ಕೋವಿಡ್ ಮಾರ್ಗಸೂಚಿ: ಹೊಸ ವರ್ಷ, ಕ್ರಿಸ್‌ಮಸ್‌ಗೆ ನಿರ್ಬಂಧವಿಲ್ಲ, 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ!

By Sathish Kumar KHFirst Published Dec 21, 2023, 2:38 PM IST
Highlights

ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಗೆ ಯಾವುದೇ ಕೋವಿಡ್ ನಿರ್ಬಂಧವಿಲ್ಲ.

ಬೆಂಗಳೂರು (ಡಿ.21): ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮೂವರು ಸಾವನ್ನಪ್ಪಿದ್ದು, ಎಲ್ಲ 60 ವರ್ಷ ಮೇಲ್ಪಟ್ಟ ವೃದ್ಧರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಆದರೆ, ಸಾಮಾನ್ಯ ಜನರು ಜನಸಂದಣಿಯ ಪ್ರದೇಶಗಳಲ್ಲಿ ಮಾತ್ರ ಮಾಸ್ಕ್‌ ಧರಿಸಬೇಕು. ಇನ್ನು ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಗೆ ಯಾವುದೇ ಕೋವಿಡ್ ನಿರ್ಬಂಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋವಿಡ್ ಮಾರ್ಗಸೂಚಿಯನ್ನು ತಿಳಿಸಿದ್ದಾರೆ.

ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 60 ವರ್ಷ ಮೇಲ್ಮೆಟವರು ಕಡ್ಡಾಯ ಮಾಸ್ಕ್ ಹಾಕಬೇಕು. ಮಾಸ್ಕ್ ಕಡ್ಡಾಯ ಮಾಡ್ತಿಲ್ಲ, ಕಾರಣ ಆ ಪರಿಸ್ಥಿತಿ ಬಂದಿಲ್ಲ. ಆದ್ರೆ ಜನ ಸಂದಣಿಯಲ್ಲಿ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಿ. ಅಕ್ಸಿಜನ್ ಬೆಡ್ ವೆಂಟಿಲೇಶನ್ ಮುಂಚಿತವಾಗಿ ಎಲ್ಲಾ ತಯಾರಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಕೇಂದ್ರ ಕೊಡೋದಕ್ಕಿಂತ ಮುಂಚಯೇ ಲಸಿಕೆ ಖರೀದಿ ಮಾಡಲು ಸೂಚಿಸಲಾಗಿದೆ. ಹೊಸ ವರ್ಷ ಹಾಗೂ ಕ್ರಿಸ್‌ಮಸ್‌ ಹಬ್ಬಕ್ಕೆ ಯಾವುದೇ ನಿಯಮ ಇಲ್ಲ. ಆದರೆ, ಜನಸಂದಣಿಯಲ್ಲಿ ಮಾಸ್ಕ್ ಹಾಕಿಕೊಳ್ಳಿ ಎಂದು ರಾಜ್ಯದ ಜನತೆಗೆ ಮನವಿ ಮಾಡಲಾಗುತ್ತಿದೆ ಎಂದರು.

ಜನವರಿಯಲ್ಲಿ ಪೀಕ್‌ಗೆ ಏರಲಿದೆ ಕೋವಿಡ್ ಸೋಂಕಿತರ ಸಂಖ್ಯೆ: ಹೊಸ ವರ್ಷಕ್ಕೆ ಕೊರೊನಾ ಕಂಟಕ ಶುರು!

ಹಿಂದಿನ ಸರ್ಕಾರದಲ್ಲಾದ ತಪ್ಪುಗಳು ಮರುಕಳಿಸಬಾರದು ಎನ್ನುವ ಸ್ಪಷ್ಟ ಸೂಚನೆ ನೀಡಿದ್ದೇನೆ. ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಸೇರಿ ಇನ್ನಿತರೆ ಯಾವುದಕ್ಕೂ ಕೊರತೆ ಆಗಬಾರದು. ಈಗಿನ ಉಪತಳಿ JN.1 (ಒಮಿಕ್ರಾನ್ ಯಪತಳಿ) ಇದು  ಅಪಾಯಕಾರಿಯಲ್ಲ. ಈ ಉಪತಳಿ ರಾಜ್ಯದಲ್ಲಿ 92 ಪತ್ತೆಯಾಗಿದೆ. ಬೆಂಗಳೂರಲ್ಲಿ 80 ಪತ್ತೆಯಾಗಿದ್ದು 20 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ಉಳಿದವರು ಮನೆಯಲ್ಲೇ ಇದ್ದಾರೆ. 20 ರಲ್ಲಿ  7 ಮಂದಿ ICU ನಲ್ಲಿದ್ದಾರೆ. ಆದರೆ ಇವರಿಗೆ ಇನ್ನಿತರೆ ಆರೋಗ್ಯ ಸಮಸ್ಯೆಗಳಿರುವ ಕಾರಣಕ್ಕೆ ICU ನಲ್ಲಿದ್ದಾರೆ ಎಂದು ತಿಳಿಸಿದರು.

