Swathi Mutthina Male Haniye Review: ಮುಟ್ಟಿದರೆ ಕರಗುವ ಮಂಜು ಹನಿ ಮತ್ತು ನಶ್ವರತೆ

By Kannadaprabha NewsFirst Published Nov 25, 2023, 9:59 AM IST
Highlights

ರಾಜ್ ಬಿ ಶೆಟ್ಟಿ, ಸಿರಿ ರವಿಕುಮಾರ್, ಬಾಲಾಜಿ ಮನೋಹರ್, ವೆಂಕಟರಾಮ್, ಜೆಪಿ ತುಮಿನಾಡು ನಟಿಸಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ರಿಲೀಸ್.....

ಜೋಗಿ 

ಸ್ವಾತಿ ಮುತ್ತಿನ ಮಳೆಹನಿಯೇ ಚಿತ್ರದ ಕತೆಯನ್ನು ಚಿತ್ರದ ಟ್ರೇಲರೇ ಹೇಳಿದೆ. ಜೀವನದ ಕೊನೆಯ ಹಂತದಲ್ಲಿ ಇರುವವರಿಗೆ ಸಾಂತ್ವನ ನೀಡುವ ಕರುಣಾಲಯ. ಅಲ್ಲಿ ಆಪ್ತಸಲಹೆ ನೀಡುವ ಪ್ರೇರಣಾ. ಅಲ್ಲಿಗೆ ಬರುವ, ಆರು ತಿಂಗಳಲ್ಲಿ ಸಾಯಲಿರುವ, ಕ್ಯಾನ್ಸರ್ ಪೀಡಿತ ಅನಿಕೇತ್. ಒರಟನಾದ ಅವನನ್ನು ಬದಲಾಯಿಸಿ, ಅವನತ್ತ ಆಕರ್ಷಿತಳಾಗುವ ಪ್ರೇರಣಾ.

ಇಷ್ಟನ್ನೂ ಮೊದಲೇ ಹೇಳಿದ ನಂತರ, ಸಿನಿಮಾ ಅಂದರೆ ಕತೆಯಲ್ಲ ಅನುಭವ ಎನ್ನುವುದನ್ನು ರಾಜ್ ಬಿ ಶೆಟ್ಟಿ ನಮಗೆ ಮನದಟ್ಟು ಮಾಡಿಸುತ್ತಾ ಹೋಗುತ್ತಾರೆ. ಸಾವಿನ ಸಮ್ಮುಖದಲ್ಲಿ ಕಾಲ ನಿಧಾನವಾಗಿ ಚಲಿಸುತ್ತಿರುತ್ತದೆ. ಮೌನ ಪಿಸುದನಿಯಲ್ಲಿ ಮಾತಾಡುತ್ತಿರುತ್ತದೆ. ಸುರಿದ ಮಳೆಯಲ್ಲೂ ವಿಷಾದದ ಹನಿಯಿರುತ್ತದೆ. ನಂದಿಬಟ್ಟಲು ಹೂವಿಗೆ ಕೂಡ ಸಾವಿನದೇ ಬಣ್ಣ.

Sugar Factory Review: ಆಧುನಿಕ ಕಾಲದ ಸಂಕೀರ್ಣ ಸಂಬಂಧಗಳ ಸುತ್ತ..

ತಾರಾಗಣ:  ರಾಜ್ ಬಿ ಶೆಟ್ಟಿ, ಸಿರಿ ರವಿಕುಮಾರ್, ಬಾಲಾಜಿ ಮನೋಹರ್, ವೆಂಕಟರಾಮ್, ಜೆಪಿ ತುಮಿನಾಡು 

ನಿರ್ದೇಶನ: ರಾಜ್‌ ಬಿ ಶೆಟ್ಟಿ

ರೇಟಿಂಗ್: 4

ಬಹುಶಃ ಸಾವಿನ ಎದುರು ನಿಂತಾಗ ಮಾತ್ರ ನಾವು ಬದುಕಿನ ಬಹುಮುಖ್ಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುತ್ತೇವೆ ಎನ್ನುವುದನ್ನು ರಾಜ್ ಬಿ ಶೆಟ್ಟಿ ಪ್ರತಿಯೊಂದು ಸನ್ನಿವೇಶದಲ್ಲೂ ನಿರೂಪಿಸುತ್ತಾ ಹೋಗುತ್ತಾರೆ. ಸಾವನ್ನು ಮರೆಯಲು ಕುಡಿದು ಜಗತ್ತನ್ನೇ ಮರೆಯುವ ಪ್ರಭಾಕರ, ಸಾವು ಮತ್ತು ನೋವು- ಎರಡರಲ್ಲಿ ಯಾವುದು ಸಹನೀಯ ಎಂದು ನಿರ್ಧರಿಸಲಾಗದ ಪ್ರೇರಣಾ, ತನ್ನ ನಿಯತ್ತು ಮತ್ತು ವೃತ್ತಿಪರತೆಯೇ ನೋವು ನಿವಾರಿಸುವುದಕ್ಕಿಂತ ಮುಖ್ಯ ಎಂದುಕೊಂಡಿರುವ ವೈದ್ಯ, ಬದುಕು ಎಂಬ ವಾಸಿಯಾಗದ ಕಾಯಿಲೆಗೆ ತುತ್ತಾಗಿರುವ ಸಾಗರ್, ಹೊಸ ಗುಟ್ಟುಗಳನ್ನು ಹೇಳಿಹೋಗಲೆಂದೇ ಬರುವ ಅಮ್ಮ- ಹೀಗೆ ಒಂದೊಂದು ಪಾತ್ರಗಳೂ ಒಂದೊಂದು ಉದ್ದೇಶಕ್ಕೆಂದೇ ಸೃಷ್ಟಿಯಾಗಿವೆ. ತಮ್ಮ ಪಾಲಿನ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿವೆ.

