ತೆರಿಗೆ ವಂಚನೆ ಕೇಸ್: ಎ.ಆರ್​. ರೆಹಮಾನ್‌ಗೆ- ಹೈಕೋರ್ಟ್​ನಿಂದ ಬಿಗ್​ ಶಾಕ್​!

By Suvarna NewsFirst Published Feb 4, 2023, 10:01 AM IST
Highlights

ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ ಖ್ಯಾತಿ ಸಂಗೀತ ಸಂಯೋಜಕ ಎ.ಆರ್​.ರೆಹಮಾನ್​ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್​ ವಜಾ ಮಾಡಿದೆ.  ಏನಿದು ಪ್ರಕರಣ?
 

ಸಂಗೀತ ಸಂಯೋಜಕ, ಧ್ವನಿಸುರಳಿ-ಧ್ವನಿಮುದ್ರಣ ನಿರ್ಮಾಪಕ, ಸಂಗೀತಗಾರ ಹಾಗೂ ತಮ್ಮ ಸುಮಧುರ ಸ್ವರಮಾಧುರ್ಯದಿಂದ ಸಂಗೀತ ರಸಿಕರನ್ನು ಮರುಳು ಮಾಡು ಎ.ಆರ್​.ರೆಹಮಾನ್​ (A.R.Rehaman) ಹೆಸರು ಯಾರಿಗೆ ತಾನೇ ಗೊತ್ತಿಲ್ಲ? ಆರು ರಾಷ್ಟ್ರ ಪ್ರಶಸ್ತಿ, ಎರಡು ಅಕಾಡೆಮಿ ಮತ್ತು ಎರಡು ಗ್ರ್ಯಾಮಿ ಪ್ರಶಸ್ತಿ, 15 ಫಿಲ್ಮಪೇರ್ ಪ್ರಶಸ್ತಿ, ಭಾರತ ಸರ್ಕಾರದಿಂದ ಪದ್ಮಭೂಷಣ (Padmabhooshana) ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗೆ ಭಾಜನರಾಗಿರುವ,  ಭಾರತೀಯ ಚಿತ್ರರಂಗದ ಹಾಡುಗಳಿಗೆ ಅಂತರಾಷ್ಟ್ರೀಯ ಮನ್ನಣೆ ತಂದು ಕೊಟ್ಟ ಸಂಗೀತ ನಿರ್ದೇಶಕ ರೆಹಮಾನ್​ ಅವರಿಗೆ ಈಗ ದೊಡ್ಡದೊಂದು ಶಾಕ್​ ಒಂದನ್ನು ಮದ್ರಾಸ್​ ಹೈಕೋರ್ಟ್​ ನೀಡಿದೆ. ಜಿಎಸ್​ಟಿ ವಿರುದ್ಧ ಇವರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್​ ವಜಾ ಮಾಡಿದೆ. 

 ಸಂಗೀತ ಮಾಂತ್ರಿಕ ಎ.ಆರ್​.ರೆಹಮಾನ್​ ಸೇರಿದಂತೆ ಸಂಗೀತ ಸಂಯೋಜಕರಾಗಿರುವ  ಜಿ.ವಿ ಪ್ರಕಾಶ್​ ಕುಮಾರ್ ಮತ್ತು ಸಿಆರ್​​ ಸಂತೋಷ್​ ನಾರಾಯಣನ್​​ ಎನ್ನುವವರು  ಅರ್ಜಿಯೊಂದನ್ನು  ಮದ್ರಾಸ್​ ಹೈಕೋರ್ಟ್​ಗೆ ಸಲ್ಲಿಸಿದ್ದರು. ಇದಕ್ಕೆ ಕಾರಣ,  2013 ರಿಂದ 2017ರವರೆಗೆ ಇವರೆಲ್ಲರೂ  ಜಿಎಸ್​ಟಿ ತೆರಿಗೆ ಪಾವತಿ ಮಾಡಿಲ್ಲ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಎಸ್​ಟಿ ಆಯುಕ್ತರು ಎಲ್ಲರಿಗೂ ನೋಟಿಸ್​ ಜಾರಿ ಮಾಡಿದ್ದರು. ಈ ನೋಟಿಸ್​ ಅನ್ನು ರೆಹಮಾನ್​ ಸೇರಿದಂತೆ ಎಲ್ಲರೂ ಹೈಕೋರ್ಟ್​ನಲ್ಲಿ (Madras High Court) ಪ್ರಶ್ನಿಸಿದ್ದರು. ಇವರ ಅರ್ಜಿಯು ಈಗ ವಜಾಗೊಂಡಿದೆ.

