ಬ್ರೇಕ್‌ಅಪ್‌ನಲ್ಲಿ ಹುಟ್ಟಿದ ವೈರಾಗ್ಯ ಎಲ್ಲೀತನಕ..

By Kannadaprabha NewsFirst Published Mar 2, 2020, 3:46 PM IST
Highlights

‘ಪ್ರೀತಿ, ಪ್ರೇಮ ಎಲ್ಲ ಕ್ಷಣಿಕ, ಇದರಲ್ಲಿ ಖುಷಿಗಿಂತ ಹೆಚ್ಚು ದುಃಖವೇ ಇದೆ..’

ಉತ್ತರ ಕರ್ನಾಟಕದ ಒಬ್ಬ ಸೂಫಿ ಸಂತರ ಬಳಿ ಒಬ್ಬ ಯುವಕ ತಲೆ ಬಗ್ಗಿಸಿ ಮಾತನಾಡುತ್ತಿದ್ದ. ದುಃಖ, ನೋವು, ಅವಮಾನದಿಂದ ಬೆಂದವನ ಬಳಲಿಕೆ ಅವನ ಮುಖದಲ್ಲಿತ್ತು. ಅವನು ತಾನೂ ಆ ಸಂತರ ಜೊತೆಗೆ ಇರುತ್ತೇನೆ. ಸಂಸಾರಿಯಾಗಲ್ಲ. ಸಂನ್ಯಾಸಿ ಆಗುತ್ತೇನೆ ಎಂದು ಬಂದಿದ್ದ. ಅವನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಹುಡುಗಿ ಪ್ರೀತಿ, ಪ್ರೇಮವನ್ನೆಲ್ಲ ತಿರಸ್ಕರಿಸಿ ಉಜ್ವಲ ಭವಿಷ್ಯಕ್ಕಾಗಿ ವಿದೇಶಕ್ಕೆ ಹೊರಟು ನಿಂತಿದ್ದಳು. ಅವನು ಅತ್ತು, ಕರೆದು ಕೇಳಿದರೂ ಅವಳ ನಿರ್ಧಾರ ಅಚಲವಾಗಿತ್ತು. ಹುಡುಗ ಅವಳನ್ನು ಹಿಂಬಾಲಿಸಿದ, ಮನೆಯವರೆಗೂ ಬಂದ. ಅವಳ ಅಪ್ಪ ಅಮ್ಮನ ಜೊತೆಗೆ ಮಾತನಾಡಿದ. ಊಹೂಂ, ಹುಡುಗಿ ಅವಳ ನಿರ್ಧಾರ ಬದಲಾಗಲಿಲ್ಲ.

ದಾಂಪತ್ಯ ಸೂಪರ್‌ ಆಗಿರಬೇಕಂದ್ರೆ ಫರ್ಸ್ಟ್‌ ಈ ಅಭ್ಯಾಸ ರೂಢಿಸಿಕೊಳ್ಳಿ!

ಒಂದು ಹಂತದ ನೋವಿನ ಬಳಿಕ ಅವನಿಗೆ ಈ ಪ್ರೀತಿ, ಪ್ರೇಮ ಎಲ್ಲ ಬರೀ ಹುಚ್ಚಾಟ ಅಂತ ಅನಿಸಿತು. ವೈರಾಗ್ಯದಲ್ಲಿ ಸುಖವಿದೆ ಎಂದುಕೊಂಡ. ಆಧ್ಯಾತ್ಮದ ಪುಸ್ತಕಗಳನ್ನ ಹೆಚ್ಚೆಚ್ಚು ಓದಲಾರಂಭಿಸಿದ. ಅವನಿಗೆ ಅದರಿಂದ ಒಂದು ಬಗೆಯ ಸಮಾಧಾನ ಸಿಕ್ಕಿತು. ಇಹದ ಈ ನೋವಿಗೆಲ್ಲ ಪರದಲ್ಲಿ ಉತ್ತರ ಇದೆ ಅಂದುಕೊಂಡ. ಗುರುಗಳನ್ನು ಹುಡುಕುತ್ತ ಆತ ಬಂದಿದ್ದು ಉತ್ತರ ಕರ್ನಾಟಕದ ಒಂದು ಗುಡ್ಡದ ಮೇಲೆ ಗವಿಯೊಂದರ ಪಕ್ಕ ವಾಸಿಸುತ್ತಿದ್ದ ಸೂಫಿ ಸಂತರ ಬಳಿ. ಅವರು ಅವನ ಕಥೆಯನ್ನೆಲ್ಲ ವಿವರವಾಗಿ ಕೇಳಿದರು. ಅದನ್ನು ಹೇಳುವಾಗ ಮತ್ತೆ ಮತ್ತೆ ಅಳುತ್ತಿದ್ದ.

