Ayurvedic Treatment : ಅತಿಯಾದರೆ ಆಯುರ್ವೇದ ಔಷಧವೂ ಮಾರಕ!

Published : Jun 06, 2023, 03:10 PM IST
 Ayurvedic Treatment : ಅತಿಯಾದರೆ ಆಯುರ್ವೇದ ಔಷಧವೂ ಮಾರಕ!

ಸಾರಾಂಶ

ಆಯುರ್ವೇದದಿಂದ ಯಾವುದೇ ಅಡ್ಡಪರಿಣಾಮ ಇಲ್ಲ. ಇದು ಬಹುತೇಕ ಎಲ್ಲರೂ ನಂಬಿರುವ ಸಂಗತಿ. ಇದೇ ಕಾರಣಕ್ಕೆ ವೈದ್ಯರ ಸಲಹೆ ಇಲ್ಲದೆ ಕೆಲವರು ಆಯುರ್ವೇದ ಔಷಧಿ ಸೇವನೆ ಮಾಡ್ತಾರೆ. ಅದ್ರಲ್ಲಿ ನೀವೂ ಒಬ್ಬರಾಗಿದ್ದರೆ ಈ ವಿಷ್ಯ ತಿಳಿದ್ಕೊಳ್ಳಿ.  

ಆಯುರ್ವೇದ ಪದ್ಧತಿ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಬಹುತೇಕ ಮಂದಿ ಸಣ್ಣ ಪುಟ್ಟ ತೊಂದರೆ, ಖಾಯಿಲೆಗಳಿಗೆ ಈ ಆಯುರ್ವೇದ ಔಷಧವನ್ನೇ ಬಳಸುತ್ತಾರೆ. ಪ್ರಾಕೃತಿಕ ಔಷಧ, ಆಹಾರ, ಪಥ್ಯ, ಯೋಗ, ಪ್ರಾಣಾಯಾಮಗಳನ್ನು ಇಂದು ಅನೇಕ ಮಂದಿ ಅನುಸರಿಸಿ ಆರೋಗ್ಯ ಕಾಪಾಡಿಕೊಂಡಿದ್ದಾರೆ.

ಆಯುರ್ವೇದ (Ayurveda) ಮತ್ತು ಆಲೋಪತಿ (Allopathy) ಚಿಕಿತ್ಸಾ ಪದ್ಧತಿಯಲ್ಲಿ ಯಾವುದು ಹೆಚ್ಚು ಉತ್ತಮ ಎನ್ನುವುದರ ಕುರಿತು ಅನೇಕ ಜಿಜ್ಞಾಸೆಗಳು ನಡೆಯುತ್ತಲೇ ಇದೆ. ಆಯುರ್ವೇದದಂತೆ ಆಲೋಪತಿ ಕೂಡ ತನ್ನದೇ ರೀತಿಯಲ್ಲಿ ಚಿಕಿತ್ಸೆ (Treatment) ನೀಡುತ್ತೆ. ಆಯುರ್ವೇದ ಯಾವುದೇ ರೋಗವನ್ನು ಮೂಲದಿಂದ ಗುಣಪಡಿಸಿ ದೇಹದ ಸಮತೋಲನವನ್ನು ಕಾಪಾಡುತ್ತದೆ. ಅಲೋಪತಿ ಚಿಕಿತ್ಸೆ ಆಧುನಿಕ ವೈದ್ಯಕೀಯ ವ್ಯವಸ್ಥೆಯಾಗಿದ್ದು ವಿಜ್ಞಾನಿಗಳು ರೋಗದ ಕಾರಣಗಳನ್ನು ಪತ್ತೆಮಾಡಿ ಔಷಧಗಳನ್ನು ಕಂಡುಹಿಡಿಯುತ್ತಾರೆ. ಹಾಗಾಗಿ ರೋಗಿಗಳ ಅಗತ್ಯಗಳಿಗೆ ಅನುಗುಣವಾಗಿ ಎರಡೂ ಪದ್ಧತಿಯೂ ಅದರದೇ ಆದ ಮಹತ್ವವನ್ನು ಹೊಂದಿದೆ.

