
ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ನಾಯಕಿಯ ಮುದ್ದಿನ ಪುಟ್ಟ ತಂಗಿ ಅಂಜಲಿ ಪಾತ್ರಕ್ಕೆ ಜೀವ ತುಂಬಿದ ನಟಿ ಮಹತಿ ವೈಷ್ಣವಿ ಭಟ್ (Mahathi Vaishnavi Bhat), ಅವರು ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ" ಧಾರಾವಾಹಿಯಲ್ಲಿ ರೇಣುಕೆ ಪಾತ್ರದಲ್ಲಿ ಮಹತಿ ವೈಷ್ಣವಿ ನಟಿಸುತ್ತಿದ್ದಾರೆ. ಉಧೋ ಉಧೋ ರೇಣುಕಾ ಯಲ್ಲಮ್ಮರ ಬಾಲ್ಯ ಮುಗಿದಿದ್ದು, ಈಗ ಯೌವ್ವನಾವಸ್ಥೆಯಲ್ಲಿ ರೇಣುಕೆ ಮತ್ತು ಯಲ್ಲಮ್ಮನ ಕಥೆ ಆರಂಭವಾಗಿದ್ದು, ಇದರಲ್ಲಿ ಬೆಳೆದು ನಿಂತ ರೇಣುಕೆಯಾಗಿ ಮಹತಿ ಅಭಿನಯಿಸುತ್ತಿದ್ದಾರೆ.
ಬಾಲ ಕಲಾವಿದೆಯಾಗಿ ನಟಿಸಿದ ಮಹತಿ ಈ ಮೂಲಕ ನಾಯಕಿಯಾಗಿ ಮಿಂಚಿದ್ದಾರೆ. ಇದೀಗ ನಟಿ, ತಮ್ಮ ಡಾಕ್ಟರ್ ಕುಟುಂಬದ ಕುತೂಹಲದ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದಾರೆ. ಅಪ್ಪ-ಅಮ್ಮ ಅಣ್ಣ ಎಲ್ಲರೂ ಡಾಕ್ಟರ್. ನನಗೆ ಮಾತ್ರ ಡಾಕ್ಟರ್ ಆಗಲು ಇಷ್ಟವಿರದೇ ಎಂಜಿನಿಯರಿಂಗ್ ಪದವಿ ಪಡೆದೆ. ಆದರೆ ನಟಿಯಾದೆ ಎಂದು ಮಹತಿ ಕನ್ನಡತಿ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ವೈದ್ಯೆ ಆಗಬಾರದು ಎನ್ನುವ ಕಾರಣಕ್ಕೆ ಪಿಯುಸಿಯಲ್ಲಿ ಬಯೋಲಾಜಿ ತೆಗೆದುಕೊಳ್ಳದೇ ಸಿಎಸ್ ತೆಗೆದುಕೊಂಡಿದ್ದೆ ಎಂದಿದ್ದಾರೆ.
ಆಗಿನಿಂದಲೂ ಆ್ಯಕ್ಟಿಂಗ್ ಕಡೆಗೆ ಒಲವು ಇತ್ತು. ಆದ್ದರಿಂದ ಡಾಕ್ಟರ್ ಆದರೆ ಆ್ಯಕ್ಟಿಂಗ್ ಮಾಡಲು ಆಗುವುದಿಲ್ಲ ಎನ್ನುವುದು ತಿಳಿದಿತ್ತು. ಅದಕ್ಕಾಗಿಯೇ ಎಂಜಿನಿಯರಿಂಗ್ ಪಡೆದೆ ಎಂದಿದ್ದಾರೆ ನಟಿ. ಕೊನೆ ನಟನೆಯಲ್ಲಿ ತೊಡಗಿಸಿಕೊಳ್ಳಲು ಅಣ್ಣ, ಅಜ್ಜ-ಅಜ್ಜಿ ಎಲ್ಲರೂ ತುಂಬಾ ಸಪೋರ್ಟ್ ಮಾಡಿದ್ರು. ಆರಂಭದಲ್ಲಿ ನನ್ನೊಬ್ಬಳನ್ನೇ ಬೆಂಗಳೂರಿಗೆ ಕಳುಹಿಸಲು ಅಪ್ಪ-ಅಮ್ಮನಿಗೆ ಭಯವಾಗಿತ್ತು. ಆ ಸಮಯದಲ್ಲಿ ಅಜ್ಜ-ಅಜ್ಜಿನೇ ನೀವೇನೂ ಹೆದರಬೇಡಿ, ನಾವು ನೋಡಿಕೊಳ್ತೇವೆ ಎಂದು ಭರವಸೆ ಕೊಟ್ಟಿದ್ದರಿಂದ ಇಲ್ಲಿಯವರೆಗೆ ಬೆಳೆಯಲು ಸಾಧ್ಯವಾಯಿತು ಎಂದಿದ್ದಾರೆ.
ಇನ್ನು ಮಹತಿ ವಿದ್ಯಾಭ್ಯಾಸದ ಬಗ್ಗೆ ಹೇಳೋದಾದರೆ ಗಟ್ಟಿಮೇಳ ಸೀರಿಯಲ್ ಸಮಯದಲ್ಲಿ ಶೂಟಿಂಗ್ ಜೊತೆಗೆ SSLC ಓದುವನ್ನು ಮಾಡುತ್ತಿದ್ದ ಇವರು 95% ಮಾರ್ಕ್ ಪಡೆದಿದ್ದರು. ಇದೀಗ ಪಿಯುಸಿಯಲ್ಲೂ ಸಹ 98% ಅಂಕಗಳನ್ನು ಪಡೆದಿದ್ದಾರೆ. ಗಟ್ಟಿಮೇಳದ ಸೀರಿಯಲ್ ಮುಗಿದ ಬಳಿಕ CET ಪರೀಕ್ಷೆಗೆ ಬರೆದಿದ್ದರು. ಆದರೂ ನಟನೆಯ ಕಡೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ.
