ಹೊಟ್ಟೆಯೊಳಗಿನ ಕಿಚ್ಚಿಗೆ ತಣ್ಣೀರ್ ಸುರಿಯದಿದ್ರೆ ದಕ್ಕಲ್ಲ ಯಶಸ್ಸು!

By Kannadaprabha NewsFirst Published Aug 19, 2019, 5:48 PM IST
Highlights

ಕೆಲಸ ಮಾಡುವ ಜಾಗದಲ್ಲಿ ನನ್ನದೇ ಎಕ್ಸ್‌ಪೀರಿಯನ್ಸ್‌ ಇರುವ ಸಹೋದ್ಯೋಗಿಗೆ ನನಗಿಂತ ಮೊದಲು ಪ್ರೊಮೋಶನ್‌ ಸಿಕ್ಕರೆ, ಬೇರೆಲ್ಲಾದರೂ ದೊಡ್ಡ ಪೋಸ್ಟ್‌ ಸಿಕ್ಕರೆ ಹೊಟ್ಟೆಕಿಚ್ಚು ಅನ್ನೋದಕ್ಕಿಂತ ಆತಂಕ, ನೋವು ತುಂಬಿದ ವಿಷಾದವೊಂದು ಆವರಿಸಿಕೊಂಡು ಬಿಡುತ್ತದೆ.

ನೀನು ತ್ರೀ ಈಡಿಯಟ್‌ ಸಿನಿಮಾ ನೋಡಿದ್ರೆ ಅದ್ರಲ್ಲೊಂದು ಡೈಲಾಗ್‌ ಬರುತ್ತೆ, ‘ಗೆಳೆಯ ಪಾಸಾಗಿ, ನಾನು ಫೇಲಾಗುವಷ್ಟುಅವಮಾನ ಇನ್ನೊಂದಿಲ್ಲ’ ಅನ್ನೋ ಅರ್ಥದಲ್ಲಿ. ಡಿಟ್ಟೋ ಹಾಗೇ ಆಗ್ಬೇಕಿಲ್ಲ, ಆದ್ರೂ ನಾವೆಲ್ಲ ಇಂಥದ್ದೊಂದು ಹೊಟ್ಟೆಕಿಚ್ಚಲ್ಲೇ ಬೆಳೆದಿರ್ತೀವಿ. ದೊಡ್ಡವರಾದ ಮೇಲೂ ಇದು ಮುಂದುವರಿಯುತ್ತದೆ.

ಕೆಲಸ ಮಾಡುವ ಜಾಗದಲ್ಲಿ ನನ್ನದೇ ಎಕ್ಸ್‌ಪೀರಿಯನ್ಸ್‌ ಇರುವ ಸಹೋದ್ಯೋಗಿಗೆ ನನಗಿಂತ ಮೊದಲು ಪ್ರೊಮೋಶನ್‌ ಸಿಕ್ಕರೆ, ಬೇರೆಲ್ಲಾದರೂ ದೊಡ್ಡ ಪೋಸ್ಟ್‌ ಸಿಕ್ಕರೆ ಹೊಟ್ಟೆಕಿಚ್ಚು ಅನ್ನೋದಕ್ಕಿಂತ ಆತಂಕ, ನೋವು ತುಂಬಿದ ವಿಷಾದವೊಂದು ಆವರಿಸಿಕೊಂಡು ಬಿಡುತ್ತದೆ.

ಸಂಬಂಧ ಹಾಳು ಮಾಡಿಕೊಳ್ಳದೆ ಹೊಟ್ಟೆಕಿಚ್ಚಿನ ಸಂಗಾತಿಯನ್ನು ನಿಭಾಯಿಸೋದು ಹೇಗೆ?