ಪ್ರತಿದಿನ 5000 ಟೆಸ್ಟ್ ಗಳು ನಡೆಯುತ್ತವೆ. ಬೆಂಗಳೂರಲ್ಲಿ ಸಾವಿರ ಪರೀಕ್ಷೆ ಮಾಡಲಾಗುತ್ತಿದೆ. ಇನ್ನು ಸೋಂಕು ನಿಯಂತ್ರಣಕ್ಕೆ ಕ್ಯಾಬಿನೆಟ್ ಉಪಸಮಿತಿ ರಚಿಸಲಾಗುವುದು. ಇವರು ಸಲಹಾ ಸಮಿತಿ ಜತೆ ಸಂಪರ್ಕದಲ್ಲಿದ್ದು ನಿರಂತರ ನಿಗಾ ಇಡಬೇಕು. ತಾಂತ್ರಿಕ ಸಲಹಾ ಸಮಿತಿ ಸಲಹೆಗಳನ್ನು ಪೂರ್ತಿಯಾಗಿ ಜಾರಿ ಮಾಡಬೇಕು. ಗಡಿ ಜಿಲ್ಲೆಗಳಲ್ಲಿ ಹೆಚ್ಚೆಚ್ಚು ಪರೀಕ್ಷೆಅಗಬೇಕು. ಜನರು ಆತಂಕ ಪಡುವ ಅಗತ್ಯವಿಲ್ಲ. ಎಲ್ಲರೂ ಎಚ್ಚರಿಕೆಯಿಂದಿದ್ದರೆ ಸಾಕು. 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಮಾಸ್ಕ್‌ ಕಡ್ಡಾಯವಿದ್ದು, ಇದಕ್ಕಿಂತ ಕೆಳಗಿನವರಿಗೆ ಮಾಸ್ಕ್ ಕಡ್ಡಾಯವಿಲ್ಲ. ಜನಸಂದಣಿಗೆ ಹೋಗುವವರು ಮಾಸ್ಕ್ ಧರಿಸಿದರೆ ಒಳ್ಳೆಯದು ಎಂದು ತಿಳಿಸಿದರು.

ದೇಶದಲ್ಲಿ ಮತ್ತೆ ವಕ್ಕರಿಸಿದ ಮಹಾಮಾರಿ, ಇದು ಕೊರೋನಾ ನಾಲ್ಕನೇ ಅಲೆನಾ?

ಕೋವಿಡ್ ಡೆಡಿಕೇಟೆಡ್ ಆಸ್ಪತ್ರೆಗಳಲ್ಲಿ ಸಕಲ ಸಿದ್ದತೆ ಇರುತ್ತವೆ. ಎಲ್ಲಾ ಜಿಲ್ಲೆಗಳಲ್ಲೂ ಆಕ್ಸಿಜನ್, ಬೆಡ್, ವೆಂಟಿಲೇಟರ್ ಸೇರಿ ಕೋವಿಡ್ ಸಂಬಂಧಿತ ಎಲ್ಲವನ್ನೂ ವ್ಯವಸ್ಥೆ ಮಾಡಿಕೊಳ್ಳಬೇಕು. ಲಸಿಕೆಗಳನ್ನು ಸಿದ್ದವಿಟ್ಟುಕೊಳ್ಳಲು ಸೂಚಿಸಲಾಗಿದೆ. ಕೇರಳದಲ್ಲಿ ಪರೀಕ್ಷೆ ಹೆಚ್ಚು ಮಾಡಲಾಗುತ್ತಿದೆ. ಆದ್ದರಿಂದ ಪ್ರಮಾಣ ಕೂಡ ಹೆಚ್ಚಿದೆ. ಇಲ್ಲಿ ಪರೀಕ್ಷೆಗಳು ಹೆಚ್ಚಾದಂತೆ ಪತ್ತೆ ಪ್ರಮಾಣವೂ ಹೆಚ್ಚಾಗಿದೆ. ಮಾಧ್ಯಮದವರು, ಚಾನಲ್ ನವರು ಅನಗತ್ಯ ಪ್ಯಾನಿಕ್ ಸೃಷ್ಟಿಸಬಾರದು. ಆತಂಕ ಪಡಬೇಕಾದ ಸಂದರ್ಭವೇ ಬಂದಿಲ್ಲ ಎಂದರು.

ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಾಕಷ್ಟು ಹಣ ಇದೆ. ಕೋವಿಡ್ ನಿರ್ವಹಣೆಗೆ ಹಣಕಾಸಿಗೆ ಕೊರತೆ ಇಲ್ಲ. ಪರಿಸ್ಥಿತಿ ನೋಡಿಕೊಂಡು ಡೆಡಿಕೇಡೆಡ್ ಆಸ್ಪತ್ರೆಗಳನ್ನು ನಿಗದಿ ಮಾಡುತ್ತೇವೆ. ಈಗಲೇ ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎನ್ನುವ ಸಲಹೆ ತಾಂತ್ರಿಕ ಸಲಹಾ ಸಮಿತಿ ಮತ್ತು ತಜ್ಞರಿಂದ ಬಂದಿದೆ ಎಂದು ಮಾಹಿತಿ ನೀಡಿದರು. 

click me!