ಬೇಸಿಗೆಯಲ್ಲಿ ಆರೋಗ್ಯ ಹಾಳು ಮಾಡುತ್ತೆ Food Poison

ಆಯುರ್ವೇದ ಎಂದರೇನು? : ಆಯುರ್ವೇದ ಎಂಬುದು ಎರಡು ಶಬ್ದಗಳನ್ನು ಸೇರಿಸಿ ಉಂಟಾಗಿದೆ. ‘ಆಯು’ ಎಂಬ ಶಬ್ದ ಜೀವನ ಅಥವಾ ದೀರ್ಘಾಯುಷ್ಯ ಎಂಬ ಅರ್ಥವನ್ನು ಸೂಚಿಸುತ್ತದೆ. ‘ವೇದ’ ಎಂಬ ಶಬ್ದವು ಜ್ಞಾನ ಅಥವಾ ವಿಜ್ಞಾನ ಎಂಬದನ್ನು ಸೂಚಿಸುತ್ತದೆ. ಆಯುರ್ವೇದವು ಜಗತ್ತಿನ ಅತ್ಯಂತ ಪ್ರಾಚೀನ ಚಿಕಿತ್ಸಾ ಪದ್ಧತಿಯಲ್ಲಿ ಒಂದಾಗಿದೆ. ಆಯುರ್ವೇದ ಪದ್ಧತಿಯು ಸುಮಾರು ಮೂರುಸಾವಿರ ವರ್ಷದ ಹಿಂದೆಯೇ ಭಾರತದಲ್ಲಿ ಇದೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಪಾರಂಪರಿಕ ಚಿಕಿತ್ಸಾ ಪದ್ಧತಿ ಎಂದು ಸ್ವೀಕರಿಸಿದೆ. ಆಯುರ್ವೇದದ ಅನುಸಾರ ಮನುಷ್ಯನ ದೇಹ ನಾಲ್ಕು ಮೂಲಭೂತ ವಸ್ತುಗಳಾದ ದೋಷ, ಧಾತು, ಮಲ, ಅಗ್ನಿಗಳಿಂದ ಮಾಡಲ್ಪಟ್ಟಿದೆ. ಈ ನಾಲ್ಕು ಮೂಲ ತತ್ವಗಳು ಶಾರೀರಿಕ, ಮಾನಸಿಕ ಮತ್ತು ಭೌತಿಕ ಅಂಶಗಳನ್ನು ಒಳಗೊಂಡಿದೆ.

ಆಯುರ್ವೇದದಲ್ಲಿ ಶರೀರದ ಮೂಲಭೂತ ತತ್ವಗಳಿಗೆ ಬಹಳ ಮಹತ್ತರ ಸ್ಥಾನವಿದೆ. ಅದನ್ನು ಮೂಲ ಸಿದ್ಧಾಂತ ಅಥವಾ ಆಯುರ್ವೇದ ಚಿಕಿತ್ಸೆಯ ಮೂಲಭೂತ ನಿಯಮ ಎಂದೇ ಹೇಳಲಾಗುತ್ತೆ. ಇಷ್ಟೆಲ್ಲ ಅನುಕೂಲಕರವಾದ ಹಾಗೂ ಆರೋಗ್ಯಕ್ಕೆ ಪೂರಕವಾದ ಆಯುರ್ವೇದ ಪದ್ಧತಿಯಿಂದಲೂ ಕೂಡ ಸೈಡ್ ಇಫೆಕ್ಟ್ ಇದೆ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಅಲೋಪತಿ ಔಷಧಿ ಮಾತ್ರವಲ್ಲದೇ ಆಯುರ್ವೇದ ಔಷಧವನ್ನು ಅತಿಯಾಗಿ ಬಳಸುವುದರಿಂದಲೂ ಮನುಷ್ಯನ ಶರೀರದ ಮೇಲೆ ಅಡ್ಡಪರಿಣಾಮಗಳು ಬೀರುತ್ತದೆ. ಒಂದು ಅಧ್ಯಯನದ ಪ್ರಕಾರ ಆಯುರ್ವೇದ ಹರ್ಬಲ್ ಔಷಧಗಳನ್ನು ದೀರ್ಘಾವಧಿಯವರೆಗೆ ಬಳಸಿದರೆ ಆರೋಗ್ಯ ಹಾಳಾಗುವ ಸಾಧ್ಯತೆ ಇದೆ ಎಂಬುದು ತಿಳಿದುಬಂದಿದೆ.