ಹಾಗಂತ ಈ ವಿಶ್ವದಲ್ಲಿ ಆ ಹೊತ್ತಲ್ಲಿ ಲಕ್ಷಾಂತರ ಜನರಿಗೆ ಪ್ರೊಮೋಶನ್‌ ಆಗಿಯೇ ಇರುತ್ತದೆ, ನಮ್ಮ ಕಣ್ಣೆದುರಿಗೇ ಯಾರೋ ದೊಡ್ಡ ಸಾಧನೆ ಮಾಡುತ್ತಾರೆ. ಅದೆಲ್ಲ ನಮ್ಮಲ್ಲಿ ಈ ಭಾವ ತರಿಸಲ್ಲ. ಆದರೆ ನನ್ನ ಜೊತೆಗಿದ್ದವನು ನನಗಿಂತ ಮುಂದೆ ಹೋದಾಗ ಆಗುವ ಫೀಲ್‌ಗೆ ಶಬ್ದಗಳಿಲ್ಲ.

ಈಗಷ್ಟೇ ಮದುವೆಯಾದ ಫ್ರೆಂಡ್‌ ಎಫ್‌ಬಿಯಲ್ಲಿ ಹೆಂಡತಿ ಜೊತೆಗಿನ ರೊಮ್ಯಾಂಟಿಕ್‌ ಫೋಟೋ ಹಾಕ್ಕೊಳ್ತಾನೆ. ಆಗಷ್ಟೇ ಗಂಡನ ಜೊತೆಗೆ ದೊಡ್ಡ ಜಗಳವಾಡಿ ಅಶಾಂತ ಮನಸ್ಥಿತಿಯಲ್ಲಿರುವ ನಿನಗೆ ಅದನ್ನು ಕಂಡು ದುಃಖ ಉಕ್ಕಿ ಬರುತ್ತದೆ. ಯಾರಿಗ್ಗೊತ್ತು, ಈ ಫೋಟೋ ಶೇರ್‌ ಮಾಡಿದ ಮೇಲೆ, ಅವರಿಬ್ಬರಿಗೂ ಸಿಕ್ಕಾಪಟ್ಟೆಜಗಳ ಆಗಿರಬಹುದು, ಒಂದು ವೇಳೆ ಹಾಗಾಗಿದೆ ಅಂತ ಗೊತ್ತಾದರೆ ನಮ್ಮ ಖುಷಿ ಹೆಚ್ಚಾಗುತ್ತದೆ.

ನನ್ನ ಫ್ರೆಂಡ್‌ ಆಗಲೇ ಸೈಟ್‌ ತಗೊಂಡು ಮನೆ ಕಟ್ಟಿದ, ನಾನು ಅವನಿಗಿಂತ ಚೆನ್ನಾದ ಮನೆ ಕಟ್ಟಬೇಕು, ಅವನು ಫಾರಿನ್‌ಗೆ ಹೋದ, ಛೇ, ನಂಗಿನ್ನೂ ಚಾನ್ಸ್‌ ಸಿಗಲಿಲ್ಲ ಯಾಕೆ, ಅವನ ಮಕ್ಕಳು ಅಷ್ಟುಜಾಣರಿದ್ದಾರೆ, ನನ್ನ ಮಗು ಯಾಕೆ ಪಾಠದಲ್ಲಿ ಆಸಕ್ತಿಯೇ ತೋರಿಸುತ್ತಿಲ್ಲ...ಪಟ್ಟಿಬೆಳೆಯುತ್ತದೆ.

ಇದರ ಹಿಂದಿರುವುದೇನು, ನಾನೆಲ್ಲಿ ಹಿಂದೆ ಬಿದ್ದು ಬಿಡುತ್ತೇನೋ, ಇನ್ನೊಬ್ಬರ ಕಣ್ಣಲ್ಲಿ ಚಿಕ್ಕವನಾಗಿ ಬಿಡುತ್ತೇನೋ ಅನ್ನುವ ಆತಂಕ.

‘ಅಯ್ಯಬ್ಬ, ನನ್‌ ಕೈಯಲ್ಲಾಗಲ್ಲಪ್ಪಾ..’ ಅಂದೆ. ‘ಮತ್ತೆ ನಿನ್ನ ಕೈಯಲ್ಲಾಗೋದು ಏನು’ ಅಂದ. ಮೌನವಾದೆ.

