ಅನೈತಿಕ ಸಂಬಂಧ ಶಂಕೆ: ವಿವಾಹಿತ ಸೋದರಿಯನ್ನೇ ಕೊಂದು ನದಿಗೆಸೆದ ಸೋದರರು!

By BK AshwinFirst Published Mar 23, 2023, 3:32 PM IST
Highlights

ತಮ್ಮ ಕುಟುಂಬದ ಗೌರವವನ್ನು ಕಾಪಾಡಲು ಸಹೋದರಿಯನ್ನು ಕೊಂದು ಶವವನ್ನು ನದಿಯಲ್ಲಿ ಎಸೆದಿರುವುದಾಗಿ ಸಹೋದರರು ಒಪ್ಪಿಕೊಂಡಿದ್ದಾರೆ. ನಂತರ ಪೊಲೀಸರನ್ನು ದಾರಿ ತಪ್ಪಿಸುವ ಸಲುವಾಗಿ ಇಬ್ಬರೂ ನಾಪತ್ತೆ ದೂರು ದಾಖಲಿಸಿದ್ದಾರೆ ಎಂದೂ ತಿಳಿದುಬಂದಿದೆ.

ನೋಯ್ಡಾ (ಮಾರ್ಚ್‌ 23, 2023): ಈ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಹಿಂಡನ್ ನದಿಯಲ್ಲಿ ಶವ ಪತ್ತೆಯಾದ ಹಿನ್ನೆಲೆ ಮಹಿಳೆಯ ಸಹೋದರರು ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ನೋಯ್ಡಾ ಪೊಲೀಸರು ಅವರನ್ನು ಅರೆಸ್ಟ್‌ ಮಾಡಿದ್ದಾರೆ. 30 ವರ್ಷದ ನಜ್ಮಾಳ ಶವವನ್ನು ಮಾರ್ಚ್ 13 ರಂದು ಹಿಂಡನ್ ನದಿಯಿಂದ ಪತ್ತೆ ಹಚ್ಚಲಾಗಿದ್ದು, ಬಳಿಕ ಇದು ಕೊಲೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದರು. 

ಸಹೋದರಿಯನ್ನು ಕೊಂದು ನಾಪತ್ತೆ ದೂರು ದಾಖಲಿಸಿದ್ದ ಸೋದರರು
ಮಾರ್ಚ್ 8 ರಂದು, ಆಕೆಯ ಸಹೋದರರಾದ ಸರ್ತಾಜ್ ಮತ್ತು ಶಾರುಖ್ ಇಕೋಟೆಕ್ 3 ಪೊಲೀಸ್ ಠಾಣೆಯಲ್ಲಿ ತಮ್ಮ ಸಹೋದರಿ ಕಾಣೆಯಾಗಿದ್ದಾರೆ ಎಂದು ಎಫ್ಐಆರ್ ದಾಖಲಿಸಿದ್ದರು. ಬಳಿಕ, ಅಪರಿಚಿತ ಶವವನ್ನು ನದಿಯಿಂದ ಹೊರತೆಗೆದ ನಂತರ, ಮೃತರು ತಮ್ಮ ಸಹೋದರಿಯೇ ಎಂದು ಗುರುತಿಸಲು ಸಹೋದರರನ್ನು ಕರೆಸಲಾಯಿತು. ಇದು ತಮ್ಮ ಸಹೋದರಿಯ ಶವ ಎಂದು ಸಹೋದರರು ಒಪ್ಪಿಕೊಂಡರು. ನಂತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯ್ತ. ಇಲ್ಲಿ, ಐದು ದಿನಗಳ ಹಿಂದೆ ಕತ್ತು ಹಿಸುಕಿ ಸಾಯಿಸಲಾಗಿದೆ ಎಂದು ಬಹಿರಂಗಪಡಿಸಿದೆ ಎಂದು ಉಪ ಪೊಲೀಸ್ ಆಯುಕ್ತ (ಸೆಂಟ್ರಲ್ ನೋಯ್ಡಾ) ರಾಮ್ ಬದನ್ ಸಿಂಗ್ ಹೇಳಿದ್ದಾರೆ.

ಇದನ್ನು ಓದಿ: ಅಯ್ಯೋ ಕಂದಮ್ಮ..! 4 ದಿನದ ಹಸುಗೂಸನ್ನು ತುಳಿದು ಸಾಯಿಸಿದ ಪೊಲೀಸರು: ತನಿಖೆಗೆ ಆದೇಶಿಸಿದ ಸಿಎಂ

ಕುಟುಂಬದ ಗೌರವ ಕಾಪಾಡಲು ಹತ್ಯೆ 

ಇನ್ನು, ಈ ಪ್ರಕರಣದ ತನಿಖೆ ಪ್ರಾರಂಭಿಸಿದ ವೇಳೆಯೇ ಪೊಲೀಸರಿಗೆ ಸೋದರರ ಪಾತ್ರದ ಬಗ್ಗೆ ಸಂಶಯ ಬಂದಿದೆ. ಬಳಿಕ ಅವರನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಸೋದರರು ಒಪ್ಪಿಕೊಂಡಿದ್ದಾರೆ. ಮಾರ್ಚ್ 8 ರ ರಾತ್ರಿ ನಜ್ಮಾಳನ್ನು ಕೊಂದು ನಂತರ ಆಕೆಯ ದೇಹವನ್ನು ಚಾರ್ ಮೂರ್ತಿ ಚೌಕ್ ಬಳಿಯ ನದಿಯಲ್ಲಿ ಎಸೆದಿದ್ದೇವೆ ಎಂದು ಇಬ್ಬರು ಸಹೋದರರು ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡರು ಎಂದು ಡಿಸಿಪಿ ಹೇಳಿದ್ದಾರೆ.

