ಭೂಕಂಪದ ಸಮಯದಲ್ಲಿ ಜೋರಾಗಿ ಕಿರುಚಿದರೆ ಸಹಾಯ ಸಿಗುತ್ತದೆಯೇ?
ಭೂಕಂಪ, ಭೂಕುಸಿತದಂತಹ ದುರಂತದ ಸಮಯದಲ್ಲಿ ಸಂತ್ರಸ್ತರು ಜೋರಾಗಿ ಕಿರುಚಿದರೆ ಬೇಗ ಸಹಾಯ ಸಿಗುತ್ತದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ರಕ್ಷಣಾ ತಜ್ಞರು ಹೇಳೋದೇ ಬೇರೆ. ಕೆಲವು ಸಲ ಈ ಪ್ರಯತ್ನವೇ ಇನ್ನಷ್ಟು ಅನಾಹುತಕ್ಕೆ ಕಾರಣವಾಗಬಹುದು. ಹಾಗಾದರೆ ಭೂಕಂಪದ ನಂತರ ಅವಶೇಷಗಳಡಿ ಸಿಲುಕಿದಾಗ ಕಿರುಚುವುದು ಯಾಕೆ ಅಪಾಯಕಾರಿ? ನಿಮ್ಮನ್ನು ನೀವು ರಕ್ಷಿಸಿಕೊಳ್ಳುವ ಸರಿಯಾದ ಮಾರ್ಗ ಯಾವುದು? ಇಲ್ಲಿದೆ ಮಾಹಿತಿ ಅವಶೇಷಗಳಡಿ ಸಿಲುಕಿದಾಗ ಕಿರುಚುವುದು ಯಾಕೆ ದೊಡ್ಡ ಅಪಾಯ?
1. ಶ್ವಾಸಕೋಶಕ್ಕೆ ವಿಷಕಾರಿ ಧೂಳು ಸೇರುತ್ತದೆ
ಕಟ್ಟಡದ ಅವಶೇಷಗಳಡಿ ಸಿಲುಕಿದಾಗ ಗಾಬರಿಯಿಂದ ಕಿರುಚುವುದು ಸಹಜ. ಆದರೆ ರಕ್ಷಣಾ ತಜ್ಞರು ಇದರ ಹಿಂದಿರುವ 3 ದೊಡ್ಡ ಅಪಾಯಗಳನ್ನು ವಿವರಿಸುತ್ತಾರೆ. ಮೊದಲನೆಯದು, ವಿಷಕಾರಿ ಧೂಳು ಶ್ವಾಸಕೋಶ ಸೇರುವುದು. ಕಟ್ಟಡ ಕುಸಿದಾಗ, ಸಿಮೆಂಟ್, ಕಾಂಕ್ರೀಟ್ ಮತ್ತು ಇಟ್ಟಿಗೆಯ ಸಣ್ಣ ಕಣಗಳು ಗಾಳಿಯಲ್ಲಿ ದಟ್ಟವಾದ ಧೂಳನ್ನು ಸೃಷ್ಟಿಸುತ್ತವೆ. ನೀವು ಕಿರುಚಲು ದೀರ್ಘವಾಗಿ ಉಸಿರು ಎಳೆದಾಗ, ಈ ವಿಷಕಾರಿ ಧೂಳು ನೇರವಾಗಿ ನಿಮ್ಮ ಶ್ವಾಸಕೋಶಕ್ಕೆ ಹೋಗುತ್ತದೆ. ಇದರಿಂದ ಉಸಿರುಗಟ್ಟುವ ಅಪಾಯ ಹೆಚ್ಚಾಗುತ್ತದೆ.
2. ಆಕ್ಸಿಜನ್ ವ್ಯರ್ಥವಾಗುತ್ತದೆ
ಅವಶೇಷಗಳ ಕೆಳಗೆ ಗಾಳಿ (ಆಕ್ಸಿಜನ್) ಮೊದಲೇ ಸೀಮಿತ ಪ್ರಮಾಣದಲ್ಲಿರುತ್ತದೆ. ನೀವು ಕಿರುಚಾಡಿದರೆ ಅಥವಾ ಗಾಬರಿಗೊಂಡರೆ ನಿಮ್ಮ ದೇಹ ಹೆಚ್ಚು ಆಕ್ಸಿಜನ್ ಬಳಸಿಕೊಳ್ಳುತ್ತದೆ. ಇದರಿಂದಾಗಿ ಅಲ್ಲಿ ಉಳಿದಿರುವ ಗಾಳಿ ಬೇಗನೆ ಖಾಲಿಯಾಗಬಹುದು.