ಸಂಜೆ ಏಳರ ಸಮಯ. ನಾಲ್ಕು ದಿನ ರಜೆ ಹಾಕಿ ಊರಿಗೆ ಬಂದಿದ್ದವನನ್ನು ಎಳೆದುಕೊಂಡು ನದಿ ತೀರಕ್ಕೆ ಬಂದಿದ್ದೆ. ನೆರೆ ಕೊಂಚವೇ ತಗ್ಗಿತ್ತು. ಆದರೆ ಅದರ ರಭಸ ಜಗತ್ತನ್ನೇ ಬಲಿಹಾಕುವೆ ಎಂಬಷ್ಟುತೀವ್ರ. ಈ ನದಿಯಲ್ಲಿ ಈಜಾಡುತ್ತ, ಜಗಳವಾಡುತ್ತಲೇ ಬೆಳೆದ ನಾವಿಬ್ಬರೂ ಈಗ ಗಂಭೀರವಾಗಿ ಕೂತು ಮಾತನಾಡುತ್ತಿದ್ದೆವು.

ಆಗಾಗ ಬ್ಲ್ಯಾಂಕ್ ಆಗ್ತೀರಾ? ಪಾಸ್ ಮೋಡ್‌ನಿಂದ ಪ್ಲೇ ಮೋಡ್‌ಗೆ ಬರೋದು ಹೇಗೆ?

ನಮಿತ್‌ ನನ್ನ ಪ್ರೈಮರಿ ಸ್ಕೂಲ್‌ ಕ್ಲಾಸ್‌ಮೇಟ್‌. ಅದಕ್ಕಿಂತ ಹೆಚ್ಚಾಗಿ ಆತ್ಮೀಯ ಮಿತ್ರ. ನನಗೂ ಅವನಿಗೂ ತದ್ವಿರುದ್ಧ. ಅಂದುಕೊಂಡದ್ದನ್ನು ಮಾಡಿಯೇ ತೀರುವ, ತನ್ನ ಯೋಚನೆಗಳಲ್ಲಿ ನಿಖರತೆ ಇದ್ದ ಅವನು ಓದಿನಲ್ಲೂ ಜಾಣ. ಎಲ್ಲ ಕಡೆ ಕಣ್ಣು ಹಾಯಿಸುವ, ಲೈಫ್‌ನಲ್ಲಿ ಫೋಕಸ್ಸೇ ಇಲ್ಲದೇ ಗಾಳಿ ಬಂದ ಕಡೆ ತೂರಿಹೋಗುವಂತಿದ್ದ ನಾನು. ಒಂದು ಹಂತದ ಓದಿನ ಬಳಿಕ ನಮ್ಮೆಲ್ಲರ ಹಾದಿಗಳು ಬದಲಾದವು. ಚಿಕ್ಕಂದಿನಿಂದಲೂ ಕೀಟಗಳ ಬಗ್ಗೆ ಬಹಳ ಆಸಕ್ತಿ ಇದ್ದ ಕಾರಣ ನಮಿತ್‌ ಕೀಟ ವಿಜ್ಞಾನದಲ್ಲಿ ಓದು ಮುಂದುವರಿಸಿ ವಿಜ್ಞಾನಿಯಾದ.

ನಮ್ಮ ಆಸಕ್ತಿ, ಕೆಲಸ ಮಾಡುವ ಫೀಲ್ಡ್‌ ಬಗ್ಗೆ ಕಷ್ಟಸುಖದ ಮಾತು ಬಂತು. ನಡುವೆ, ‘ನೀನ್‌ ಬಿಡೋ, ನಮ್‌ ಜೊತೆ ಆಟ ಆಡ್ಕೊಂಡು ಬೆಳೆದವ ಈಗ ಮೂರು ದಿನ ಇಂಡಿಯಾದಲ್ಲಿದ್ದರೆ ನಾಲ್ಕು ದಿನ ಫಾರಿನ್‌ನಲ್ಲಿ ಸುತ್ತುತ್ತಿರುತ್ತೀಯಾ, ನಾವ್‌ ನೋಡು, ಎಲ್ಲಿದ್ದೀವೋ ಅಲ್ಲೇ ಇದ್ದೀವಿ’ ಅಂದೆ. ಸುಮ್ಮನೇ ನಕ್ಕ.