ಡ್ರಾಮಾ ಜೂನಿಯರ್ಸ್ (Drama Juniors) ಮೂಲಕ ಕನ್ನಡ ಕಿರುತೆರೆಗೆ ಪರಿಚಿತರಾದ ಮಹತಿ ವೈಷ್ಣವಿ, ಡ್ರಾಮಾ ಜೂನಿಯರ್ಸ್ ಸೀಸನ್ ಒಂದರಲ್ಲಿ ಅದ್ಭುತವಾಗಿ ಅಭಿನಯಿಸಿ, ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿದ್ದರು. ಬಳಿಕ ಸಿಂಧೂರ ಧಾರಾವಾಹಿಯಲ್ಲಿ ಅಂಜಲಿಯಾಗಿ ಕಿರುತೆರೆಗೆ ಎಂಟ್ರಿಕೊಟ್ಟ ಮಹತಿ, ನಂತರ ಗಟ್ಟಿಮೇಳದ ಅಂಜಲಿಯಾಗಿ ಜನಪ್ರಿಯತೆ ಗಳಿಸಿದರು.
ಸೀರಿಯಲ್ ಮಾತ್ರವಲ್ಲ ಮಹತಿ ಸಿನಿಮಾಗಳಲ್ಲಿಯೂ ಮಿಂಚಿದ್ದಾರೆ. ನಾವು ಎಳೆಯರು ನಾವು ಗೆಳೆಯರು ಎನ್ನುವ ಸಿನಿಮಾದಲ್ಲಿ ಬಾಲ ಕಲಾವಿದೆಯಾಗಿ ಮಹತಿ ನಟಿಸಿದ್ದರು, ಇದಲ್ಲದೇ ಇತ್ತೀಚೆಗಷ್ಟೇ ಬಿಡುಗಡೆಯಾದ ತತ್ಸಮ ತದ್ಭವ ಸಿನಿಮಾದಲ್ಲಿ ಮೇಘನಾ ರಾಜ್ (Meghana Raj) ಮಗಳ ಪಾತ್ರದಲ್ಲೂ ಮಹತಿ ಅದ್ಭುತ ಅಭಿನಯ ನೀಡಿದ್ದಾರೆ.
ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ" ಧಾರಾವಾಹಿಯಲ್ಲಿ ರೇಣುಕೆ ಪಾತ್ರದಲ್ಲಿ ಮಹತಿ ವೈಷ್ಣವಿ ನಟಿಸುತ್ತಿದ್ದಾರೆ. ಉಧೋ ಉಧೋ ರೇಣುಕಾ ಯಲ್ಲಮ್ಮರ ಬಾಲ್ಯ ಮುಗಿದಿದ್ದು, ಈಗ ಯೌವ್ವನಾವಸ್ಥೆಯಲ್ಲಿ ರೇಣುಕೆ ಮತ್ತು ಯಲ್ಲಮ್ಮನ ಕಥೆ ಆರಂಭವಾಗಿದ್ದು, ಇದರಲ್ಲಿ ಬೆಳೆದು ನಿಂತ ರೇಣುಕೆಯಾಗಿ ಮಹತಿ ಅಭಿನಯಿಸುತ್ತಿದ್ದಾರೆ.
ಈ ಭಕ್ತಿಪ್ರಧಾನ ಸೀರಿಯಲ್ ನಲ್ಲಿ ರೇಣುಕೆ ಪಾತ್ರಕ್ಕಾಗಿ ಮಹತಿ ಬಹಳಷ್ಟು ಕಲಿತಿದ್ದಾರಂತೆ. ಸಕಲ ವಿದ್ಯೆಗಳನ್ನು ಬಲ್ಲ ಮಹಾರಾಣಿಯಾಗಿರೋದರಿಂದ ಮಹತಿ ಕುದುರೆ ಸವಾರಿ, ಬಿಲ್ಲುಗಾರಿಕೆ ಎಲ್ಲವನ್ನೂ ಸ್ವಲ್ಪ ಸ್ವಲ್ಪ ಕಲಿತ್ತಿದ್ದಾರೆ. ಪಾತ್ರಕ್ಕಾಗಿ ಎಲ್ಲವನ್ನೂ ಕಲಿಯೋಕೆ ಸಿದ್ಧ ಎನ್ನುತ್ತಾರೆ ಈ ನಟಿ.
ಅಷ್ಟೇ ಅಲ್ಲ, ಈ ಪಾತ್ರಕ್ಕಾಗಿ ತೂಕವನ್ನು ಸಹ ಇಳಿಸಿಕೊಂಡಿದ್ದಾರೆ ಇವರು. ಅಮೋಘ ವಿನ್ಯಾಸದ ಸೆಟ್ ಮತ್ತು ಗ್ರಾಫಿಕ್ಸ್ನಿಂದ ಪ್ರಸಾರವಾಗುತ್ತಿರುವ ಧಾರಾವಾಹಿಯ ಪ್ರೋಮೋಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಲೋಕ ಕಲ್ಯಾಣಕ್ಕಾಗಿ ಹಾಗೂ ದುಷ್ಟ ಸಂಹಾರಕ್ಕಾಗಿ ದೇವಿ ಅಂಶದ ಎರಡು ಶಕ್ತಿಗಳು ಒಂದಾಗಿ ಮುಂಬರುವ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾರೆ ? ಎಂಬುದು ಈ ಧಾರಾವಾಹಿಯ ಕಥೆಯಾಗಿದೆ.