ಭಾರತ ಸದ್ಯದಲ್ಲೇ ಆಗಲಿದೆ 'ಕ್ಯಾನ್ಸರ್ ರಾಜಧಾನಿ': ಇಲ್ಲಿದೆ ಕಾರಣ!

First Published Apr 13, 2024, 3:28 PM IST

ಭಾರತದಲ್ಲಿ ಮಧುಮೇಹ, ಕ್ಯಾನ್ಸರ್ ಅಧಿಕ ರಕ್ತದೊತ್ತಡ ಮತ್ತು ಮಾನಸಿಕ ಆರೋಗ್ಯ ಅಸ್ವಸ್ಥತೆಗಳು ಯುವಕರಲ್ಲಿಯೂ ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಆರೋಗ್ಯ ಸೇವೆಗಳ ಮೇಲಿನ ಹೊರೆ ಹೆಚ್ಚಾಗಬಹುದು ಎಂದು ವರದಿ ಎಚ್ಚರಿಸಿದೆ
 

ಭಾರತದ ಆರೋಗ್ಯದ ಬಗ್ಗೆ ಇತ್ತೀಚಿನ ಅಧ್ಯಯನ ವರದಿ ಆತಂಕಕಾರಿಯಾಗಿದೆ. ದೇಶದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳು ವೇಗವಾಗಿ ಹೆಚ್ಚುತ್ತಿವೆ, ವಿಶೇಷವಾಗಿ ಕ್ಯಾನ್ಸರ್(cancer) ಪ್ರಕರಣಗಳು ಬಹಳ ವೇಗವಾಗಿ ಹೆಚ್ಚುತ್ತಿವೆ. 2024 ರ ವಿಶ್ವ ಆರೋಗ್ಯ ದಿನಕ್ಕಾಗಿ ಅಪೊಲೊ ಆಸ್ಪತ್ರೆಗಳು ಬಿಡುಗಡೆ ಮಾಡಿದ ಈ ವರದಿಯಲ್ಲಿ, ಭಾರತವನ್ನು 'ಕ್ಯಾನ್ಸರ್ ರಾಜಧಾನಿ' ಎಂದು ಹೆಸರಿಸಲಾಗಿದೆ. ಕ್ಯಾನ್ಸರ್ ಪ್ರಕರಣಗಳು ವಿಶ್ವಾದ್ಯಂತ ಸರಾಸರಿಗಿಂತ ವೇಗವಾಗಿ ಹೆಚ್ಚುತ್ತಿವೆ ಎಂಬುದು ಕಳವಳಕಾರಿ ವಿಷಯವಾಗಿದೆ.

ವರದಿಯ ಪ್ರಕಾರ, ಭಾರತದಲ್ಲಿ ಮೂರನೇ ಒಂದು ಭಾಗದಷ್ಟು ಜನರು ಪೂರ್ವ-ಮಧುಮೇಹ, ಮೂರನೇ ಎರಡರಷ್ಟು ಜನರು ಅಧಿಕ ರಕ್ತದೊತ್ತಡ (high blood pressure) ಮತ್ತು ಹತ್ತರಲ್ಲಿ ಒಬ್ಬರು ಖಿನ್ನತೆಯೊಂದಿಗೆ ಹೋರಾಡುತ್ತಿದ್ದಾರೆ. ಕ್ಯಾನ್ಸರ್, ಮಧುಮೇಹ, ಹೃದ್ರೋಗ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಸೇರಿದಂತೆ ಈ ಗಂಭೀರ ಕಾಯಿಲೆಗಳು ಅಪಾಯಕಾರಿ ಮಟ್ಟವನ್ನು ತಲುಪುತ್ತಿವೆ ಮತ್ತು ದೇಶದ ಆರೋಗ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತಿವೆ.

ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನ 2024 ರಂದು ಬಿಡುಗಡೆಯಾದ ವರದಿಯು 2020 ರಲ್ಲಿ ಭಾರತದಲ್ಲಿ 14 ಲಕ್ಷ ಜನರಿಗೆ ಕ್ಯಾನ್ಸರ್ ಇದೆ ಎಂದು ತೋರಿಸಿದೆ ಮತ್ತು 2025 ರ ವೇಳೆಗೆ ಈ ಸಂಖ್ಯೆ 15.7 ಲಕ್ಷಕ್ಕೆ ಏರುವ ನಿರೀಕ್ಷೆಯಿದೆ. ಹಾಗಾಗಿ ಕ್ಯಾನ್ಸರ್ ಬಗ್ಗೆ ಜಾಗೃತರಾಗಿರೋದು ತುಂಬಾನೆ ಮುಖ್ಯ.

ದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳು ಏಕೆ ಹೆಚ್ಚುತ್ತಿವೆ?
ಐಸಿಎಂಆರ್ ಮತ್ತು ಎನ್ಸಿಡಿಐಆರ್ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ಸ್ಥಿರವಾಗಿ ಹೆಚ್ಚುತ್ತಿವೆ. ಭಾರತದಲ್ಲಿ ಅನೇಕ ಕ್ಯಾನ್ಸರ್ ಪ್ರಕರಣಗಳು ಇರಲು ಅನೇಕ ಕಾರಣಗಳಿವೆ ಎಂದು ವರದಿ ಹೇಳುತ್ತದೆ. ಈ ಕಾರಣಗಳು ನಮ್ಮ ಜೀವನಶೈಲಿ (lifestyle), ಪರಿಸರ ಮತ್ತು ಆರ್ಥಿಕ-ಸಾಮಾಜಿಕ ಸ್ಥಿತಿಗೆ ಸಂಬಂಧಿಸಿವೆ. ಸಿಗರೇಟುಗಳು ಮತ್ತು ಇತರ ತಂಬಾಕು ಉತ್ಪನ್ನಗಳ ಸೇವನೆಯು ಶ್ವಾಸಕೋಶ, ಬಾಯಿ ಮತ್ತು ಗಂಟಲಿನ ಕ್ಯಾನ್ಸರ್ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

ವಿಷಕಾರಿ ಮಾಲಿನ್ಯ ಮತ್ತು ಬೊಜ್ಜು ಸಹ ಕಾರಣವಾಗಿದೆ: ಇದಲ್ಲದೆ, ವಾಹನಗಳು ಮತ್ತು ಕೈಗಾರಿಕೆಗಳಿಂದ ಉಂಟಾಗುವ ಮಾಲಿನ್ಯವು ಗಾಳಿಯಲ್ಲಿ ವಿಷಕಾರಿ ಅಂಶಗಳನ್ನು ಹರಡುತ್ತದೆ, ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಈ ಮಾಲಿನ್ಯವು ದೇಶದ ದೊಡ್ಡ ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ. ಆಹಾರ ಪದ್ಧತಿಯೂ ಇದಕ್ಕೆ ದೊಡ್ಡ ಕಾರಣವಾಗಿದೆ. ಹೆಚ್ಚು ಪ್ರಿಪ್ರಿಪೇರ್ಡ್ ಆಹಾರ ಮತ್ತು ಸಂಸ್ಕರಿಸಿದ ಆಹಾರವನ್ನು ಸೇವಿಸುವುದರಿಂದ ಮತ್ತು ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡುವುದರಿಂದ ಬೊಜ್ಜು (obesity) ಹೆಚ್ಚುತ್ತಿದೆ. ಬೊಜ್ಜು ಸ್ತನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಮತ್ತು ಗರ್ಭಾಶಯದ ಕ್ಯಾನ್ಸರ್ ಬರುವ ಅಪಾಯವನ್ನು ಹೆಚ್ಚಿಸುತ್ತದೆ.
 

