ಬೇವಿನಕಡ್ಡಿ, ಹರಳುಪ್ಪಿನ ಬದಲು ಪೇಸ್ಟ್‌ ಬಂತು, ಮಕ್ಕಳ ಹಲ್ಲು ಗಟ್ಟಿ ಅಯ್ತಾ?

Published : Aug 19, 2019, 03:44 PM ISTUpdated : Aug 19, 2019, 03:50 PM IST
ಬೇವಿನಕಡ್ಡಿ, ಹರಳುಪ್ಪಿನ ಬದಲು ಪೇಸ್ಟ್‌ ಬಂತು, ಮಕ್ಕಳ ಹಲ್ಲು ಗಟ್ಟಿ ಅಯ್ತಾ?

ಸಾರಾಂಶ

ನಾನು ಫುಡೀ ಅಂತ ಹೇಳ್ಕೊಂಡು ಸಿಕ್ಕಿದ್ದೆಲ್ಲ ಕಬಳಿಸೋದು ಆಧುನಿಕ ಖಯಾಲಿ. ಜಾಗತಿಕರಣದಲ್ಲಿ ಜಗತ್ತೇ ಒಂದು ಸೂರಿನಡಿ ಬಂದರೂ ಹವಾಮಾನ, ವ್ಯಕ್ತಿ ದೇಹ ಪ್ರಕೃತಿಯಲ್ಲಿ ಪ್ರತ್ಯೇಕತೆ ಇದ್ದೇ ಇದೆಯಲ್ಲಾ, ಅಷ್ಟಾದರೂ ನಾವ್ಯಾಕೆ ಆಹಾರದ ವಿಷಯದಲ್ಲಿ ಯಾಮಾರುತ್ತಿದ್ದೇವೆ..

ಡಾ. ಸುಪ್ರಭಾ

ಹೀಗೆ ಒಂದು ದಿನ ಎಂದಿನಂತೆ ಕ್ಲಿನಿಕ್‌ನಲ್ಲಿ ಕುಳಿತಿದ್ದೆ. ಗಿರಿಜಾ ಅಂತ ನನ್ನೊಬ್ಬ ಪೇಷೆಂಟ್‌ ಬಂದರು. ನನ್ನ ಹಳೆಯ ಪರಿಚಯವಾದ್ದರಿಂದ ಕುಳಿತು ಸ್ವಲ್ಪ ಹೊತ್ತು ಮಾತನಾಡುವುದು ರೂಢಿ. ಅವರ ತೊಂದರೆಗಳನ್ನೆಲ್ಲ ಹೇಳಿದ ಬಳಿಕ ವಿಷಯ ನಮ್ಮ ಆಹಾರ ಪದ್ದತಿಯತ್ತ ತಿರುಗಿತು.

‘ನಾವು ಮೊದಲು ಎಣ್ಣೆ ಮಾಡಿಸಿಕೊಳ್ಳುತ್ತಿದ್ದೆವು. ಅದು ಶುದ್ದವಾಗಿಲ್ಲ ಅಂತೆಲ್ಲ ಹೇಳ್ತಾರಲ್ಲ, ಈಗ ಅಂಗಡಿಯಿಂದ ಪ್ಯಾಕೆಟ್‌ ತರ್ತೀವಿ. ನೀವು ಯಾವುದನ್ನ ಉಪಯೋಗಿಸುತ್ತೀರಾ’ಎಂದು ಕೇಳತೊಡಗಿದರು. ನಮ್ಮ ಜಾಹೀರಾತುಗಳು ಜನರ ಮನಸ್ಸನ್ನು ಎಷ್ಟುಬದಲಾಯಿಸಿದೆಯಲ್ಲಾ, ಈ ಜನರೂ ಅಲ್ಲಿ ಬಂದಿದ್ದನ್ನು ಕಣ್ಣುಮುಚ್ಚಿ ನಂಬಿ ಬಳಸಲು ಶುರು ಮಾಡುತ್ತಾರಲ್ಲಾ ಅಂತನಿಸಿತು.

ಸಾಕಷ್ಟು ತಿನ್ನದಿದ್ದರೆ ದೇಹ ಹೇಗೆಲ್ಲ ಪ್ರತಿಕ್ರಿಯಿಸುತ್ತದೆ ಗೊತ್ತಾ?

