
ಪ್ರಿಯಾ ಕೆರ್ವಾಶೆ
ಗಂಭೀರ ಸಂಗತಿಗಳನ್ನು ಸರಳವಾಗಿ ಹೇಳುವುದು ಸಾಧ್ಯ ಎಂದು ತೋರಿಸಿಕೊಟ್ಟಸಿನಿಮಾ ‘ಕನ್ನೇರಿ’. ಕಾಡಿನ ಮಕ್ಕಳ ಒಕ್ಕಲೆಬ್ಬಿಸುವಿಕೆಯ ಹಿಂದಿನ ಕ್ರೌರ್ಯ, ಪರಿಣಾಮಗಳನ್ನಿಟ್ಟು ಮಾಡಿರುವ ಚಿತ್ರವಿದು. ಕೋಟಿಗಾನಹಳ್ಳಿ ರಾಮಯ್ಯ ಅವರ ಸಶಕ್ತ ಕತೆ, ಸಿನಿಮಾವನ್ನು ಹೇಗೆ ಕೊಂಡೊಯ್ಯಬೇಕು ಅನ್ನೋದರ ಬಗ್ಗೆ ನಿರ್ದೇಶಕ ಮಂಜು ಅವರಿಗಿದ್ದ ಸ್ಪಷ್ಟತೆ, ಕಲಾವಿದರ ಅದ್ಭುತ ಅಭಿನಯ ಈ ಚಿತ್ರವನ್ನು ಇನ್ನೊಂದು ಸ್ತರಕ್ಕೆ ಕೊಂಡೊಯ್ದಿದೆ.
ತಾರಾಗಣ: ಅರ್ಚನಾ ಮಧುಸೂದನ್, ಎಂ ಕೆ ಮಠ್, ನೇಹಲ್, ಅನಿತಾ ಭಟ್, ಅರುಣ್ ಸಾಗರ್
ನಿರ್ದೇಶನ: ನೀನಾಸಂ ಮಂಜು
ರೇಟಿಂಗ್ : 4
ಒಕ್ಕಲೆಬ್ಬಿಸಿರುವ ಕಾಡು ಜನರ ಬದುಕಿನ ಬಗ್ಗೆ ಡಾಕ್ಯುಮೆಂಟರಿ ಮಾಡುವ ಸಲುವಾಗಿ ಅವರ ಪುನರ್ವಸತಿ ಕೇಂದ್ರದ ಶಾಲೆಗೆ ಬರುವ ಯುವ ನಿರ್ದೇಶಕ ಅರವಿಂದ್(ನಿಹಾಲ್). ಆ ಶಾಲೆಯ ಮೇಷ್ಟ್ರ ಮೂಲಕ ಆತನಿಗೆ ಮುತ್ತಮ್ಮ ಎಂಬ ಬಾಲಕಿ ಬರೆದ ಚಿತ್ರ ಸಿಗುತ್ತದೆ. ಈ ಚಿತ್ರವನ್ನು ಹಿಡಿದು ಆಕೆಯನ್ನು ಹುಡುಕುತ್ತಾ ಹೊರಟ ನಿರ್ದೇಶಕನಿಗೆ ಮುತ್ತಮ್ಮನ ಬದುಕಿನ ಹಲವು ಚಿತ್ರಗಳು ಸಿಗುತ್ತಾ ಹೋಗುತ್ತವೆ. ಅನಿವಾರ್ಯವಾಗಿ ಶಾಲೆ ತೊರೆದು ನಗರದಲ್ಲಿ ಕೂಲಿ ಕೆಲಸಕ್ಕೆ ಹೋಗುವ ಆಕೆ, ತಾನು ಕೆಲಸ ಮಾಡುತ್ತಿದ್ದ ಮನೆಯವರ ಮೇಲೆಯೇ ಹಲ್ಲೆ ಮಾಡಿದ ಜೈಲಿಗೆ ಸೇರಿದ ವಿಚಾರ ತಿಳಿಯುತ್ತದೆ. ಜೈಲಿನಲ್ಲಿ ಆಕೆಯ ವರ್ತನೆ, ಆ ಬಳಿಕ ಅವಳು ಹೇಳುವ ವಿವರಗಳಲ್ಲಿ ಕತೆ ಇನ್ನಷ್ಟುಗಾಢವಾಗುತ್ತಾ ಹೋಗುತ್ತದೆ.
ಈ ಚಿತ್ರದಲ್ಲಿ ಬುಡಕಟ್ಟು ಜನರ ಬದುಕನ್ನು ಸಹಜವಾಗಿ ಕಟ್ಟಿಕೊಡುವ ಪ್ರಯತ್ನವಾಗಿದೆ. ಅವರ ಆಚರಣೆ, ಹಾಡುಗಳು, ನಂಬಿಕೆಗಳು, ಬದುಕಿನ ಶೈಲಿ ಎಲ್ಲವೂ ಸಹಜವಾಗಿ, ಕಲಾತ್ಮಕವಾಗಿ ತೆರೆದುಕೊಳ್ಳುತ್ತದೆ. ಮಕ್ಕಳ ಚಿತ್ರವನ್ನು ಇಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ.
ಚಿತ್ರದ ಕೊನೆಯ ಭಾಗ ಮಾತ್ರ ಸಹಜವಾಗಿ ಬಂದಿಲ್ಲ. ಕಮರ್ಷಿಯಲ್ ಟಚ್ ಕೊಡುವ ಉದ್ದೇಶದಿಂದ ಕೋರ್ಟ್ ಸೀನ್, ವಾದ ಇತ್ಯಾದಿಯನ್ನು ಎಳೆದು ತಂದಂತಿದೆ. ಉಳಿದಂತೆ ಅರ್ಚನಾ ಎಷ್ಟುಸಹಜವಾಗಿ ಮುತ್ತಮ್ಮನ ಪಾತ್ರಕ್ಕೆ ಜೀವ ತುಂಬಿದ್ದಾರೆ ಅಂದರೆ, ಇದು ಈಕೆಯ ನಟನೆಯ ಮೊದಲ ಚಿತ್ರ ಅನ್ನುವಂತಿಲ್ಲ. ಎಂ ಕೆ ಮಠ್ ಅವರದು ಮಾಗಿದ ನಟನೆ. ಅನಿತಾ ಭಟ್, ಸರ್ದಾರ್ ಸತ್ಯ ಅಭಿನಯ ಚೆನ್ನಾಗಿದೆ. ಗಣೇಶ್ ಹೆಗಡೆ ಅವರು ಕಾಡಿನ ಚಿತ್ರಗಳನ್ನು ಸೊಗಸಾಗಿ ಸೆರೆ ಹಿಡಿದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.