
ಬೆಂಗಳೂರು (ಜ.29): ಅವನೊಬ್ಬ ಕ್ಯಾನ್ಸರ್ ರೋಗಿ. ಅವನನ್ನು ಉಪಚರಿಸುವ ಪ್ರತಿಯೊಬ್ಬ ಡಾಕ್ಟರ್ ಹೇಳೋದು, ‘ರಿಲ್ಯಾಕ್ಸ್ ಆಗಿ’ ಅಂತ. ಆದ್ರೆ ಅವನಿಗೆ ರಿಲ್ಯಾಕ್ಸ್ ಮಾಡಿಕೊಳ್ಳಲು ಟೈಮ್ ಎಲ್ಲಿಂದ ಸಿಗ್ಬೇಕು, ಬೆಳಗ್ಗಿಂದ ಸಂಜೆಯವರೆಗೂ ಆಂಕಾಲಜಿಸ್ಟ್ ಮೀಟ್ ಮಾಡೋದು, ಕೆಲವೊಂದು ಟೆಸ್ಟ್ಗಳು, ಮೆಡಿಸಿನ್ ಖರೀದಿ, ಇದೆಲ್ಲ ಮುಗಿಯುವಾಗ ಮಕ್ಕಳು ಶಾಲೆಯಿಂದ ಬಂದಿರುತ್ತವೆ. ಆಮೇಲೆ ರಾತ್ರಿ ಅವರು ಮಲಗೋವರೆಗೂ ಅವರ ಜೊತೆಗೇ. ಅಷ್ಟೊತ್ತಿಗೆ ಕಣ್ಣೊತ್ತಿ ಬರುತ್ತದೆ. ಆದರೂ ಕ್ಯಾನ್ಸರ್ಗೆ ಹೊಸ ಟ್ರೀಟ್'ಮೆಂಟ್'ಗಳೇನಾದ್ರೂ ಇದಾವಾ ಅಂತ ಇಂಟರ್ನೆಟ್ನಲ್ಲಿ ಹುಡುಕಾಟ. ಮಧ್ಯರಾತ್ರಿ ಮಲಗಿದ್ರೆ ನಿದ್ದೆನೂ ಬರಲ್ಲ. ಇನ್ನೆಲ್ಲಿಯ ರಿಲ್ಯಾಕ್ಸೇಶನ್?
ಇಷ್ಟೊತ್ತಿಗೆ ಅವನಿಗೆ ಒಂದು ಸತ್ಯ ತಿಳಿಯುತ್ತದೆ. ಕಳೆದ 10 ವರ್ಷಗಳಲ್ಲಿ ಸರಿಯಾದ ವಿಶ್ರಾಂತಿ ಸಿಗದೇ, ಅತಿಯಾದ ಒತ್ತಡದಿಂದ ತನಗೆ ಕ್ಯಾನ್ಸರ್ ಬಂದಿದೆ ಅಂತ ಅವನಿಗೆ ತಿಳಿದಿದೆ. ಆದರೆ ಆ ೧೦ ವರ್ಷ ಕಳೆದು ಹೋಗಿದೆ, ಅಲ್ಲಿ ಇನ್ನು ರಿಲ್ಯಾಕ್ಸ್ ಮಾಡಲು ಸಾಧ್ಯವಿಲ್ಲ. ಮತ್ತೆ ಈಗ ಆ ವಿಶ್ರಾಂತಿ ಪಡೆದುಕೊಳ್ಳಬೇಕು. ಮನೆಮಂದಿಯನ್ನು ಕರೆದುಕೊಂಡು ನಯಾಗರ ನೋಡಲು ಹೋಗುತ್ತಾನೆ. ಜಲಪಾತದ ಸಮೀಪ ನಿಂತು ಕಣ್ಮುಚ್ಚಿ ದೀರ್ಘ ಉಸಿರೆಳೆದು ನೀರು ಧುಮ್ಮಿಕ್ಕುವ ಶಬ್ದ ಕೇಳುತ್ತಾನೆ. ನೀರಿನ ಶಬ್ದ ಅವನೊಳಗಿನ ಯಾವುದೋ ಎಳೆಯನ್ನು ಮೀಟಿದಂತಾಗುತ್ತೆ. ಒಂದಿಷ್ಟು ಹೊತ್ತು ಅದಕ್ಕೇ ಕಿವಿಯಾಗಿ ಬಿಡುತ್ತಾನೆ. ಮತ್ತೆ ಕಣ್ತೆರೆದಾಗ ಮನಸ್ಸಿಗಾದ ಆ ಚೇತೋಹಾರಿ ಅನುಭವ ವರ್ಣನಾತೀತ!
ಅಷ್ಟಕ್ಕೂ ವಿಶ್ರಾಂತಿ ಅಂದರೆ ನಿದ್ದೆ ಮಾತ್ರವಾ? ಖಂಡಿತಾ ಅಲ್ಲ ಮನಸ್ಸಿಗೆ ಹಿತ ನೀಡುವ ಅನುಭವಗಳೂ ವಿಶ್ರಾಂತಿಗೆ ಸಮ. ಓದುವುದು, ಮಂಜು ಬೀಳುವ ಮುಂಜಾನೆಯ ನಡಿಗೆ ಎಲ್ಲವೂ.. ನಾವು ಒಂದು ದೊಡ್ಡ ಜಗತ್ತಿನೊಳಗಿದ್ದೇವೆ. ಸುತ್ತಮುತ್ತ, ಆಚೆ ಈಚೆ ಯಾರ್ ಯಾರೋ ತುಂಬಿಕೊಂಡಿದ್ದಾರೆ. ಆ ಗೊಂದಲ, ಗದ್ದಲದಲ್ಲಿ ನಮಗೆ ನಾವೇ ಅಪರಿಚಿತರಾಗಿ ಬಿಡುತ್ತೇವೆ. ನಮ್ಮೊಳಗಿನ ಸೂಕ್ಷ್ಮ ಮನಸ್ಸಿಗೆ ಇದರಿಂದ ಘಾಸಿಯಾಗುತ್ತದೆ. ನಮಗಾಗಿ ಒಂದಿಷ್ಟು ಹೊತ್ತನ್ನು ಉಳಿಸೋಣ, ಖುಷಿಪಡೋಣ. ಒಣಗಿದ ಮನಸ್ಸಿನ ಮೇಲೆ ಈ ಕ್ಷಣಗಳು ತುಂತುರು ಹನಿಗಳಂತೆ ಬೀಳುತ್ತವೆ, ಮನಸ್ಸು ಹಸಿಯಾಗುತ್ತದೆ, ಚಿಗುರಿ ಹಸಿರಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.