Bigg Boss Kannada Mallamma language: ಬಿಗ್ಬಾಸ್ ಸೀಸನ್ 12ರ ಸ್ಪರ್ಧಿ ಮಲ್ಲಮ್ಮ ತಮ್ಮ ಉತ್ತರ ಕರ್ನಾಟಕದ ಕನ್ನಡದಿಂದ ಗಮನ ಸೆಳೆದಿದ್ದಾರೆ. ಅವರ ಭಾಷೆಯಿಂದಾಗಿ, ಪೂರ್ಣಿಮಾ ಹೆಗ್ಗಡೆಯವರು ಶುದ್ಧ ಕನ್ನಡ ಮತ್ತು ಸಂಸ್ಕೃತ ಪದಗಳ ಬಳಕೆಯ ಬಗ್ಗೆ ಚರ್ಚೆ ಹುಟ್ಟುಹಾಕಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿರುವ ಮಲ್ಲಮ್ಮ ಇಡೀ ಮನೆಯ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಮನೆಗೆ ಬಂದ ಎರಡೇ ವಾರದಲ್ಲಿಯೇ ಮಲ್ಲಮ್ಮ ರಾಜ್ಯದ ಗಮನವನ್ನು ಸೆಳೆದಿದ್ದಾರೆ. ಮಲ್ಲಮ್ಮ ಉತ್ತರ ಕರ್ನಾಟಕ ಗ್ರಾಮೀಣ ಭಾಗದ ಸಾಮಾನ್ಯ ಮಹಿಳೆ. ಕೆಲಸ ಅರಸಿ ಬಂದ ಮಲ್ಲಮ್ಮ, ಬ್ಯುಟಿಕ್ನಲ್ಲಿ ಕೆಲಸ ಮಾಡುತ್ತಿದ್ದರು. ಇವರ ಮುಗ್ದತೆಗೆ ಕಂಡ ನಟ ಮನೋಜ್, ಇವರ ಇನ್ಸ್ಟಾಗ್ರಾಂ ಕ್ರಿಯೇಟ್ ಮಾಡಿದ್ದರು. ಇದೆಲ್ಲದರ ಪರಿಣಾಮದಿಂದ ಇಂದು ಬಿಗ್ಬಾಸ್ ಸ್ಪರ್ಧಿಯಾಗಿದ್ದಾರೆ.
26
ಮಲ್ಲಮ್ಮ ಜೊತೆ ಕನ್ನಡ
ಸ್ಪರ್ಧಿ ಮಲ್ಲಮ್ಮ ಜೊತೆ ಕನ್ನಡ ಮಾತನಾಡಲು ಬಿಗ್ಬಾಸ್ ಸಹ ತಡವರಿಸುವಂತಾಗಿದೆ. ಇದಕ್ಕೆ ಕಾರಣ ಮಲ್ಲಮ್ಮ ಮಾತನಾಡೋದು ನಮ್ಮ ನೆಲದ ಮೂಲ ಭಾಷೆ ಕನ್ನಡ ಎಂದು ಕನ್ನಡತಿ ಪೂರ್ಣಿಮಾ ಹೆಗ್ಗಡೆ ಹೇಳಿದ್ದಾರೆ. ಕನ್ನಡದಲ್ಲಿ ಹೇಗೆ ಸಂಸ್ಕೃತ ಬೆರೆತುಕೊಂಡಿದೆ ಎಂಬುದನ್ನು ಪೂರ್ಣಿಮಾ ಹೆಗ್ಗಡೆ ತಮ್ಮ ವಿಡಿಯೋದಲ್ಲಿ ವಿವರಿಸಿದ್ದಾರೆ.
36
ಸಂಸ್ಕೃತ ಪದಗಳ ಬಳಕೆ
ಬಿಗ್ಬಾಸ್ನಲ್ಲಿ ಬಹುತೇಕವಾಗಿ ಸಂಸ್ಕೃತ ಪದಗಳನ್ನು ಬಳಕೆ ಮಾಡಲಾಗುತ್ತದೆ. ನಿರ್ಗಮಿಸಬಹುದು, ನಿಷೇಧಿಸಲಾಗಿದೆ, ನಿರ್ಬಂಧಿಸಲಾಗಿದೆ ಎಂಬಿತ್ಯಾದಿ ಪದಗಳೆಲ್ಲವೂ ಸಂಸ್ಕೃತ. ನಾವು ಇದನ್ನೇ ಶುದ್ಧ ಕನ್ನಡ ಎಂದು ತಿಳಿದುಕೊಂಡಿದ್ದೇವೆ. ಆದರೆ ಕನ್ನಡ ಯಾವಾಗಲೂ ಶುದ್ಧವಾಗಿದೆ ಎಂದು ಪೂರ್ಣಿಮಾ ಹೆಗ್ಗಡೆ ಹೇಳುತ್ತಾರೆ.
