ಸಂಭ್ರಮದ ಊಟೆಯಾಗಬೇಕಿತ್ತು ಆ ದಿನ, ಆದರೆ..

By Kannadaprabha NewsFirst Published Nov 27, 2019, 4:17 PM IST
Highlights

ಪ್ರತಿಯೊಂದು ಹೆಣ್ಣಿಗೂ ತಾಯ್ತನ ಪ್ರಕೃತಿ ಕೊಟ್ಟಿರುವ ಗಿಫ್ಟ್. ಮಗುವಿಗೆ ಜನ್ಮ ನೀಡುವುದು ಎಂದರೆ ಇನ್ನೊಂದು ಜನ್ಮ ತಾಳಿದಂತೆ. ಮಗುವಿಗೆ ಜನ್ಮ ಕೊಡುವಾಗ ಆಕೆ ಅನುಭವಿಸುವ ನೋವು ಅಷ್ಟಿಷ್ಟಲ್ಲ. 

ಇವತ್ತು ನನ್ನ ಬದುಕಿನ ಅತ್ಯಂತ ನೋವಿನ ದಿನ. ನಾನೊಬ್ಬ ಪ್ರಸೂತಿ ತಜ್ಞ. ಈವರೆಗೆ ಹಲವು ಹೆರಿಗೆ ಮಾಡಿಸಿದ್ದೇನೆ. ಪ್ರತೀ ಸಲ ಲೇಬರ್‌ ರೂಮ್‌ಗೆ ಅಡಿಯಿಡುವ ಮೊದಲು ಮನಸ್ಸಲ್ಲೇ ದೇವರಿಗೆ ಪ್ರಾರ್ಥಿಸುತ್ತೇನೆ, ಭಗವಂತಾ ಅವಳನ್ನು ರಕ್ಷಿಸು, ಅವಳ ಮೇಲೆ ನಿನ್ನ ಕರುಣೆ ಇರಲಿ ಅಂತ. ಏಕೆಂದರೆ ಹೆರಿಗೆ ನೋವು ಹೇಗಿರುತ್ತೆ ಅನ್ನೋದನ್ನು ಗಂಡಸರು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಒಂಭತ್ತು ತಿಂಗಳು ಗರ್ಭವನ್ನು ಹೊರುವುದು ಒಂದು ಬಗೆ, ಮಗು ಅವಳೊಳಗಿಂದ ಹೊರ ಬರುವುದು ಇನ್ನೊಂದು. ಅದು ಅಕ್ಷರಶಃ ಮತ್ತೊಂದು ಜನ್ಮವೇ.

PCOD ಸಮಸ್ಯೆ ಇದ್ರೆ ಮಕ್ಕಳಾಗಲ್ವಾ?

ಇವತ್ತು ನಾನೆಷ್ಟುತಡೆದರೂ ಅಪ್ರಯತ್ನಪೂರ್ವಕವಾಗಿ ಕಣ್ಣೀರು ಹರಿಯುತ್ತಲೇ ಇದೆ. ಇವತ್ತು ಒಬ್ಬ ಹೆಣ್ಮಗಳನ್ನು ಕಳೆದುಕೊಂಡೆವು. ಅವಳಿಗಾದ ಅನ್ಯಾಯದ ಬಗ್ಗೆ ನಾವು ದೇವರಲ್ಲಿ ವಾದ ಮಾಡಲು ಸಾಧ್ಯವಿಲ್ಲ. ಆದರೆ ಯಾಕೆ ದೇವ್ರೆ, ಈ ಹೆಣ್ಮಗಳಿಗೆ ಇಂಥಾ ಪರಿಸ್ಥಿತಿ ತಂದಿತ್ತೆ ಅಂತ ಕೇಳಲೇಬೇಕೆನಿಸುತ್ತದೆ.

