ಅಮರ್ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಅಣ್ಣನಾದ ದರ್ಶನ್!

By Kannadaprabha NewsFirst Published Jan 9, 2019, 8:49 AM IST
Highlights

ಅಭಿಷೇಕ್‌ ಅಂಬರೀಶ್‌ ನಾಯಕನಾಗಿ ನಟಿಸಿರುವ ‘ಅಮರ್‌’ ಚಿತ್ರಕ್ಕೆ ಒಬ್ಬೊಬ್ಬರೇ ಗೆಸ್ಟ್‌ ರೋಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ನಟಿ ರಚಿತಾ ರಾಮ್‌ ಚಿತ್ರದಲ್ಲಿನ ಒಂದು ವಿಶೇಷವಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈಗ ದರ್ಶನ್‌ ಸರದಿ. ಚಾಲೆಂಜಿಂಗ್‌ ಸ್ಟಾರ್‌ ಇಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದರ್ಶನ್‌ ಪಾತ್ರದ ಚಿತ್ರೀಕರಣ ಕೂಡ ಮುಗಿದಿದೆ. ‘ಅಮರ್‌’ನಲ್ಲಿ ದರ್ಶನ್‌ ಅವರು ಅಭಿಷೇಕ್‌ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬಹುಕೋಟಿ ಒಡೆಯ

ವಿದೇಶದಲ್ಲಿ ನೆಲೆಸಿರುವ ಒಬ್ಬ ಬ್ಯುಸಿನೆಸ್‌ ಮ್ಯಾನ್‌. ಬಹು ಕೋಟಿ ಉದ್ಯಮಿ. ಭಾರತದ ವ್ಯಕ್ತಿ. ದೊಡ್ಡ ದೊಡ್ಡ ಮಲ್ಟಿಕಂಪನಿಗಳ ಒಡೆಯ. ವಿದೇಶದಲ್ಲಿರುವ ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಮೊದಲ ಸ್ಥಾನದಲ್ಲಿರುವ ನಿಲ್ಲುವ ಪಾತ್ರದಲ್ಲಿ ದರ್ಶನ್‌ ಕಾಣಿಸಿಕೊಂಡಿದ್ದಾರೆ. ಉದ್ಯಮಿಯಾಗಿರುವ ದರ್ಶನ್‌ ಪಾತ್ರ, ಭಾರತಕ್ಕೆ ಬಂದ ಮೇಲೆ ಏನಾಗುತ್ತದೆ ಎಂಬುದು ಚಿತ್ರದ ಕತೆಯ ಮತ್ತೊಂದು ತಿರುವು.

ಅಂಬಿ ಋಣ ತೀರಿಸಲು ಮುಂದಾದ್ರು ಡಿ ಬಾಸ್!

ಅಭಿಷೇಕ್‌ಗೆ ಅಣ್ಣನಾಗಿ ದರ್ಶನ್‌

ಶ್ರೀಮಂತ ಉದ್ಯಮಿಯಾಗಿರುವ ದರ್ಶನ್‌, ಚಿತ್ರದಲ್ಲಿ ಅಭಿಷೇಕ್‌ ಅವರಿಗೆ ಅಣ್ಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ಹಂತದಲ್ಲಿ ಜೀವನದಲ್ಲಿ ಸಾಕಷ್ಟುಸಮಸ್ಯೆಗಳಿಂದ ಕಷ್ಟಕ್ಕೆ ಸಿಲುಕಿಕೊಂಡಿರುವ ಅಭಿಷೇಕ್‌ಗೆ ಮತ್ತೆ ಜೀವನೋತ್ಸಾಹ ತುಂಬುವ ಮೂಲಕ ಜೀವನದಲ್ಲಿ ತಾನು ತಲುಪಬೇಕಾದ ಗುರಿಯತ್ತ ಹೆಜ್ಜೆ ಹಾಕುವುದಕ್ಕೆ ಸ್ಫೂರ್ತಿಯಾಗಿ ಹೇಗೆ ನಿಲ್ಲುತ್ತಾರೆ ಎಂಬುದನ್ನು ಇವರಿಬ್ಬರ ಕಾಂಬಿನೇಷನ್‌ ದೃಶ್ಯಗಳಲ್ಲಿ ತೋರಿಸಲಾಗಿದೆ ಎನ್ನಲಾಗಿದೆ.