Rakhi Sawant: ಸತ್ಯ ಮುಚ್ಚಿಟ್ಟು ನಾನು ಫ್ರಿಡ್ಜ್​ ಒಳಗೆ ಹೋಗಲ್ಲ ಅಂತ ಗೋಳೋ ಎಂದ ರಾಖಿ ಸಾವಂತ್​ಗೆ ಆಗಿದ್ದಾದ್ರೂ ಏನು?

ಇವರ ಮೇಲಿರುವ ದೊಡ್ಡ ಆರೋಪ ಏನೆಂದರೆ, ಎ.ಆರ್​ ರೆಹಮಾನ್​ ಅವರು 2013ರಿಂದ 2017ರವರೆಗೆ ತಮ್ಮ ಸಂಗೀತ ಕಾರ್ಯಕ್ಕೆ ಮೂರು ಕಂಪೆನಿಗಳೊಂದಿಗೆ ಸಹಿ ಹಾಕಿದ್ದು, ಈ ಸಂಬಂಧ ಸೇವಾ ತೆರಿಗೆಯನ್ನು ಪಾವತಿಸಿಲ್ಲ ಎನ್ನುವುದು. ಈ ಹಿನ್ನೆಲೆಯಲ್ಲಿ ತೆರಿಗೆ ವಂಚನೆ ಮಾಡಿರುವ ಪುರಾವೆಗಳ ಆಧಾರದ ಮೇಲೆ ಇವರಿಗೆ ನೋಟಿಸ್​ ಜಾರಿ ಮಾಡಲಾಗಿತ್ತು. ಇದರಲ್ಲಿ ನಿಮಗೆ ಮಾನಹಾನಿ ಮಾಡುವ ಯಾವುದೇ ಉದ್ದೇಶವೂ ಇಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಕೂಡಲೇ ಜಿಎಸ್​ಟಿ ಕಟ್ಟುವಂತೆ ಅದರಲ್ಲಿ ಸೂಚನೆ ನೀಡಲಾಗಿತ್ತು. ಆದರೆ ಜಿಎಸ್​ಟಿ ಕಟ್ಟಲು ನಿರಾಕರಿಸಿದ್ದ ರೆಹಮಾನ್​ ಮತ್ತು ಇತರರು ಈ ನೋಟಿಸ್​ (Notice) ಅನ್ನು ಎಲ್ಲರೂ ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡಿದ್ದರು. 

