಮಿತಿಮೀರಿ ನಂಬಿರ್ತೇವೆ. ಅವರಿಗೆ ಬೇಕಾಗಿದ್ದೆಲ್ಲ ನೀಡ್ತಿರುತ್ತೇವೆ. ಆರಂಭದಲ್ಲಿ ನಿಮ್ಮನ್ನು ಕೇರ್ ಮಾಡುವ ಜನರು ನಿಧಾನವಾಗಿ ನಿಮ್ಮಿಂದ ದೂರವಾಗ್ತಿದ್ದಾರೆ ಎನ್ನಿಸಲು ನಿಮಗೆ ಶುರುವಾಗುತ್ತದೆ. ಅವರ ಜೀವನದಲ್ಲಿ ನಿಮ್ಮ ಮಹತ್ವ ಕಡಿಮೆಯಾಗಿರುತ್ತದೆ. ಬರೀ ಅವರ ಅಗತ್ಯತೆ ಪೂರೈಸಲು ಮಾತ್ರ ನಿಮ್ಮನ್ನು ಅವರು ಅವಲಂಬಿಸ್ತಾರೆ. ಈ ಸಂಬಂಧ ಕೇವಲ ಏಕಪಕ್ಷೀಯವಾಗಿರುತ್ತದೆ. ನಿಮ್ಮ ಜೀವನದಲ್ಲೂ ಹೀಗಾಗ್ತಿದೆ ಅಂದ್ರೆ ನೀವು ಬದಲಾಗುವ ಸಮಯ ಬಂದಿದೆ ಎಂದರ್ಥ. ನಿಮ್ಮ ಸ್ವಭಾವದಲ್ಲಿ ಕೆಲ ಬದಲಾವಣೆ ಮಾಡಿಕೊಂಡ್ರೆ ಅವರ ಜೀವನದಲ್ಲಿ ಮಸುಕಾಗಿದ್ದ ನಿಮ್ಮ ಫೋಟೋ ಮತ್ತೆ ಕಾಣಿಸಲು ಶುರುವಾಗುತ್ತದೆ. ನಿಮಗೆ ಸಿಗಬೇಕಾದ ಗೌರವ, ಮನ್ನಣೆ ಸಿಗುತ್ತದೆ. ಅದಕ್ಕೆ ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.

ಇತರ ವ್ಯಕ್ತಿಗೆ ನಿಮ್ಮ ವ್ಯಾಪ್ತಿ ತಿಳಿಸಿ : ನೀವು ಯಾವಾಗ್ಲೂ ಟೇಕನ್ ಫಾರ್ ಗ್ರಾಂಟೆಡ್ (Taken For Granted ) ಆಗ್ಬೇಡಿ. ನಿಮ್ಮ ಸಂಬಂಧದಲ್ಲಿ ಕೆಲ ಗೆರೆಯನ್ನು ಮೊದಲೇ ಎಳೆದಿರಿ. ಹಿಂದೆ ಆಗಿಲ್ಲ ಎನ್ನುವವರು ಈಗ್ಲೂ ಈ ಕೆಲಸ ಮಾಡಬಹುದು. ಗಡಿ ಮೀರಿ ತಪ್ಪು ಮಾಡಿದ್ರೆ ಅದನ್ನು ಸಹಿಸುವುದಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿ. ನಿಮ್ಮ ಭಾವನೆಗೆ ನೀವು ಧನಿಯಾಗಿ. ನಿಮ್ಮ ಸೌಮ್ಯ ಸ್ವಭಾವದ ಲಾಭ ಪಡೆಯಲು ಬೇರೆಯವರಿಗೆ ಬಿಡಬೇಡಿ.

ಬೆನ್ನು ನೋವಾ? ಯಾವುದ್ಯಾವುದೋ ಭಂಗಿ ಸೂಟ್ ಆಗೋಲ್ಲ

ಕೇಳದೆ ಯಾರಿಗೂ ಸಹಾಯ (Help) ಮಾಡ್ಬೇಡಿ : ಕೇಳದೆ ಸಹಾಯ ಮಾಡಿದ್ರೆ ನಿಮ್ಮ ಸಹಾಯಕ್ಕೆ ಬೆಲೆ ಸಿಗುವುದಿಲ್ಲ ಎಂಬುದು ನೆನಪಿರಲಿ. ನಿಮ್ಮ ಅಗತ್ಯವಿಲ್ಲ ಎಂದಾಗ್ಲೂ ನೀವು ಅವರ ನೆರವಿಗೆ ಹೋಗ್ಬೇಡಿ. ನಿಮ್ಮ ಬಳಿ ಸಹಾಯ ಕೇಳಿಕೊಂಡು ಬರುವವರೆಗೂ ಕಾಯುವುದು ಒಳ್ಳೆಯದು. ಎಲ್ಲರಿಗೂ ಸಹಾಯ ಮಾಡುವ ನಿಮ್ಮ ಸ್ವಭಾವ ನಿಮಗೆ ಹಾನಿಯಾಗುತ್ತದೆ. ನಿಮಗಿಂತ ಮುಂದೆ ಇನ್ನೊಬ್ಬರನ್ನು ನಿಲ್ಲಿಸುವ ನಿಮ್ಮ ಸ್ವಭಾವ ಕೂಡ ನಿಮ್ಮ ಭವಿಷ್ಯಕ್ಕೆ ಧಕ್ಕೆ ತರಬಹುದು.