ಅಪ್ಪನ ಫೋಟೋ ಹಿಡಿದೇ ಶೂಟಿಂಗ್‌ಗೆ ಹೋದ ಅಭಿಷೇಕ್

ಅಪರೂಪದ ಗೆಸ್ಟ್‌

ಈಗಾಗಲೇ ದರ್ಶನ್‌ ಹಾಗೂ ಅಭಿಷೇಕ್‌ ಕಾಂಬಿನೇಷನ್‌ನ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ. ವಿದೇಶದಿಂದ ಮರಳುವ ನಂತರ ಬರುವ ದೃಶ್ಯಗಳನ್ನು ಬೆಳಗ್ಗೆಯಿಂದ ರಾತ್ರಿ 11 ಗಂಟೆವರೆಗೂ ಚಿತ್ರೀಕರಣ ಮಾಡಿದ್ದಾರೆ. ಬೆಂಗಳೂರಿನ ಬೃಹತ್‌ ಬಂಗಲೆ ಹಾಗೂ ದಿ ಕ್ಲಬ್‌ನಲ್ಲಿ ಇದರ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ನಿರ್ದೇಶಕ ನಾಗಶೇಖರ್‌, ತಮ್ಮ ಕತೆಗೆ ತಕ್ಕಂತೆ ದರ್ಶನ್‌ ಪಾತ್ರವನ್ನು ರೂಪಿಸಿದ್ದಾರೆ. ಹಾಗೆ ನೋಡಿದರೆ ದರ್ಶನ್‌ ಗೆಸ್ಟ್‌ ರೋಲ್‌ಗಳಲ್ಲಿ ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ‘ಚೌಕ’ ಚಿತ್ರದಲ್ಲಿ ನಟಿಸಿದ್ದರು. ಅನಂತರ ಪ್ರಜ್ವಲ್‌ ದೇವರಾಜ್‌ ಅವರಿಗಾಗಿಯೇ ‘ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರದಲ್ಲಿ ಭಗತ್‌ ಸಿಂಗ್‌ ಪಾತ್ರ ಮಾಡಿದ್ದರು. ಈಗ ಅಂಬರೀಶ್‌ ಮೇಲಿನ ಪ್ರೀತಿಗಾಗಿ ‘ಅಮರ್‌’ ಚಿತ್ರದಲ್ಲಿ ಉದ್ಯಮಿ ಪಾತ್ರ ಮಾಡಿದ್ದಾರೆ.

ಅಂಬರೀಶ್‌ ಪುತ್ರ ಅಭಿಷೇಕ್‌ ಅವರನ್ನು ಲಾಂಚ್‌ ಮಾಡುವ ಯೋಚನೆ ಬಂದಾಗಲೇ ತುಂಬಾ ಜನ ಸ್ಟಾರ್‌ ನಟರೇ ಅಭಿಷೇಕ್‌ ಚಿತ್ರದಲ್ಲಿ ಗೆಸ್ಟ್‌ ರೋಲ್‌ ಮಾಡುವ ಮೂಲಕ ಪ್ರೋತ್ಸಾಹಿಸುತ್ತೇವೆಂದು ಹೇಳಿದ್ದರು. ಅದು ಅಂಬರೀಶ್‌ ಅವರ ಮೇಲಿನ ಪ್ರೀತಿ ಎಂಬುದು ನನಗೆ ಗೊತ್ತು. ಸಿನಿಮಾ ಆರಂಭದಲ್ಲೇ ಈ ಬಗ್ಗೆ ಅಂಬರೀಶ್‌ ಅವರು ನನ್ನ ಬಳಿ ಹೇಳಿದ್ದರು. ಈಗ ದರ್ಶನ್‌ ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ಒಳ್ಳೆಯ ಪಾತ್ರ. ಅಂಬರೀಶ್‌ ಮೇಲಿರುವ ಪ್ರೀತಿಗೆ ದರ್ಶನ್‌ ಸಲ್ಲಿಸಿರುವ ಗೌರವ ಇದು.- ಸಂದೇಶ್‌ ನಾಗರಾಜ್‌, ನಿರ್ಮಾಪಕ

click me!