ಅಲ್ಲದೆ, ತಮ್ಮ ಕುಟುಂಬದ ಗೌರವವನ್ನು ಕಾಪಾಡಲು ಸಹೋದರಿಯನ್ನು ಕೊಂದು ಶವವನ್ನು ನದಿಯಲ್ಲಿ ಎಸೆದಿರುವುದಾಗಿ ಸಹೋದರರು ಒಪ್ಪಿಕೊಂಡಿದ್ದಾರೆ. ನಂತರ ಪೊಲೀಸರನ್ನು ದಾರಿ ತಪ್ಪಿಸುವ ಸಲುವಾಗಿ ಇಬ್ಬರೂ ನಾಪತ್ತೆ ದೂರು ದಾಖಲಿಸಿದ್ದಾರೆ ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: Aishwarya Rajinikanth ಮನೆಯಲ್ಲಿ ಕೋಟ್ಯಂತರ ಮೌಲ್ಯದ ಆಭರಣ ದೋಚಿದ್ದ ಮನೆ ಕೆಲಸದಾಕೆ, ಡ್ರೈವರ್‌ ಅಂದರ್

ಮದುವೆ ವೈಫಲ್ಯ, ಕುಡಿತದ ಚಟದಿಂದ ಬೇಸರ

ತಮ್ಮ ಸಹೋದರಿಯ ವೈವಾಹಿಕ ಸಂಬಂಧ ಸರಿಯಾಗಿಲ್ಲ ಎಂಬುದು ಶಾರುಖ್ ಮತ್ತು ಸರ್ತಾಜ್‌ಗೆ ತಿಳಿದುಬಂದಿತ್ತು. ಅಲ್ಲದೆ, ಆಕೆ ಅನೇಕ ಅಕ್ರಮ ಸಂಬಂಧಗಳನ್ನು ಹೊಂದಿದ್ದಾಳೆ ಮತ್ತು ಮದ್ಯಪಾನದ ದಾಸಿಯಾಗಿದ್ದಳು ಎಂದು ಹತ್ಯೆ ಮಾಡಿದ ಸೋದರರು ಹೇಳಿದ ಬಗ್ಗೆ ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆ ಸಿಟ್ಟಿಗೆದ್ದ ಸೋದರರು ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನು ಹಿಂಡನ್ ನದಿಯಲ್ಲಿ ಎಸೆದಿದ್ದಾರೆ ಎಂದು ಡಿಸಿಪಿ ರಾಮ್ ಬದನ್ ಸಿಂಗ್ ತಿಳಿಸಿದ್ದಾರೆ.

ತಮ್ಮ ಸಹೋದರಿ ನಜ್ಮಾ 2012 ರಲ್ಲಿ ಗಾಜಿಯಾಬಾದ್‌ನ ಮಸೂರಿ ಪ್ರದೇಶದ ನಿವಾಸಿ ಸಾಜಿದ್ ಅವರೊಂದಿಗೆ ವಿವಾಹವಾಗಿದ್ದರು ಎಂದೂ ಸಹೋದರರು ಬಹಿರಂಗಪಡಿಸಿದ್ದಾರೆ. ನಜ್ಮಾ ಮತ್ತು ಸಾಜಿದ್ ಸೂರಜ್‌ಪುರದಲ್ಲಿ ವಾಸಿಸುತ್ತಿದ್ದರು. ಆದರೆ ಕಳೆದ ಒಂದು ವರ್ಷದಿಂದ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಮತ್ತು ಸಾಜಿದ್ ಅವರು ಗಾಜಿಯಾಬಾದ್‌ನ ಮಸೂರಿಗೆ ಸ್ಥಳಾಂತರಗೊಂಡಿದ್ದು ಅಲ್ಲಿ ಅವರು ಸ್ಕ್ರ್ಯಾಪ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದರು. ಈ ಹಿನ್ನೆಲೆ ನಜ್ಮಾ ಅವರ ಕುಟುಂಬದ ಸದಸ್ಯರು ಆಕೆಯ ವಿಫಲ ಮದುವೆ, ಕುಡಿತದ ಚಟದಿಂದ ಅಸಮಾಧಾನಗೊಂಡಿದ್ದರು. ಆಕೆಯ ಚಾರಿತ್ರ್ಯದ ಬಗ್ಗೆಯೂ ಅನುಮಾನವಿದೆ" ಎಂದು ಸಹೋದರರು ತಪ್ಪೊಪ್ಪಿಗೆ ನೀಡಿದ್ದಾರೆ ಎಂದೂ  ಡಿಸಿಪಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚಾಕು ಹಿಡಿದು ಮಗನನ್ನೇ ದರೋಡೆ ಮಾಡಲು ಹೋದ ತಂದೆ..!

ಈ ಸಂಬಂಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪೊಲೀಸರು ಇಬ್ಬರನ್ನು ಸೋಮವಾರ ಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದೂ ಡಿಸಿಪಿ ರಾಮ್ ಬದನ್ ಸಿಂಗ್ ಹೇಳಿದರು.

ಇದನ್ನೂ ಓದಿ: Bengaluru: ಹೀಗೂ ಉಂಟು..! ಪತ್ನಿ ತಡವಾಗಿ ಏಳ್ತಾಳೆ ಎಂದು ಪತಿಯಿಂದ ಪೊಲೀಸರಿಗೆ ದೂರು

click me!