ಪ್ರಮೋದ್ ಶೆಟ್ಟಿಮತ್ತೊಂದು ಚಿತ್ರಕ್ಕೆ ಹೀರೋ ಆಗಿದ್ದಾರೆ. ಅವರು ನಾಯಕನಾಗಿ ನಟಿಸುತ್ತಿರುವ ಈ ಹೊಸ ಚಿತ್ರಕ್ಕೆ ಇತ್ತೀಚೆಗಷ್ಟೆಮುಹೂರ್ತ ನಡೆಯಿತು. ಚಿತ್ರದ ಹೆಸರು ‘ಶಭಾಷ್ ಬಡ್ಡಿಮಗ್ನೆ’.
ಈಗಾಗಲೇ ‘ಲಾಫಿಂಗ್ ಬುದ್ಧ’ ಹಾಗೂ ‘ಕಾಶಿಯಾತ್ರೆ’ ಚಿತ್ರಗಳಲ್ಲಿ ನಾಯಕನಾಗಿ ನಟಿಸುತ್ತಿರುವ ಪ್ರಮೋದ್ ಶೆಟ್ಟಿಅವರಿಗೆ ‘ಶಭಾಷ್ ಬಡ್ಡಿಮಗ್ನೆ’ ನಾಯಕನಾಗಿ ಮೂರನೇ ಚಿತ್ರ. ಚಿತ್ರದ ಮೊದಲ ದೃಶ್ಯಕ್ಕೆ ನಟ ಅಜಯ್ ರಾವ್ ಕ್ಲಾಪ್ ಮಾಡುವ ಮೂಲಕ ಶುಭ ಕೋರಿದರು.
ಹಲವು ವರ್ಷಗಳಿಂದ ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಹರೀಶ್ ಸಾ ರಾ ನಿರ್ದೇಶನದ ಚಿತ್ರವಿದು. ಬಿ ಎಸ್ ರಾಜಶೇಖರ್ ಈ ಚಿತ್ರಕ್ಕೆ ಕತೆ ಬರೆದಿದ್ದಾರೆ.
ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ಪ್ರಕಾಶ್ ಪ್ರಥಮ ಬಾರಿಗೆ ಈ ಚಿತ್ರದ ನಿರ್ಮಾಪಕರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಹರೀಶ್ ಸಾ ರಾ , ‘1980ರ ಕಾಲಘಟ್ಟದಲ್ಲಿ ಮೂಡಿಗೆರೆಯಲ್ಲಿ ನಡೆದ ನೈಜ ಘಟನೆ ಆಧರಿಸಿ ಈ ಕತೆ ಮಾಡಲಾಗಿದೆ. ಕಾಮಿಡಿ, ಮರ್ಡರ್ ಮಿಸ್ಟ್ರಿ, ಥ್ರಿಲ್ಲರ್ ನೆರಳಿನಲ್ಲಿ ಇಡೀ ಸಿನಿಮಾ ಸಾಗುತ್ತದೆ’ ಎಂದರು.
ಹಾಸ್ಯ ಮತ್ತು ತರಲೆ ಮಾಡಿಕೊಂಡಿರುವ ಪೊಲೀಸ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿಕಾಣಿಸಿಕೊಳ್ಳುತ್ತಿದ್ದಾರೆ. ಪ್ರಿಯಾ ಚಿತ್ರದ ನಾಯಕಿ. ರಂಗಾಯಣ ರಘು, ರಾಹುಲ…, ರವಿತೇಜ, ಲಕ್ಷೀಪ್ರಿಯ ಸಾಹು, ಮನು, ಅಜಯ…, ಮಿತ್ರ, ರೂಪ, ಸುಧಾಮಣಿ, ಇಂದಿರಮ್ಮ, ಮಮತಾ ರಾಜಶೇಖರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇಳಯರಾಜ ಶಿಷ್ಯ ಕಾರ್ತಿಕ್ ಭೂಪತಿ ಸಂಗೀತ, ಅಣಜಿ ನಾಗರಾಜ್ ಕ್ಯಾಮೆರಾ ಚಿತ್ರಕ್ಕಿದೆ. ‘ನನ್ನ ಪಾತ್ರಕ್ಕೆ ಎರಡು ರೀತಿಯ ಮುಖಗಳಿವೆ. ನಗಿಸುತ್ತೇನೆ ಮತ್ತು ಗಂಭೀರಗೊಳ್ಳುವಂತೆ ಮಾಡುತ್ತೇನೆ. ಹೊಸ ರೀತಿಯ ಪೊಲೀಸ್ ಪಾತ್ರ ಇದು’ ಎಂದರು ಪ್ರಮೋದ್ ಶೆಟ್ಟಿ.