ಭಾರತೀಯ ಸಂಪ್ರದಾಯಗಳು ಆರೋಗ್ಯಕ್ಕೆ ಅರವಳಿಕೆ!

By Suvarna NewsFirst Published Apr 27, 2020, 4:44 PM IST
Highlights

ಈ ಸಂಪ್ರದಾಯಗಳು ಸಾಮಾನ್ಯ ಎನಿಸಬಹುದು. ಆದರೆ ಅವು ಹಲವಾರು ಆರೋಗ್ಯ ಲಾಭಗಳನ್ನು ಹೊಂದಿವೆ. 

ಭಾರತ ಎಂದೊಡನೆ ಮೂಢನಂಬಿಕೆಗಳ ತವರು, ಹಾವಾಡಿಗರ ದೇಶ ಎನ್ನುವವರು ಹಲವರು. ದೇಶದ ತುಂಬಾ ಹಲವಾರು ಸಂಪ್ರದಾಯಗಳು, ಆಚರಣೆಗಳು ತುಂಬಿದ್ದು ಕೆಲವರಿಗೆ ಅವು ಅತಿರೇಖ ಎನಿಸಬಹುದು. ಆದರೆ, ಕೆಲವೊಂದು ಸಂಪ್ರದಾಯಗಳು ದೇಶದುದ್ದಕ್ಕೂ ಆಚರಣೆಯಲ್ಲಿದ್ದು, ಅವು ಹಲವಾರು ಆರೋಗ್ಯ ಲಾಭಗಳನ್ನು ಹೊಂದಿವೆ. ಅದೇ ಕಾರಣಕ್ಕೆ ಅವು ಹಿಂದಿನ ಕಾಲದಲ್ಲಿ ಎಷ್ಟು ಪ್ರಸ್ತುತವಾಗಿದ್ದವೋ, ಇಂದಿಗೂ ಅಷ್ಟೇ ಪ್ರಸ್ತುತವಾಗಿವೆ. ಅಂಥ ಕೆಲವು ಆಚರಣೆಗಳ ಬಗ್ಗೆ ಇಲ್ಲಿ ನೀಡಲಾಗಿದೆ. 

ತಾಮ್ರದ ಚೊಂಬಿನಲ್ಲಿ ನೀರು ಕುಡಿಯುವುದು

ನಿಮ್ಮ ತಾತ ಮುತ್ತಾತಂದಿರು ತಾಮ್ರದ ಪಾತ್ರೆಗಳಲ್ಲಿ ನೀರನ್ನು ತುಂಬಿಡುವುದು, ತಾಮ್ರದ ಚೊಂಬಿನಲ್ಲೇ ಅದನ್ನು ಕುಡಿಯುವುದನ್ನು ನೀವು ಗಮನಿಸಿರಬಹುದು. ಈ ಅಭ್ಯಾಸವು ಅಸಂಖ್ಯ ಆರೋಗ್ಯ ಲಾಭಗಳನ್ನು ಹೊಂದಿದೆ. ತಾಮ್ರದ ಪಾತ್ರೆಗಳಿಂದ ನೀರನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಜೀರ್ಣಕ್ರಿಯೆ ವೇಗಗೊಳ್ಳುತ್ತದೆ, ಗಾಯ ಬೇಗ ಗುಣವಾಗುತ್ತದೆ, ಸಂಧಿಗಳನ್ನು ಬಲಗೊಳಿಸುತ್ತದೆ. 

ಹೇಗಿದ್ದೀರಿ? ರಾತ್ರಿ ನಿದ್ದೆ ಚೆನ್ನಾಗಿ ಆಯ್ತೇ! ಇಲ್ಲವಾದರೆ ನಿದ್ದೆ ...

ಕಿವಿ ಚುಚ್ಚುವುದು

ಭಾರತದಲ್ಲಿ ಬಹಳಷ್ಟು ಪೋಷಕರು ತಮ್ಮ ಮಗುವಿಗೆ ಹುಟ್ಟಿ ಮೂರು ತಿಂಗಳಾಗುವ ಒಳಗೆ ಕಿವಿ ಚುಚ್ಚಿಸುತ್ತಾರೆ. ಅನಾದಿ ಕಾಲದಿಂದಲೂ ಈ ಆಚರಣೆ ನಡೆದುಬಂದಿದೆ. ಈ ಕಿವಿ ಚುಚ್ಚುವುದು ಓಲೆ ಹಾಕಿ ಸೌಂದರ್ಯ ಮೆರೆಯಲು ಮಾತ್ರವಲ್ಲ, ಇದಕ್ಕೆ ಆಯುರ್ವೇದದಲ್ಲಿ ಒಂದು ಪ್ರಾಮುಖ್ಯತೆ ಇದೆ. ಅದರಂತೆ, ಕಿವಿ ಚುಚ್ಚುವ ಭಾಗದಲ್ಲಿರುವ ಅತಿ ಮುಖ್ಯ ಪಾಯಿಂಟ್ ಮಹಿಳೆಯರ ಸಂತಾನೋತ್ಪತ್ತಿ ಅಂಗಗಳ ಆರೋಗ್ಯ  ಹೆಚ್ಚಿಸುವ ಜೊತೆಗೆ ಅವರ ಋತುಚಕ್ರ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. 