ತಾನೊಂದು ಮಗುವಿಗೆ ಜನ್ಮ ನೀಡಬೇಕು ಅಂತ ಈ ಹೆಣ್ಮಗಳು ಕಳೆದ 14 ವರ್ಷಗಳಿಂದ ಹೋರಾಡುತ್ತಿದ್ದಳು. ನಾವು ಅವಳಿಗೆ ಗರ್ಭ ಧರಿಸಲು ಸತತ ಚಿಕಿತ್ಸೆ ನೀಡುತ್ತಾ ಬಂದೆವು. ಕೊನೆಗೆ ಕೃತಕವಾಗಿ ಅವಳ ಅಂಡದೊಂದಿಗೆ ವೀರ‍್ಯ ಫಲಿತಗೊಳಿಸಿ ಗರ್ಭದೊಳಗೆ ಸೇರಿಸಿದೆವು. ಅವಳ ಗರ್ಭ ಚೀಲ ತುಂಬಿಕೊಂಡು ಭ್ರೂಣದ ಬೆಳವಣಿಗೆ ತೃಪ್ತಿಕರವಾಗಿಯೇ ಆಗುತ್ತಿದೆ. ಅವಳ ಗರ್ಭದಲ್ಲಾದ ದೊಡ್ಡ ಟ್ಯೂಮರ್‌ಅನ್ನೂ ಕರಗಿಸುವಲ್ಲಿ ಯಶಸ್ವಿಯಾದೆವು.

ಕೊನೆಗೂ ಆ ಘಳಿಗೆ ಬಂತು. ಧಾವಿಸಿ ಬಂದ ಅವಳ ಗಂಡ ಅವಳಿಗೆ ಹೆರಿಗೆ ನೋವು ಬಂದಿರೋದನ್ನು ತಿಳಿಸಿದ. ನನ್ನ ಉಳಿದೆಲ್ಲ ಕೆಲಸ ಬಿಟ್ಟು ಲೇಬರ್‌ ವಾರ್ಡ್‌ಗೆ ಧಾವಿಸಿದೆ. ಸತತ ಏಳು ಗಂಟೆಗಳ ಕಾಲ ಅವಳ ಜೊತೆಗಿದ್ದೆ. ಹೊಕ್ಕುಳ ಬಳ್ಳಿ ಕತ್ತರಿಸಿಕೊಂಡು ಬಂದ ಕಂದನನ್ನು ಅವಳು ತನ್ನ ನಡುಗುವ ಕೈಗಳಿಂದ ಎತ್ತಿಕೊಂಡಳು. ಸಣ್ಣ ಮುಗುಳ್ನಗೆ ಮುಖದಲ್ಲಾಡಿತು, ಅಷ್ಟೇ..

ಮಗು ಉಳಿಯಿತು, ಅಮ್ಮ ಗತಿಸಿದಳು. ಅವಳ ನಿಧನ ವಾರ್ತೆ ಕೇಳಿ ಗಂಡ ಕುಸಿದುಬಿದ್ದ. ಒಂದು ಸಂಭ್ರಮದ ಊಟೆ ದುರಂತ ಮೂಟೆಯಾಗಿ ಬದಲಾಯ್ತು.

ಕಚೇರಿಯ ಕೆಟ್ಟ ಪರಿಸರದಿಂದ ಕೆಟ್ಟವರಾಗುವ ತಾಯಂದಿರು!

.. ದಯವಿಟ್ಟು ನಿಮ್ಮ ಅಮ್ಮನನ್ನು ಗೌರವಿಸಿ. ಏಕೆಂದರೆ ನಿಮ್ಮ ಹುಟ್ಟಿಗಾಗಿ ಅವಳು ಸತ್ತಿರುತ್ತಾಳೆ. ಕೆಲವೊಮ್ಮೆ ಮತ್ತೆ ಜೀವ ತಳೆಯುತ್ತಾಳೆ. ಕೆಲವೊಮ್ಮೆ ಅಲ್ಲೇ ಕಣ್ಮುಚ್ಚುತ್ತಾಳೆ!

click me!