3. ಗಂಟಲು ಒಣಗಿ ಶಕ್ತಿ ಖಾಲಿಯಾಗುತ್ತದೆ
ಭಯ ಆತಂಕದಿಂದ ಸಹಾಯಕ್ಕಾಗಿ ಒಂದೇ ಸಮನೇ ಕಿರುಚುತ್ತಿದ್ದರೆ ಕೆಲವೇ ನಿಮಿಷಗಳಲ್ಲಿ ನಿಮ್ಮ ಗಂಟಲು ಸಂಪೂರ್ಣವಾಗಿ ಒಣಗಿ ಹೋಗುತ್ತದೆ. ದೇಹದ ಶಕ್ತಿಯೂ ಖಾಲಿಯಾಗುತ್ತದೆ. ಒಂದು ವೇಳೆ ರಕ್ಷಣಾ ತಂಡ ನಿಮ್ಮ ಹತ್ತಿರ ಬಂದಾಗ ನಿಮಗೆ ಕೂಗಿ ಕರೆಯಲು ಶಕ್ತಿಯೇ ಇಲ್ಲದಂತಾಗಬಹುದು!
ಹಾಗಾದರೆ ಏನು ಮಾಡಬೇಕು?
ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ!
ಕಿರುಚುವ ಬದಲು, ನಿಮ್ಮನ್ನು ಸುರಕ್ಷಿತವಾಗಿರಿಸಲು ಮತ್ತು ರಕ್ಷಣಾ ತಂಡಕ್ಕೆ ನಿಮ್ಮ ಇರುವಿಕೆಯನ್ನು ತಿಳಿಸಲು ತಜ್ಞರು ಮೂರು ವಿಧಾನಗಳನ್ನು ಅನುಸರಿಸಲು ಸಲಹೆ ನೀಡುತ್ತಾರೆ. ಮೊದಲನೆಯದಾಗಿ, ನಿಮ್ಮ ಬಳಿ ಇರುವ ಬಟ್ಟೆ, ಕರವಸ್ತ್ರ ಅಥವಾ ಶರ್ಟ್ನಿಂದ ನಿಮ್ಮ ಬಾಯಿ ಮತ್ತು ಮೂಗನ್ನು ಚೆನ್ನಾಗಿ ಮುಚ್ಚಿಕೊಳ್ಳಿ. ಇದರಿಂದ ಧೂಳು ಶ್ವಾಸಕೋಶಕ್ಕೆ ಹೋಗುವುದನ್ನು ತಡೆಯಬಹುದು.
ತಟ್ಟುವ (Tapping) ವಿಧಾನ ಬಳಸಿ
ಕಿರುಚುವ ಬದಲು, ನಿಮ್ಮ ಕೈಗೆ ಸಿಕ್ಕ ಕಲ್ಲು ಅಥವಾ ಕಬ್ಬಿಣದ ತುಂಡಿನಿಂದ ಅಲ್ಲಿರುವ ಪೈಪ್ ಅಥವಾ ಕಾಂಕ್ರೀಟ್ ಮೇಲೆ ಪದೇ ಪದೇ ತಟ್ಟಿ. ಲೋಹ ಅಥವಾ ಕಾಂಕ್ರೀಟ್ ಮೇಲೆ ತಟ್ಟಿದಾಗ ಉಂಟಾಗುವ ಶಬ್ದವು ಅವಶೇಷಗಳ ಮೂಲಕ ಬಹಳ ದೂರದವರೆಗೆ ತಲುಪುತ್ತದೆ. ರಕ್ಷಣಾ ತಂಡದ ಉಪಕರಣಗಳು ಈ ಶಬ್ದವನ್ನು ಸುಲಭವಾಗಿ ಪತ್ತೆಹಚ್ಚುತ್ತವೆ.