‘ಯಾವುದೇ ಫೀಲ್ಡ್‌ನಲ್ಲಿ ಸಕ್ಸಸ್‌ ಆಗೋದಕ್ಕೆ ಮುಖ್ಯ ಕಾರಣ ಏನು ಗೊತ್ತಾ, ಪ್ರಾಕ್ಟೀಸ್‌, ಅಭ್ಯಾಸ. ನಿನ್ನ ಫೀಲ್ಡ್‌ ಬಗ್ಗೆ ಆಸಕ್ತಿ ಇದ್ದರೆ ಸಾಕಾಗಲ್ಲ. ಅಷ್ಟೇ ಪ್ರಾಕ್ಟೀಸ್‌ ಬೇಕು, ತಾದಾತ್ಮ ಬೇಕು. ಮಾಡೋ ಕೆಲಸದಲ್ಲಿ ಹೆಚ್ಚೆಚ್ಚು ತೊಡಗಿಸಿಕೋ..’ ಅನ್ನುತ್ತಾ, ಆ ಬಗ್ಗೆ ವಿವರಿಸಿ, ಇದನ್ನೆಲ್ಲ ಓದು ಅನ್ನತೊಡಗಿದ.

ನನಗೆ ಅವನ ಮಾತು ಪರಮಬೋರು ಅನಿಸಿ, ‘ಅದೆಲ್ಲ ನನ್‌ ಕೈಯಲ್ಲಾಗಲ್ಲ’ ಅಂದುಬಿಟ್ಟೆ. ನಿನ್ನ ಕೈಯಲ್ಲಾಗೋದು ಏನು ಹಾಗಾದ್ರೆ ಅಂತ ಅವನು ಕೇಳಿದ್ದು ಬುಡ ಹಿಡಿದು ಅಲುಗಾಡಿಸಿತು. ಕೈಯಲ್ಲಿ ಅಷ್ಟೂಸಾಧ್ಯತೆಗಳಿರುವಾಗ ಅದರತ್ತ ನೋಡದೇ ನನ್‌ ಕೈಯಲ್ಲಾಗದು ಅಂತ ಒಂದೇ ವಾಕ್ಯದಲ್ಲಿ ದಿಡ್ಡಿ ಬಾಗಿಲು ಹಾಕಿ ಬಿಡುತ್ತೇವಲ್ಲ! ಆದರೆ ಅವನು ಅಷ್ಟಕ್ಕೇ ನಿಲ್ಲಲಿಲ್ಲ. ಅವನ ಮುಂದಿನ ಮಾತು ನನ್ನನ್ನು ಅಚ್ಚರಿಗೆ ದೂಡಿತು.

‘ನಾನು ಊರಲ್ಲಿ ಜಾಗ ನೋಡ್ತಿದ್ದೇನೆ, ಕೆಲಸಕ್ಕೆ ರಿಸೈನ್‌ ಮಾಡಿ ಇಲ್ಲೇ ಬಂದು ಬಿಡುತ್ತೇನೆ’ ಅಂದ. ‘ಅಷ್ಟುದೊಡ್ಡ ಕೆಲಸಕ್ಕೆ ರಿಸೈನ್‌ ಮಾಡ್ತೀಯಾ, ಇಲ್ಲೇನು ಮಾಡ್ತೀಯಾ, ಇಲ್ಲಿ ಬಂದು ಜಾಗ ಮಾಡಿದ್ರೆ ನಿನ್‌ ಕೈಲಿ ಏನೂ ಕಿಸಿಯಲಿಕ್ಕಾಗದು. ಸುಮ್ನೇ ಅದೆಲ್ಲ ಕೇಳೋದಕ್ಕಷ್ಟೇ ಇಂಪು. ಈ ಸಲ ನೋಡು, ಕೊಳೆ ರೋಗ ಬಂದು ಇಡಿಕ್ಕಿಡೀ ಅಡಿಕೆ ಹೋಯ್ತು.’ ಅಂದೆ.