ಹುಲ್ಲಿನ ಮೇಲೆ ಬರಿಗಾಲ ನಡಿಗೆ

ಹಸಿರಾದ ಹುಲ್ಲು, ಅದರ ಮೇಲೆ ಕುಳಿತ ಇಬ್ಬನಿಯ ಕುರಿತು ಕಲ್ಪಿಸಿಕೊಂಡರೇ ಒಂದು  ಫ್ರೆಶ್‌ನೆಸ್ ಫೀಲ್ ಮಾಡಬಹುದಲ್ಲವೇ? ಹುಲ್ಲಿನ ಮೇಲೆ ಬರಿಗಾಗಲ್ಲಿ ನಡೆಯುವುದರಿಂದ ನಿದ್ರೆಯ ಗುಣಮಟ್ಟ ಹೆಚ್ಚುವ ಜೊತೆಗೆ ನೋವುಗಳು ಕಡಿಮೆಯಾಗುತ್ತವೆ, ಒತ್ತಡ ಇಳಿಕೆಯಾಗುತ್ತದೆ, ಸ್ನಾಯು ಸೆಳೆತ ತಗ್ಗುತ್ತದೆ ಎಂಬುದನ್ನು ಹಲವಾರು ಸಂಶೋಧನೆಗಳು ದೃಢಪಡಿಸಿವೆ. ಹಾಗಾಗಿ, ಸಾಧ್ಯವಿದ್ದಲೆಲ್ಲ ಶೂ ತೆಗೆದು ಹಸಿರು ಹುಲ್ಲುಹಾಸಿನ ಮೇಲೆ ಕೆಲ ಕಾಲ ನಡೆಯಿರಿ. 

ಆಭರಣಗಳು

ಹಬ್ಬಹರಿದಿನಗಳಲ್ಲಿ, ಕಾರ್ಯಕ್ರಮಗಳಿಗೆ, ದಿನನಿತ್ಯಕ್ಕೆ ಕೂಡಾ ಆಭರಣಗಳನ್ನು ಧರಿಸುವುದು ಭಾರತೀಯರ ಅಭ್ಯಾಸ. ಬೆಳ್ಳಿಯ ಆಭರಣಗಳು ರಕ್ತ ಪರಿಚಲನೆ ಹೆಚ್ಚಿಸಿ, ಶೀತ, ಫ್ಲೂಗಳನ್ನು ತಡೆಗಟ್ಟುತ್ತವೆ. ಗಾಯ ಗುಣವಾಗುವುದರಲ್ಲೂ ಪಾತ್ರ ವಹಿಸುತ್ತವೆ. ಇನ್ನು ಚಿನ್ನದ ಆಭರಣಗಳು ದೇಹದ ತಾಪಮಾನ ನಿರ್ವಹಿಸುವ ಜೊತೆಗೆ ಒತ್ತಡ ತಗ್ಗಿಸಿ ಪಾಸಿಟಿವ್ ಎನರ್ಜಿಯನ್ನು ಆಕರ್ಷಿಸುತ್ತವೆ. 

