Published : Oct 14, 2025, 09:45 PM ISTUpdated : Oct 14, 2025, 10:47 PM IST
ಕೌನ್ ಬನೇಗಾ ಕರೋರ್ಪತಿಯಲ್ಲಿ ಅಧಿಕಪ್ರಸಂಗತನ ತೋರಿದ ಬಾಲಕನ ವರ್ತನೆಗೆ ಪೋಷಕರೇ ಕಾರಣ ಎಂದು ಟೀಕೆ ವ್ಯಕ್ತವಾಗಿದೆ. ಇದೇ ವೇಳೆ, ಮಕ್ಕಳಿಗೆ ಕೇಳಿದ್ದನ್ನೆಲ್ಲಾ ಕೊಡಿಸಬಾರದು ಎಂಬ ಸಂಸದ ಯದುವೀರ ದತ್ತ ಒಡೆಯರ್ ಅವರ ಮಾತು ವೈರಲ್ ಆಗಿದ್ದು, ಉತ್ತಮ ಪಾಲನೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ಕೌನ್ ಬನೇಗಾ ಕರೋರ್ಪತಿಯಲ್ಲಿ (Kaun Banega Crorepati) ಅಮಿತಾಭ್ ಬಚ್ಚನ್ ಜೊತೆ ಅಧಿಕಪ್ರಸಂಗತನದ ವರ್ತನೆ ತೋರಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ನಿಂದನೆಗೆ ಒಳಗಾಗಿದ್ದಾನೆ ಬಾಲಕ ಇಷಿತ್ ಭಟ್ (Ishit Bhatt) ಅಷ್ಟಕ್ಕೂ ಈತನಿಗಿಂತಲೂ ಮುಖ್ಯವಾಗಿ ಈತನ ಈ ವರ್ತನೆಗೆ ಕಾರಣವಾಗಿರುವ ಆತನ ಅಪ್ಪ-ಅಮ್ಮನ ವಿರುದ್ಧ ಭಾರಿ ಟೀಕೆಗಳು ಕೇಳಿಬರುತ್ತಿವೆ. ಈ ಷೋನಲ್ಲಿ ಆತ ಅತಿಯಾಗಿ ವರ್ತಿಸುತ್ತಿದ್ದರೂ, ಅಪ್ಪ-ಅಮ್ಮ ಅದೊಂದು ರೀತಿಯಲ್ಲಿ ಜೋಕ್ ಎನ್ನುವಂತೆ ನಗುತ್ತಿದ್ದರು. ಈ ನಗುವನ್ನು ನೋಡಿ ಬಾಲಕ ಇನ್ನೂ ಏರಿ ಹೋಗಿದ್ದ. ಆದ್ದರಿಂದ ತಾನು ಅತಿ ಬುದ್ಧಿವಂತನಂತೆ ವರ್ತಿಸುತ್ತಾ ಕೊನೆಗೆ ಪೇಚಿಗೆ ಸಿಲುಕಿದ್ದ.
210
ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ
ಈ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇಂಥ ವರ್ತನೆ ಹೆಚ್ಚಾಗಿ ಒಂದೇ ಮಗುವಿದ್ದು, ಆತ ಅಥವಾ ಆಕೆಯನ್ನು ಅತಿ ಮುದ್ದಿನಿಂದ ಬೆಳೆಸುವುದು, ಆತ ಹೇಳಿದಂತೆ ಕೇಳುವುದು, ಅತಿಯಾಗಿ ವರ್ತಿಸಿದಾಗ ಹೆತ್ತವರಿಗೆ ಹೆಗ್ಗಣವೂ ಮುದ್ದು ಎನ್ನುವಂತೆ ಅದಕ್ಕೆ ಉತ್ತೇಜನ ನೀಡುವುದು, ಇಂಥ ಮಕ್ಕಳು ಬುದ್ಧಿವಂತರೆಂದು ತಿಳಿದು ಬೇರೆಯವರ ಮಕ್ಕಳು ತಮ್ಮ ಮಕ್ಕಳನ್ನು ಇಂಥ ಮಕ್ಕಳ ಜೊತೆ ಹೋಲಿಕೆ ಮಾಡಿ ಇನ್ನಷ್ಟು ಪ್ರೋತ್ಸಾಹ ಕೊಡುವುದು.... ಹೀಗೆ ನಾನಾ ಕಾರಣಗಳಿಂದ ಮಕ್ಕಳು ಇಂಥ ಹುಚ್ಚಾಟ ಮಾಡುವುದು ಮಾಮೂಲು.
