ಇದನ್ನು ಮೊದಲು ಹೇಳಿಕೊಟ್ಟಿದ್ದೇ ಶ್ರೀಕೃಷ್ಣ

By Web DeskFirst Published Sep 2, 2018, 2:30 PM IST
Highlights

ಮಜವಾಗಿರಿ, ಖುಷಿಯಾಗಿರಿ, ಹಾಯಾಗಿರಿ ಆಗ ಗೆಲ್ಲುವಿರಿ-  ಇದು ಕೃಷ್ಣ ನಮಗೆ ಕಲಿಸಿದ ಪಾಠ | ಗಾಂಭೀರ್ಯವನ್ನು ಹುಡುಗಾಟಿಕೆಯನ್ನು ಏಕಕಾಲಕ್ಕೆ ತೋರಿಸಿದವನು ಜಗದ್ದೋದಾರಕ ಕೃಷ್ಣ 

ಕೃಷ್ಣನ ಬದುಕು ಒಂದು ವಿನೋದಾವಳಿ. ಕೃಷ್ಣನಂತಹ ವರ್ಣರಂಜಿತ ದೇವರು ಯಾರೂ ಇಲ್ಲ. ಕೃಷ್ಣನ ಬಾಲಲೀಲೆಗಳಿಂದ ಕೂಡ ಎಲ್ಲರೂ ತುಂಬಾ ಕಲಿಯುವುದಿದೆ.

ಅವನು ಸಣ್ಣವನಿದ್ದಾಗ ಒಮ್ಮೊಮ್ಮೆ ರಾಕ್ಷಸರು ಕೊಲ್ಲಲು ಬರುತ್ತಿದ್ದರು. ಒಮ್ಮೊಮ್ಮೆ ಪ್ರಕೃತಿ ವಿಕೋಪಗಳು ಸಂಭವಿಸುತ್ತಿದ್ದವು. ಒಮ್ಮೊಮ್ಮೆ ಸಂಬಂಧಿಗಳೇ ಕತ್ತಿ ಮಸೆಯುತ್ತಿದ್ದರು. ಅವುಗಳನ್ನೆಲ್ಲ ಕೃಷ್ಣ ನಗುನಗುತ್ತಲೇ ಪರಿಹರಿಸಿದ. ಅದಕ್ಕೆ ಬೇಕಾದ ಭಾವನಾತ್ಮಕ ಚೈತನ್ಯವನ್ನು 16 ಸಾವಿರ ಯುವತಿಯರಿಂದ ಪಡೆದ!

ಮನಸ್ಸಿಗೆ ಬೇಸರ ಉಂಟುಮಾಡಿದ ಕಾರಣದಿಂದ ಮನಸ್ಸನ್ನು ಹೊರಗೆಳೆದು, ಕಾರಣವನ್ನು ಮರೆಸುವಂತೆ ಮತ್ತೊಂದರಲ್ಲಿ ಮನಸ್ಸು ನೆಡುವುದು ಹೇಗೆಂಬುದನ್ನು ಕಲಿತರೆ ಯಾರು ಬೇಕಾದರೂ ನೆಮ್ಮದಿಯಿಂದಿರಬಹುದು. ಇದನ್ನು ಕೃಷ್ಣ ತನ್ನ ಬದುಕಿನಿಂದಲೇ ತೋರಿಸಿಕೊಟ್ಟ.