ಎಲ್ಲರಿಗೂ ನಿಮ್ಮ ಖಾಸಗಿ ವಿಷ್ಯ ಹೇಳ್ಬೇಕಾಗಿಲ್ಲ : ಎಷ್ಟೇ ಆಪ್ತರಾಗಿರಲಿ ನಿಮ್ಮೆಲ್ಲ ವೈಯಕ್ತಿಕ ವಿಷ್ಯವನ್ನು ಅವರಿಗೆ ಹೇಳ್ಬೇಕಾಗಿಲ್ಲ. ನಿಮ್ಮಂತೆ ಅವರು ಒಳ್ಳೆಯವರು ಎನ್ನಲು ಸಾಧ್ಯವಿಲ್ಲ. ನಿಮ್ಮ ನೋವನ್ನು ಅವರು ದೌರ್ಬಲ್ಯವೆಂದು ಭಾವಿಸಬಹುದು. ಅದನ್ನು ಅವರ ಅನುಕೂಲಕ್ಕೆ ಬಳಕೆ ಮಾಡಿಕೊಳ್ಳಬಹುದು. 

ಎಲ್ಲರು ಹೇಳಿದ್ದನ್ನೆಲ್ಲ ಅನುಸರಿಸಬೇಕಾಗಿಲ್ಲ : ಅನೇಕರಿಗೆ ಈ ಸ್ವಭಾವವಿರುತ್ತದೆ. ಅವರು ಯಾವುದೇ ಕೆಲಸ ಮಾಡುವ ಮೊದಲು ನಾಲ್ಕೈದು ಮಂದಿಗೆ ಕೇಳ್ತಾರೆ. ಇಲ್ಲವೆ ನಾಲ್ಕೈದು ಮಂದಿ ಇವರು ಕೇಳದೆ ಸಲಹೆ ನೀಡಿದ್ರೂ ಅದನ್ನು ಪಾಲಿಸಲು ಮುಂದಾಗ್ತಾರೆ. ನೀವು ಎಲ್ಲರ ಮಾತನ್ನು ಆಲಿಸಿ ಕೊನೆಯಲ್ಲಿ ನಿಮ್ಮ ಮನಸ್ಸು ಹೇಳಿದಂತೆ ನಡೆದುಕೊಳ್ಳಿ. ನಿಮ್ಮನ್ನು ನೀವು ಗೌರವಿಸಿದ್ರೆ ಬೇರೆಯವರು ನಿಮ್ಮನ್ನು ಗೌರವಿಸ್ತಾರೆ ಎಂಬುದು ನೆನಪಿರಲಿ.

ಏನು ಮಾಡಬೇಕಾದರೂ, ನಿರ್ಧಾರ ತೆಗೆದುಕೊಳ್ಳಲು ನಿಮ್ಮವರ ಮೇಲೆ ಅವಲಂಬಿಸಿದ್ದೀರಾ?

ಎಲ್ಲ ಸಹಾಯಕ್ಕೂ ಸಿದ್ಧ ಎನ್ಬೇಡಿ : ನಿಮ್ಮ ಈ ಸಹಾಯದ ಗುಣ ನಿಮಗೆ ಮುಳುವಾಗುತ್ತದೆ. ಎಲ್ಲ ಸಂದರ್ಭದಲ್ಲೂ ಎಲ್ಲರ ಸಹಾಯಕ್ಕೂ ಹೋಗ್ಬೇಡಿ. ಇದು ನಿಮ್ಮ ಪ್ರಾಮುಖ್ಯೆಯನ್ನು ಕಡಿಮೆ ಮಾಡುತ್ತದೆ. ಅವರ ಎಲ್ಲ ಕೆಲಸಕ್ಕೆ ನೀವು ತಲೆಯಾಡಿಸಿದ್ರೆ ಅವರು ನಿಮ್ಮನ್ನು ಲಘುವಾಗಿ ತೆಗೆದುಕೊಳ್ತಾರೆ. ಹೇಳಿದ ತಕ್ಷಣ ಅವರ ಮನೆ ಬಾಗಿಲಿಗೆ ಹೋಗಿ ಸೇವನೆ ಸಿದ್ಧರಾಗುವ ಬದಲು ಕೆಲವೊಂದನ್ನು ನಿರಾಕರಿಸಲು ಕಲಿಯಿರಿ.

ಮಾತು ಮುಖ್ಯ : ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ ಮತ್ತು ನಿಮ್ಮ ದೃಷ್ಟಿಕೋನವನ್ನು ಜನರಿಗೆ  ವ್ಯಕ್ತಪಡಿಸಿ. ಮಾತನಾಡುವುದು ಮುಖ್ಯ ಹಾಗಂತ ಎಲ್ಲರ ಜೊತೆ ಭಾವನಾತ್ಮಕವಾಗಿ ಬೆರೆಯಬೇಡಿ.  
 

click me!