BAD MANNERS REVIEW: ಕತ್ತಲು ಬೆಳಕು ಜಗತ್ತಲ್ಲಿ ಅನೂಹ್ಯ ಪಾತ್ರಗಳ ತಾಳಮೇಳ

ಕಡಿಮೆ ಮಾತುಗಳನ್ನು ಪರಿಣಾಮಕಾರಿಯಾಗಿ ಆಡಿಸುವ ರಾಜ್ ಬಿ ಶೆಟ್ಟಿ, ಚಿತ್ರದಲ್ಲಿ ಒಂದಿಡೀ ಕವನ ಓದಿಸುತ್ತಾರೆ. ಕಾವ್ಯಾತ್ಮಕವಾಗಿ ಮಾತಾಡುತ್ತಾರೆ. ಪ್ರತಿಯೊಂದು ಫ್ರೇಮ್ ಕೂಡ ಕಾವ್ಯವೇ. ಛಾಯಾಗ್ರಾಹಕ ಪ್ರವೀಣ್ ಶ್ರೀಯಾನ್ ಸಾವು ಬದುಕನ್ನು ನೆರಳು ಬೆಳಕಿನಾಟದಲ್ಲಿ ದರ್ಶನ ಮಾಡಿಸುತ್ತಾರೆ. ಮಿಥುನ್ ಮುಕುಂದನ್ ಮೌನವೇ ಮಿಡಿಯುವಂತೆ ಮಾಡಿದ್ದಾರೆ.

ಸಿರಿ ರವಿಕುಮಾರ್ ಅಭಿನಯವೇ ಈ ಚಿತ್ರವನ್ನು ಮತ್ತೊಂದು ಎತ್ತರಕ್ಕೆ ಏರಿಸಿದೆ. ಬಹಳ ಸಂಕೀರ್ಣವಾದ ಪಾತ್ರವನ್ನು ನಿಭಾಯಿಸುವಲ್ಲಿ ಅವರು ತೋರಿದ ಪ್ರಬುದ್ಧತೆ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿಯನ್ನು ಶಿಫಾರಸು ಮಾಡುತ್ತದೆ. ಐ ಲೈಕ್ ಯುವರ್ ಕರೇಜ್ ಎಂಬ ಒಂದು ಸಂಭಾಷಣೆಯನ್ನು ಹೇಳುವ ಹೊತ್ತಲ್ಲಿ ಅವರ ಮುಖಭಾವ, ಹತ್ತುಪುಟಗಳ ಸಂಭಾಷಣೆಯನ್ನು ಹೇಳಿದಷ್ಟು ಪರಿಣಾಮಕಾರಿಯಾಗಿದೆ. ರಾಜ್ ಬಿ ಶೆಟ್ಟಿ, ದೀಪಕ್ ತುಮಿನಾಡು, ವೆಂಕಟರಾವ್ - ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಜೀವಿಸಿದ್ದಾರೆ.

ಇಷ್ಟೆಲ್ಲದರ ನಡುವೆ ರಾಜ್ ಬಿ ಶೆಟ್ಟಿ ನಿರ್ದೇಶಕರಾಗಿ ಕೆಲವು ಸುಲಭ ಪರಿಹಾರಗಳನ್ನೂ ಕಂಡುಕೊಂಡಿದ್ದಾರೆ. ಸಾಗರ್ ಪಾತ್ರವನ್ನು ಕೆಟ್ಟವನೆಂದು ಬಿಂಬಿಸುವ ಮೂಲಕ ನಾಯಕಿಯ ನಡೆಯನ್ನು ಸಮರ್ಥಿಸಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಇಂಥ ಸರಳ ಸೂತ್ರಗಳಾಚೆಯೂ ಸ್ವಾತಿ ಮುತ್ತಿನ ಮಳೆ ಹನಿ ನೋಡುಗರ ಮನದಲ್ಲಿ ಮುತ್ತಾಗುತ್ತದೆ.

click me!