ಕೈನಿಂದ ಆಹಾರ ಸೇವನೆ

ಕೈನಲ್ಲಿ ತಿನ್ನುವುದು ಭಾರತೀಯರ ಅಭ್ಯಾಸ. ಚಮಚದ ಬಳಕೆ ನಮಗೆ ಸರಿ ಬರುವುದಿಲ್ಲ. ಕೈ ಬಳಸಿ ಆಹಾರ ಸೇವಿಸುವುದು ನಮ್ಮ ಕರುಳ ಆರೋಗ್ಯಕ್ಕೆ ಒಳ್ಳೆಯದು. ಇದು ಕೈನಿಂದ ಆರೋಗ್ಯವಂತ ಬ್ಯಾಕ್ಟೀರಿಯಾಗಳು ದೇಹದೊಳಗೆ ಸೇರಿ ಕೆಟ್ಟ ಬ್ಯಾಕ್ಟೀರಿಯಾದ ವಿರುದ್ಧ ಫೈಟ್ ಮಾಡಲು ಸಹಕಾರಿ. ಜೊತೆಗೆ, ಕೈನಿಂದ ತಿನ್ನುವುದರಿಂದ ಆಹಾರದೊಂದಿಗೆ ಸಂಪರ್ಕವೇರ್ಪಟ್ಟಂತಾಗಿ, ಆಹಾರ ಹೆಚ್ಚು ರುಚಿಕರ ಎನಿಸುತ್ತದೆ. 

ಪ್ರೀತಿಸುವುದೊಂದೇ ಅಲ್ಲ, ಅಭಿವ್ಯಕ್ತಿಯೂ ಒಂದು ಕಲೆ!

ಉಪವಾಸ

ಮಂಗಳವಾರದ ವೃತವೇ ಇರಲಿ, ಸಂಕಷ್ಟಿ ಇರಲಿ- ಉಪವಾಸ ಆಚರಣೆಯನ್ನು ಭಾರತೀಯರು ತಲತಲಾಂತರದಿಂದ ನಡೆಸಿಕೊಂಡು ಬರುತ್ತಿದ್ದಾರೆ. ಈ ಉಪವಾಸದಿಂದ ದೇಹ ಎಷ್ಟೆಲ್ಲ ಗಳಿಸಿಕೊಳ್ಳುತ್ತದೆ ಎಂಬ ಐಡಿಯಾ ಇದೆಯೇ ನಿಮಗೆ? ಉಪವಾಸವು ತೂಕ ಇಳಿಕೆಯ ಜೊತೆಗೆ ಮೆಟಬಾಲಿಸಂ ಹೆಚ್ಚಿಸಿ, ಮೆದುಳನ್ನು ಚುರುಕುಗೊಳಿಸುತ್ತದೆ. ಆಯಸ್ಸನ್ನೂ ಹಿಗ್ಗಿಸುತ್ತದೆ.

ಸೂರ್ಯ ನಮಸ್ಕಾರ

12 ಯೋಗಾಸನಗಳನ್ನು ಒಳಗೊಂಡ ಸೂರ್ಯ ನಮಸ್ಕಾರ ಹುಟ್ಟಿದ್ದೇ ಭಾರತದಲ್ಲಿ. ಸೂರ್ಯ ನಮಸ್ಕಾರವನ್ನು ಪ್ರತಿ ದಿನ ಮಾಡುವುದರಿಂದ ತೂಕ ಇಳಿಸಬಹುದು, ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ, ತ್ವಚೆ ಕಾಂತಿ ಪಡೆದುಕೊಳ್ಳುತ್ತದೆ, ನಿದ್ರೆಯ ಗುಣಮಟ್ಟ ಹೆಚ್ಚುವ ಜೊತೆಗೆ ರಕ್ತದಲ್ಲಿ ಶುಗರ್ ಕಡಿಮೆಯಾಗುತ್ತದೆ. 

ಬೆಳ್ಳಿಯ ಪಾತ್ರೆಯಲ್ಲಿ ತಿನ್ನುವುದು

ಬೆಳ್ಳಿಯ ತಟ್ಟೆಯಲ್ಲಿ ತಿನ್ನುವ ಅಭ್ಯಾಸ ಭಾರತೀಯರಿಗೆ ಬಹಳ ಹಿಂದಿನಿಂದಲೂ ಇದೆ. ಇತಿಹಾಸ ಕೆದಕಿದರೆ ಹಲವರು ಬೆಳ್ಳಿಯ ತಟ್ಟೆ, ಚಮಚದಲ್ಲೇ ಊಟ ಮಾಡುತ್ತಿದ್ದ ವಿಷಯ ತಿಳಿಯುತ್ತದೆ. ಬೆಳ್ಳಿಯು ಆ್ಯಂಟಿ ವೈರಲ್ ಹಾಗೂ ಆ್ಯಂಟಿ ಬ್ಯಾಕ್ಟೀರಿಯಲ್ ಆಗಿರುವುದರಿಂದ ಬೆಳ್ಳಿಯ ತಟ್ಟೆಯಲ್ಲಿ ಆಹಾರ ಸೇವಿಸುವುದು ಆಹಾರದ ಗುಣಮಟ್ಟ ಹೆಚ್ಚಿಸುತ್ತದೆ. 

click me!