ನಾವು ಮಾಡಬೇಕಾದ ಕೆಲಸವನ್ನು ಗಂಭೀರವಾಗಿ ಮಾಡುತ್ತಲೇ ಮಜವಾಗಿ ಕಾಲ ಕಳೆಯಲು ಸಾಧ್ಯವಿದೆ. ಮಹಾಭಾರತದ ಯುದ್ಧದಲ್ಲಿ ಕೃಷ್ಣ ಅರ್ಜುನನಿಗೆ ಸಾರಥಿ. ಅವನನ್ನು ಮುನ್ನಡೆಸುವುದರ ಜೊತೆಗೆ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸುವುದು, ಕುದುರೆಗಳಿಗೆ ಹುಲ್ಲು ತಿನ್ನಿಸುವುದು, ಅವುಗಳ ಗಾಯಕ್ಕೆ ಉಪಚಾರ ಮಾಡುವುದು, ಯುದ್ಧ ತಂತ್ರಗಳನ್ನು ರೂಪಿಸುವುದು, ಇವೆಲ್ಲವುಗಳ ನಡುವೆ ಕಣ್ಮುಚ್ಚಿ ಕುಳಿತು ಕೊಳಲೂದುವುದು ಇವೆಲ್ಲವನ್ನೂ ಕೃಷ್ಣ ಮಾಡುತ್ತಿದ್ದ.

ಪಾಂಡವರನ್ನು ಗೆಲ್ಲಿಸುವ ಭಯಂಕರ ಭಾರದ ಹೊಣೆ ನನ್ನ ಮೇಲಿದೆ ಎಂದು ಒತ್ತಡದಲ್ಲಿ ಕುಳಿತಿದ್ದರೆ ಅವನು ಖಂಡಿತ ಸೋಲುತ್ತಿದ್ದ. ಎಲ್ಲರಿಗೂ ಇಂತಹದ್ದೊಂದು ನಿರಾಳತೆ ಸಿದ್ಧಿಸಿಬೇಕು ಎಂದು ತನ್ನ ಬದುಕಿನಿಂದಲೇ ಕೃಷ್ಣ ತೋರಿಸಿಕೊಟ್ಟ.

ಗಮನಿಸಿ ನೋಡಿ, ಸಾವಿರಾರು ಕೋಟಿ ರು. ವ್ಯವಹಾರ ನಡೆಸುವ ಬೃಹತ್ ಕಂಪನಿಗಳನ್ನು ಕಟ್ಟಿದ ಯಶಸ್ವಿ ನಾಯಕರು ಯಾವತ್ತೂ ತಲೆಗೆ ಕೈಕೊಟ್ಟು ಕುಳಿತುಕೊಳ್ಳುವುದಿಲ್ಲ. ಒತ್ತಡಕ್ಕೆ ಸಿಲುಕಿಕೊಂಡರೆ ಎಲ್ಲ ಕೆಲಸಗಳೂ ಹಾಳಾಗುತ್ತವೆ ಎಂಬುದು ಅವರಿಗೆ ತಿಳಿದಿದೆ. ಹಾಗೆಯೇ, ಮಹಾಭಾರತದಲ್ಲಿ ಕೃಷ್ಣನಷ್ಟು ಬೃಹತ್ ಪಾತ್ರ ನಿಭಾಯಿಸಿದವರು ಯಾರೂ ಇಲ್ಲ. ಅವನಷ್ಟು ಕೆಲಸ ಮಾಡಿದವರೂ ಬೇರೆಯಿಲ್ಲ.

ಅದೇ ವೇಳೆ, ಅವನಷ್ಟು ಆಟ ಆಡಿದವರು, ಅವನಷ್ಟು ಖುಷಿಯಾಗಿದ್ದವರೂ ಇಲ್ಲ. ಕೃಷ್ಣಲೀಲೆಗಳು ಜಗತ್ಪ್ರಸಿದ್ಧ. ಗಾಂಭೀರ‌್ಯವನ್ನೂ ಹುಡುಗಾಟಿಕೆಯನ್ನೂ ಏಕಕಾಲಕ್ಕೆ ತೋರಿಸಿದವನು ಅವನು. ನಗುನಗುತ್ತಲೇ ಎಲ್ಲವನ್ನೂ ನಿಭಾಯಿಸಿದ. ಇದು ಕೃಷ್ಣನ ಬದುಕಿನ ಅತಿದೊಡ್ಡ ಪಾಠ.  

click me!