‘ಮಗೂ, ನಾನೀಗ ಆ ಹುಡುಗಿ ಮತ್ತೆ ನಿನ್ನ ಕಡೆ ಬರುವ ಹಾಗೆ ಮಾಡಲೇನು?’ ಆ ಸಂತರು ಶಾಂತವಾಗಿ ಕೇಳಿದರು.

ತಲೆ ತಗ್ಗಿಸಿ ಕೂತಿದ್ದ ಹುಡುಗ ಈಗ ತಲೆ ಎತ್ತಿದ. ಅವನ ಕಣ್ಣಲ್ಲಿ ಸಣ್ಣ ಆಸೆಯ ಕಿಡಿಯೊಂದು ಮೂಡಿ ಮರೆಯಾಯಿತು.

‘ನಿಜವಾಗಲೂ?’ ಅಂದ.

ಗುರುಗಳು ಕಿಲಾಡಿ ನಗೆ ನಕ್ಕರು - ‘ಈಗೆಲ್ಲಿ ಹೋಯ್ತು ಮಾರಾಯ ನಿನ್ನ ವೈರಾಗ್ಯ?’ ಅಂದರು.

ತಗೋಳಪ್ಪಾ! ಇದೆಲ್ಲಾ ಪ್ರಿ-ವೆಡ್ಡಿಂಗ್‌ ಫೋಟೋಶೂಟ್‌ ಅಂತೆ; ನೀವೇನಾದ್ರೂ ಟ್ರೈ ಮಾಡಿದ್ದೀರಾ?

ನಮ್ಮದೆಲ್ಲ ಇಂಥಾ ಅಭಾವದ ವೈರಾಗ್ಯ ತಾನೇ. ಬ್ರೇಕ್‌ಅಪ್‌ ಮಾಡಿಕೊಂಡ ಅನೇಕ ಹುಡುಗರು ಆಧ್ಯಾತ್ಮ ಸಾಧಕರಿರುವ ಜಾಗದಲ್ಲಿ ಕಾಣ ಸಿಗುತ್ತಾರೆ. ಅವರಲ್ಲಿ ನಿಜವಾದ ಆಧ್ಯಾತ್ಮದ ಕುರಿತ ತಹತಹಿ ಇದೆ ಎನ್ನಲಾಗದು. ಅವರಿಗೆ ಆಧ್ಯಾತ್ಮ ಅನ್ನುವುದೊಂದು ಸದ್ಯದ ದುಃಖದಿಂದ ಪಾರಾಗುವ ಪಲಾಯನ. ಇವರು ಸ್ವಲ್ಪಮಟ್ಟಿನ ಸಾಧನೆ ಮಾಡೋದೂ ಇದೆ. ಅರೆಬರೆ ಕಲಿತು ಹಳೆಯ ಪ್ರೇಮಿಗಳ ಮೇಲೆ ದ್ವೇಷ ಸಾಧಿಸಿದವರೂ ಇದ್ದಾರೆ.

ಆ ಸೂಫಿ ಸಂತರು ಹೇಳುವ ಪ್ರಕಾರ ಬ್ರೇಕ್‌ ಅಪ್‌ ಮಾಡ್ಕೊಂಡು ವೈರಾಗ್ಯ ಮೂಡಿಸಿಕೊಂಡು ಬರುವವರು ಸ್ವಲ್ಪ ದಿನದಲ್ಲೇ ವಾಪಾಸ್‌ ಹೋಗ್ತಾರೆ. ಸಂಕಟದ ಸಮಯದಲ್ಲಿ ಹುಟ್ಟುವ ವೈರಾಗ್ಯ ಕ್ಷಣಿಕ. ನಿಜವಾದ ಆಧ್ಯಾತ್ಮದ ಆಸಕ್ತಿಗೆ ಸಂಕಟ ಬರುವವರೆಗೆ ಕಾಯಬೇಕಾಗಿಲ್ಲ.

click me!