
ಕೇರಳದಲ್ಲಿ ಮಿದುಳು ತಿನ್ನುವ ಅಮಿಬಾ ಸೋಂಕು ಪತ್ತೆ
ಚೀನಾದಂತೆ ದೇವರ ನಾಡು ಕೇರಳ ಆಗಾಗ ಹೊಸ ಹೊಸ ರೋಗಗಳ ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಆದರೆ ಈ ಬಾರಿ ಅತ್ಯಂತ ಭಯಾನಕವಾದ ರೋಗವೊಂದು ಕೇರಳದಲ್ಲಿ ಕಾಣಿಸಿಕೊಂಡಿದ್ದು, ಈ ಕಾಯಿಲೆಗೆ ಈಗಾಗಲೇ ಕೇರಳದಲ್ಲಿ 18 ಜನ ಬಲಿಯಾಗಿದ್ದು, 67 ಜನರು ಈ ಸೋಂಕಿನಿಂದ ಬಳಲುತ್ತಿದ್ದಾರೆ. ಮೆದುಳನ್ನು ತಿನ್ನುವ ಅಮೀಬಾ ರೋಗದ ಸೋಂಕಿಗೆ ಇವರು ತುತ್ತಾಗಿದ್ದು, ಕೇರಳದ ಆರೋಗ್ಯ ಇಲಾಖೆ ಈ ಸಂಬಂಧ ಸುತ್ತೋಲೆ ಹೊರಡಿಸಿದೆ. ಅಪರೂಪದ ಆದರೆ ಹೆಚ್ಚು ಮಾರಕವಾಗಿರುವ ಮಿದುಳಿನ ಸೋಂಕು ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಇದಾಗಿದೆ. ತಿರುವನಂತಪುರಂನಲ್ಲಿ 17 ವರ್ಷದ ಬಾಲಕನೊಬ್ಬನಿಗೆ ಈ ಸೋಂಕು ತಗುಲಿರುವುದು ದೃಢಪಟ್ಟ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಬಾಲಕನ ಅನಾರೋಗ್ಯಕ್ಕೆ ಕಾರಣವಾಗಿರುವುದು ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಸೋಂಕು ಎಂಬುದು ಧೃಡಪಟ್ಟ ನಂತರ ಆರೋಗ್ಯ ಇಲಾಖೆಯು ತಿರುವನಂತಪುರದ ಅಕ್ಕುಳಮ್ನಲ್ಲಿರುವ ಪ್ರವಾಸಿ ಗ್ರಾಮದಲ್ಲಿನ ಈಜುಕೊಳವನ್ನು ಮುಚ್ಚಿ ಪರೀಕ್ಷೆಗಾಗಿ ಇಲ್ಲಿನ ನೀರಿನ ಮಾದರಿಗಳನ್ನು ಸಂಗ್ರಹಿಸಿದೆ. ಇದೇ ಈಜುಕೊಳದಲ್ಲಿ ಬಾಲಕ ಹಿಂದಿನ ದಿನ ತನ್ನ ಸ್ನೇಹಿತರೊಂದಿಗೆ ಭೇಟಿ ನೀಡಿ ಅಲ್ಲಿ ಸ್ನಾನ ಮಾಡಿದ್ದ ಎಂಬುದನ್ನು ಅಧಿಕಾರಿಗಳು ಗಮನಿಸಿದ್ದಾರೆ.
ಇದುವರೆಗೆ ಕೇರಳದಲ್ಲಿ 18 ಸಾವು, 67 ಜನರಿಗೆ ಸೋಂಕು
ಸೆಪ್ಟೆಂಬರ್ 14 ರಂದು ಆರೋಗ್ಯ ಇಲಾಖೆಯ ವೆಬ್ಸೈಟ್ನಲ್ಲಿ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ ಅಡಿಯಲ್ಲಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕೇರಳದಲ್ಲಿ ಈ ವರ್ಷ 67 ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಪ್ರಕರಣಗಳು ದಾಖಲಾಗಿದ್ದು, 18 ಸಾವುಗಳು ಸಂಭವಿಸಿವೆ. ಈ ಮನುಷ್ಯರಿಗೆ ಮಾರಕವೆನಿಸಿದ ಈ ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ ಅನ್ನು ತಡೆಗಟ್ಟಲು ಕಠಿಣ ಕ್ರಮಗಳ ತುರ್ತು ಅಗತ್ಯವಿದೆ. ನೀರಿನ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಒತ್ತಿ ಹೇಳಿದ್ದಾರೆ.