Health Tips : ನೋವು ಮಾತ್ರವಲ್ಲ ತೂಕ ಕಡಿಮೆ ಮಾಡುತ್ತೆ ಈ ಮಸಾಜ್

ನ್ಯಾಶನಲ್ ಲೈಬ್ರರಿ ಆಫ್ ಮೆಡಿಸಿನ್ ವರದಿ ಹೀಗೆ ಹೇಳುತ್ತೆ? : ನ್ಯಾಶನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ವರದಿಯು ಆಯುರ್ವೇದ ಔಷಧದಲ್ಲಿನ ಕಲಬೆರಕೆ ಮತ್ತು ಗಿಡಮೂಲಿಕೆಗಳಲ್ಲಿರುವ ಆಂತರಿಕ ವಿಷದ ಅಂಶದಿಂದ ಅಡ್ಡಪರಿಣಾಮಗಳು ಉಂಟಾಗುತ್ತದೆ ಎಂದು ಹೇಳಿದೆ. ಆಯುರ್ವೇದದ ಮೂಲಿಕೆಗಳು ರೋಗವನ್ನು ತಡೆಗಟ್ಟುವುದರ ಬದಲು ರೋಗದಿಂದ ನಮ್ಮನ್ನು ತಪ್ಪಿಸುತ್ತವೆ. ಈ ಆಯುರ್ವೇದ ಗಿಡಮೂಲಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಥವಾ ದೀರ್ಘಕಾಲದವರೆಗೆ ಸೇವಿಸುವುದರಿಂದ ಹೊಟ್ಟೆ ನೋವು, ಅತಿಸಾರ, ವಾಕರಿಕೆ, ವಾಂತಿ, ಅಲರ್ಜಿ ಮುಂತಾದ ಅಡ್ಡಪರಿಣಾಮಗಳು ಕಾಣಿಸಿಕೊಳ್ಳಬಹುದು.

ಕೆಲವು ಗಿಡಮೂಲಿಕೆಗಳು ಸೌಮ್ಯವಾಗಿರುತ್ತವೆ ಮತ್ತು ಕೆಲವು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಸೌಮ್ಯ ಪ್ರಭಾವವನ್ನು ಬೀರುವ ಗಿಡಮೂಲಿಕೆಗಳು ಸುರಕ್ಷಿತವಾದರೂ ಕೆಲವು ಬಲಶಾಲಿ ಗಿಡಮೂಲಿಕೆಗಳು ಸುರಕ್ಷಿತವಲ್ಲ. ಹೆಚ್ಚಿನ ಜನರು ಆಯುರ್ವೇದ ಔಷಧದಿಂದ ಯಾವುದೇ ಅಪಾಯವಿಲ್ಲ ಎಂದು ನಂಬಿದ್ದಾರೆ. ಆದ್ದರಿಂದಲೇ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಆಯುರ್ವೇದ ಔಷಧವನ್ನು ವೈದ್ಯರ ಸಲಹೆಯಿಲ್ಲದೇ ಸೇವಿಸುತ್ತಾರೆ. ಹೀಗೆ ವೈದ್ಯರ ಸಲಹೆಯಿಲ್ಲದೇ ಆಯುರ್ವೇದ ಔಷಧವನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕರ ಎಂದು ಅನೇಕ ವೈದ್ಯರು ಹೇಳುತ್ತಾರೆ. ಹಾಗಾಗಿ ಆಯುರ್ವೇದ ಔಷಧ ಕೂಡ ಸುಲಭವಾಗಿ ಜನರ ಕೈಗೆ ಎಟುಕುವಂತಾಗಬಾರದು. ಭಾರತದಲ್ಲಿ ಅಲೋಪತಿ ಔಷಧದಂತೆ ಆಯುರ್ವೇದ ಔಷಧಗಳಿಗೂ ಕೂಡ ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕು ಎಂಬುದು ಅನೇಕ ವೈದ್ಯರ ಅಭಿಪ್ರಾಯವಾಗಿದೆ.   

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅತಿಯಾದ್ರೆ ಅಮೃತವೂ ವಿಷ, ಒಳ್ಳೇದಂತ ಮಿತಿ ಮೀರಿ ತಿಂದ್ರೆ ಅಷ್ಟೇ
ಹಾಲು ಮತ್ತು ಬೆಲ್ಲದ ಜೊತೆ ಸಿಹಿಗೆಣಸು ತಿನ್ನೋದ್ರಿಂದ ಸಿಗುತ್ತೆ ಸಾಕಷ್ಟು ಲಾಭ