ಸಂಸ್ಕೃತವನ್ನು ಸೇರಿಸಿ ಅದನ್ನು ಶುದ್ಧ ಕನ್ನಡ ಎಂದು ಬಿಂಬಿಸಲಾಗುತ್ತಿದೆ. ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿರುವ ಕೆಲವು ಮಹನೀಯರಿಗೆ ಈ ಕ್ರೆಡಿಟ್ ಸಲ್ಲಬೇಕು. ಎಷ್ಟೋ ಕನ್ನಡ ಪದಗಳನ್ನು ಸಾಯಿಸಿ, ಅದರೊಳಗೆ ಸಂಸ್ಕೃತ ಸೇರಿಸಲಾಗಿದೆ. ಈ ಪದಗಳನ್ನು ಬಳಸಿ ಮಾತನಾಡಿದ್ರೆ ಅದು ಶುದ್ಧ ಕನ್ನಡ ಅಂತಾ ಬಿಂಬಿಸಲಾಗಿದೆ. ನಾನು ಸಹ ಹಲವು ಬಾರಿ ಈ ಪದಗಳನ್ನು ಬಳಸಿದ್ದೇನೆ ಮತ್ತು ಬಳಸುತ್ತಿದ್ದೇನೆ ಎಂದಿದ್ದಾರೆ.
56
ಕನ್ನಡ ಮತ್ತು ಸಂಸ್ಕೃತ
ಮಾತೃಭಾಷೆ ಅನ್ನೋದು ಸಂಸ್ಕೃತ ಪದವಾಗಿದೆ. ಕನ್ನಡದಲ್ಲಿ ತಾಯಿನುಡಿ ಆಗುತ್ತದೆ. ಮಾತೃ ಮತ್ತು ಭಾಷೆ ಎಂಬ ಎರಡೂ ಪದಗಳು ಸಂಸ್ಕೃತ. ಹೀಗೆಯೇ ಹೇಳುತ್ತಾ ಹೋದ್ರೆ ತುಂಬಾ ಪದಗಳಿವೆ. ನನಗೆ ಖಂಡಿತವಾಗಿಯೂ ಸಂಸ್ಕೃತ ಭಾಷೆಯ ಬಗ್ಗೆ ದ್ವೇಷವಿಲ್ಲ. ನನ್ನ ಭಾಷೆಯನ್ನು ಕೊಂದು, ಬೇರೊಂದು ಭಾಷೆ ಪದಗಳನ್ನು ಸೇರಿಸಿ ಕನ್ನಡವನ್ನು ವೈಭವಿಕರಿಸೋದು ಬೇಕಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನನ್ನ ಕನ್ನಡ ಭಾಷೆ ತುಂಬಾ ಶ್ರೀಮಂತವಾಗಿದೆ. ನಾವು ಅಚ್ಚಕನ್ನಡ ಪದಗಳನ್ನು ಬಳಕೆ ಮಾಡೋಕೆ ಹೋದರೆ ನಮ್ಮನ್ನು ಹಳ್ಳಿ ಗಮಾರರು ಎಂದು ಪರಿಗಣಿಸಲು ಆರಂಭಿಸುತ್ತಾರೆ. ಕನ್ನಡವನ್ನು ಕನ್ನಡವಾಗಿಯೇ ಬಳಸಿ. ಉತ್ತರ ಮತ್ತು ದಕ್ಷಿಣ ಕರ್ನಾಟಕದ ಕನ್ನಡ ತುಂಬಾ ಶ್ರೀಮಂತವಾಗಿದೆ. ಸ್ಥಳೀಯ ಭಾಷೆ ಬಗ್ಗೆ ಕೀಳರಿಮೆ ಇರಬಾರದು. ನಮಗೆ ಹೇಗೆ ಬರುತ್ತೋ ಹಾಗೆಯೇ ಕನ್ನಡ ಮಾತನಾಡೋಣ ಎಂದು ಪೂರ್ಣಿಮಾ ಹೆಗ್ಗಡೆ ಕರೆ ನೀಡಿದ್ದಾರೆ.