ಕ್ಯಾನ್ಸರ್ ಮುಂಚಿತವಾಗಿ ಪತ್ತೆಹಚ್ಚುವಲ್ಲಿನ ಸಮಸ್ಯೆಗಳು: ಕ್ಯಾನ್ಸರ್ ರೋಗಲಕ್ಷಣಗಳ ಬಗ್ಗೆ ಕಡಿಮೆ ಅರಿವು ಮತ್ತು ದೊಡ್ಡ ಪ್ರಮಾಣದ ಸ್ಕ್ರೀನಿಂಗ್ ಕಾರ್ಯಕ್ರಮಗಳ ಕೊರತೆಯಿಂದಾಗಿ, ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚಲಾಗುವುದಿಲ್ಲ. ಈ ಕಾರಣದಿಂದಾಗಿ, ರೋಗವು ಹೆಚ್ಚಾಗಿ ತಡವಾಗಿ ಪತ್ತೆಯಾಗುತ್ತದೆ, ಇದರಿಂದಾಗಿ ಚಿಕಿತ್ಸೆ ನೀಡಲು ಕಷ್ಟವಾಗುತ್ತದೆ. ವಿಶೇಷವಾಗಿ ಉತ್ತಮ ಆರೋಗ್ಯ ಸೌಲಭ್ಯಗಳು (health benefits) ಕಡಿಮೆ ಇರುವ ಗ್ರಾಮೀಣ ಪ್ರದೇಶಗಳಲ್ಲಿ, ಈ ಸಮಸ್ಯೆ ಹೆಚ್ಚು ಗಂಭೀರವಾಗುತ್ತದೆ.

ಕ್ಯಾನ್ಸರ್ ಬಗ್ಗೆ ಮಾಹಿತಿಯ ಕೊರತೆ: ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳು ಸಹ ಈ ಸಮಸ್ಯೆಯನ್ನು ಉಲ್ಬಣಗೊಳಿಸುತ್ತವೆ. ಬಡ ಸಮುದಾಯಗಳು ಉತ್ತಮ ಆರೋಗ್ಯ ರಕ್ಷಣೆಯನ್ನು ಪಡೆಯುವುದು ಕಷ್ಟಕರವಾಗಿದೆ. ಕ್ಯಾನ್ಸರ್ ಬಗ್ಗೆ ಸರಿಯಾದ ಮಾಹಿತಿಯ ಕೊರತೆ ಮತ್ತು ಸಮಾಜದಲ್ಲಿ ಕ್ಯಾನ್ಸರ್ ಬಗ್ಗೆ ಹರಡುವ ತಪ್ಪು ಕಲ್ಪನೆಗಳು ಸಹ ತಡವಾಗಿ ಚಿಕಿತ್ಸೆಗೆ ಕಾರಣವಾಗುತ್ತವೆ.

ಕ್ಯಾನ್ಸರ್ ತಡೆಗಟ್ಟುವ ವಿಧಾನಗಳು
ತಂಬಾಕು ತ್ಯಜಿಸಿ (Tobaco)
ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ
ಆರೋಗ್ಯಕರ ಆಹಾರ ಸೇವಿಸಿ
ಸೂರ್ಯನ ಬೆಳಕನ್ನು ತಪ್ಪಿಸಿ
ಎಚ್ ಪಿವಿ ಮತ್ತು ಹೆಪಟೈಟಿಸ್ ಬಿ ಲಸಿಕೆಗಳನ್ನು ಪಡೆಯಿರಿ
ನಿಯಮಿತವಾಗಿ ವ್ಯಾಯಾಮ ಮಾಡಿ
ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಿ
ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ
ಒತ್ತಡವನ್ನು ನಿರ್ವಹಿಸಿ
ವೈಯಕ್ತಿಕ ಅಪಾಯದ ಅಂಶಗಳು ಮತ್ತು ವೈದ್ಯಕೀಯ ಇತಿಹಾಸದ ಆಧಾರದ ಮೇಲೆ ವೈದ್ಯರನ್ನು ಸಂಪರ್ಕಿಸುವುದು ತುಂಬಾನೆ ಮುಖ್ಯ.

click me!