Inamdar Review: ವಿಲನ್‌ ಅಬ್ಬರ, ಕತೆ ತತ್ತರ, ಯಾನ ನಿರಂತರ

By Kannadaprabha NewsFirst Published Oct 28, 2023, 8:38 PM IST
Highlights

ಉತ್ತರ ಕರ್ನಾಟಕದ ದೊಡ್ಡ ಜಮೀನ್ದಾರ ವಂಶದ ಕುಡಿ ವೀರಬಾಲ ಸರ್ಕಾರ್‌. ಅತಿಯಾದ ಮುದ್ದಿನಿಂದ ಹಾದಿ ತಪ್ಪುವ ಈತ ಹಾದಿಗೆ ಬರುವ ಲಕ್ಷಣ ಕಾಣುವಾಗ ಇಂಟರ್‌ವಲ್‌ ಬರುತ್ತದೆ. ಅಲ್ಲೀವರೆಗೆ ಈತನ ಜೊತೆಗೆ ಕತೆಯೂ ಹಾದಿ ತಪ್ಪಿರುತ್ತೆ ಅನ್ನುವುದು ವಿಶೇಷ. 

ಪ್ರಿಯಾ ಕೆರ್ವಾಶೆ

ಕರಾವಳಿ ಕಡೆ ಯಕ್ಷಗಾನ ಪ್ರದರ್ಶನಗಳಲ್ಲಿ ಜನರನ್ನು ಹೆಚ್ಚು ರಂಜಿಸುವುದು ಬೆಳಗಿನ ಜಾವ ಬರುವ ಬಣ್ಣದ ವೇಷಗಳು ಅಂದರೆ ರಾಕ್ಷಸ ಅಥವಾ ವಿಲನ್‌ ಪಾತ್ರಗಳು. ಈ ಸಿನಿಮಾ ನಿರ್ದೇಶಕ ಸಂದೇಶ್‌ ಶೆಟ್ಟಿ ಕರಾವಳಿಯವರಾಗಿದ್ದಕ್ಕೋ ಏನೋ ತಮ್ಮ ಸಿನಿಮಾದಲ್ಲೂ ಈ ಕಾಂಸೆಪ್ಟ್‌ ಅಳವಡಿಸಿದ್ದಾರೆ. ಇದರಲ್ಲಿ ಹೀರೋಗಿಂತ ವಿಲನ್‌ಗಳ ಅಬ್ಬರ ಹೆಚ್ಚು. ಮುಖ್ಯ ವಿಲನ್‌ ಪಾತ್ರದಲ್ಲಿ ನಟಿಸಿರುವುದು ನಿರ್ದೇಶಕರೇ ಅನ್ನುವುದೂ ವಿಶೇಷ.

ಉತ್ತರ ಕರ್ನಾಟಕದ ದೊಡ್ಡ ಜಮೀನ್ದಾರ ವಂಶದ ಕುಡಿ ವೀರಬಾಲ ಸರ್ಕಾರ್‌. ಅತಿಯಾದ ಮುದ್ದಿನಿಂದ ಹಾದಿ ತಪ್ಪುವ ಈತ ಹಾದಿಗೆ ಬರುವ ಲಕ್ಷಣ ಕಾಣುವಾಗ ಇಂಟರ್‌ವಲ್‌ ಬರುತ್ತದೆ. ಅಲ್ಲೀವರೆಗೆ ಈತನ ಜೊತೆಗೆ ಕತೆಯೂ ಹಾದಿ ತಪ್ಪಿರುತ್ತೆ ಅನ್ನುವುದು ವಿಶೇಷ. ಇಂಟರ್‌ವಲ್‌ ನಂತರ ಝಗಮಗಿಸುವ ವೇಷದಲ್ಲಿ ಕಾಡನ್ನೇ ಅಲ್ಲಾಡಿಸುವಂತೆ ವಿಲನ್‌ಗಳ ಅಬ್ಬರ. ಕಾಡಿನ ಕಾಲು ದಾರಿಗಳಂತೆ ಹಾದಿ ತಪ್ಪಿಸಿ ಕಂಗಾಲಾಗಿಸುವ ಕತೆ. ಕೊನೆಗೂ ಮೇನ್ ರೋಡಿಗೆ ಬಂದಾಗ ಪ್ರೇಕ್ಷಕರು ಸಮಾಧಾನದ ನಿಟ್ಟುಸಿರು ಬಿಡುತ್ತಾರೆ.

ಚಿತ್ರ: ಇನಾಮ್ದಾರ್‌
ತಾರಾಗಣ: ರಂಜನ್‌ ಛತ್ರಪತಿ, ಚಿರಶ್ರೀ ಅಂಚನ್, ಪ್ರಮೋದ್‌ ಶೆಟ್ಟಿ, ಸಂದೇಶ್‌ ಶೆಟ್ಟಿ
ನಿರ್ದೇಶನ: ಸಂದೇಶ್‌ ಶೆಟ್ಟಿ

ನಕುಲ್‌ ಅಭಯಂಕರ್‌ ಬ್ಯಾಗ್ರೌಂಡ್‌ ಸ್ಕೋರ್‌, ರಾಕೇಶ್‌ ಸಂಗೀತ ಚೆನ್ನಾಗಿದೆ. ‘ಕಾಳಿಂಗಾ.. ’ ಅನ್ನೋ ಹಾಡು ಸಿನಿಮಾ ಮುಗಿದ ಮೇಲೂ ಕಿವಿಯಲ್ಲಿ ಅನುರಣಿಸುತ್ತದೆ. ನಿರ್ದೇಶಕ ಸಂದೇಶ್ ಶೆಟ್ಟಿ ಕಥೆಗೆ ಫೋಕಸ್ಡ್‌ ಆಗಿರಬೇಕಿತ್ತು. ಒಟ್ಟಾರೆ ಇಲ್ಲಿ ಅಷ್ಟಿಷ್ಟು ಮನರಂಜನೆ, ಉಳಿದಿದ್ದು ದೂರ ದಾರಿ.

click me!