ನಾವು ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ವಿರುದ್ಧ ಬಲವಾದ ರಕ್ಷಣೆಯನ್ನು ಸೃಷ್ಟಿಸಬೇಕು. ದನಗಳನ್ನು ಸ್ನಾನ ಮಾಡಿಸುವ ಜಲಮೂಲಗಳು ಸೇರಿದಂತೆ ನಿಂತ ಅಥವಾ ಕಲುಷಿತ ನೀರಿನಲ್ಲಿ ನಮ್ಮ ಮುಖವನ್ನು ತೊಳೆಯಬಾರದು ಅಥವಾ ಸ್ನಾನ ಮಾಡಬಾರದು ಎಂಬುದರ ಅರಿವಿರಬೇಕು ಎಂದು ಅವರು ಹೇಳಿದರು.
ಬಾವಿಗಳನ್ನು ವೈಜ್ಞಾನಿಕವಾಗಿ ಕ್ಲೋರಿನೇಟ್ ಮಾಡಬೇಕು ಮತ್ತು ವಾಟರ್ ಥೀಮ್ ಪಾರ್ಕ್ಗಳಲ್ಲಿನ ಈಜುಕೊಳಗಳನ್ನು ಸಹ ಸರಿಯಾಗಿ ಕ್ಲೋರಿನೇಟ್ ಮಾಡಬೇಕು, ನಿರ್ವಹಣೆಗೆ ಸಂಬಂಧಿಸಿದ ದಾಖಲೆಗಳನ್ನು ಸುರಕ್ಷಿತವಾಗಿ ಇಡಬೇಕು ಮನೆಗಳಲ್ಲಿ ನೀರು ಸಂಗ್ರಹಿಸುವ ಟ್ಯಾಂಕ್ಗಳನ್ನು ಸ್ವಚ್ಛವಾಗಿಡಬೇಕು. ಅಮೀಬಾ ನಿಮ್ಮ ಮೂಗಿನ ಮೂಲಕ ನಿಮ್ಮ ಮೆದುಳನ್ನು ಪ್ರವೇಶಿಸುತ್ತದೆ, ಆದ್ದರಿಂದ ನೀರು ನಿಮ್ಮ ಮೂಗಿಗೆ ಪ್ರವೇಶಿಸದಂತೆ ನೋಡಿಕೊಳ್ಳಿ ಎಂದು ಸಚಿವರು ಹೇಳಿದರು.
ಕಳೆದ ವಾರ ಕೇರಳದಲ್ಲಿ ಒಬ್ಬರು ಸಾಯುವುದರೊಂದಿಗೆ ರಾಜ್ಯದಲ್ಲಿ ಈ ಕಾಯಿಲೆಯಿಂದ ಒಂದೇ ತಿಂಗಳಲ್ಲಿ ಐದು ಜನ ಸಾವನ್ನಪ್ಪಿದ್ದಾರೆ. ಮಲಪ್ಪುರಂ ಜಿಲ್ಲೆಯ ವಂಡೂರಿನ 56 ವರ್ಷದ ಮಹಿಳೆ ಶೋಭನಾ ಎಂಬುವವರು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಡುವ ಮೂಲಕ ಒಂದು ತಿಂಗಳಲ್ಲಿ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿದೆ. ಹಾಗೆಯೇ
ಸುಲ್ತಾನ್ ಬತ್ತೇರಿಯ ಮೂಲದ 45 ವರ್ಷದ ರತೀಶ್ ಎಂಬ ಮತ್ತೊಬ್ಬ ವ್ಯಕ್ತಿ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅದೇ ಕಾಯಿಲೆಗೆ ಬಲಿಯಾಗಿದ್ದಾರೆ.
ಇದನ್ನೂ ಓದಿ: ಉಡುಪಿ ಹೋಟೆಲ್ ಮಾಣಿಯಂತೆ ಕನ್ನಡದಲ್ಲಿಯೇ ಆಹಾರದ ಹೆಸರು ಪಟಪಟನೆ ಹೇಳಿದ ವಿದೇಶಿಗನ ವೀಡಿಯೋ ಭಾರಿ ವೈರಲ್
ಇದನ್ನೂ ಓದಿ: ಕೆಲಸಕ್ಕೆ ಸೇರಿದ ಆರು ವರ್ಷಗಳಲ್ಲಿ ಕೋಟಿ ಕೋಟಿ ಆಸ್ತಿ: ಎಸಿಎಸ್ ಮಹಿಳಾ ಅಧಿಕಾರಿಯ ಬಂಧನ
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.