 ಜಿಎಸ್​ಟಿ ಆಯುಕ್ತರು ಮತ್ತು ಕೇಂದ್ರ ಅಬಕಾರಿ ಅಧಿಕಾರಿಗಳು ತಮ್ಮ ವಿರುದ್ಧ ತಪ್ಪಾಗಿ ವಿಚಾರಣೆ ಆರಂಭಿಸಿದ್ದಾರೆ. ತಮ್ಮ ಸಂಗೀತ ಕಾರ್ಯದ ಹಕ್ಕು ಸ್ವಾಮ್ಯ ಹೊಂದಿರುವ ಏಕೈಕ ಮಾಲೀಕರು ತಾವೇ ಆಗಿರುವ ಹಿನ್ನೆಲೆಯಲ್ಲಿ ತಮ್ಮ ಈ ಹಕ್ಕುಸ್ವಾಮ್ಯದ ವರ್ಗಾವಣೆ ಸೇವಾ ತೆರಿಗೆ ಹೊಣೆಗಾರರು ಎಂದು ಪರಿಗಣಿಸಲಾಗುವುದಿಲ್ಲ ಎಂದು ರೆಹಮಾನ್​ ಕೋರ್ಟ್​ನಲ್ಲಿ ವಾದಿಸಿದ್ದರು. ಆದರೆ ಇದಕ್ಕೆ ಪ್ರತಿವಾದಿಸಿದ್ದ ಜಿಎಸ್​ಟಿ (GST) ಆಯುಕ್ತರ ಪರ ವಕೀಲರು, ರೆಹಮಾನ್​ ಅವರು ತಮ್ಮ ಕೆಲಸದ ಸಂಪೂರ್ಣ ಹಕ್ಕು ಸ್ವಾಮ್ಯವನ್ನು ವರ್ಗಾವಣೆ ಮಾಡಿಲ್ಲ. ಆದರೆ, ಕೆಲವು ಹಕ್ಕುಗಳನ್ನು ಉಳಿಸಿಕೊಂಡಿದ್ದಾರೆ. ಇದು ಕೇವಲ ತಾತ್ಕಾಲಿಕ ವರ್ಗಾವಣೆ ಎಂದಿದ್ದರು. ವಾದ, ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿ ಅನಿತಾ ಸುಮಂತ್ (Justice Anitha Sumanth) ಅವರು, ರೆಹಮಾನ್​ ಹಾಗೂ ಇತರರ ಅರ್ಜಿಯನ್ನು ವಜಾ ಮಾಡಿದ್ದಾರೆ.  ಆದರೆ ದಂಡದೊಂದಿಗೆ ತೆರಿಗೆಯ ಬೇಡಿಕೆಯನ್ನು ಪ್ರಶ್ನಿಸಿ ನಾಲ್ಕು ವಾರಗಳಲ್ಲಿ  ಮನವಿಯನ್ನು ಸಲ್ಲಿಸಲು ಅವರಿಗೆ ಅವಕಾಶವನ್ನು ನೀಡಿದ್ದಾರೆ. 2013 ಮತ್ತು 2017 ರ ನಡುವೆ ಕಂಪೆನಿಗಳೊಂದಿಗೆ ಮಾಡಲಾದ ಸಹಿ ಒಪ್ಪಂದಗಳು ಸೇರಿದಂತೆ ಬೃಹತ್ ದಾಖಲೆಗಳ ಪರಿಶೀಲನೆ ಅಗತ್ಯವಿದೆ. ಇದನ್ನು ಹೈಕೋರ್ಟ್​ನ ರಿಟ್ ಪ್ರಕ್ರಿಯೆಯಲ್ಲಿ ಪರಿಹರಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದರು. 

Box Office Queen: 'ಬಾಕ್ಸ್​ ಆಫೀಸ್​ ಕ್ವೀನ್' ಪಟ್ಟ ಉಲ್ಟಾ ಪಲ್ಟಾ ಆಗೋಯ್ತಲ್ಲಾ!

ಈ ಹಿನ್ನೆಲೆಯಲ್ಲಿ ಈಗ ಆರೋಪಿ ಸ್ಥಾನದಲ್ಲಿ ನಿಂತಿರುವ ರೆಹಮಾನ್​ ಹಾಗೂ ಇತರರಿಗೆ ಕೋರ್ಟ್​ನಿಂದ ಹಿನ್ನಡೆಯಾಗಿದೆ. ಅವರು ತಮ್ಮ ಜಿಎಸ್​ಟಿ ಮನ್ನಾ ಕೋರಿ  ನಾಲ್ಕು ವಾರಗಳಲ್ಲಿ  ಜಿಎಸ್​ಟಿ ಆಯುಕ್ತರಿಗೆ ಸೂಕ್ತ ದಾಖಲೆಗಳೊಂದಿಗೆ ಮನವಿಯನ್ನು ಸಲ್ಲಿಸಬೇಕಿದೆ. ಅಲ್ಲಿಯೇ ಅವರ ಹಣೆಬರಹ ನಿಗದಿಯಾಗಲಿದೆ. 

click me!