310
ಹಿರಿಯರ ತಪ್ಪು
ಇಂದಿನ ಮಕ್ಕಳು ಅಪ್ಪ-ಅಮ್ಮನ ಮಾತು ಕೇಳುವುದಿಲ್ಲ ಎನ್ನುವುದು ಎಷ್ಟು ನಿಜವೋ, ಹಿರಿಯರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂದು ಏಕಾಏಕಿ ಮಕ್ಕಳು ಕಲಿಯುವುದಿಲ್ಲ. ಅವರು ಚಿಕ್ಕವರಿದ್ದಾಗ ಮಾಡಿದ್ದೆಲ್ಲವೂ ಮುದ್ದು ಮುದ್ದು ಎಂದು ಮುದ್ದುಮಾಡಿದರೆ, ಏಕಾಏಕಿ ಮಕ್ಕಳ ಮನಸ್ಥಿತಿ ಬದಲಾಗುವುದಿಲ್ಲ. ತಾನು ಮಾಡಿದ್ದೇ ಸರಿ ಎನ್ನುವ ಕಾರಣಕ್ಕೆ ದೊಡ್ಡವರಿಗೂ ಗೌರವ ಕೊಡುವುದನ್ನು ಅವರು ಕಲಿಯುವುದಿಲ್ಲ ಎನ್ನುವ ಚರ್ಚೆಗಳೂ ಶುರುವಾಗಿದೆ.
ಈ ಸುದ್ದಿಯ ನಡುವೆಯೇ, ಮೈಸೂರು ರಾಜ, ಬಿಜೆಪಿ ಸಂಸದ ಯದುವೀರ ದತ್ತ ಒಡೆಯರ್ ಮಾತೊಂದು ಈಗ ಭಾರಿ ವೈರಲ್ ಆಗುತ್ತಿದೆ. ಜೀ ಕನ್ನಡ ಅನುಬಂಧ ಅವಾರ್ಡ್ಗೆ ಅತಿಥಿಯಾಗಿ ಬಂದಿರುವ ಯದುವೀರ ದತ್ತ ವಡೆಯರ್ ಆಡಿರುವ ಮಾತೀಗ ಭಾರಿ ಮೆಚ್ಚುಗೆ ಗಳಿಸಿದ್ದು, ಅಪ್ಪನಾದವ ಹೇಗೆ ಇರಬೇಕು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
510
ನಾ ನಿನ್ನ ಬಿಡಲಾರೆ ಪುಟಾಣಿ ಪ್ರಶ್ನೆ
ನಾ ನಿನ್ನ ಬಿಡಲಾರೆ (Na Ninna Bidalaare) ಬಾಲಕಿ ಹಿತಾ (ಈಕೆಯ ಹೆಸರು ಮಹಿತಾ), ಯದುವೀರ್ ಅವರಿಗೆ ನೀವು ರಾಜ ಅಲ್ವಾ? ಮಕ್ಕಳಿಗೆ ಹೇಳಿದ್ದನ್ನೆಲ್ಲಾ ಕೊಡಿಸುತ್ತೀರಾ ಎಂದು ಕೇಳಿದ್ದಾಳೆ. ಅದಕ್ಕೆ ಯದುವೀರ ಅವರು, ಖಂಡಿತ ಇಲ್ಲಾ. ಹಾಗೆ ಕೇಳಿದ್ದನ್ನೆಲ್ಲಾ ಕೊಡಿಸಿದರೆ ಮುಂದೆ ನನಗೇ ತೊಂದರೆಯಾಗುತ್ತದೆ ಎಂದಿದ್ದಾರೆ. ಈ ಮಾತಿಗೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ.
610
ಅಪ್ಪ-ಅಮ್ಮಂದಿರ ತಪ್ಪೇನು?
ಆದರೆ, ಇಂಥ ಹೆಚ್ಚಿನ ಅಪ್ಪ-ಅಮ್ಮ ತಮಗೆ ಹೊಟ್ಟೆಗೆ ಇಲ್ಲದಿದ್ದರೂ ಪರವಾಗಿಲ್ಲ. ಮಕ್ಕಳಿಗೆ ಸ್ವಲ್ಪವೂ ಕಷ್ಟ ಆಗಬಾರದು ಎಂದು ಕೇಳಿದ್ದನ್ನೆಲ್ಲಾ ಕೊಡಿಸುತ್ತಾರೆ. ನಾವಂತೂ ಚಿಕ್ಕವರು ಇರುವಾಗ ಏನೂ ಸುಖ ಕಂಡಿಲ್ಲ, ಮಕ್ಕಳಾದರೂ ಸುಖ ಕಾಣಲಿ ಎನ್ನುವ ಬಯಕೆ. ಆದರೆ ಅತಿ ಸುಲಭದಲ್ಲಿ ಕೇಳಿದ್ದೆಲ್ಲಾ ಸಿಕ್ಕಿಬಿಟ್ಟರೆ ಕಷ್ಟವೇ ಗೊತ್ತಿಲ್ಲದೇ ಬೆಳೆಯುವ ಮಕ್ಕಳ ಮನಸ್ಥಿತಿ ತುಂಬಾ ಭಯಾನಕ ಆಗಿರುತ್ತದೆ. ಇಂಥ ಮಕ್ಕಳೇ ಮುಂದೆ ಚಿಕ್ಕ ಕಷ್ಟ ಬಂದರೂ ಖಿನ್ನತೆಗೆ ಜಾರುವುದು, ಸಾವಿನ ಹಾದಿ ತುಳಿಯುವುದು ನಡೆದಿದೆ ಎನ್ನುತ್ತಾರೆ ಮಾನಸಿಕ ತಜ್ಞರು.
