
ಬೆಂಗಳೂರು (ಆ.26): ರಾಜ್ಯದಲ್ಲಿ ಕಳೆದ ಒಂದು ದಶಕದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ (NCDs) ಪ್ರಮಾಣ ಭೀಕರವಾಗಿ ಏರಿಕೆಯಾಗಿದ್ದು, ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (NFHS-2023-24) ಇತ್ತೀಚಿನ ವರದಿಯ ಪ್ರಕಾರ, ಕರ್ನಾಟಕದಲ್ಲಿ ಕಳೆದ 10 ವರ್ಷಗಳಲ್ಲಿ ಮಧುಮೇಹಿಗಳ ಸಂಖ್ಯೆ ಸುಮಾರು 7 ಪಟ್ಟು ಹೆಚ್ಚಾಗಿದ್ದರೆ, ಅಧಿಕ ರಕ್ತದೊತ್ತಡ (BP/Hypertension) ಹೊಂದಿರುವವರ ಸಂಖ್ಯೆ ಭರ್ಜರಿ 27 ಪಟ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಬೊಜ್ಜಿನ ಸಮಸ್ಯೆಯೂ (Obesity) ದುಪ್ಪಟ್ಟಾಗಿದೆ.
ಗ್ರಾಮೀಣ ಭಾಗಗಳಿಗಿಂತ ನಗರ ಪ್ರದೇಶದ ಜನರಲ್ಲಿ ಈ ರೋಗಲಕ್ಷಣಗಳು ಅತಿ ಹೆಚ್ಚಾಗಿ ಕಂಡುಬಂದಿದ್ದು, ನಗರೀಕರಣ, ಜಡ ಜೀವನಶೈಲಿ, ಆಹಾರ ಪದ್ಧತಿ, ಹೆಚ್ಚಿದ ಸ್ಕ್ರೀನ್ ಟೈಮ್, ಮಾನಸಿಕ ಒತ್ತಡ ಹಾಗೂ ನಿದ್ರಾಹೀನತೆ ಇದಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಎಚ್ಚರಿಸಿದ್ದಾರೆ.
ಸಮೀಕ್ಷೆಯ ಪ್ರಕಾರ 2015-16 ರಿಂದ 2023-24ರ ಅವಧಿಯಲ್ಲಿ ಕಂಡುಬಂದ ಬದಲಾವಣೆಗಳು ಹೀಗಿವೆ
ಮಧುಮೇಹ (Diabetes): 2015-16 ರಲ್ಲಿ ಮಹಿಳೆಯರಲ್ಲಿ ಶೇ. 3.2 ರಷ್ಟಿದ್ದ ಪ್ರಮಾಣ, 2023-24 ರಲ್ಲಿ ಶೇ. 22.3 ಕ್ಕೆ ಏರಿಕೆಯಾಗಿದೆ. 2015-16 ರಲ್ಲಿ ಪುರುಷರಲ್ಲಿ ಶೇ. 3.7 ರಷ್ಟಿದ್ದ ಪ್ರಮಾಣ, 2023-24 ರಲ್ಲಿ ಶೇ. 26.1 ಕ್ಕೆ ತಲುಪಿದೆ.
ಅಧಿಕ ರಕ್ತದೊತ್ತಡ (Hypertension/BP): 2015-16 ರಲ್ಲಿ ಮಹಿಳೆಯರಲ್ಲಿ ಕೇವಲ ಶೇ. 0.7 ರಷ್ಟಿದ್ದ ಬಿಪಿ ಪ್ರಮಾಣ, 2023-24 ರಲ್ಲಿ ಶೇ. 25.1 ಕ್ಕೆ ಜಿಗಿದಿದೆ. 2015-16 ರಲ್ಲಿ ಪುರುಷರಲ್ಲಿ ಶೇ. 1.2 ರಷ್ಟಿದ್ದ ಪ್ರಮಾಣ, 2023-24 ರಲ್ಲಿ ಶೇ. 28.2 ಕ್ಕೆ ತಲುಪಿದೆ.
ಬೊಜ್ಜು/ಸ್ಥೂಲಕಾಯ (Obesity): 2015-16 ರಲ್ಲಿ ಮಹಿಳೆಯರಲ್ಲಿ ಶೇ. 23.3 ರಷ್ಟಿದ್ದ ಪ್ರಮಾಣ, 2023-24 ರಲ್ಲಿ ಶೇ. 41.2 ಕ್ಕೆ ಏರಿಕೆಯಾಗಿದೆ. 2015-16 ರಲ್ಲಿ ಪುರುಷರಲ್ಲಿ ಶೇ. 22.1 ರಷ್ಟಿದ್ದ ಪ್ರಮಾಣ, 2023-24 ರಲ್ಲಿ ಶೇ. 36.4 ಕ್ಕೆ ತಲುಪಿದೆ.
ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಜನರಲ್ ಮೆಡಿಸಿನ್ ವಿಭಾಗದ ಪ್ರೊ. ಅನುರಾಗ್ ಡಿ ಭಾರ್ಗವ್ ಪ್ರಕಾರ, ಉಪ್ಪು, ಧಾನ್ಯ ಹೆಚ್ಚಿದ್ದು, ಪ್ರೊಟೀನ್ ಹಾಗೂ ಹಣ್ಣು-ತರಕಾರಿಗಳು ಕಡಿಮೆಯಿರುವ ಆಹಾರ ಪದ್ಧತಿ ಮತ್ತು ದೈಹಿಕ ಶ್ರಮದ ಕೊರತೆಯಿಂದ ಹೃದಯಾಘಾತ, ಪಾರ್ಶ್ವವಾಯು (Stroke) ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗಳು (Kidney Disease) ಹೆಚ್ಚುತ್ತಿವೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ತುಮಕೂರು, ಕೋಲಾರ, ಹಾಸನ, ಚಿಕ್ಕಮಗಳೂರು ಮತ್ತು ಧಾರವಾಡ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಹೆಚ್ಚುವರಿಯಾಗಿ, ಉಪ್ಪು, ಸಕ್ಕರೆ ಮತ್ತು ಕೊಬ್ಬಿನಂಶ ಹೆಚ್ಚಿರುವ ಜಂಕ್ ಫುಡ್ಗಳು ಇದಕ್ಕೆ ಮುಖ್ಯ ಕಾರಣ ಎಂದು ಸಾರ್ವಜನಿಕ ಆರೋಗ್ಯ ಸಂಶೋಧಕ ಪ್ರಶಾಂತ್ ಎನ್ ಎಸ್ ಅಭಿಪ್ರಾಯಪಟ್ಟಿದ್ದಾರೆ.
ಆರೋಗ್ಯ ಸಚಿವ ಯು.ಟಿ. ಖಾದರ್ ಮಾತನಾಡಿ, "ಸರ್ಕಾರದ ವತಿಯಿಂದ ಉಚಿತವಾಗಿ ಬಿಪಿ ಮತ್ತು ಶುಗರ್ ಪರೀಕ್ಷೆ ಹಾಗೂ ಔಷಧಿಗಳನ್ನು ವಿತರಿಸಲಾಗುತ್ತಿದೆ. ಆದರೆ, ಬಹುತೇಕ ರೋಗಿಗಳು ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ," ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ನಿಯಮಿತ ತಪಾಸಣೆ ಮತ್ತು ಜೀವನಶೈಲಿ ಬದಲಾವಣೆಯಿಂದ ಮಾತ್ರ ಈ ಕಾಯಿಲೆಗಳನ್ನು ನಿಯಂತ್ರಿಸಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.