
ನವದೆಹಲಿ (ಜುಲೈ 2, 2023): ಸಂಸತ್ತಿನ ಮುಂಬರುವ ಮುಂಗಾರು ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ ಎಂಬ ವರದಿಗಳ ಬೆನ್ನಲ್ಲೇ, ಸದ್ಯಕ್ಕೆ ಇಂಥ ಮಸೂದೆ ಅನಪೇಕ್ಷಿತ ಎಂಬ ಅಭಿಪ್ರಾಯವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ. ಸಂಸತ್ ಅಧಿವೇಶನದ ಕಾರ್ಯತಂತ್ರಗಳ ಬಗ್ಗೆ ಸಮಾಲೋಚಿಸಲು ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಂಥದ್ದೊಂದು ಅಭಿಪ್ರಾಯವನ್ನು ಕಾಂಗ್ರೆಸ್ ಪುನರುಚ್ಚರಿಸಿದೆ.
ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿದ ಪಕ್ಷದ ಹಿರಿಯ ನಾಯಕ ಜೈರಾಂ ರಮೇಶ್, ಏಕರೂಪ ನಾಗರಿಕ ಸಂಹಿತೆ ವಿಷಯದಲ್ಲಿ ಜೂನ್ 15ರಂದು ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ನಾವು ಈಗಲೂ ಬದ್ಧ. ಅದಕ್ಕೆ ಹೊಸದಾಗಿ ಸೇರಿಸಲೂ ಏನೂ ಇಲ್ಲ. ಸಂಹಿತೆ ಕುರಿತ ಕರಡು ವರದಿ ತಯಾರಾಗಿ, ಅದರ ಬಗ್ಗೆ ಚರ್ಚೆ ಆರಂಭವಾದ ಬಳಿಕ ನಾವು ನಮ್ಮ ಅಭಿಪ್ರಾಯ ವ್ಯಕ್ತಪಡಿಸಲಿದ್ದೇವೆ’ ಎಂದು ಹೇಳಿದ್ದಾರೆ.
ಇದನ್ನು ಓದಿ: ಏಕರೂಪ ನಾಗರಿಕ ಸಂಹಿತೆ ದೇಶದಲ್ಲೇ ಮೊದಲು ಉತ್ತರಾಖಂಡದಲ್ಲಿ ಜಾರಿ? ಉದ್ಧವ್ ಠಾಕ್ರೆಯಿಂದ್ಲೂ ಬೆಂಬಲ!
ಸಂಹಿತೆ ಬಗ್ಗೆ ಗಪ್ಚುಪ್: ದೆಹಲಿ ಶಾಹಿ ಇಮಾಂ ಫತ್ವಾ
ನವದೆಹಲಿ: ಏಕರೂಪ ನಾಗರಿಕ ಸಂಹಿತೆ ಬಗ್ಗೆ ಸಮುದಾಯದ ಯಾರೂ ಮಾತನಾಡಕೂಡದು ಎಂದು ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಂ ಫತ್ವಾ ಹೊರಡಿಸಿದ್ದಾರೆ. ಕೇಂದ್ರ ಕಾನೂನು ಆಯೋಗವು, ಸಂಹಿತೆ ಕುರಿತು ಜನರಿಂದ ಅಭಿಪ್ರಾಯ ಆಹ್ವಾನಿಸಿರುವ ಬೆನ್ನಲ್ಲೇ ಈ ಫತ್ವಾ ಹೊರಡಿಸಲಾಗಿದೆ.
ಶಾಹಿ ಇಮಾಮ್ ವಿದೇಶ ಪ್ರವಾಸದಲ್ಲಿದ್ದು, ಅಲ್ಲಿಂದಲೇ ಫತ್ವಾ ಹೊರಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಂಹಿತೆ ವಿರೋಧಿಸುವುದು ಮುಂಬರುವ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಮಾಡಿಕೊಡಬಹುದು. ಹೀಗಾಗಿ ಬಹಿರಂಗವಾಗಿ ಈ ಬಗ್ಗೆ ವಿರೋಧ ವ್ಯಕ್ತಪಡಿಸದೇ ಇರಲು ಮುಸ್ಲಿಂ ಸಂಘಟನೆಗಳು ಮುಂದಾಗಿವೆ ಎಂಬ ವರದಿಗಳ ಬೆನ್ನಲ್ಲೇ ಫತ್ವಾ ಸುದ್ದಿ ಹೊರಬಿದ್ದಿದೆ.