710
ಬಾಲಕ ಮತ್ತು ಯದುವೀರ ಮಾತಿಗೆ ಹೋಲಿಕೆ
ಕೌನ್ ಬನೇಗಾ ಕರೋರ್ಪತಿಯ ಬಾಲಕನ ಉದಾಹರಣೆಯನ್ನೇ ಕೊಡುತ್ತಿರುವ ನೆಟ್ಟಿಗರು, ಯದುವೀರ ಅವರ ಮಾತನ್ನು ಅದಕ್ಕೆ ಹೋಲಿಕೆ ಮಾಡುತ್ತಿದ್ದಾರೆ.
810
ಇಬ್ಬರು ಗಂಡುಮಕ್ಕಳ ಅಪ್ಪ
ಅಂದಹಾಗೆ ಯದುವೀರ ಅವರ ಪತ್ನಿಯ ಹೆಸರು ತ್ರಿಷಿಕಾ ಕುಮಾರಿ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮೊದಲ ಮಗುವಿನ ಹೆಸರು ಆದ್ಯವೀರ್ ನರಸಿಂಹರಾಜ ಒಡೆಯರ್, ಮತ್ತು ಎರಡನೇ ಮಗುವಿನ ಹೆಸರು ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್.
910
ಚಿನ್ನದ ಸ್ಪೂನ್ ಇಟ್ಟು ಹುಟ್ಟಿದ ಮಕ್ಕಳು
ಇವರಿಬ್ಬರನ್ನೂ ದಂಪತಿ ಚೆನ್ನಾಗಿ ಬೆಳೆಸುತ್ತಿದ್ದಾರೆ. ಚಿನ್ನದ ಸ್ಪೂನ್ ಅನ್ನೇ ಹಿಡಿದುಕೊಂಡು ಹುಟ್ಟಿದ ಮಕ್ಕಳು ಇವರು. ಅವರಿಗೆ ಏನು ಬೇಕೋ ಅವೆಲ್ಲವೂ ಚಿಟಿಕೆ ಹೊಡೆಯುವಷ್ಟರಲ್ಲಿ ಸಿಗುವ ಸಾಧ್ಯತೆ ಇದೆ. ಆದರೆ ಯದುವೀರ್ ಅವರು ಉತ್ತಮ ಪೇರೆಂಟಿಂಗ್ಗೆ ಉದಾಹರಣೆಯಾಗಿದ್ದಾರೆ.
1010
ಎಲ್ಲರಿಗೂ ಮಾದರಿಯಾದ ಉತ್ತರ
ರಾಜ-ರಾಣಿ ಮಕ್ಕಳಾದರೂ ಅವರು ಹೇಗೆ ಮುಂದೆ ಸತ್ಪ್ರಜೆಯಾಗಿ ಬೆಳೆಯಬೇಕು, ಹೇಗೆ ಹಿರಿಯರಿಗೆ ಗೌರವ ಕೊಡಬೇಕು. ಕಷ್ಟ ಎನ್ನುವುದು ಹೇಗೆ ಎಂದು ಅವರೂ ಅರಿಯಬೇಕು, ಆದ್ದರಿಂದ ತೀರಾ ಮುದ್ದು ಮಾಡಿ ಬೆಳೆಸುವುದಿಲ್ಲ. ಅವರಿಗೆ ಏನು ಬೇಕೋ ಅದನ್ನೆಲ್ಲಾ ತಂದು ಮುಂದೆ ಇಡುವುದಿಲ್ಲ ಎನ್ನುವ ಮೂಲಕ, ಪ್ರತಿಯೊಬ್ಬ ಅಪ್ಪ-ಅಮ್ಮ ಹೇಗಿರಬೇಕು ಎನ್ನುವುದನ್ನು ತಿಳಿಸಿದ್ದಾರೆ.