
ಜಗತ್ತನ್ನೇ ನಡುಗಿಸಿದ್ದ ಕೊರೋನಾ (Corona) ವೈರಸ್ ಕಾಟ ಕಡಿಮೆಯಾಯ್ತು ಅಂತ ಅಂದುಕೊಳ್ಳುವಾಗ್ಲೇ ಮತ್ತೆ ಶುರುವಾಗಿದೆ. ಮಂಕಿಪಾಕ್ಸ್ (Monkeypox), ಟೊಮೇಟೋ ಫ್ಲೂ ನಡುವೆನೇ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ 24 ಗಂಟೆಯಲ್ಲಿ 8,582 ಕೇಸ್ ಪತ್ತೆಯಾಗಿದೆ. ಈ ಬಗ್ಗೆ ತಜ್ಞರು ಮಾತನಾಡಿದ್ದಾರೆ. ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ವರದಿ ಮಾಡುತ್ತಿರುವ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳವು ಭೀತಿಗೆ ಕಾರಣವಾಗಬಾರದು ಎಂದು ಉನ್ನತ ಆರೋಗ್ಯ ತಜ್ಞರು ಹೇಳಿದ್ದಾರೆ. ಮಾತ್ರವಲ್ಲ ವೈರಸ್ನ ಯಾವುದೇ ಹೊಸ ರೂಪಾಂತರದ ತಳಿ ಬಂದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
AIIMS ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾ ಮಾತನಾಡಿ, ಕೋವಿಡ್ ಸೋಂಕು ದಿಢೀರ್ ಹೆಚ್ಚಳವಾಗಿರೋದಕ್ಕೆ ಬೂಸ್ಟರ್ ಡೋಸ್ಗಳು ಕಡಿಮೆ ಪೂರೈಕೆಯಾಗಿರುವುದು ಮತ್ತು ಜನರು ಕೋವಿಡ್ ಶಿಷ್ಟಾಚಾರವನ್ನು ಸರಿಯಾಗಿ ಪಾಲಿಸದಿರುವುದೇ ಕಾರಣ ಎಂದು ಹೇಳಿದ್ದಾರೆ. ಡಾ.ಗುಲೇರಿಯಾ ಪ್ರಕಾರ, ಜನರು ಕೊರೋನಾ ವೈರಸ್ ತಡೆಯುವ ಲಸಿಕೆ ಮತ್ತಯ ಬೂಸ್ಟರ್ ಡೋಸ್ ಪಡೆಯುವಲ್ಲಿ ಆಸಕ್ತಿ ತೋರುತ್ತಿಲ್ಲ. ಸೋಂಕಿನ ಬಗ್ಗೆ ಜನರಲ್ಲಿ ಭಯವೇ ಇಲ್ಲದಂತಾಗಿದೆ ಎಂದಿದ್ದಾರೆ. ಹೀಗಾಗಿ ಜನರು ವೈರಸ್ನ ಅಪಾಯದ ಬಗ್ಗೆ ತಿಳಿದುಕೊಂಡು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಉಪಯೋಗಿಸುವುದು, ಗುಂಪಲ್ಲಿ ಸೇರದಿರುವುದು ಮೊದಲಾದ ಶಿಷ್ಟಾಚಾರಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.
ಹತ್ತೇ ದಿನದಲ್ಲಿ ಕೊರೋನಾ ಪ್ರಕರಣ ಮೂರು ಪಟ್ಟು ಹೆಚ್ಚಳ!
ಬೇಸಿಗೆಯ ರಜಾದಿನಗಳಲ್ಲಿ ಜನರು ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣ ಮಾಡಿದ್ದಾರೆ. ಆದ್ರೆ ಯಾವುದೇ ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿಲ್ಲ. ಇದು ವೈರಸ್ ಹರಡುವಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.
ಹೊಸ ರೂಪಾಂತರ ಪತ್ತೆಯಾಗಿಲ್ಲ
ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದು ನಿಜ. ಆದರೆ ಇದು ಯಾವುದೇ ರೀತಿಯಲ್ಲಿ ಅಪಾಯಕಾರಿಯಲ್ಲ ಎಂಬುದನ್ನು ತಜ್ಞರ ತಂಡ ಸ್ಪಷ್ಟಪಡಿಸಿದೆ. ಯಾವುದೇ ಹೊಸ ರೂಪಾಂತರವು ಇಲ್ಲಿಯವರೆಗೆ ಕಂಡುಬಂದಿಲ್ಲ ಮತ್ತು ಇದುವರೆಗಿನ ಏರಿಕೆಯು ಕೆಲವು ರಾಜ್ಯಗಳಿಗೆ ಮತ್ತು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ರೋಗ ನಿರೋಧಕ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಎನ್ಟಿಎಜಿಐ(NTAGI) ಅಧ್ಯಕ್ಷರಾದ ಡಾ. ಎನ್.ಕೆ ಅರೋರಾ ಹೇಳಿದ್ದಾರೆ. ಮೊದಲನೆಯದಾಗಿ, ನಾವು ಯಾವುದೇ ಹೊಸ ರೂಪಾಂತರವನ್ನು ಕಂಡುಕೊಂಡಿಲ್ಲ. ಭಾರತವು ಈಗ BA.4 ಮತ್ತು BA.5 ಮೊದಲಾದ ಕೊರೋನಾ ರೂಪಾಂತರವನ್ನು ಹೊಂದಿದೆ, BA.2 ಜೊತೆಗೆ ಕೂಡಿದೆ. ಇತರ ಓಮಿಕ್ರಾನ್ ವೈರಸ್ ಗೆ ಹೋಲಿಸಿದರೆ ಸ್ವಲ್ಪ ಹೆಚ್ಚಿನ ಪ್ರಸರಣವನ್ನು ಹೊಂದಿದೆ ಎಂದು ಡಾ.ಅರೋರಾ ಹೇಳಿದರು.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 8,582 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿನಿಂದ 4 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ದೇಶದಲ್ಲ ಕೊರೋನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 524761 ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಇಂದು 8,582 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 44,513ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Central Ministry) ಮಾಹಿತಿ ನೀಡಿದೆ.
Coronavirus ಕರ್ನಾಟಕದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಏರಿಕೆ, ಇರಲಿ ಎಚ್ಚರಿಕೆ
ಇನ್ನೊಂದೆಡೆ, ಕರ್ನಾಟಕದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದರಿಂದ ಆತಂಕ ಶುರುವಾಗಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದದು, ಕಳೆದ 24 ಗಂಟೆಯಲ್ಲಿ 562 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 3,955,871ಕ್ಕೆ ಏರಿಕೆಯಾಗಿದೆ. ಇನ್ನೂ ರಾಜ್ಯದಲ್ಲಿ ಮಹಾಮಾರಿ ಕೊರೋನಾದಿಂದ ನಿನ್ನೆ ಯಾವುದೇ ಸಾವು ವರದಿಯಾಗಿಲ್ಲ. ಹೀಗಾಗಿ ಸಾವಿನ ಸಂಖ್ಯೆ 40,066 ಇದೆ. ಇನ್ನು 352 ಸೇರಿದಂತೆ ಇದುವರೆಗೆ 3912376 ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ಈಗ 3387 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.