ಅವನು ನಕ್ಕನಷ್ಟೇ. ಆದರೆ ನನಗೆ ಪಕ್ಕಾ ಗೊತ್ತು, ಅವನು ಅಂದುಕೊಂಡ ಅಂದರೆ ಮಾಡಿಯೇ ಬಿಡುತ್ತಾನೆ. ಉಳಿದ ನಮ್ಮ ಗೆಳೆಯರೆಲ್ಲ ದೊಡ್ಡ ದೊಡ್ಡ ಹುದ್ದೆ ಹಿಡಿದು ಸೆಟ್‌್ಲ ಆಗಲು ಕಸರತ್ತು ಮಾಡುತ್ತಿದ್ದರೆ ಇವನು ಇರೋದನ್ನೆಲ್ಲ ಬಿಟ್ಟು ಊರಲ್ಲಿ ಕೃಷಿ ಮಾಡ್ಬೇಕಂತೆ! ಕೊಬ್ಬು ಹೆಚ್ಚಾಗಿದೆ ನಿನಗೆ ಅಂತ ಬೈಯ್ಯಬೇಕು ಅನಿಸಿತು. ಆದರೆ ಅವನ ಗಂಭೀರ ಮುಖ ನೋಡಿ ಮೊದಲಿನ ನಮಿತ್‌ ಇವನಲ್ಲ ಅನಿಸಿ ಸುಮ್ಮನಾದೆ.

‘ನೋಡಮ್ಮಾ, ಉಳಿದವರು ಹಾಗಿದ್ದಾರೆ, ನಾನು ಅವರಿಗಿಂತ ಮೇಲೆ ಹೋಗ್ಬೇಕು ಅನ್ನುವ ಆಸೆಯಿಂದ ಇಷ್ಟೆಲ್ಲ ಮಾಡಿದೆ, ಆದರೆ ನನ್ನ ಪ್ರೀತಿ ನಮ್ಮೂರ ಕಾಡಿನ ಕೀಟ ಪ್ರಪಂಚ. ಇನ್ನೊಬ್ಬರ ಕಣ್ಣಲ್ಲಿ ಗ್ರೇಟ್‌ ಅನಿಸಿಕೊಂಡು ಬದುಕೋದಕ್ಕಿಂತ ನನಗೆ ಖುಷಿಯಾಗಿರುವ ಹಾಗೆ ಬದುಕೋದು ನನಗಿಷ್ಟ. ಅದಕ್ಕೆ ಇದು. ಕೃಷಿ ನನಗೆ ತಿಳಿದ ಹಾಗೆ ಮಾಡುತ್ತೇನೆ. ಏನೇ ಆದರೂ ಹೊತ್ತು ಹೊತ್ತಿನ ಊಟಕ್ಕೆ ಇದರಿಂದ ಕೊರತೆಯಾಗಲ್ಲ. ಉಳಿದವರ ಹಾಗೆ ದುಡ್ಡು ಮಾಡಬೇಕು, ಐಷಾರಾಮದ ಬದುಕು ಬೇಕು ಅನ್ನೋ ಭ್ರಮೆಗಳಿಂದ ಕಳಚಿಕೊಂಡಿದ್ದೀನಿ. ಮುಖ್ಯವಾಗಿ ಉಳಿದವರಿಗಿಂತ ನಾನು ಕಡಿಮೆಯಿರಬಾರದು ಅನ್ನುವ ಅಹಂ ಯಾವತ್ತೋ ಹೋಗಿದೆ’ ಅಂದ.

ಏನು ಹೇಳಲೂ ತೋಚಲಿಲ್ಲ. ಅಬ್ಬರಿಸಿ ಮುನ್ನುಗ್ಗುತ್ತಾ, ತೋಟದ ತೆಂಗು, ಅಡಿಕೆ ಸಸಿಯನ್ನೆಲ್ಲ ತನ್ನೊಂದಿಗೆ ಯಮವೇಗದಲ್ಲಿ ಸೆಳೆದೊಯ್ಯುತ್ತಿದ್ದ ನದಿಯನ್ನೇ ನೋಡುತ್ತಾ ಕೂತೆ.

- ನಿತ್ತಿಲೆ

click me!