ನಮ್ಮ ದೇಶದ ಆಹಾರಪದ್ಧತಿ ಇಲ್ಲಿಯ ಜನರಂತೆ ವೈವಿಧ್ಯಮಯವಾದದ್ದು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಪ್ರತಿ ರಾಜ್ಯಕ್ಕೂ ಅವರದ್ದೇ ಆದ ವಿಶಿಷ್ಟಆಹಾರ ಪದ್ದತಿಯಿದೆ. ಅದಕ್ಕೆ ವೈಜ್ಞಾನಿಕ ಮಹತ್ವವೂ ಇದೆ. ಅಲ್ಲಿಯ ತಾಪಮಾನದ ಏರಿಳಿತ, ಪರಿಸರ, ಬೆಳೆಯುವ ಬೆಳೆಗಳನ್ನು ಪರಿಗಣಿಸಿ ಆಹಾರ ಪದ್ದತಿ ಬೆಳೆದು ಬಂದಿದೆ. ಆಯುರ್ವೇದಲ್ಲೂ ಇದನ್ನು ಸತ್ಯ ಎಂದು ಹೇಳುತ್ತಾರೆ. ನಾವು ಏನನ್ನು ತಿಂದರೂ ಅದು ನಮ್ಮ ಪರಿಸರ, ಆಹಾರ ಪದ್ದತಿಗೆ ಅನುಗುಣವಾಗಿರಬೇಕು. ಆದರೆ ನಾವು ಎಲ್ಲವನ್ನು ಮರೆತು ಸಿಕ್ಕಿ ಸಿಕ್ಕಿದ್ದನ್ನೆಲ್ಲ ತಿಂದು ಫಾಸ್ಟ್‌ ಫುಡ್‌ಗೆ ಮೊರೆಹೋಗಿ ನಮ್ಮ ಆರೋಗ್ಯವನ್ನು, ಜೊತೆಗೆ ನಮ್ಮ ಮುಂದಿನ ಪೀಳಿಗೆಯಾದ ಮಕ್ಕಳ ಆರೋಗ್ಯವನ್ನು ಹಾಳುಮಾಡುತ್ತೇವೆ.

ಫುಡ್ ಕ್ರೇವಿಂಗ್ಸ್ ಏನೋ ಹೇಳೋಕೆ ಹೊರಟಿದೆ, ಕಿವಿಗೊಟ್ಟು ಕೇಳಿ

ನಮ್ಮ ಹಿರಿಯರು ಹಲ್ಲುಜ್ಜಲು ಬಳಸುತ್ತಿದ್ದ ಬೇವಿನ ಕಡ್ಡಿ ಹರಳುಪ್ಪು ಹಲ್ಲಿಗೆ ಮಾರಕ, ಬದಲಾಗಿ ಟೂತ್‌ ಪೇಸ್ಟನ್ನು ಉಪಯೋಗಿಸಿ ಅಂತ ಶುರುವಾದ ಜಾಗತೀಕರಣ ಗಾಳಿ, ನಾವು ದಿನನಿತ್ಯ ಉಪಯೋಗಿಸುತ್ತಿದ್ದ ಪಾತ್ರೆ ತೊಳೆಯುವ ಶೀಗೆಕಾಯಿ, ಅಂಟುವಾಳ, ಅಡುಗೆಗೆ ಬಳಸುತ್ತಿದ್ದ ಕೊಬ್ಬರಿ ಎಣ್ಣೆವರೆಗೆ ಎಲ್ಲವನ್ನು ಬದಲಿಸಿದವು. ನಾವು ಕುರುಡರಂತೆ ಅದನ್ನು ನಂಬಿ ನಮ್ಮ ಜೀವನಶೈಲಿಯನ್ನು ಅವರಿಗೆ ಒಪ್ಪಿಸಿದೆವು. ನಮ್ಮ ಹಿರಿಯರು ಅಷ್ಟುಸದೃಢ ಹಲ್ಲನ್ನಿಟ್ಟುಕೊಂಡು 80 ವರುಷದವರೆಗೆ ಖಾಯಿಲೆ ಇಲ್ಲದ ಬದುಕಿದರು. ಪೂರ್ತಿಯಾಗಿ ಹಲ್ಲು ಬರುವುದರೊಳಗೆ ಹಾಳಾಗುವ ಹಲ್ಲನ್ನು ತೋರಿಸುವ ನಮ್ಮ ಮಕ್ಕಳು ಟೂತ್‌ಪೇಸ್ಟ್‌ ಉಪಯೋಗಿಸಿ ಏನನ್ನು ಸಾಧಿಸಿದರು! ನಮ್ಮ ಪಾರಂಪರಿಕ ಎಣ್ಣೆಯಿಂದ ಹೃದಯಕ್ಕೆ ತೊಂದರೆಯಾಗುತ್ತೆ ಎಂಬ ಮಾತನ್ನು ನಂಬಿ ರಿಫೈಂಡ್‌ ಎಣ್ಣೆಗಳನ್ನು ಬಳಸಿ 35 ವರ್ಷಕ್ಕೆ ಹೃದಯಾಘಾತಕ್ಕೊಳಗಾಗುತ್ತಿದ್ದೇವೆ. ಪಾತ್ರೆ ತೊಳೆಯಲು ಉಪಯೋಗಿಸುತ್ತಿದ್ದ ಶೀಗೆಕಾಯಿ ಬದಲಿಸಿ ಕೃತಕ ನಿಂಬೆಹಣ್ಣಿನ ಪರಿಮಳದ ಮೋಡಿಗೆ ಮರುಳಾಗಿ ಕ್ಯಾನ್ಸರ್‌ಅನ್ನು ತಂದುಕೊಳ್ಳುತ್ತಿದ್ದೇವೆ. ಅನ್ನ ತಿಂದರೆ ಡಯಾಬಿಟಿಸ್‌ ಬಂದುಬಿಡುತ್ತದೆ ಎನ್ನುತ್ತಾ ಪಿಜ್ಜಾ ತಿನ್ನುತ್ತೇವೆ.