ಇದನ್ನೂ ಓದಿ: Uniform Civil Code: ರಾತ್ರೋರಾತ್ರಿ ಮುಸ್ಲಿಂ ಮಂಡಳಿ ಸಭೆ; ಸಂಹಿತೆಗೆ ಆಪ್ ಅಚ್ಚರಿಯ ತಾತ್ವಿಕ ಬೆಂಬಲ
ಈವರೆಗೆ ಕಾನೂನು ಆಯೋಗಕ್ಕೆ 8.5 ಲಕ್ಷಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಸಲ್ಲಿಕೆಯಾಗಿವೆ.
ಏಕರೂಪ ನಾಗರಿಕ ಸಂಹಿತೆಗೆ ನನ್ನ ಬೆಂಬಲ, ಜಾರಿಗೆ ಏಕೆ ತಡ: ಕಾಂಗ್ರೆಸ್ ಸಚಿವ
ಶಿಮ್ಲಾ: ದೇಶದ ಜನರಿಗೆ ಏಕರೂಪದ ಕಾನೂನನ್ನು ತರುವ ಕೇಂದ್ರ ಸರ್ಕಾರದ ಏಕರೂಪ ನಾಗರಿಕ ಸಂಹಿತೆಯನ್ನು ಹಿಮಾಚಲ ಪ್ರದೇಶದ ಕಾಂಗ್ರೆಸ್ ಸಚಿವ ವಿಕ್ರಮಾದಿತ್ಯ ಸಿಂಗ್ ಬೆಂಬಲಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ನಲ್ಲಿದ್ದು ಬಿಜೆಪಿ ಕ್ರಮವನ್ನು ಬೆಂಬಲಿಸಿದ್ದಾರೆ.
ಇದನ್ನೂ ಓದಿ: ಏಕರೂಪದ ಸಂಹಿತೆ ಪ್ರಸ್ತಾಪಕ್ಕೆ ಪ್ರತಿಪಕ್ಷಗಳು ಕೆಂಡಾಮಂಡಲ: ಮುಸ್ಲಿಂ ಮಂಡಳಿ ಆಕ್ಷೇಪ
ಈ ಕುರಿತು ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ವಿಕ್ರಮಾದಿತ್ಯ ಸಿಂಗ್, ‘ದೇಶದ ಏಕತೆ ಹಾಗೂ ಒಗ್ಗಟ್ಟಿಗೆ ಅಗತ್ಯವಿರುವ ಕೇಂದ್ರ ಸರ್ಕಾರದ ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸುತ್ತೇನೆ. ಇದನ್ನು ರಾಜಕೀಯ ಮಾಡುವುದು ಬೇಡ. ಆದರೆ ಕೇಂದ್ರ ಸರ್ಕಾರ ಸ್ಪಷ್ಟ ಬಹುಮತದ ಸರ್ಕಾರ ರಚಿಸಿ 9 ವರ್ಷಗಳು ಕಳೆದರೂ, ಜಾರಿ ಮಾಡದ ಸಂಹಿತೆಯನ್ನು ಚುನಾವಣೆಗೆ ಕೆಲವು ತಿಂಗಳಿರುವಾಗ ಏಕೆ ಪ್ರಸ್ತಾಪಿಸುತ್ತಿದೆ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: 2 ಕಾಯ್ದೆ ಇಟ್ಕೊಂಡು ದೇಶ ನಡೆಸಲು ಹೇಗೆ ಸಾಧ್ಯ? ಏಕರೂಪ ನಾಗರಿಕ ಸಂಹಿತೆ ಪರ ಪ್ರಧಾನಿ ಮೋದಿ ಬ್ಯಾಟಿಂಗ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