ಇದನ್ನು ಓದಿದ್ರೆ ಇನ್ನು ನೀವು ಜಂಕ್ ಫುಡ್ ಮುಟ್ಟೋಲ್ಲ!

ನಿತ್ಯ ಬದುಕಿನಲ್ಲಿ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಎಲ್ಲವೂ ಕೃತಕ ರಾಸಾಯನಿಕಗಳ ಬಳಕೆ. ಟೂತ್‌ ಪೇಸ್ಟ್‌, ಸೋಪು, ಶ್ಯಾಂಪೂ, ಹ್ಯಾಂಡ್‌ ಸ್ಯಾನಿಟೈಸರ್‌, ಚಾಕೋಲೆಟ್‌, ಸ್ಯಾಂಡವಿಚ್‌, ಜ್ಯಾಮ್‌, ಜೊತೆಗೆ ಒಂದಷ್ಟುಬಿಸ್ಕತ್‌, ಪಿಜ್ಜಾ, ಕೂಲ್‌ಡ್ರಿಂಕ್‌ಗಳು.. ನಮ್ಮ ದೇಹವೇ ರಾಸಾಯನಿಕ ಕಾರ್ಖಾನೆಗೆ ಸಮವಾಗಿದೆ.

ಈ ರೀತಿ ರಾಸಾಯನಿಕಗಳನ್ನು ಹುಟ್ಟಿನಿಂದಲೂ ತುಂಬಿಕೊಂಡು ಬಂದರೆ ಮಕ್ಕಳ ಭವಿಷ್ಯದ ಗತಿಯೇನು.. ಅದಕ್ಕಾದರೂ ನಾವು ಸ್ವಲ್ಪ ಯೋಚಿಸಬೇಕು. ಪಾರಂಪರಿಕ ಆಹಾರ, ಬದುಕಿಗೆ ಮರಳಬೇಕು. ರಿಫೈನ್‌್ಡ ಎಣ್ಣೆಗೆ ಬಾಯ್‌ ಹೇಳಿ ಊರಿನ ಗಾಣದ ಎಣ್ಣೆಗೆ ಜೈ ಅನ್ನೋಣ. ಪ್ಲಾಸ್ಟಿಕ್‌ಗೆ ಬದಲು, ಸ್ಟೀಲ್‌ ಪಾತ್ರೆ, ಮಣ್ಣಿನ ಪಾತ್ರೆ, ಹಳೆಯ ಕಬ್ಬಿಣದ ಕಡಾಯಿಗಳಿಗೆ ಮರಳೋಣ. ಮಕ್ಕಳಿಗೆ ಚಾಕೊಲೆಟ್‌, ಸ್ಯಾಂಡವಿಚ್‌ಗಳ ಬದಲಿಗೆ ದೋಸೆ, ಇಡ್ಲಿ, ತಿನ್ನುವುದನ್ನು ಕಲಿಸೋಣ. ರೆಡಿ ಪ್ಯಾಕೆಟ್‌ನಲ್ಲಿರುವ ಜ್ಯೂಸ್‌ ಬದಲಿಗೆ ಸೀಸನ್‌ನಲ್ಲಿ ಸಿಗುವ ಹಣ್ಣು ತಿನ್ನಲು ಪ್ರೋತ್ಸಾಹಿಸೋಣ. ಹೀಗಿದ್ದರೆ ಮುಂದಿನ ಪೀಳಿಗೆ ಆರೋಗ್ಯವಂತವಾಗಿರುವುದು ಗ್ಯಾರೆಂಟಿ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karna Serial ನಿಧಿಗೆ ಹುಟ್ಟುಹಬ್ಬದ ಸಂಭ್ರಮ: ನಟಿ Bhavya Gowda ವಯಸ್ಸೆಷ್ಟು? ಕೈಹಿಡಿವ ಹುಡುಗ ಯಾರು?
ಹೊಯ್ಸಳರ ಬೇಲೂರು ದೇವಸ್ಥಾನಕ್ಕೂ ಲೂಯಿ ವಿಟಾನ್ ಲಾಂಛನಕ್ಕೂ ಇದೆ ನಂಟು? ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ!